ಬೆಂಗಳೂರು:ಹೆಸರಿಗಷ್ಟೇ ಅದು ಕೋಳಿ ಫಾರಂ. ಒಳ ಹೊಕ್ಕಿದರೆ ಖಾಲಿಖಾಲಿ ಆವರಣ. ಆದರೂ ಅಲ್ಲಿತ್ತು 6 ಕೋಟಿ ರೂ. ಮೌಲ್ಯದ ಗಾಂಜಾ. ಹೌದು, ಕೋಳಿಫಾರಂನ ಅಂಡರ್​ಗ್ರೌಂಡ್​ನಲ್ಲಿ ದುಷ್ಕರ್ಮಿಗಳು ಬರೋಬ್ಬರಿ 1,200 ಕೆಜಿ ಗಾಂಜಾವನ್ನು ಅವಿತಿಟ್ಟಿದ್ದರು. ಇಲ್ಲಿಂದಲೇ ಇಡೀ ರಾಜ್ಯಕ್ಕೆ ಗಾಂಜಾ ಸಪ್ಲೈ ಮಾಡುತ್ತಿದ್ದರು.
ಈ ಆಘಾತಕಾರಿ ಅಕ್ರಮ ಬಯಲಾಗಿದ್ದು ಕಲಬುರಗಿ ಜಿಲ್ಲೆ ಕಾಳಗಿ ತಾಲೂಕಿನ ಲಕ್ಷ್ಮಣ ನಾಯಕ ತಾಂಡಾದಲ್ಲಿ. ಬೆಂಗಳೂರಿನಲ್ಲಿ ಆಟೋ ಚಾಲಕನ ಸೋಗಿನಲ್ಲಿ ಸೆರೆಸಿಕ್ಕ ಡ್ರಗ್ಸ್​ ಪೆಡ್ಲರ್​ನ ಹೇಳಿಕೆಯ ಜಾಡು ಹಿಡಿದು ಹೊರಟ ಶೇಷಾದ್ರಿಪುರಂ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಕಲಬುರಗಿಯ ಕೋಳಿ ಶೆಡ್​ನಲ್ಲಿ ಬಚ್ಚಿಟ್ಟಿದ್ದ 1,200 ಕೆಜಿ ಗಾಂಜಾ ಸೇರಿ ಇದೇ ಕೇಸ್​ನಲ್ಲಿ ಒಟ್ಟು 1352 ಕೆಜಿ ಗಾಂಜಾ ಜಪ್ತಿ ಮಾಡಿದ್ದಾರೆ. ಇದು ರಾಜ್ಯದ ಇತಿಹಾಸದಲ್ಲೇ ಬಹುದೊಡ್ಡ ಬೇಟೆ! ಇಷ್ಟೊಂದು ದೊಡ್ಡ ಪ್ರಮಾಣದ ಗಾಂಜಾ ಮಾರಾಟ ದಂಧೆ ಬಯಲಾಗಿದ್ದೇ ರೋಚಕ. ಅದರ ರಹಸ್ಯ ಇಲ್ಲಿದೆ.
ಇದನ್ನೂ ಓದಿರಿರೈತನ ಜಮೀನು ಪಡೆದು ಬರೋಬ್ಬರಿ ನಾಲ್ಕೂವರೆ ಎಕರೆಯಲ್ಲಿ ಗಾಂಜಾ ಬೆಳೆದ ದುಷ್ಕರ್ಮಿ
ಆ.30ರಂದು ಶೇಷಾದ್ರಿಪುರಂ ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬ ಆಟೋ ನಿಲ್ಲಿಸಿಕೊಂಡು ಗಾಂಜಾ ಮಾರುತ್ತಿದ್ದ. ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ತೆರಳಿದ್ದ ಪೊಲೀಸರುಆರೋಪಿ ಜ್ಞಾನಶೇಖರ್(37) ಎಂಬಾತನನ್ನು ಬಂಧಿಸಿ ಆತನಿಂದ 2 ಕೆಜಿ 100 ಗ್ರಾಂ ಗಾಂಜಾ ಸಹಿತ ಆಟೋವನ್ನು ಜಪ್ತಿ ಮಾಡಿದ್ದರು. ವಿಚಾರಣೆ ವೇಳೆ ಆರೋಪಿ ಜ್ಞಾನಶೇಖರ್, ತನಗೆ ಗಾಂಜಾ ಸರಬರಾಜು ಮಾಡುತ್ತಿದ್ದ ಸಿದ್ದುನಾಥ ಲಾವಟೆ(22) ಬಗ್ಗೆ ಬಾಯ್ಬಿಟ್ಟಿದ್ದ. ತನಿಖೆ ಮುಂದುವರಿಸಿದ ಪೊಲೀಸರು ಸೆ.6ರಂದು ಮಾದನಾಯಕನಹಳ್ಳಿ ಬಳಿ ವಿಜಯಪುರ ಜಿಲ್ಲೆಯ ಸಿದ್ದುನಾಥ ಲಾವಟೆಯನ್ನು ಬಂಧಿಸಿದ್ದು, ಆತನ ಬಳಿಯಿದ್ದ 200 ಗ್ರಾಂ ಗಾಂಜಾವನ್ನು ಜಪ್ತಿ ಮಾಡಿದ್ದರು. ಸಿದ್ದುನಾಥ ಕೊಟ್ಟ ಮಾಹಿತಿ ಆಧರಿಸಿ ಈ ಮಾಫಿಯಾದ ಪ್ರಮುಖ ಆರೋಪಿಗಳಾದ ಕಲಬುರಗಿ ಜಿಲ್ಲೆಯ ಚಂದ್ರಕಾಂತ್ ಮತ್ತು ಬೀದರ್ ಮೂಲದ ನಾಗನಾಥ್​ ಬಂಧನಕ್ಕೆ ಬೆಂಗಳೂರು ಪೊಲೀಸರು ಬೀದರ್ ಮತ್ತು ಕಲಬುರಗಿಯಲ್ಲಿ ಬಲೆ ಬೀಸಿದ್ದರು. ಆ ವೇಳೆ ಅಂದರೆ ಸೆ.8ರಂದು 150 ಕೆಜಿ ಗಾಂಜಾ ಪತ್ತೆಯಾಗಿತ್ತು.
ಸೆ.9ರಂದು ಕಲಬುರಗಿಯ ಮಾಡಗುಡ್ ಟೋಲ್ ಬಳಿ ಗಾಂಜಾ ಸಾಗಾಟಕ್ಕೆ ಯತ್ನಿಸುತ್ತಿದ್ದ ಚಂದ್ರಕಾಂತ್ ಮತ್ತು ನಾಗನಾಥ್ ಪೊಲೀಸರ ಕೈಗೆ ಸಿಕ್ಕಿಬಿದ್ದರು. ಆ ವೇಳೆ ತಪ್ಪೊಪ್ಪಿಕೊಂಡ ಆರೋಪಿಗಳ ಹೇಳಿಕೆಯ ಜಾಡು ಹಿಡಿದು ಚಂದ್ರಕಾಂತ್​ಗೆ ಸೇರಿದ ಕೋಳಿ ಫಾರಂ ಒಳಹೊಕ್ಕ ಪೊಲೀಸರೇ ಅರೆಕ್ಷಣ ದಂಗಾದರು. ಯಾಕಂದ್ರೆ ಅದು ಹೆಸರಿಗಷ್ಟೇ ಕೋಳಿ ಸಾಕಾಣಿಕೆ ಶೆಡ್​. ಅಸಲಿಗೆ ಅಲ್ಲಿ ಕೋಳಿ ಸಾಕಾಣಿಕೆ ನಡೆಯುತ್ತಿರಲಿಲ್ಲ. ಶೆಡ್​ ಆವರಣದಲ್ಲಿ ರಹಸ್ಯವಾಗಿ ಅಂಡರ್​ಗ್ರೌಂಡ್​ ನಿರ್ಮಿಸಿ ಅದರಲ್ಲಿ 1,200 ಕೆಜಿ ಗಾಂಜಾವನ್ನು ಅಡಗಿಸಿಟ್ಟು, ಮೇಲೆ ಹಲಗೆ ಇಟ್ಟು, ಅದರ ಮೇಲೆ ಮಣ್ಣು ಸುರಿಯಲಾಗಿತ್ತು. ಯಾರಿಗೂ ಅನುಮಾನ ಬಾರದಂತೆ ಕೋಟ್ಯಂತರ ರೂ. ಮೌಲ್ಯದ ಗಾಂಜಾವನ್ನು ಬಚ್ಚಿಟ್ಟು ಅಕ್ರಮವಾಗಿ ಇಲ್ಲಿಂದಲೇ ರಾಜ್ಯಾದ್ಯಂತ ಸರಬರಾಜು ಮಾಡಲಾಗುತ್ತಿತ್ತು. ಈ ರಹಸ್ಯ ಅಂಡರ್​ಗ್ರೌಂಡ್​ನ್ನು ಪೊಲೀಸರ ಸಮ್ಮುಖದಲ್ಲೇ ಆರೋಪಿ ಚಂದ್ರಕಾಂತ್​ ಓಪನ್​ ಮಾಡಿ ದಂಧೆಯ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ.
ಇದನ್ನೂ ಓದಿರಿಕೋಳಿಶೆಡ್​ನಲ್ಲಿ ಬಚ್ಚಿಟ್ಟಿದ್ರು 1,352 ಕೆಜಿ ಗಾಂಜಾ, ಇದರ ಬೆಲೆ ಕೇಳಿದ್ರೆ ಶಾಕ್​ ಆಗ್ತೀರಿ!
ಒಡಿಶಾದಲ್ಲಿ ಬೆಳೆಯುತ್ತಿದ್ದ ಗಾಂಜಾ:ಆರೋಪಿಗಳು ಗಾಂಜಾವನ್ನು ಒಡಿಶಾದಿಂದ ತರಿಸಿಕೊಳ್ಳುತ್ತಿದ್ದರು. ಚಂದ್ರಕಾಂತ್‌ಗೆ ಬೇರೆ ಮಧ್ಯವರ್ತಿಗಳ ಮೂಲಕ ತೆಲಂಗಾಣಕ್ಕೆ ಗಾಂಜಾ ಪೂರೈಕೆ ಆಗುತ್ತಿತ್ತು. ಅಲ್ಲಿಂದ ತರಕಾರಿ ತರುವ ಸೋಗಿನಲ್ಲಿ ಚಂದ್ರಕಾಂತ್ ಮತ್ತು ನಾಗನಾಥ್ ಇಬ್ಬರೂ ಗಾಂಜಾ ಪ್ಯಾಕೇಟ್‌ಗಳನ್ನು ಗಡಿಭಾಗದ ಮೂಲಕ ಕಲಬುರಗಿಗೆ ತರಿಸಿಕೊಳ್ಳುತ್ತಿದ್ದರು.
ಪಶ್ಚಿಮ ವಲಯ ಹೆಚ್ಚುವರಿ ಪೊಲೀಸ್ ಆಯುಕ್ತ ಸೌಮೇಂದು ಮುಖರ್ಜಿ ಅವರ ಮಾರ್ಗದರ್ಶನದಲ್ಲಿ, ಕೇಂದ್ರ ವಿಭಾಗ ಡಿಸಿಪಿ ಎಂ.ಎನ್ ಅನುಚೇತ್, ಶೇಷಾದ್ರಿಪುರಂ ಉಪ ವಿಭಾಗದ ಎಸಿಪಿ ಬಷೀರ್ ಅಹಮದ್, ಶೇಷಾದ್ರಿಪುರಂ ಇನ್ಸ್‌ಪೆಕ್ಟರ್ ಎಂ.ಎಲ್. ಕೃಷ್ಣಮೂರ್ತಿ ಅವರು ಡ್ರಗ್ಸ್ ಜಾಲ ಪತ್ತೆಗೆ ರಚಿಸಿದ್ದ ವಿಶೇಷ ತಂಡ ಕೋಟ್ಯಂತರ ರೂ. ಮೌಲ್ಯದ ಗಾಂಜಾವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದೆ.
https://www.vijayavani.net/sanjana-galrani-marriage-photo-viral/
Sign in to your account
Please enter an answer in digits:two + 3 =
Remember me
