ಬೆಳಗಾವಿ: ಸಿದ್ದರಾಮಯ್ಯ, ಡಿಕೆಶಿ ಇಬ್ಬರ ನೇತೃತ್ವದ ಸರ್ಕಾರ ಐದು ವರ್ಷ ಪೂರ್ಣಗೊಳಿಸಲ್ಲ. ಇದು ಐದು ವರ್ಷ ನಡೆಯುವ ಸರ್ಕಾರ ಅಲ್ಲ. ಲೋಕಸಭಾ ಚುನಾವಣೆ ಮುನ್ನ ಅಥವಾ ಬಳಿಕ ಅಕ್ಸಿಡೆಂಟ್ ಆಗುತ್ತೆ. ಅಷ್ಟರಲ್ಲಿ ಇಬ್ಬರೂ ಮೆಟ್ಟು ಮೆಟ್ಟಿನಿಂದ ಹೊಡೆದಾಡಿಕೊಳ್ಳುತ್ತಾರೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದ್ದಾರೆ. ನಗರದಲ್ಲಿ ರವಿವಾರ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, 'ಡಿಕೆಶಿ ಅವರು ಯಡಿಯೂರಪ್ಪ, ಬೊಮ್ಮಾಯಿ ಮನೆಗೆ ಹೋಗಿ ಸೌಜನ್ಯ ಭೇಟಿ ಅಂತಾರೆ. ಇವರು ಸೌಜನ್ಯ ಭೇಟಿ ಕೊಡ್ತಿಲ್ಲ ಸೋನಿಯಾ ಗಾಂಧಿಗೆ ಅಂಜಿಸುವ ಕೆಲಸ ಮಾಡುತ್ತಾರೆ. ಬೊಮ್ಮಾಯಿಯವರೇ ಅವರನ್ನ ನೀವು ಮನೆವರೆಗೂ ಬಿಟ್ಟುಕೊಳ್ಳಬೇಡಿ. ನಾವು ವಿರೋಧ ಪಕ್ಷದವರ ಮನೆಗೆ ಹೋಗುವುದಿಲ್ಲ ಅಂತಾರೆ. ಅದೇ ರೀತಿ ನಾವು ಅವರ ಮನೆಗೆ ಹೋಗುವುದಿಲ್ಲ ಅಂತಾ ಹೇಳಿ. ಅವರನ್ನ ಸ್ವಾಗತಿಸಿಕೊಂಡ್ರೇ ನಮ್ಮ ಕಾರ್ಯಕರ್ತರು ಮಲಗಿ ಬಿಡುತ್ತಾರೆ' ಎಂದು ಹೇಳಿದರು.''ಮೂರು ತಿಂಗಳಲ್ಲಿ ಗ್ಯಾರಂಟಿ ಬಣ್ಣ ಬಯಲು ಆಗಲಿದೆ. ಸಿದ್ದರಾಮಯ್ಯನವರು ಏನ್ ಹೇಳಿದರೂ ಅದನ್ನ ಹೊರ ತೆಗೆಯುತ್ತೇವೆ. ನಾವು ಗಟ್ಟಿ ಇದ್ದೇವೆ ದನ ಕಾಯುತ್ತಿಲ್ಲ ಆರ್ಥಿಕತೆ ಬಗ್ಗೆಯೂ ಗೊತ್ತಿದೆ'' ಎಂದು ವಾಗ್ದಾಳಿ ನಡೆಸಿದರು.  