ಕಲಬುರಗಿ, ಆ.5: ‘ವರ್ಗಾವಣೆ ದಂಧೆ ಅಥವಾ ಇನ್ನು ಯಾವುದಕ್ಕಾದರೂ ಸಂಬಂಧಪಟ್ಟಂತಹ ದಾಖಲೆಗಳು ಇದ್ದರೆ ಅದನ್ನು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಲೋಕಾಯುಕ್ತಕ್ಕೆ ನೀಡಲಿ. ನಿಯಮಾನುಸಾರ ಅವರು ಪರಿಶೀಲನೆ ನಡೆಸಿ ತನಿಖೆ ನಡೆಸುತ್ತಾರೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.ಶನಿವಾರ ನಗರದ ವಿಮಾನ ನಿಲ್ದಾಣದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರಿಗೋ ಹೇಳಿದ ಹಾಗೆ, ಹೆದರಿಸಿದ ಹಾಗೆ ನನ್ನ ಬಳಿ ಹೇಳಿದರೆ ಪ್ರಯೋಜನವಿಲ್ಲ. ನಾನು ಯಾವ ಬಾಂಬ್ ಹಾಕಿದರೂ ಜಗ್ಗಲ್ಲ, ಬಗ್ಗಲ್ಲ ಎಂದು ತಿರುಗೇಟು ನೀಡಿದರು.  ನಾನು ರಾಜಕೀಯಕ್ಕೆ ಬಂದಾಗಿನಿಂದಲೂ ಇಂತಹ ಹಲವಾರು ಬಾಂಬ್‍ಗಳನ್ನು ನೋಡಿದ್ದೇನೆ. ಕಾಂಗ್ರೆಸ್ ಪಕ್ಷ ಲೂಟಿ ಮಾಡುತ್ತಿದೆ ಎಂದು ಆರೋಪಿಸುತ್ತಿರುವ ಕುಮಾರಸ್ವಾಮಿ ತಮ್ಮ ಬಳಿ ಸಾಕ್ಷ್ಯಾಧಾರಗಳು ಇದ್ದರೆ ಜನತೆಯ ಎದುರು ಬಹಿರಂಗಪಡಿಸಲಿ. ಅದನ್ನು ಬಿಟ್ಟು ಹತಾಶ ಮನೋಭಾವನೆಯಿಂದ ಇಲ್ಲಸಲ್ಲದ ಮಾತುಗಳನ್ನು ಆಡುವುದು ಸರಿಯಲ್ಲ ಎಂದು ಶಿವಕುಮಾರ್ ಹೇಳಿದರು.  ಕುಮಾರಸ್ವಾಮಿ ಜೊತೆ ನಾನು ಕೆಲಸ ಮಾಡಿದ್ದೇನೆ. ಅಣ್ಣನ ವಿಚಾರ ತಮ್ಮನಿಗೂ ಗೊತ್ತಿರುತ್ತೆ. ಬಾಲ್ ಇಲ್ಲದೆ ಕುಮಾರಸ್ವಾಮಿ ಬ್ಯಾಟಿಂಗ್ ಆಡುತ್ತಾರೆ. ಆದುದರಿಂದಲೆ, ನಾನು ಯಾವುದೆ ಪ್ರತಿಕ್ರಿಯೆ ನೀಡದೆ ಸುಮ್ಮನೆ ಇದ್ದೇನೆ ಎಂದು ಶಿವಕುಮಾರ್ ಹೇಳಿದರು.   