ಗದಗ, ಜು.27: ವಾರ್ಡ್‌ ಸಮಸ್ಯೆ ಪರಿಹರಿಸಲು ನಿರ್ಲಕ್ಷ್ಯ ತೋರಿದ್ದಾರೆಂದು ಆರೋಪಿಸಿ ನಗರಸಭೆ ಸದಸ್ಯರೊಬ್ಬರನ್ನು ಸ್ಥಳೀಯ ನಿವಾಸಿಗಳು ಕೂಡಿ ಹಾಕಿರುವ ಘಟನೆ ಗದಗ ಬೆಟಗೇರಿಯ ಬಣ್ಣದ ವಾರ್ಡ್ ನಲ್ಲಿ ವರದಿಯಾಗಿದೆ. 'ಕಳೆದ ಹಲವು ದಿನಗಳಿಂದ ಮಳೆಯಿಂದಾಗಿ ರಸ್ತೆಗಳು ಹದಗೆಟ್ಟಿವೆ. ಚರಂಡಿಗಳು ಬ್ಲಾಕ್ ಆಗಿ ಅವಾಂತರ ಸೃಷ್ಟಿ ಆಗಿವೆ. ವಾರ್ಡ್ ಸದಸ್ಯ ಹಾಗೂ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ' ಎಂದು ಸ್ಥಳೀಯರು ಆರೋಪಿಸಿದ್ದಾರೆ.ಇದರಿಂದ ಬೇಸತ್ತ ಸ್ಥಳೀಯರು ನಗರಸಭೆಯ ಮೂರನೇ ವಾರ್ಡ್‌ ಸದಸ್ಯ ಮಾಧುಸಾ ಮೇರವಾಡೆ ಎಂಬವರನ್ನು ಕೋಣೆಯಲ್ಲಿ ಕೂಡಿ ಹಾಕಿದ್ದಾರೆನ್ನಲಾಗಿದೆ. ''ನಗರಸಭೆ ಅಧಿಕಾರಿಗಳು ಸದಸ್ಯರ‌ದ್ದೇ ಫೋನ್ ರಿಸೀವ್ ಮಾಡುತ್ತಿಲ್ಲ. ಇನ್ನು ನಮ್ಮಂತ ಜನ ಸಾಮಾನ್ಯರ ಪರಿಸ್ಥಿತಿ ಏನು? ನಮ್ಮ ವಾರ್ಡ್ ನಲ್ಲಿ ಚರಂಡಿಗಳು ಬ್ಲಾಕ್ ಆಗಿ ರಸ್ತೆ ಮತ್ತು ಚರಂಡಿ ಒಂದೇ ರೀತಿ ಇದೆ. ಇದರಿಂದ ನಮಗೆ ಕಾಲರಾ ರೋಗ ಬಂದು ಬಿಡುವ ಆತಂಕ ಇದೆ. ವಾರ್ಡ್ ಸದಸ್ಯ ಹಾಗೂ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಅದಕ್ಕೆ ಸದಸ್ಯರನ್ನು ಕೋಣೆಯಲ್ಲಿ ಕೂಡಿ ಹಾಕಿದ್ದೇವೆ'' ಎಂದು ಸ್ಥಳೀಯರು ಒಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಬೆಟಗೇರಿ ಪೊಲೀಸರು ಸದಸ್ಯನನ್ನು ಬಿಡುಗಡೆ ಮಾಡಿದ್ದಾರೆ.  