ಬೆಂಗಳೂರು: ಬೆಂಗಳೂರಿನ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾಜಿ ಸಚಿವ ವಿ. ಸೋಮಣ್ಣ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಲು ಸೋಮಣ್ಣ ಅವರು ಪ್ರಯತ್ನಿಸುತ್ತಿದ್ದಾರೆ ಎಂದು ವರದಿಯಾಗಿದೆ. ಈ ಕ್ಷೇತ್ರವನ್ನು ಪ್ರಸ್ತುತ ಸಂಸದ ತೇಜಸ್ವಿ ಸೂರ್ಯ ಪ್ರತಿನಿಧಿಸುತ್ತಿದ್ದಾರೆ."ನಾನು ಕೂಡಾ ಬೆಂಗಳೂರು ದಕ್ಷಿಣ ಕ್ಷೇತ್ರದ ಟಿಕೆಟ್ ಆಕಾಂಕ್ಷಿ" ಎಂದು ಶುಕ್ರವಾರ ಗೋವಿಂದರಾಜನಗರ ಕ್ಷೇತ್ರದ ವಾರ್ಡವಾರು ಬಿಜೆಪಿ ಸಭೆಯಲ್ಲಿ ಸೋಮಣ್ಣ ಹೇಳಿದ್ದಾರೆ. "ನಾನು ಕೂಡಾ ಟಿಕೆಟ್ ಆಕಾಂಕ್ಷಿ, 20 ವರ್ಷಗಳಿಂದ ಒಂದೇ ಸಮುದಾಯಕ್ಕೆ ಟಿಕೆಟ್‌ ನೀಡಲಾಗುತ್ತಿದೆ. ಈ ಬಾರಿ ಬೇರೆ ಸಮುದಾಯಕ್ಕೆ ಟಿಕೆಟ್‌ ನೀಡಬೇಕು" ಎಂದು ಸೋಮಣ್ಣ ಹೇಳಿದ್ದಾಗಿ ವರದಿಯಾಗಿದೆ.ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಬ್ರಾಹ್ಮಣ ಸಮುದಾಯದ ದಿವಂಗತ ಅನಂತ್ ಕುಮಾರ್ ಅವರು 6 ಬಾರಿ ಗೆದ್ದಿದ್ದರು. ಅವರ ನಿಧನದ ನಂತರ ಆ ಕ್ಷೇತ್ರ ಅದೇ ಸಮುದಾಯದ ತೇಜಸ್ವಿ ಸೂರ್ಯ ಅವರಿಗೆ ಲಭಿಸಿದೆ. ಇದೀಗ ಬಿಜೆಪಿ ಮುಖಂಡ ಸೋಮಣ್ಣ ಅವರು ಈ ಬಾರಿ ಬೇರೆ ಸಮುದಾಯಕ್ಕೆ ಟಿಕೆಟ್‌ ನೀಡಬೇಕು ಎಂದು ಹೇಳಿ ಕುತೂಹಲ ಮೂಡಿಸಿದ್ದಾರೆ.