ಕೆ..ಸಿ ವೇಣುಗೋಪಾಲ್ ( Photo - PTI )ಬೆಂಗಳೂರು: ಇಂದಿನಿಂದ ಎರಡು ದಿನಗಳ ವರೆಗೆ ನಡೆಯಲಿರುವ ವಿಪಕ್ಷಗಳ ಸಭೆಗೆ ಜೆಡಿಎಸ್‍ಗೆ  ಆಹ್ವಾನ ನೀಡದ ಬಗ್ಗೆ ಎಐಸಿಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಪ್ರತಿಕ್ರಿಯಿಸಿದ್ದಾರೆ. ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ''ಯಾರು ಬಿಜೆಪಿ ವಿರುದ್ಧ ಹೋರಾಟಕ್ಕೆ ಸಿದ್ಧವಾಗಿದ್ದಾರೆ ಅವರು ಬರ್ತಾರೆ. ಆಹ್ವಾನ ಕೊಡುವ ಅಗತ್ಯವೇ ಇಲ್ಲ. ಅವರೇ ಭಾಗಿಯಾಗ್ತಾರೆ. ಅದಲ್ಲದೇ ಕಳೆದ ಬಾರಿ ಜೆಡಿಎಸ್‍ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ” ಎಂದು ಹೇಳಿದರು. ''ವಿಪಕ್ಷಗಳ ಒಕ್ಕೂಟಕ್ಕೆ ನಾಯಕರು ಯಾರು ಎಂಬ ಬಗ್ಗೆ ಚಿಂತಿಸಬೇಡಿ. ‌ದೇಶದ ಪರಿಸ್ಥಿತಿಯ ಬಗ್ಗೆ ಯೋಚನೆ ಮಾಡಿ'' ಎಂದು ಅವರು ಹೇಳಿದರು. ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಮಾತನಾಡಿ, ''ದೇಶದ ಭವಿಷ್ಯವನ್ನು ಹೇಗೆ ರೂಪಿಸಬೇಕು ಎಂಬುದರ ಬಗ್ಗೆ ನಾಳೆ ದೊಡ್ಡ ಮಟ್ಟದ ಸಭೆ ನಡೆಯಲಿದೆ. ಇದು ಕೇವಲ ಒಂದು ಪಕ್ಷದ ಸಭೆಯಲ್ಲ, ದೇಶದ 140 ಕೋಟಿ ಜನರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳಿಗೆ ಪರಿಹಾರ ನೀಡಲು ಈ ಸಭೆಯಲ್ಲಿ ಚರ್ಚೆ ಮಾಡಲಾಗುವುದು'' ಎಂದರು. ''ಭಾರತ ರಾಷ್ಟ್ರೀಯ ಕಾಂಗ್ರೆಸ್ ಸಮಿತಿ ಆಯೋಜಿಸುತ್ತಿರುವ ಈ ಸಭೆಗೆ ಕೆಪಿಸಿಸಿ ಪರವಾಗಿ ಎಲ್ಲರಿಗೂ ಸ್ವಾಗತ ಕೋರುತ್ತೇನೆ. ಈ ಒಗ್ಗಟ್ಟನ್ನು ಮುಂದಿನ ದಿನಗಳಲ್ಲಿ ಮುಂದುವರಿಸಿಕೊಂಡು ಕರ್ನಾಟಕ ರಾಜ್ಯದಲ್ಲಿ ಪಡೆದ ಫಲಿತಾಂಶವನ್ನೇ 2024ರ ಚುನಾವಣೆಯಲ್ಲಿ ಪಡೆಯಲು ಕೆಲಸ ಮಾಡಲಾಗುವುದು'' ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. 