ಹತ್ಯೆಗೀಡಾದ  ವೇಣುಗೋಪಾಲ್  ಮೈಸೂರು: ಜಿಲ್ಲೆಯ ಟಿ.ನರಸೀಪುರ ಪಟ್ಟಣದಲ್ಲಿ ರವಿವಾರ ನಡೆದಿದ್ದ ಯುವ ಬ್ರಿಗೇಡ್ ಕಾರ್ಯಕರ್ತ ವೇಣುಗೋಪಾಲ್ ನಾಯಕನ ಕೊಲೆ ಪ್ರಕರಣದಲ್ಲಿ ಮೈಸೂರಿನ ಬಿಜೆಪಿ ಕಾರ್ಪೋರೇಟರ್ ಸಹೋದರ ಶಂಕರ್ ಅಲಿಯಾಸ್ ತುಪ್ಪ ಎಂಬಾತನನ್ನು ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ. ಮೈಸೂರು ನಗರದ  ದಟ್ಟಗಳ್ಳಿಯ 48 ನೇ ವಾಡ್೯ ಬಿಜೆಪಿ ಕಾರ್ಪೋರೇಟರ್ ಲಕ್ಷ್ಮಿ ಕಿರಣ್ ಸಹೋದರ ಕೊಲೆ ಆರೋಪಿ ಶಂಕರ್ ಎಂದು ಹೇಳಲಾಗುತ್ತಿದೆ.ಹನುಮಜಯಂತಿ ಆಚರಣೆ ವೇಳೆ ನಾಯಕ ನಟ ದಿ.ಪುನೀತ್ ರಾಜ್ ಕುಮಾರ್ ಭಾವಚಿತ್ರ ಹಾಕುವ ವಿಚಾರದಲ್ಲಿ ಯುವ ಬ್ರಿಗೇಡ್ ಕಾರ್ಯಕರ್ತರುಗಳ ನಡುವೆಯೇ ಗಲಾಟೆ ನಡೆದಿತ್ತು. ಈ ಸಂಬಂಧ ರಾಜಿ ಮಾಡಿಕೊಳ್ಳಲು ವೇಣುಗೋಪಾಲನನ್ನು ರವಿವಾರ ರಾತ್ರಿ ಅಗ್ನಿಶಾಮಕ ಕಚೇರಿ ಬಳಿಗೆ ಕರೆಸಿಕೊಂಡು ಕೊಲೆ ಮಾಡಲಾಗಿತ್ತು.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿಯ ವಿರುದ್ಧ ದೂರು ದಾಖಲಾಗಿದ್ದು, ಸೋಮವಾರ ಸಂದೇಶ್ ಮತ್ತು ಮಣಿಕಂಠ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿತ್ತು. ಇನ್ನುಳಿದ ನಾಲ್ವರು ಆರೋಪಿಗಳಾದ  ಶಂಕರ ಅಲಿಯಾಸ್ ತುಪ್ಪ, ಅನಿಲ್, ಹ್ಯಾರಿಸ್ ಮತ್ತು ಮಂಜ ಎಂಬುವವರನ್ನು ಬಂಧಿಸಲಾಗಿದೆ ಎಂದು ಕೆಲವು ಮೂಲಗಳಿಂದ ತಿಳಿದು ಬಂದಿದೆ.