ಬೆಂಗಳೂರು: 'ಸಿದ್ದರಾಮಯ್ಯರ ಸರಕಾರದ ಅನುದಾನದಲ್ಲಿ ನಾನು ಮತ್ತೆ ಶಾಸಕನಾದೆ. ಕರ್ನಾಟಕ ರಾಜ್ಯದಲ್ಲಿ ನುಡಿದಂತೆ ನಡೆಯುವ ರಾಜಕಾರಣಿ ಇದ್ದರೆ ಅದು ಮುಖ್ಯಮಂತ್ರಿ ಸಿದ್ದರಾಮಯ್ಯ' ಎಂದು ಮಾಜಿ ಸಚಿವ, ಯಶವಂತ ಪುರ ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ. ರವಿವಾರ ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠ ಶಾಖಾ ಮಠದ ಭೂಮಿ ಪೂಜೆ ಕಾರ್ಯಕ್ರಮದ್ಲಲಿ ಪಾಲ್ಗೊಂಡು ಅವರು ಮಾತನಾಡಿರು. ''2013-18 ರ ಅವಧಿಯ ಸಿದ್ದರಾಮಯ್ಯ ಸರಕಾರ ಕೊಟ್ಟ ಅನುದಾನ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳಿಂದ ನಾನು ಎರಡನೇ ಬಾರಿ ಶಾಸಕನಾಗಿ ಆಯ್ಕೆಯಾದೆ. ನಾನು ಪಕ್ಷಾಂತರ ಮಾಡಿದ್ರೂ ಸಿದ್ದರಾಮಯ್ಯರನ್ನು ಮರೆತಿರಲಿಲ್ಲ'' ಎಂದರು. ''ಯಾವತ್ತೂ ದ್ವೇಷ ರಾಜಕಾರಣ ಮಾಡದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಶಿಷ್ಯನಾಗಿ, ಅಭಿಮಾನಿಯಾಗಿ ಶಾಖಾಮಠದ ನಿರ್ಮಾಣಕ್ಕೆ ಅಗತ್ಯ ಇರುವ ಎಲ್ಲಾ ನೆರವನ್ನೂ ನೀಡುತ್ತೇನೆ' ಎಂದು ಘೋಷಿಸಿದರು.ಮುಖ್ಯಮಂತ್ರಿ ಸಿದ್ದರಾಮಯ್ಯ, ಮಹಾಸಂಸ್ಥಾನದ ಪರಮಪೂಜ್ಯ ಜಗದ್ಗುರು ಶ್ರೀ ನಿರಂಜನಾನಂದಪುರಿ ಮಹಾಸ್ವಾಮೀಜಿ, ಶಾಖಾ ಮಠದ ಪೂಜ್ಯರುಗಳಾದ ಈಶ್ವರಾನಂದಪುರಿ ಮಹಾಸ್ವಾಮೀಜಿ, ಸಿದ್ದರಾಮಾನಂದಪುರಿ ಮಹಾಸ್ವಾಮೀಜಿ, ಶಿವಾನಂದಪುರಿ ಮಹಾಸ್ವಾಮೀಜಿ, ತ್ರಿದಂಡಿ ವೆಂಕಟರಾಮಾನುಜ ಮಹಾಸ್ವಾಮೀಜಿ, ಸಮಾಜದ ಮುಖಂಡರಾದ ಹೆಚ್.ವಿಶ್ವನಾಥ್, ಸಚಿವರಾದ ಭೈರತಿ ಸುರೇಶ್, ಶಾಸಕರಾದ ಎಸ್.ಟಿ.ಸೋಮಶೇಖರ್,  ಮಾಜಿ ಸಚಿವರಾದ ಹೆಚ್.ಎಂ.ರೇವಣ್ಣ, ಕೆ.ಎಸ್.ಈಶ್ವರಪ್ಪ, ಬಂಡೆಪ್ಪ ಕಾಶಂಪುರ್, ಕೊಪ್ಪಳ ವಿವಿ ಕುಪಪತಿಗಳಾದ ಬಿ.ಕೆ.ರವಿ ಸೇರಿ ಹಲವು ಮುಖಂಡರು ವೇದಿಕೆಯಲ್ಲಿ ಉಪಸ್ಥಿತರಿದ್ದರು.