ತುಮಕೂರು: ಮಹಿಳೆಯೊಬ್ಬರು ಕೆರೆಯಲ್ಲಿ ಮುಳುಗುತ್ತಿದ್ದ ತನ್ನ ಮಕ್ಕಳನ್ನು ರಕ್ಷಿಸಿ ಮೃತಪಟ್ಟ ಘಟನೆ ಜಿಲ್ಲೆಯ ಶಿರಾ ತಾಲೂಕಿನ ರತ್ನ ಸಂದ್ರ ಗ್ರಾಮದಲ್ಲಿ ರವಿವಾರ ವರದಿಯಾಗಿದೆ. ರತ್ನ ಸಂದ್ರ ಗ್ರಾಮದ ಮಂಜುನಾಥ್ ಅವರ ಪತ್ನಿ ಮನು (30) ಮೃತಪಟ್ಟ ಮಹಿಳೆ ಎಂದು ಗುರುತಿಸಲಾಗಿದೆ. ಘಟನೆ ವಿವರ: ರವಿವಾರ ಮನು ತನ್ನ ಮಕ್ಕಳಾದ ಬಿಂದು (10), ಚಿರು (9 ) ಭರತ್ (6 ) ವರ್ಷ ಹಾಗೂ ಮೈದನನ ಮಗಳು ಅಕ್ಷತಾ (9 )  ಜೊತೆ ಬಟ್ಟೆ ತೊಳೆಯಲೆಂದು ರತ್ನ ಸಂದ್ರ ಕೆರೆ ಬಳಿ ಹೋಗಿದ್ದರು. ಈ ವೇಳೆ ಆಟವಾಡುತ್ತಿದ್ದ ಮಕ್ಕಳು ಕೆರೆಗೆ ಬಿದ್ದಿದ್ದಾರೆ. ತಕ್ಷಣ ಮನು ನೀರಿನ ಅಳವನ್ನು ತಿಳಿಯದೆ ಕರೆಗೆ ಹಾರಿ ಮಕ್ಕಳನ್ನು ರಕ್ಷಿಸಿದ್ದಾರೆನ್ನಲಾಗಿದೆ. ಆದರೆ ಈಜು ಬಾರದ ಮನು ಮೇಲೆ ಬರಲಾಗದೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಅಸ್ವಸ್ಥಗೊಂಡ  ಬಿಂದುವನ್ನು ಶಿರಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.ಈ ಸಂಬಂಧ ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 