ಬೆಂಗಳೂರು, ಆ.16: ತಮ್ಮ ವಿರುದ್ಧ ದಾಖಲಾಗಿರುವ ಅಟ್ರಾಸಿಟಿ ಪ್ರಕರಣ ಸಂಬಂಧ ನಟ-ನಿರ್ದೇಶಕ ಉಪೇಂದ್ರ ಅವರು ಬುಧವಾರ ಮತ್ತೆ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿಲಿದ್ದಾರೆ.ಕೇವಲ ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆ ಎಫ್‍ಐಆರ್‍ಗೆ ಮಾತ್ರ ಹೈಕೋರ್ಟ್ ಈ ಹಿಂದೆ ತಡೆ ನೀಡಿದ್ದ ಹಿನ್ನೆಲೆಯಲ್ಲಿ ಹಲಸೂರು ಗೇಟ್ ಸೇರಿ ಉಳಿದ ಠಾಣೆಗಳ ಎಫ್‍ಐಆರ್ ರದ್ದು ಕೋರಿ ಹಿರಿಯ ವಕೀಲ ಉದಯ್ ಹೊಳ್ಳ ಮೂಲಕ ಉಪೇಂದ್ರ ಅರ್ಜಿ ಸಲ್ಲಿಸಿದ್ದಾರೆ.  ಬಂಧನ ಭೀತಿ ಹಿನ್ನೆಲೆಯಲ್ಲಿ ಸದ್ಯ ಇನ್ನೂ ಅಜ್ಞಾತ ಸ್ಥಳದಲ್ಲೆ ನಟ ಉಪೇಂದ್ರ ಇದ್ದು, ಯಾರ ಕಣ್ಣಿಗೂ ಕಾಣಿಸಿಕೊಳ್ಳುತ್ತಿಲ್ಲ.  ಹೈಕೋರ್ಟ್ ತಡೆ: ಉಪೇಂದ್ರ ಅವರ ಕತ್ರಿಗುಪ್ಪೆ ಹಾಗೂ ಸದಾಶಿವ ನಗರದ ಮನೆಗಳಿಗೆ ನೋಟಿಸ್ ತಲುಪಿತ್ತು. ಉಪ್ಪಿ ಮನೆಯಲ್ಲಿ ಇಲ್ಲ ಎಂದು ತಿಳಿದ ಮೇಲೆ ವಾಟ್ಸಪ್‍ನಲ್ಲಿ ನೋಟಿಸ್ ರವಾನಿಸಲಾಗಿತ್ತು. ಬಳಿಕ ಉಪೇಂದ್ರ ವಿಡಿಯೋ ಮಾಡಿದ ಸ್ಥಳದ ಮಹಜರು ಕೂಡ ಮಾಡಲಾಯಿತು.   ಬಂಧನ ಭೀತಿ ಹಿನ್ನೆಲೆ ಎಲ್ಲೂ ಕಾಣಿಸಿಕೊಳ್ಳದ ಉಪೇಂದ್ರ ಬಳಿಕ ಎಫ್‍ಐಆರ್ ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆ ಎಫ್‍ಐಆರ್ ಗೆ ಹೈಕೋರ್ಟ್ ತಡೆ ನೀಡಿತ್ತು.  