ಹೊಸಪೇಟೆ : ತುಂಗಭದ್ರಾ ಅಣೆಕಟ್ಟು ಚೈನ್ ಲಿಂಕ್ ಮುರಿದ ಹಿನ್ನೆಲೆಯಲ್ಲಿ ಕೈಗೊಂಡಿದ್ದ ಸ್ಟಾಪ್ ಗೇಟ್ ಅಳವಡಿಕೆಯು ಮೊದಲ ಹಂತದಲ್ಲಿ ಯಶಸ್ವಿಯಾಗಿದ್ದು, ಶುಕ್ರವಾರ ರಾತ್ರಿ ಮೊದಲ ಪ್ಲೇಟ್ ಕೂರಿಸಲಾಯಿತು.ಒಟ್ಟು ಐದು ಪ್ಲೇಟ್ ಅಳವಡಿಕೆಯಾಗಲಿದ್ದು, ಶನಿವಾರದ ವೇಳೆಗೆ ಸ್ಟಾಪ್ ಗೇಟ್ ಅಳವಡಿಕೆಯ ಕಾರ್ಯ ಪೂರ್ಣಗೊಳ್ಳಲಿದೆ ಎಂದು ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಝಮೀರ್ ಅಹ್ಮದ್ ಖಾನ್ ತಿಳಿಸಿದ್ದಾರೆ.ಸ್ಟಾಪ್ ಗೇಟ್ ಅಳವಡಿಕೆ ಮೊದಲ ಹಂತದ ಯಶಸ್ವಿ ಕುರಿತು ಸಚಿವ ಝಮೀರ್ ಅಹ್ಮದ್ ಖಾನ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ದೂರವಾಣಿ ಮೂಲಕ ಮಾಹಿತಿ ನೀಡಿದರು.ಸ್ಟಾಪ್ ಗೇಟ್ ಅಳವಡಿಕೆ ಹಿನ್ನೆಲೆಯಲ್ಲಿ ಮೂರು ದಿನಗಳಿಂದ ವೈಕುಂಠ ಅತಿಥಿ ಗೃಹದಲ್ಲೇ ವಾಸ್ತವ್ಯ ಹೂಡಿದ್ದ ಸಚಿವ ಝಮೀರ್ ಅಹ್ಮದ್ ಖಾನ್ ಸ್ಥಳಕ್ಕೆ ಭೇಟಿ ನೀಡಿ‌, ಕಾಮಗಾರಿ ಪ್ರಗತಿ ಪರಿಶೀಲನೆ ನಡೆಸುತ್ತಿದ್ದರು. ತಾಂತ್ರಿಕ ತಂಡದ ನಿರಂತರ ಪರಿಶ್ರಮದಿಂದ ಸ್ಟಾಪ್ ಗೇಟ್ ಅಳವಡಿಕೆಯ ಮೊದಲ ಹಂತ ಯಶಸ್ಸು ಸಾಧಿಸಿದ್ದು, ಇಡೀ ತಂಡಕ್ಕೆ ಸಚಿವರು ಕೃತಜ್ಞತೆ ಸಲ್ಲಿಸಿದರು.   