ಬೆಂಗಳೂರು: 'ನಮ್ಮ ಸರಕಾರದ ವಿರುದ್ಧ ಕೆಲವರು ಪಿತೂರಿ ನಡೆಸುತ್ತಿರುವ ಬಗ್ಗೆ ನಮಗೂ ಮಾಹಿತಿ ಇದೆ' ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ. ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳಿಗೆ ಸೋಮವಾರ ಪ್ರತಿಕ್ರಿಯೆ ನೀಡಿದರು.ಸರಕಾರ ಉರುಳಿಸಲು ಕೆಲವರು ಸಿಂಗಾಪುರದಲ್ಲಿ ಪಿತೂರಿ ಯೋಜಿಸಿದ್ದಾರಂತಲ್ಲ ಎಂಬ ಮಾಧ್ಯಮದವರ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದ ಅವರು, ಆ ಬಗ್ಗೆ ನನಗೂ ನಮ್ಮದೇ ಆದ ಮೂಲಗಳಿಂದ ಮಾಹಿತಿ ಇದೆ. ಅವರು ಬೆಂಗಳೂರಲ್ಲಿ ಮಾಡದೇ ಅಲ್ಲಿಗೆ ಹೋಗಿ ಮಾಡುವುದು ಅವರ ತಂತ್ರ. ಯಾರು ಏನು ಮಾಡುತ್ತಿದ್ದಾರೆ ಎಂಬುದು ಗೊತ್ತಿದೆ ಎಂದರು.ಫೆರಿಫೆರಲ್ ರಿಂಗ್ ರಸ್ತೆ ಭೂ ಸ್ವಾಧೀನ ವಿಚಾರವಾಗಿ ಆ ಭಾಗದ ಕೆಲ ರೈತರು ಇಂದು ನನ್ನನ್ನು ಭೇಟಿ ಮಾಡಿದ್ದಾರೆ. ಇದೇ ತಿಂಗಳು 31 ರಂದು ಆ ರೈತರ ಜೊತೆ ಸಭೆ ಮಾಡುವುದಾಗಿ ತಿಳಿಸಿದ್ದೇನೆ ಎಂದರು.