ಬೆಂಗಳೂರು:ಹಿರಿಯ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಪೊಲೀಸ್ ಸೇವೆಗೆ ರಾಜೀನಾಮೆ ನೀಡಿ ಆಮ್ ಆದ್ಮಿ ಪಕ್ಷ ಸೇರ್ಪಡೆಯಾಗುತ್ತಿದ್ದಂತೆ, ರಾಜ್ಯದಲ್ಲಿ ಆ ಪಕ್ಷದ ಮರು ಪ್ರವೇಶದ ಸೂಚನೆ ನೀಡಿದೆ. ಕೇಜ್ರಿವಾಲ್ ಪಕ್ಷಕ್ಕೆ ಕರ್ನಾಟಕ ಹೊಸದೇನಲ್ಲ. 2014ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸ್ಪರ್ಧಿಸಿ ರಾಜ್ಯದ ಜನರಿಗೆ ತನ್ನ ಪರಿಚಯ ಮಾಡಿಕೊಂಡಿತ್ತು. ಆದರೆ, ಬೇರು ಗಟ್ಟಿಮಾಡಿಕೊಳ್ಳಲು ಪ್ರಯತ್ನಿಸಿ ಸೋತಿತ್ತು. ಆದರೀಗ ದೊಡ್ಡ ಉದ್ದೇಶ ಇಟ್ಟುಕೊಂಡಂತೆ ಪ್ರವೇಶ ಮಾಡುವ ಸುಳಿವು ನೀಡಿದೆ.
ಮುಂಬರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, 2023ರಲ್ಲಿ ನಡೆಯುವ ವಿಧಾನಸಭಾ ಚುನಾವಣೆ ಸ್ಪರ್ಧಿಸುವ ಗುರಿಯೊಂದಿಗೆ ಸಾಕಷ್ಟು ಪೂರ್ವಭಾವಿಯಾಗಿ ಯೋಜನೆ ಸಿದ್ಧಪಡಿಸಿಕೊಳ್ಳಲು ಪ್ರಯತ್ನಿಸಿದಂತೆ ಕಾಣಿಸಿದೆ. ಪೊಲೀಸ್ ಅಧಿಕಾರಿಯಾಗಿ ಭಾಸ್ಕರ್ ರಾವ್ ರಾಜ್ಯದಲ್ಲಿ ಚಿರಪರಿಚಿತ ಮುಖ. ಅವರ ರಾಜಕೀಯಕ್ಕೆ ಪ್ರವೇಶಕ್ಕೆ ಅವಕಾಶ ಮಾಡಿಕೊಟ್ಟ ಪಕ್ಷದ ಬಗ್ಗೆ ರಾಜಕೀಯ ಆಸಕ್ತರಿಗೆ ಸಹಜವಾಗಿ ಒಂದಷ್ಟು ಕುತೂಹಲ ಸೃಷ್ಟಿಸಿರಲೂ ಸಾಕು. ಇದು ಮುಂದಿನ ಚುನಾವಣೆಗೆ ಮುನ್ನ ರಾಜಕೀಯ ಧ್ರುವೀಕರಣದ ಮೇಲೆಯೂ ಪರಿಣಾಮ ಬೀರಲಿದೆ ಎಂಬ ಲೆಕ್ಕಾಚಾರವಿದೆ.
ಪಕ್ಷಗಳ ವಿಚಾರಕ್ಕೆ ಬಂದರೆ, ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಒಳಗೆ ಆಮ್​ ಆದ್ಮಿ ಬೆಳವಣಿಗೆ ಬಗ್ಗೆ ವಿಶೇಷ ಗಮನವಹಿಸಿವೆ. ಭಾಸ್ಕರ್ ರಾವ್ ಬಳಿಕ ಇನ್ಯಾರು ಪಕ್ಷ ಸೇರಬಹುದು, ಸಾಹಿತಿಗಳು, ಉದ್ಯಮಿಗಳು, ಚಿತ್ರರಂಗದವರು, ಜನ ಸಾಮಾನ್ಯರು ರಾಜಕೀಯದ ಹಿನ್ನೆಲೆ ಇಲ್ಲದಿದ್ದರೂ ಆಮ್ ಆದ್ಮಿ ಮೂಲಕ ಕಣಕ್ಕಿಳಿದರೆ ಆಗುವ ರಾಜಕೀಯ ಪಲ್ಲಟಗಳು, ತಮ್ಮ ಪಕ್ಷದ ಮೇಲಾಗುವ ಪರಿಣಾಮ, ಆಮ್ ಆದ್ಮಿ ಮಾಡುವ ಮತ ವಿಭಜನೆಯಿಂದ ಆಗುವ ಹೊಡೆತದ ಬಗ್ಗೆ ಅನೌಪಚಾರಿಕ ಚರ್ಚೆ ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿ ನಡೆದಿದೆ. ಜೆಡಿಎಸ್ ಅಷ್ಟಾಗಿ ತಲೆ ಕೆಡಿಸಿಕೊಂಡಂತೆ ಕಾಣಿಸುತ್ತಿಲ್ಲ.
ಕಾಂಗ್ರೆಸ್ ಲೆಕ್ಕಾಚಾರ:ಎಎಪಿ ಆಟ ಕರ್ನಾಟಕದಲ್ಲಿ ನಡೆಯಲ್ಲ ಎಂದು ಘಂಟಾಘೋಷವಾಗಿ ಹೇಳುವ ಕಾಂಗ್ರೆಸ್ ನಾಯಕರಲ್ಲಿ ಒಳಗೊಳಗೆ ಅಳುಕಂತೂ ಇದ್ದೇಇದೆ. ಇದಕ್ಕೆ ಪ್ರಮುಖ ಕಾರಣ, ಆಮ್ ಆದ್ಮಿ ಕಾಂಗ್ರೆಸ್​ಗೆ ಪರ್ಯಾಯ ಎಂದು ಇತ್ತೀಚೆಗೆ ಬಿಂಬಿತವಾಗುತ್ತಿದೆ. ಬಿಜೆಪಿಯೇತರ ಮತಗಳನ್ನು ಸೆಳೆಯುವಲ್ಲಿ ಆಮ್ ಆದ್ಮಿ ಸಫಲವಾದ ಉದಾಹರಣೆ ಇದೆ. ಪ್ರಬಲ ಅಭ್ಯರ್ಥಿ ಕಣಕ್ಕಿಳಿದರೆ ಚುನಾವಣೆಯಲ್ಲಿ ತನಗೊಂದಿಷ್ಟು ಹಾನಿಯಂತೂ ಖಚಿತ ಎಂದು ಕಾಂಗ್ರೆಸ್ ನಾಯಕರು ಭಾವಿಸಿದ್ದಾರೆ. ಕೆಲವು ಕಡೆ ದೊಡ್ಡ ಗೆಲುವಿನ ಅಂತರಕ್ಕೆ ಹೊಡೆತ ಕೊಡಬಹುದು, ತೀವ್ರ ಪೈಪೋಟಿ ಇರುವ ಕಡೆ ಸೋಲಿಗೂ ಜಾರಬಹುದು ಎಂಬ ಅಂದಾಜಿದೆ.
ಬಿಜೆಪಿ ದೃಷ್ಟಿಕೋನ:ಆಮ್​ದಿ್ಮ ಪಾರ್ಟಿ ಪಡೆಯುವ ಮತಗಳಲ್ಲಿ ಬಹುಪಾಲು ಕಾಂಗ್ರೆಸ್​ನದ್ದೇ ಆಗಿರುತ್ತದೆ. ಇನ್ನೂ ಮೋದಿ ಹವಾ ಕಡಿಮೆ ಆಗಿಲ್ಲ, ಜಾತಿ ಸಮೀಕರಣ ಮೀರಿದ ರಾಜಕಾರಣ ನಡೆಯುವ ಸಾಧ್ಯತೆ ಕರ್ನಾಟಕದ ಮಟ್ಟಿಗೆ ಕಡಿಮೆ ಇದೆ. ಹೀಗಾಗಿ ಆಮ್ ಆದ್ಮಿ ಬಲಗೊಳ್ಳುವುದರಿಂದ, ಚುನಾವಣೆಯಲ್ಲಿ ಸ್ಪರ್ಧಿಸುವುದರಿಂದ ಪಕ್ಷಕ್ಕೆ ಹಾನಿ ಕಡಿಮೆ ಎಂಬುದು ಬಿಜೆಪಿ ನಾಯಕರ ಅಂದಾಜು. ಪ್ರಬಲ ಅಭ್ಯರ್ಥಿಗಳು ಕಣಕ್ಕಿಳಿದು ಪೈಪೋಟಿ ನೀಡಿದರೆ ಭದ್ರ ನೆಲೆ ಇರುವ ಕ್ಷೇತ್ರದಲ್ಲಿ ಹೆಚ್ಚು ಶ್ರಮ ಹಾಕಬೇಕಾಗಬಹುದು ಎಂದು ಬಿಜೆಪಿ ನಾಯಕರು ದೂರದೃಷ್ಟಿಯ ಆಲೋಚನೆಯಲ್ಲಿ ಅಭಿಪ್ರಾಯ ನೀಡಿದ್ದಾರೆ.
ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಪ್ರತಿಯೊಂದು ಸರ್ಕಾರಿ ಸೇವೆಗಳಿಗೂ ಲಂಚ ಕೊಡಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಮಾಜಿ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹೇಳಿದ್ದಾರೆ. ಆಮ್ ಆದ್ಮಿ ಪಾರ್ಟಿ-ಕರ್ನಾಟಕ ಪ್ರೆಸ್​ಕ್ಲಬ್​ನಲ್ಲಿ ಬುಧವಾರ ಆಯೋಜಿಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 32 ವರ್ಷಗಳ ಸೇವೆಯಲ್ಲಿ ಎಲ್ಲ ಪಕ್ಷಗಳನ್ನೂ ಬಹಳ ಹತ್ತಿರದಿಂದ ನೋಡಿದ್ದೇನೆ. ಭ್ರಷ್ಟಾಚಾರದಿಂದಾಗಿ ಜನ ಸಾಮಾನ್ಯರಿಗೆ ಸರ್ಕಾರದ ಸಣ್ಣ ಸೇವೆ ಪಡೆಯಲೂ ಕಷ್ಟವಾಗುತ್ತಿದೆ. ಪ್ರತಿಯೊಂದು ಸರ್ಕಾರಿ ಹುದ್ದೆಗೂ ಕೋಟ್ಯಂತರ ರೂ. ಲಂಚ ನೀಡಬೇಕಿದೆ. ಪೊಲೀಸ್ ಕಮೀಷನರ್ ಆಗಿದ್ದ ಸಂದರ್ಭ ಇದನ್ನೆಲ್ಲ ಕಣ್ಣಾರೆ ನೋಡಿದ್ದೇನೆ. ಎಲ್ಲ ರಾಜಕೀಯ ನಾಯಕರ ಮಾಹಿತಿಯೂ ನನ್ನ ಬಳಿ ಇದೆ ಎಂದರು,
ಇನ್​ಸ್ಪೆಕ್ಟರ್ ಸೇರಿ ಇನ್ನಿತರ ಪೊಲೀಸ್ ಅಧಿಕಾರಿಗಳ ವರ್ಗಾವಣೆಗೂ ಲಂಚ ನೀಡಬೇಕಾದ ಪರಿಸ್ಥಿತಿ ಇದೆ. ಉತ್ತಮವಾಗಿ ಮಾತನಾಡುವ ನಾಯಕರು ಜನರಿಗೆ ಮೋಸ ಮಾಡುತ್ತಿದ್ದಾರೆ. ಬಹುತೇಕ ರಾಜಕಾರಣಿಗಳ ಸ್ವಂತ ಆಸ್ತಿ ಪ್ರತಿ ವರ್ಷ ಜಾಸ್ತಿಯಾಗುತ್ತಲೇ ಇದೆ. ಜನ ಸಾಮಾನ್ಯರು ಕೊಡುವ ತೆರಿಗೆ ಹಣ ಲೂಟಿ ಹೊಡೆಯುತ್ತಿದ್ದಾರೆ. ಗುತ್ತಿಗೆ ಕೊಡುವ ಮೊದಲು ಪರ್ಸೆಂಟೆಜ್ ಲೆಕ್ಕದಲ್ಲಿ ಭ್ರಷ್ಟಚಾರ ಎಸಗುತ್ತಾರೆ. ಪ್ರಕರಣ ದಾಖಲಿಸಿಕೊಂಡು ಅಪರಾಧಿಗಳ ಜತೆ ಶಾಮೀಲಾಗಿ ಭ್ರಷ್ಟಾಚಾರ ಎಸಗುತ್ತಿದ್ದಾರೆ. ಐಎಂಎ, ಶ್ರೀ ಗುರು ರಾಘವೇಂದ್ರ ಕೋ ಆಪರೇಟಿವ್ ಬ್ಯಾಂಕ್ ಸೇರಿ ಹಲವು ಪ್ರಮುಖ ಹಗರಣಗಳ ಆರೋಪಿಗಳು ತಿರುಗಾಡುತ್ತಿದ್ದರೂ ಅವರನ್ನು ಏನೂ ಮಾಡಲಾಗುತ್ತಿಲ್ಲ. 2 ಮುಖ್ಯ ಪಕ್ಷಗಳೂ ಒಬ್ಬರ ಮೇಲೊಬ್ಬರು ಆರೋಪ ಮಾಡುತ್ತ ಭ್ರಷ್ಟಾಚಾರ ಎಸಗಿವೆ. ಜನ ಸಾಮಾನ್ಯರಿಗೆ ಸರ್ಕಾರದಿಂದ ನೆರವು ಸಿಗುತ್ತಿಲ್ಲ. ಒಟ್ಟಾರೆ ಪ್ರಾಮಾಣಿಕರಿಗೆ ರಾಜ್ಯದಲ್ಲಿ ಜಾಗವಿಲ್ಲದಂತಾಗಿದೆ. ಕರ್ನಾಟಕದ ಜನ ಮುಗ್ದರಿರಬಹುದು, ಮೂರ್ಖರಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆಡಳಿತ ವ್ಯವಸ್ಥೆ ಕುಸಿದು ಹೋಗಿದೆ: ಕರ್ನಾಟಕದಲ್ಲಿ ನೆಲ, ಜಲ, ಸಂಪನ್ಮೂಲಗಳ ಕೊರತೆ ಇಲ್ಲ. ನಾಯಕತ್ವದ ಕೊರತೆ ಇದೆ. ಆಡಳಿತ ಕುಸಿದು ಹೋಗಿದೆ. ಗುಣಮಟ್ಟದ ನಾಯಕತ್ವದ ಕೊರತೆ ಇದೆ. ಮಹಿಳೆಯರ ಸುರಕ್ಷತೆಗೆ ಸಿಸಿ ಕ್ಯಾಮರಾ ಅಳವಡಿಸಲು ಫಂಡ್ ಇದ್ದರೂ ಸರ್ಕಾರ ಮಾಡಿಲ್ಲ. ಹೆಚ್ಚು ಕಮಿಷನ್ ಕೊಡುವವರಿಗಾಗಿ ಕಾದು ಕುಳಿತಿದ್ದಾರೆ. ನಮ್ಮ ಪಕ್ಷ ಹಣಕಾಸಿನ ವಿಚಾರವಾಗಿ ಬಡವಾಗಿರಬಹುದು, ನಮ್ಮಲ್ಲಿ ವಿಚಾರಗಳಿಗೆ ಕೊರತೆ ಇಲ್ಲ. ಶ್ರೀಸಾಮಾನ್ಯರ ಪರ ಕಾಳಜಿವುಳ್ಳವರು ಆಪ್ ಪಕ್ಷಕ್ಕೆ ಸೇರ್ಪಡೆಯಾಗಬಹುದು. ಇಲ್ಲಿನ ಲಂಚಬಾಕತನಕ್ಕೆ ಬೇಸತ್ತಿದ್ದೇನೆ. ವ್ಯವಸ್ಥೆ ಹದಗೆಟ್ಟಿದ್ದರಿಂದ ಸರಿಪಡಿಸಲು ನಿವೃತ್ತಿ ಪಡೆದು ಆಪ್ ಮೂಲಕ ಸೇವೆಗೆ ಬಂದಿದ್ದೇನೆ ಎಂದು ಭಾಸ್ಕರ್ ರಾವ್ ಹೇಳಿದರು.
ಅಂದೇ ರಾಜೀನಾಮೆ ನೀಡಲು ಮುಂದಾಗಿದ್ದೆ:ಕೋವಿಡ್ ಸಮಯದಲ್ಲಿ ಸಚಿವ ಅಶ್ವತ್ಥನಾರಾಯಣ್ ಸಿಎಂ ಮುಂದೆ ನಿಂದಿಸಿದ್ದ ವಿಚಾರದ ಸಂಬಂಧ ಪ್ರತಿಕ್ರಿಯಿಸಿದ ಭಾಸ್ಕರ್ ರಾವ್, ಸ್ವಿಗ್ಗಿ, ಝುಮೋಟೋ, ಕಂಪನಿಗಳಿಂದ ಪಾಸ್ ನೀಡಲು ಹಣ ಪಡೆದಿದ್ದಾಗಿ ಅಶ್ವತ್ಥನಾರಾಯಣ್ ಗಂಭೀರ ಆರೋಪ ಮಾಡಿದ್ದರು. ಅಂದೇ ರಾಜೀನಾಮೆ ಕೊಡಲು ಮುಂದಾಗಿದ್ದೆ. ಸಿಎಂ ಯಡಿಯೂರಪ್ಪ, ಗೃಹ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ಸಮಾಧಾನಗೊಳಿಸಿ ಧೈರ್ಯ ಹೇಳಿದರು ಎಂದರು.
ಫೋನ್ ಕದ್ದಾಲಿಕೆ:ಫೋನ್ ಕದ್ದಾಲಿಕೆ ಪ್ರಕರಣದ ಸಂಬಂಧ ಭಾಸ್ಕರ್ ರಾವ್ ಸ್ಪಷ್ಟನೆ ನೀಡಿದ್ದು, ‘ಸೀನಿಯಾರಿಟಿ ಬಿಟ್ಟು ತರಾತುರಿಯಲ್ಲಿ ಕಿರಿಯ ಅಧಿಕಾರಿಯನ್ನು ಕಮಿಷನರ್ ಮಾಡುತ್ತಿರುವುದು ಸರಿಯಲ್ಲ’ ಎಂದಿದ್ದೆ. ಆದರೆ ಸಿಬಿಐ ತರಾತುರಿಯಲ್ಲಿ ತನಿಖೆ ನಡೆಸಿ ವರದಿ ಸಲ್ಲಿಸಿದೆ ಎಂದರು.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − 15 =
Remember me
