ಹುಬ್ಬಳ್ಳಿ: ರಾಜ್ಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದ ʼಪೇ ಸಿಎಂʼ ಮಾದರಿಯಲ್ಲೇ ಬಿಜೆಪಿ ಆರಂಭಿಸಿರುವ ಕೃಷಿ ಸಚಿವ ಚಲುವರಾಯಸ್ವಾಮಿ‌ ವಿರುದ್ಧದ ಪೇ ಸಿಎಸ್ (Paycs) ಪೋಸ್ಟರ್ ಅಭಿಯಾನದ ಬಗ್ಗೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ವ್ಯಂಗ್ಯವಾಡಿದ್ದಾರೆ. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ʼʼಇದು ಕಾಂಗ್ರೆಸ್ ಪಕ್ಷದ ಕಾರ್ಬನ್ ಕಾಪಿ. ‘ಪೇ ಸಿಎಸ್’ಗೆ ಅರ್ಥವೇ ಇಲ್ಲ, ಜನ‌ರು ಇದನ್ನು ನಂಬುವುದಿಲ್ಲ. ಕಾಂಗ್ರೆಸ್​ನವರು ಮಾಡಿದ್ದನ್ನೇ ಕಾಪಿ ಮಾಡುವುದಕ್ಕೆ ಹೊರಟಿದ್ದಾರೆʼʼ ಎಂದು ಹೇಳಿದರು. ʼʼಬಿಜೆಪಿ ಸರಕಾರ ಬಂದ 4 ವರ್ಷ ಬಳಿಕ ಅಭಿಯಾನ ಆರಂಭವಾಗಿತ್ತು. ಆದರೆ ಇದೀಗ ಕಾಂಗ್ರೆಸ್‌ ಸರಕಾರ ಅಧಿಕಾರಕ್ಕೆ ಬಂದ 3 ತಿಂಗಳಲ್ಲೇ ಬಿಜೆಪಿಯವರು ಕಾಂಗ್ರೆಸ್‌ ನವರು ಮಾಡಿದ್ದನ್ನೇ ಕಾಪಿ ಮಾಡ್ತಾರಂದ್ರೆ ಅದಕ್ಕೆ ಅರ್ಥ ಇಲ್ಲʼʼ ಎಂದು ಟೀಕಿಸಿದರು. 