ರಾಮನಗರ: ರಾಜ್ಯ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದ ಆಡಳಿತವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಗುರಿ ಮುಟ್ಟುವ ತನಕ ಹೋರಾಟ ಮುಂದುರೆಯುತ್ತೆ ಎಂದು ನಿಖಿಲ್ ಕುಮಾರಸ್ವಾಮಿಯವರು ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದರು.ರಾಮನಗರ ಪಾದಯಾತ್ರೆ ಸಭೆಯಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, "ಮುಡಾದಲ್ಲಾಗಿರುವ ಅಕ್ರಮವನ್ನು ಬಯಲಿಗೆಳೆಯಲು ಈ ಪಾದಯಾತ್ರೆ   ನಡೆಯುತ್ತಿದೆ. ವಾಲ್ಮೀಕಿ ನಿಗಮದಲ್ಲಿ ಆಗಿರುವ ಕೋಟ್ಯಾಂತರ ರೂ. ವಹಿವಾಟು ಇತಿಹಾಸದಲ್ಲೇ ಮೊದಲು. ಐದು ಗ್ಯಾರಂಟಿ ಬಗ್ಗೆ ರಾಜ್ಯದ ಜನರಲ್ಲಿ ವಿಶ್ವಾಸ ಹುಟ್ಟಿಸಿದ್ದರು. ಈಗ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಮತ ಹಾಕದಿದ್ದರೆ ಐದು ಗ್ಯಾರಂಟಿ ರದ್ದು ಮಾಡುವುದಾಗಿ ಮಾಗಡಿ ಬಾಲಕೃಷ್ಣ ಹೇಳಿದ್ದರು, ಅದರಂತೆ ಲೋಕಸಭಾ ಚುನಾವಣೆ ಬಳಿಕ ಐದು ಗ್ಯಾರಂಟಿ ರದ್ದು ಮಾಡಿದ್ದಾರೆ ಎಂದು ಹೇಳಿದರು.ಇನ್ನು ರೈತರಿಗೆ ಹಾಲಿನ ಪ್ರೋತ್ಸಾಹ ಧನ ಸಾವಿರ ಕೋಟಿ ಬಾಕಿ ಉಳಿಸಿಕೊಂಡಿದ್ದಾರೆ. ರೈತ ಕುಟುಂಬ ಆತ್ಮಹತ್ಯೆಗೆ ಮುಂದಾಗಿವೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ರಾಜೀನಾಮೆ ನೀಡಿ : ಸಿದ್ರಾಮಣ್ಣ ನೀವು ಸಮಾಜವಾದಿ ಅಲ್ಲ, ಮಜವಾದಿ. ಸಿದ್ರಾಮಣ್ಣ ಅವರೇ ನಿಮಗೆ ನೈತಿಕತೆ ಇದ್ದರೆ ರಾಜೀನಾಮೆ ನೀಡಿ ಮನೆಗೆ ಹೋಗಿ ಎಂದು ವಾಗ್ದಾಳಿ ನಡೆಸಿದರು.