ಬೆಂಗಳೂರು: ಮಂಗಳವಾರ ಸದನ ಆರಂಭವಾಗುತ್ತಿದ್ದಂತೆ ವಿಧಾನಸೌಧದ ಪೂರ್ವ ಗೇಟ್ ತೆರೆಯುವಂತೆ ಸ್ಪೀಕರ್ ಯುಟಿ ಖಾದರ್​ ಅವರಿಗೆ​ ಸಚಿವ ಕೆ.ಜೆ.ಜಾರ್ಜ್ ಮನವಿ ಮಾಡಿದ್ದಾರೆ. ವಿಧಾನಸೌಧದ ಸುತ್ತಮುತ್ತ ಸಂಚಾರ ದಟ್ಟಣೆ ಇರುವ ಕಾರಣ ಪೂರ್ವ ಗೇಟ್ ತೆರೆಯುವಂತೆ ಸಚಿವರು ಸ್ಪೀಕರ್ ಗಮನಕ್ಕೆ ತಂದಾಗ, ಇದಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್, ​ ಅರ್ಧ ಗಂಟೆ ಮೊದಲೇ ಬಂದರೆ ಬೇಗ ಸದನಕ್ಕೆ ತಲುಪಬಹುದು ಎಂದು ಸಲಹೆ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಾರ್ಜ್,​​ 'ಬೇಕಾದರೆ 3 ಗಂಟೆಗಳ ಕಾಲ ಮೊದಲೇ ಹೊರಡುತ್ತೇವೆ. ಅದಕ್ಕೇನು ಸಮಸ್ಯೆ ಇಲ್ಲ, ಕನಿಷ್ಠ ಅಧಿವೇಶನದ ಸಮಯದಲ್ಲಾದರೂ ಗೇಟ್ ಓಪನ್ ಮಾಡುವಂತೆ ಆದೇಶ ಹೊರಡಿಸಿ' ಎಂದು ಮನವಿ ಮಾಡಿದರು. ಈ ವೇಳೆ ಮಧ್ಯ ಪ್ರವೇಶಿಸಿದ ಶಾಸಕ ಅಶೋಕ್ ಪಟ್ಟಣ್ ಕೂಡ ಅಧಿವೇಶನ ಮುಗಿಯುವವರೆಗೆ ಸಚಿವರಿಗಾಗಿ ಗೇಟ್ ಓಪನ್ ಮಾಡಿಸುವಂತೆ ಮನವಿ ಮಾಡಿದರು. ಈ ಬಗ್ಗೆ ಚರ್ಚೆ ಮಾಡಿ ಪರಿಶೀಲನೆ ಮಾಡುತ್ತೇವೆ ಎಂದು ಸ್ಪೀಕರ್ ಭರವಸೆ ನೀಡಿದರು.