ಬೆಂಗಳೂರು:ವಾಲ್ಮೀಕಿ ನಿಗಮದ ಹಗರಣದಲ್ಲಿ ಇಡೀ ಸರ್ಕಾರ  ಸಿಲುಕಿಕೊಂಡಿದ್ದು, ಪೂರ್ಣ ತನಿಖೆಯಾದರೆ ಸಿಎಂ ರಾಜಿನಾಮೆ ನೀಡಬೇಕಾಗುತ್ತದೆ ಎಂದು ರಕ್ಷಣೆಗೆ ಬಿಜೆಪಿ ವಿರುದ್ದ ಆರೋಪ ಮಾಡುತ್ತಿದ್ದಾರೆ ಎಂದು ಮಾಜಿ ಸಿಎಂ, ಬಿಜೆಪಿ ಸಂಸದ ಬಸವರಾಜ ಬೊಮ್ಮಾಯಿ ವಾಗ್ದಾಳಿ ಮಾಡಿದರು.
ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿದ ಅವರು, ರಾಜ್ಯ ಸರ್ಕಾರ ಯಾವುದೇ ತನಿಖೆ ನಡೆಸಿದರೂ ನಾವು ಎದುರಿಸಲು ಸಿದ್ದರಿದ್ದೇವೆ. ಆದರೆ, ರಾಜಕೀಯ ದ್ವೇಷಕ್ಕಾಗಿ ಅಧಿಕಾರ ದುರುಪಯೋಗ ಆಗಬಾರದು ಎಂದು ಆಕ್ಷೇಪಿಸಿದರು.
ಬಿಜೆಪಿಯ ಅವಧಿಯಲ್ಲಿ 21 ಹಗರಣ ಆಗಿದೆ ಎಂದು ಸಿಎಂ ಆರೋಪಿಸಿದ್ದಾರೆ. ಬಹಳ ಕಷ್ಟ ಪಟ್ಟು ಬಿಜೆಪಿಯ ಅವಧಿಯಲ್ಲಿ ಭ್ರಷ್ಟಾಚಾರ ಆಗಿದೆ ಅಂತ ಈಗ ಕಣ್ಣು ತೆರೆದು ನೋಡುತ್ತಿದ್ದಾರೆ. ಅವರು ಅಧಿಕಾರದಲ್ಲಿದ್ದಾರೆ. ಯಾವುದೇ ರೀತಿಯ ತನಿಖೆ ನಡೆಸಲು ಅವಕಾಶವಿದೆ ಎಂದರು.
ನನ್ನ ವಿರುದ್ದ ಮಾಡಿರುವ ಆರೋಪದಲ್ಲಿ ನಾ‌ನು ಎಪಿಎಂಸಿ ಸಚಿವನಾಗಿರಲಿಲ್ಲ  ಆಗ ಗೃಹ ಸಚಿವನಾಗಿದ್ದೆ, ಎಪಿಎಂಸಿ ಪ್ರಕರಣದಲ್ಲಿ ತನಿಖೆ ನಡೆಸಿ ಬ್ಯಾಂಕಿನವರಿಂದ 48 ಕೋಟಿ ರೂ. ಜೊತೆಗೆ ಬಡ್ಡಿ ಸಮೇತ 52 ಕೋಟಿ ರೂ‌ ವಸೂಲಿ ಮಾಡಲಾಗಿತ್ತು. ಬೋವಿ ನಿಗಮದಲ್ಲಿ ಅವ್ಯವಹಾರ ಆಗಿದ್ದಾಗ ಅದನ್ನು ಸಿಐಡಿ ತನಿಖೆಗೆ ನಾವೇ ವಹಿಸಿದ್ದೇವೆ. ಅದರ ತನಿಖೆ ನಡೆಯುತ್ತಿದೆ.
ಗಂಗಾ ಕಲ್ಯಾಣ ಯೋಜನೆ ದುರುಪಯೋಗದ ಆರೋಪ ಕೇಳಿ ಬಂದಾಗ ನಾನೇ ಸದನದಲ್ಲಿ ಸಿಐಡಿ ತನಿಖೆಗೆ ನೀಡಿದ್ದೇನೆ. ಅದರ ತನಿಖೆ ಕೊನೆ ಹಂತಕ್ಕೆ ಬಂದಿದೆ. ನಮ್ಮ ವಿರುದ್ದ 40% ಆರೊಪವನ್ನು ಮಾಡಿದ್ದರು. ಇದವರೆಗೂ ಯಾವುದೇ ಅಧಿಕಾರಿ ಹಾಗೂ ಗುತ್ತಿಗೆದಾರರಿಗೆ ನೊಟಿಸ್ ಕೊಟ್ಟಿಲ್ಲ. ರಾಜಕೀಯ ಉದ್ಯೇಶದಿಂದ ಆಯೊಗ ಮಾಡಿದರೆ, ತನಿಖೆ ನಡೆಸಿದರೆ ಹೀಗೆ ಆಗುವುದು ಎಂದು ಬೊಮ್ಮಾಯಿ ತಿರುಗೇಟು ನೀಡಿದರು.
ಇವತ್ತು ವಾಲ್ಮೀಕಿ ನಿಗಮ ಒಂದೇ ಅಲ್ಲ ಎಲ್ಲ ಇಲಾಖೆಗಳಲ್ಲಿ ಹಗರಣ ಹೊರ ಬರುತ್ತಿವೆ‌ ಕೊಮುಲ್ ನಿಂದ‌ ಹಿಡಿದು ಪ್ರವಾಸೋದ್ಯಮ ಇಲಾಖೆ ಹಗರಣ ಎಲ್ಲವೂ ಹೊರ ಬರುತ್ತಿವೆ‌. ಕಾಂಗ್ರೆಸ್ ಅಂದರೆ ಭ್ರಷ್ಟಾಚಾರ ಅನ್ನುವಂತಾಗಿದೆ.
ಸ್ವಾತಂತ್ರ್ಯಾ ನಂತರ ಭ್ರಷ್ಟಾಚಾರ ಹುಟ್ಟು ಹಾಕಿದ್ದೆ ಕಾಂಗ್ರೆಸ್.  ಅವರು ಯಾವುದೇ ತನಿಖೆ ನಡೆಸಲಿ ನಾವು ಎದುರಿಸುತ್ತೇವೆ. ನಾವು ಅವರ ರೀತಿ ಇಡಿ ಯಾಕೆ, ಸಿಬಿಐ ಯಾಕೆ ಬಂತು ಅಂತ ಕೇಳುವುದಿಲ್ಲ. ನಾವು ಅವರ ಹಾಗೆ ಅಂಜುಬುರುಕರಲ್ಲ.
ಪೊಲೀಸ್ ಇಲಾಖೆಯನ್ನು ತಮ್ಮ ವಿರುದ್ದ ಬಂದಿರುವ ಆರೋಪದಿಂದ ರಕ್ಷಣೆ ಪಡೆಯಲು ದುರ್ಬಳಕೆ ಮಾಡಿಕೊಂಡರೆ ಆ ಹಗರಣವೂ ಶೀಘ್ರವೇ ಹೊರ ಬರಲಿದೆ ಎಂದು ಹೇಳಿದರು.
ಈಗಾಗಲೇ ಇವರ ವಿರುದ್ದ ಸುಮಾರು 40 ಕ್ಕಿಂತ ಹೆಚ್ಚು ಪ್ರಕರಣಗಳು ಲೋಕಾಯುಕ್ತದಲ್ಲಿ ತನಿಖೆ ನಡೆಯುತ್ತಿದೆ. ಬಿಬಿಎಂಪಿಯಲ್ಲಿ ಗುತ್ತಿಗೆದಾರಿಗೆ ಶೇ 68% ರಷ್ಟು ಹೆಚ್ಚಿಗೆ ನೀಡಿದ್ದಾರೆ. ಇವೆಲ್ಲವೂ ತನಿಖೆ ನಡೆಯುತ್ತಿದೆ.
ಮುಖ್ಯಮಂತ್ರಿ ಯವರು ಶುಕ್ರವಾರ ಅಧಿವೇಶನ ಕೊನೆ ಗಳಿಗೆಯಲ್ಲಿ ಆರೋಪ ಮಾಡಿ ವಿರೋಧ ಪಕ್ಷದವರು ಬಾಯಿ‌ಮುಚ್ಚಿಕೊಂಡಿದ್ದಾರೆ ಎನ್ನುತ್ತಾರೆ‌. ನಾವು ಬಾಯಿ ಮುಚ್ಚಿಕೊಂಡು ಕುಳಿತಿಲ್ಲ. ಸದನದಲ್ಲಿ ಪ್ರತಿಪಕ್ಷದ ಶಾಸಕರನ್ನು ಟಾರ್ಗೆಟ್ ಮಾಡಿದರೂ ಯಾರೂ ಬಗ್ಗುವುದಿಲ್ಲ. ಅವರ ಮುಖಕ್ಕೆ ಮಸಿ ಬಳಿದಿದೆ. ಅದಕ್ಕೆ ಎಲ್ಲರೂ ಒಂದು ಎಂದು ತೋರಿಸಲು ಹೊರಟಿದ್ದಾರೆ.
ಭ್ರಷ್ಟಾಚಾರದ ಬ್ರಹ್ಮ ಯಾರು ಅಂತ ಎಲ್ಲರಿಗೂ ಗೊತ್ತಾಗಿದೆ. ಅವರು ಈಗ ಹಗರಣದಲ್ಲಿ ಸಿಲುಕಿಕೊಂಡಿದ್ದಾರೆ. ತನಿಖೆ ನಂತರ ಸತ್ಯ ಹೊರಬರಲಿದೆ. ಸರ್ಕಾರದ ಭ್ರಷ್ಟಾಚಾರದ ವಿರುದ್ದದ ಹೋರಾಟ ಸದನದ ಹೊರಗೆ ಹಾಗೂ ಒಳಗೆ ಮುಂದುವರೆಯಲಿದೆ ಎಂದರು.
ಇದೇ ವೇಳೆ, ರಾಜ್ಯದಲ್ಲಿ ಪ್ರವಾಹ ಬಂದರೂ ಮುಖ್ಯಮಂತ್ರಿ ಹಾಗೂ ಸಚಿವರು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡದಿರುವ ಕುರಿತು ಕೇಳಿದ ಪ್ರಶ್ನೆಗೆ, ಬರ ಮತ್ತು ಪ್ರವಾಹದ ವಿಚಾರದಲ್ಲಿ ಈ ಸರ್ಕಾರ ನಿರ್ಲಕ್ಷ್ಯ ಮಾಡಿರುವುದು ಸ್ಪಷ್ಟವಾಗಿದೆ.
ನಮ್ಮ ಕೇಂದ್ರ ಸಚಿವರು, ಪಕ್ಷದ ನಾಯಕರು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ಮಾಡಿದ ನಂತರ ಸಿಎಂ ಭೇಟಿ ಮಾಡಿದ್ದಾರೆ. ಕೇಂದ್ರ ಸರ್ಕಾರ 700 ಕೋಟಿ ರೂ. ನೀಡಿದೆ. ಇವರು ರಾಜ್ಯ ಸರ್ಕಾರದಿಂದ ಬರ ಬಂದಾಗಲೂ ಹಣ ಬಿಡುಗಡೆ ಮಾಡಲಿಲ್ಲ. ಈಗಲೂ ಬಿಡುಗಡೆ ಮಾಡಿಲ್ಲ.
ಕಾಂಗ್ರೆಸ್ ಸರ್ಕಾರಕ್ಕೆ ಒಳ್ಳೆಯ ಆಡಳಿತ ಕೊಡುವ ಉದ್ದೇಶ ಇಲ್ಲ. ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಯಾವಾಗಲೂ ಜನರನ್ನು ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಾರೆ ಎಂದು ಆರೋಪಿಸಿದರು.
ಶಾಸಕಾಂಗ ಪಕ್ಷದ ಸಭೆಯಲ್ಲಿ ಕಾಂಗ್ರೆಸ್ ಶಾಸಕರು ಅಸಮಾಧಾನ ಹೊರ ಹಾಕಿರುವ ವಿಚಾರದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಶಾಸಕರ ಪರಿಸ್ಥಿತಿ ಏನಾಗಿದೆ ಅಂದರೆ, ಕ್ಷೇತ್ರಕ್ಕೆ ಅನುದಾನ, ಅಭಿವೃದ್ಧಿ ಇಲ್ಲದೇ ಜನರ ಸಮಸ್ಯೆ ಕೇಳಲು ಆಗುತ್ತಿಲ್ಲ.
ಅತ್ತ ಸಚಿವರ ಬಳಿ ಹೋದರೆ ಶಾಸಕರ ಕಷ್ಟ ಕೇಳುತ್ತಿಲ್ಲ. ಅದಕ್ಕಾಗಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕರು ಕೇಳಿದ್ದಾರೆ. ಇವರ ಅಸಮಾಧಾನ ಮುಂದಿನ‌ ರಾಜಕೀಯ ಬದಲಾವಣೆಗೆ ನಾಂದಿ ಹಾಡಬಹುದು ಎಂದು ಭವಿಷ್ಯ ನುಡಿದರು.
ರಾಜ್ಯ ಸರ್ಕಾರ ಇಡಿ ವಿರುದ್ಧ ಕಾನೂನು ಸಮರಕ್ಕೆ ಚಿಂತನೆ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಹಿಂದೆಯೂ ಅವರು ಇಡಿ ವಿರುದ್ದ ದೂರು ಕೊಡುವ ಕೆಲಸ ಮಾಡಿದ್ದರು. ಇವರಿಗೆ ಯಾರ ಭಯ, ಯಾಕೆ ಭಯ. ಯಾರ ಹೆಸರು ಹೊರಗೆ ಬರುತ್ತದೆ ಅಂತ ಭಯ ಇವರಿಗೆ. ಹಗರಣಗಳನ್ನು ಮಾಡಿದ ಎಲ್ಲ ರಾಜಕಾರಣಿಗಳ ಸಾಮಾನ್ಯ ನಡೆ ಇದು.
ಕುಂಬಳಕಾಯಿ ಕಳ್ಳ ಅಂದರೆ, ಇವರು ಯಾಕೆ ಹೆಗಲು ಮುಟ್ಟಿ ನೋಡಿಕೊಳ್ಳಬೇಕು. ಹಿಂದೆ ಕಾಂಗ್ರೆಸ್ ಶಾಸಕರು, ಸಚಿವರು ಎಲ್ಲೊ ಐಟಿ ದಾಳಿ ಆದರೆ ನಮ್ಮ ಮನೆ ಮೇಲೆ ಐಟಿ ದಾಳಿಯಾಗುತ್ತದೆ ಎನ್ನುತ್ತಿದ್ದರು ಎಂದು ಬೊಮ್ಮಾಯಿ ಛೇಡಿಸಿದರು.
ಶಿಗ್ಗಾವಿ ಸೇರಿದಂತೆ ಉಪ ಚುನಾವಣೆಗೆ ನಾವು ಸಿದ್ದರಾಗಿದ್ದೇವೆ. ಪಕ್ಷದ ಅಭ್ಯರ್ಥಿಗಳ ಆಯ್ಕೆಗೆ ಸಮಿತಿ ರಚನೆ ಮಾಡಿದ್ದಾರೆ‌. ಅವರು ಅಭಿಪ್ರಾಯ ಪಡೆದು ಅಭ್ಯರ್ಥಿ ಆಯ್ಕೆ ಮಾಡುತ್ತಾರೆ. ಯಾರೇ ಅಭ್ಯರ್ಥಿ ಮಾಡಿದರೂ ನಾವು ಮುಕ್ತವಾಗಿ ಕೆಲಸ ಮಾಡುತ್ತೇವೆ. ನನ್ನ ಮಗನನ್ನು ಅಭ್ಯರ್ಥಿ ಮಾಡುವಂತೆ ಯಾರೂ ಬಂದು ಕೇಳಿಲ್ಲ ಎಂದು ಸ್ಪಷ್ಟಪಡಿಸಿದರು.
ವಿಧಾನ ಪರಿಷತ್ ಪ್ರತಿಪಕ್ಷದ ನಾಯಕನ ಆಯ್ಕೆ ವಿಳಂಬದ ಕುರಿತ ಪ್ರಶ್ನೆಗೆ ಪಕ್ಷದಲ್ಲಿ ಸಮರ್ಥರು ಹೆಚ್ಚಿಗೆ ಇರುವುದರಿಂದ ಪ್ರತಿಪಕ್ಷದ ನಾಯಕನ ಆಯ್ಕೆ ವಿಳಂಬವಾಗುತ್ತಿರಬಹುದು. ಪಕ್ಷದ ನಾಯಕರು ಈ ಬಗ್ಗೆ ತೀರ್ಮಾನ ಮಾಡುತ್ತಾರೆ ಎಂದು ಬೊಮ್ಮಾಯಿ ಹೇಳಿದರು.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:18 − two =
Remember me
