ಸಾಂದರ್ಭಿಕ ಚಿತ್ರಬೆಂಗಳೂರು, ಆ.10: ಮನೆ ಬಾಡಿಗೆ ಕೇಳಿದ್ದಕ್ಕೆ ಮಹಿಳೆಯೊಬ್ಬರಿಗೆ ಚಾಕುವಿನಿಂದ ಹಲ್ಲೆ ಮಾಡಿರುವ ಘಟನೆ ನಗರದ ಬೊಮ್ಮನಹಳ್ಳಿ ಸಮೀಪದ ಮುನೇಶ್ವರನಗರದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಶ್ರೀದೇವಿ ಹಲ್ಲೆಗೊಳಗಾದ ಮಹಿಳೆಯಾಗಿದ್ದು, ಜೂನ್.‌ 6ರಂದು ಅವರು ಮುನೇಶ್ವರನಗರದಲ್ಲಿರುವ ಫಯಾಝ್ ಎಂಬುವವರ ಕಟ್ಟಡದಲ್ಲಿ ಬಾಡಿಗೆಗೆ ಇದ್ದರು. ಫಯಾಝ್‌ ಅವರ ಕುಟುಂಬ ವಿದೇಶದಲ್ಲಿರುವುದರಿಂದ ಶ್ರೀದೇವಿಗೆ ಕಟ್ಟಡದ ಉಸ್ತುವಾರಿ ವಹಿಸಿದ್ದರು. ಹಾಗಾಗಿ ಇಡೀ ಕಟ್ಟಡದ ಜವಾಬ್ದಾರಿಯನ್ನು ಶ್ರೀದೇವಿ ನೋಡಿಕೊಂಡಿದ್ದರು. ಅದರಂತೆ ಶ್ರೀದೇವಿ ವಾಸವಾಗಿದ್ದ ಕಟ್ಟಡದಲ್ಲೇ ವಾಸವಾಗಿದ್ದ ನಝೀರ್ ಕುಟುಂಬ ಕಳೆದ 3 ತಿಂಗಳಿಂದ ಬಾಡಿಗೆ ನೀಡಿರಲಿಲ್ಲ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಶ್ರೀದೇವಿ ಜೋರು ಧ್ವನಿಯಲ್ಲಿ ಮನೆ ಬಾಡಿಗೆ ನೀಡುವಂತೆ ಕೇಳಿದ್ದಕ್ಕೆ ನಝೀರ್ ತನ್ನ ಮಗ ಸದ್ದಾಂ ಬಳಿ ಹೇಳಿದ್ದ. ಶ್ರೀದೇವಿ ಮನೆ ಬಳಿ ಹೋಗಿದ್ದ ಸದ್ದಾಂ ಆಕೆಗೆ ಚಾಕುವಿನಿಂದ ಮುಖ, ಕೈಗೆ ಹಲ್ಲೆ ನಡೆಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಘಟನೆ ಸಂಬಂಧ ಬಂಡೇಪಾಳ್ಯ ಪೊಲೀಸ್ ಠಾಣೆಯಲ್ಲಿ ಶ್ರೀದೇವಿಯವರು ದೂರು ದಾಖಲಿಸಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯ ಪತ್ತೆಗಾಗಿ ಬಲೆ  ಬೀಸಿದ್ದಾರೆ. 