ಬೆಂಗಳೂರು: ಸರ್ಕಾರಗಳ ತಪ್ಪು ನಡೆಯಿಂದಾಗಿ ಅಮಾಯಕ  ಜನರು  ಸಾವಿಗೀಡಾಗುತ್ತಿರುವುದನ್ನು ಖಂಡಿಸಿ ಆಮ್ ಆದ್ಮಿ ಪಕ್ಷವು ಸಾವಿನ ರಹದಾರಿ  ಅಭಿಯಾನವನ್ನು ಕೈಗೆತ್ತಿಕೊಂಡಿದೆ ಎಂದು ಆಮ್ ಆದ್ಮಿ ಪಕ್ಷದ ಕಾರ್ಯಾಧ್ಯಕ್ಷ ಮೋಹನ್ ದಾಸರಿ ತಿಳಿಸಿದ್ದಾರೆ.  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು ಮೈಸೂರ್ ಎಕ್ಸ್ ಪ್ರೆಸ್ ವೇ ಹೆದ್ದಾರಿಯಲ್ಲಿ  ಕಳೆದ 9 ತಿಂಗಳುಗಳಿಂದ  158 ಜನರ ಅಪಘಾತದಲ್ಲಿ ಸಾವಿಗೀಡಾಗಿರುವ  ವಿಷಯವು ಅತ್ಯಂತ ಗಂಭೀರವಾಗಿದೆ.  ತರಾತುರಿಯಲ್ಲಿ ಸರ್ಕಾರಗಳ  ಅವೈಜ್ಞಾನಿಕವಾದಂತ ಹಾಗೂ ಭ್ರಷ್ಟಾಚಾರ ಮಿಶ್ರಿತ  ಯೋಜನೆಗಳಿಂದಾಗಿ ಅಮಾಯಕ  ಜನತೆಯ ಬಲಿಯಾಗುತ್ತಿರುವುದು ದುರಂತದ ವಿಚಾರ ಎಂದರು.   ಅಮಾಯಕ  ಪ್ರಯಾಣಿಕರ ಪ್ರಾಣಗಳನ್ನು ಉಳಿಸಲು ಈ ಅಭಿಯಾನದ ಮೂಲಕ ಜನಜಾಗೃತಿಯನ್ನು ಮೂಡಿಸಲು ನಿರ್ಧರಿಸಲಾಗಿದೆ. ಇದೇ ಜೂನ್ ತಿಂಗಳ 30ರ ಶುಕ್ರವಾರ  ಮೈಸೂರು ರಸ್ತೆಯ ಕಣಿಮಣಿಕೆ  ಟೋಲ್ ಪ್ಲಾಜಾ ಬಳಿ  ಪಕ್ಷದ ನೂರಾರು ಕಾರ್ಯಕರ್ತರು ಭಾಗವಹಿಸುತ್ತಿದ್ದಾರೆ ಎಂದು ತಿಳಿಸಿದರು.  ಇಂತಹ ಅಭಿಯಾನಗಳ ಮೂಲಕ ಅಮಾಯಕ ಪ್ರಯಾಣಿಕರ ಪ್ರಾಣಗಳನ್ನು ಉಳಿಸುವುದು ಆಮ್ ಆದ್ಮಿ ಪಕ್ಷದ  ಉದ್ದೇಶವಾಗಿದ್ದು ಸಾರ್ವಜನಿಕರು ನಮ್ಮೊಂದಿಗೆ ಕೈಜೋಡಿಸಬೇಕೆಂದು ದಾಸರಿ ಮನವಿ ಮಾಡಿದ್ದಾರೆ.  