ಕೊಳ್ಳೇಗಾಲ:ಈ ಊರಲ್ಲಿ ಶ್ರೀ ಸೀಗಮಾರಮ್ಮ ದೇವಿಗೆ 19 ವರ್ಷಕ್ಕೊಮ್ಮೆ ನರಬಲಿ ಕೊಡಲಾಗುತ್ತೆ. ಸತ್ತ ವ್ಯಕ್ತಿ ಮತ್ತೆ ಬದುಕಿ ಬರುತ್ತಾನೆ! ಈ ವಿಸ್ಮಯ ಕಣ್ತುಂಬಿಕೊಳ್ಳಲು ರಾತ್ರಿಯಿಡೀ ಸಾವಿವಾರು ಭಕ್ತರು ಶ್ರದ್ಧಾ ಭಕ್ತಿಯಿಂದ ಪಾಲ್ಗೊಳ್ಳುತ್ತಾರೆ… ಹೌದು ಇದು ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಪಾಳ್ಯ ಗ್ರಾಮದಲ್ಲಿ 19 ವರ್ಷಕ್ಕೊಮ್ಮೆ ನಡೆಯುವ ಶ್ರೀ ಸೀಗಮಾರಮ್ಮನ ನರಬಲಿ ಹಬ್ಬದ ಪರಿ. ಸೋಮವಾರ ರಾತ್ರಿಯಿಡೀ ಈ ಹಬ್ಬ ಬಹಳ ಸಂಭ್ರಮದಿಂದ ನೆರವೇರಿತು.
2003ರಲ್ಲಿ ನಡೆದಿದ್ದ ನರಬಲಿ ಹಬ್ಬ:ಶ್ರೀ ಸೀಗಮಾರಮ್ಮನ ನರಬಲಿ ಹಬ್ಬ ಆಚರಣೆ 2003ರಲ್ಲಿ ನಡೆದಿತ್ತು. ಆ ವೇಳೆ ಗ್ರಾಮದ ನರಕಲ ಸೀಗನಾಯಕ ಅವರು ಬಲಿ ಬಿದ್ದು ಸುಸೂತ್ರವಾಗಿ ಮೇಲೆದ್ದಿದ್ದರು. ಈ ಬಾರಿ ಗ್ರಾಮದಲ್ಲಿರುವ ಸೀಗಮಾರಮ್ಮನ ಒಕ್ಕಲಿನ 120 ಕುಟುಂಬದ ಪೈಕಿ ಯಾರು ನರಬಲಿ ಪೂಜಾ ಕೈಂಕರ್ಯದಲ್ಲಿ ಪಾಲ್ಗೊಳ್ಳಬೇಕು ಎಂಬುದು ಗ್ರಾಮದ ಮಾರಿಗುಡಿಯಲ್ಲಿ ಭಾನುವಾರ ತಡರಾತ್ರಿ ಬಣ್ಣಾಂತರ (ಎಲ್ಲ ಸಮುದಾಯದವರ)ದ ಸಭೆಯಲ್ಲಿ ತೀರ್ಮಾನವಾಯಿತು. ಹಿಂದಿನ ಸಂಪ್ರದಾಯದಂತೆ ಹಬ್ಬಕ್ಕೆ ಬಲಿ ಬೀಳುವ ವ್ಯಕ್ತಿ ಕುರಿಸೀಗನಾಯಕ ಮತ್ತು ಇವರೊಂದಿಗೆ ಹೋಮ ಪೂಜಾ ಕೈಂಕರ್ಯದಲ್ಲಿ ತೊಡಗಿಸಿಕೊಳ್ಳುವ ಕುಮಾರ, ಕುನ್ನಸಿಗನಾಯಕ, ಕುಂಚಿ ಕುನ್ನಸಿಗನಾಯಕ ಮತ್ತು ಹೊಳಗೆರೆ ಹುಚ್ಚಮ್ಮ ಕೇಲು ತರಲು ಜಯಸೀಗನಾಯಕ ಅವರನ್ನು ಆಯ್ಕೆ ಮಾಡಿ ವೀಳ್ಯ ನೀಡಲಾಯಿತು. ಸೋಮವಾರ ಸಂಜೆ ಗ್ರಾಮದ ಭಾರಿಕೇರಿಯಲ್ಲಿರುವ ಶ್ರೀ ಸೀಗಮಾರಮ್ಮನ ಬಲಿ ದೇವರ ಮನೆಯಲ್ಲಿ ಬಾಲಕೃಷ್ಣ ಎಂಬುವರ ನೇತೃತ್ವದಲ್ಲಿ ನಡೆಸಲಾದ ಹೋಮ, ಹವನ ಪೂಜಾ ಕೈಂಕರ್ಯಗಳಲ್ಲಿ ಈ ಐವರೂ ಪಾಲ್ಗೊಂಡಿದ್ದರು. ನಂತರ ರಾತ್ರಿ 11 ಗಂಟೆಗೆ ಪರಿಶಿಷ್ಟಜಾತಿ ಬೀದಿಯಲ್ಲಿರುವ ಹೆಬ್ಬರ ಮನೆಯಿಂದ ಮುಂದಲ ಹೆಬ್ಬರ(ದೊಡ್ಡ ಡೋಲು) ಹೊತ್ತ ದೇವರ ಗುಡ್ಡ ಸುರೇಶ್​ ಹಾಗೂ ಹಿಂದಲ ಹೆಬ್ಬರ ಹೊತ್ತ ದೇವರ ಗುಡ್ಡ ಸಿದ್ದರಾಜು ಅವರೊಟ್ಟಿಗೆ ಈ ಐವರು ಅರಳಿ ಮರದ ವೃತ್ತದ ಕೂಗಳತೆ ದೂರದಲ್ಲಿರುವ ಕೇಲು ಬಾವಿಗೆ ತೆರಳಿದರು.

ಕನಕಂಡ್ರಿಯಿಂದ ಚಿಮ್ಮಿದ ಅಕ್ಷತೆಗೆ ಬಿತ್ತು ನರಬಲಿ:ಕೇಲು ಬಾವಿ ಅಂಗಳದಲ್ಲಿ ಎಣ್ಣೆ, ಸೀಗೆಪುಡಿ, ಸಾಬೂನು ಬಳಸಿ ಸ್ನಾನ-ಮಡಿಗೊಂಡ ಐವರು, ತಡರಾತ್ರಿ 12 ಗಂಟೆಯಲ್ಲಿ ಒಂಟಿ ಹೆಬ್ಬರದ ಮೇಳದೊಂದಿಗೆ ಅರಳಿ ಮರದ ವೃತ್ತಕ್ಕೆ ಕೇಲು ಸಮೇತ ಬಂದರು. ಇತ್ತ ರಾಜ ಬೀದಿಯಿಂದ ಇನ್ನೊಂದು ಹೆಬ್ಬರದ ಜತೆಗೆ ಬಂದ ಶ್ರೀ ಸೀಗಮಾರಮ್ಮನ ದೇಗುದ ಅರ್ಚಕ(ಕನಕಂಡ್ರಿ) ಉಮೇಶ್​, ಮೊಗದವರಾದ ಕೆಂಪರಾಜು ಮುಖಾಮುಖಿಯಾದರು. ಈ ವೇಳೆ ಸ್ಥಳದಲ್ಲಿ ನೆರೆದಿದ್ದ ಸಾವಿರಾರು ಭಕ್ತರ ಎದುರಲ್ಲಿ ನೋಡ ನೋಡುತ್ತಿದ್ದಂತೆ ಭಕ್ತಿಪರವಶರಾದ ಕನಕಂಡ್ರಿ, ತನ್ನ ಕೈಯಲ್ಲಿದ್ದ ಅಕ್ಷತೆ(ಅಕ್ಕಿ) ಕಾಳನ್ನು ಬಲಿ ಬೀಳಲು ನಿಗದಿಗೊಂಡಿದ್ದ ಕುರಿಸೀಗನಾಯಕ ಅವರ ಮುಖಕ್ಕೆ ಪ್ರೋಕ್ಷಣೆ ಮಾಡಿದರು. ಈ ವೇಳೆ ವಿಸ್ಮಯವೆಂಬಂತೆ ಕುರಿಸೀಗನಾಯಕ ತನ್ನ ದೇಹದಲ್ಲಿದ್ದ ಶಕ್ತಿ ಕಳೆದುಕೊಂಡು ನಿತ್ರಾಣಗೊಂಡು ಎಲ್ಲರಲ್ಲೂ ಚಕಿತಗೊಳಿಸಿದರು. ಮೃತದೇಹದಂತಾಗಿದ್ದ ಕುರಿಸೀಗನಾಯಕನ ದೇಹವನ್ನು ಹೊತ್ತುಕೊಂಡು ಬಲಿದೇವರ ಮನೆಗೆ ತೆಗೆದುಕೊಂಡು ಹೋಗಿ ಇಟ್ಟು ಹೆಬ್ಬರದ ಮನೆಯತ್ತ ಎಲ್ಲರೂ ಹೋದರು.
‘ಸತ್ತ ಬಲಿ ಎದ್ದು ಬಾ, ರಂಗಕ್ಕೆ ಬರೋ ಹೊತ್ತಾಯ್ತು…’ ಎಂಬಂತೆ ಬಾರಿಸುತ್ತಿದ್ದ ಹೆಬ್ಬರೆ ಸದ್ದಿಗೆ ಎಲ್ಲರೂ ನಿಶ್ವಬ್ದವಾಗಿ ಕೇಳಿಸಿಕೊಂಡರು. ಕನಕಂಡ್ರಿ ಉಮೇಶ್​ ಅವರು ಬಲಿ ಬಿದ್ದ ವ್ಯಕ್ತಿಯ ಎದೆ ಮೇಲೆ ಕಾಲಿಟ್ಟು ಹೋದರು. ಬಳಿಕ ಮಾರಿಗುಡಿ ದೇವಸ್ಥಾನಕ್ಕೆ ಎತ್ತಿಕೊಂಡು ಬಂದು ಹುಲ್ಲು ಹಾಸಿಗೆ ಮೇಲೆ ಬಲಿಬಿದ್ದ ವ್ಯಕ್ತಿಯನ್ನ ಮಲಗಿಸಿದರು. ನಂತರ ಊರಿನ ಎಲ್ಲ ಸಮುದಾಯದವರು ಬಲಿಬಿದ್ದ ವ್ಯಕ್ತಿಗೆ ಅರಿಶಿಣ ಹಚ್ಚಿ ಪೂಜೆ ಸಲ್ಲಿಸಿದರು. ಸೋಮವಾರ ಬೆಳಗಿನ ಜಾವ ಒಳಗೇರಿ ಹುಚ್ಚಮ್ಮನ ಕೇಲಿನಿಂದ ನೀರು ತಂದು ಬಲಿ ವ್ಯಕ್ತಿ ಮೇಲೆ ಪ್ರೋಕ್ಷಣೆ ಮಾಡುತ್ತಿದ್ದಂತೆ ಎಚ್ಚರಗೊಂಡರು. ಬಳಿಕ ಮೇಕೆಮರಿಯೊಂದನ್ನು ಬಲಿಕೊಟ್ಟರು. ನಂತರ ಕಾಡು ದಾರಿಯಲ್ಲಿರುವ ಮೂಲ ಶ್ರೀ ಸೀಗಮಾರಮ್ಮ ದೇವಿ ಗುಡಿಗೆ ಹೋಗಿ ಪೂಜೆ ಸಲ್ಲಿಸಿ ವಾಪಸ್​ ಆದರು.

ಬಲಿ ಬೀಳುವುದು, ಮತ್ತೆ ಜೀವ ಪಡೆಯುವುದೆಲ್ಲಾ ಗೊತ್ತಾಗಲ್ಲ:ಪಾಳ್ಯ ಗ್ರಾಮದ ಬಣ್ಣಾಂತರದವರು ನನ್ನನ್ನು ಹಬ್ಬದಲ್ಲಿ ಬಲಿ ಬೀಳುವ ಪ್ರಕ್ರಿಯೆಗೆ ಭಾನುವಾರ ರಾತ್ರಿ ಆಯ್ಕೆ ಮಾಡಿ ವೀಳ್ಯ ನೀಡಿದರು. ಆ ಕ್ಷಣದಿಂದ ನಾನೇನೂ ಸೇವಿಸಿಲ್ಲ. ಇನ್ನೇನಿದ್ದರೂ ಗ್ರಾಮದೇವತೆಗೆ ಬಲಿ ಬಿದ್ದು, ಮತ್ತೆ ಕಣ್ಣು ಬಿಟ್ಟು ಮೇಲೆದ್ದು ಬಲಿ ಮನೆಗೆ ಬಂದ ಬಳಿಕವೇ ಎಳನೀರು, ತಂಪು ಎಡೆ ಸೇವಿಸಲಾಗುವುದು. ಕೇಲು ಬಾವಿಗೆ ಹೋಗಿ ಬರುವಾಗ ಮಾರ್ಗ ಮಧ್ಯೆದವರೆಗೆ ನಮಗೆ ಏನಾಗುತ್ತಿದೆ ಎಂಬುದು ತಿಳಿದಿರುತ್ತದೆ. ಆನಂತರ ನಾನು ಬಲಿ ಬೀಳುವುದು ಮತ್ತು ಮತ್ತೆ ಜೀವ ಪಡೆಯುವುದೆಲ್ಲ ಗೊತ್ತಾಗುವುದಿಲ್ಲ. ಅದೆಲ್ಲ ಆ ತಾಯಿಯ ಕೃಪೆ. ನಮ್ಮ ಕೈಯಲ್ಲೇನೂ ಇಲ್ಲ. ಎಲ್ಲವೂ ಒಳ್ಳೆಯದಾಗುತ್ತದೆ ಎಂಬ ನಂಬಿಕೆಯ ಮೇಲಿದ್ದೇನೆ ಎಂದು ಬಿಲಿ ಬಿದ್ದ ವ್ಯಕ್ತಿ ಕುರಿಸೀಗನಾಯಕವಿಜಯವಾಣಿತಿಳಿಸಿದರು.

ಹೆಚ್ಚಿದ ಸಡಗರ:ದೂರದ ಊರುಗಳಲ್ಲಿ ನೆಲೆಸಿರುವ ದೇವರ ಒಕ್ಕಲಿನವರು ಸೀಗಮಾರಮ್ಮನ ಬಲಿ ಹಬ್ಬಕ್ಕೆಂದು 2 ದಿನದ ಹಿಂದೆಯೇ ಗ್ರಾಮಕ್ಕೆ ಆಗಮಿಸಿದ್ದಾರೆ. ಗ್ರಾಮಸ್ಥರು ಹಬ್ಬಕ್ಕೆ ನೆಂಟರಿಷ್ಟರನ್ನು ಕರೆದಿದ್ದಾರೆ. ಗ್ರಾಮದ ಎಲ್ಲ ಬೀದಿಗಳು ತಳಿರು ತೋರಣ, ವಿದ್ಯುತ್​ ದೀಪಾಲಂಕಾರದಿಂದ ಕಂಗೊಳಿಸಿದವು. ಗ್ರಾಮದೆಲ್ಲೆಡೆ ಸಡಗರ ಸಂಭ್ರಮ ಮನೆ ಮಾಡಿದೆ.
ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿನಿ ನೋಡ ನೋಡುತ್ತಿದ್ದಂತೆ ತಾಯಿ ಕಣ್ಣೆದುರೇ ಪ್ರಿಯಕರನೊಂದಿಗೆ ಪರಾರಿ​! ಕೊಳ್ಳೇಗಾಲದಲ್ಲಿ ಘಟನೆ

ಬಿಕಿನಿ ಧರಿಸಿಕೊಂಡೇ ಬರ್ತ್​ ಡೇ ಕೇಕ್​ ಕತ್ತರಿಸಿದ ಆಮಿರ್​ ಖಾನ್​ ಪುತ್ರಿ ಇರಾ! ಫೋಟೋ ವೈರಲ್​, ನೆಟ್ಟಿಗರಿಂದ ಬಗೆಬಗೆಯ ಕಮೆಂಟ್​

Sign in to your account
Please enter an answer in digits:2 × 1 =
Remember me
