ಹುಬ್ಬಳ್ಳಿ:ಧಾರವಾಡ ಜಿ.ಪಂ. ಸದಸ್ಯರಾಗಿದ್ದ ಯೋಗೀಶಗೌಡ ಹತ್ಯೆ ಪ್ರಕರಣದಲ್ಲಿ ಸಿಬಿಐ ಬಂಧಿಸಿರುವ ಆರೋಪಿಗಳು ವಿಚಾರಣೆ ವೇಳೆ ಬಾಯಿಬಿಟ್ಟಿರುವ ಮಾಹಿತಿಯೇ ಮಾಜಿ ಸಚಿವ ವಿನಯ ಕುಲಕರ್ಣಿಗೆ ಕಂಟಕವಾಗಿ ಪರಿಣಮಿಸಿರುವುದು ಬೆಳಕಿಗೆ ಬಂದಿದೆ.
ನ. 5ರಂದು ವಿನಯ ಕುಲಕರ್ಣಿಯನ್ನು ಬಂಧಿಸಿರುವ ಸಿಬಿಐ ಅಧಿಕಾರಿಗಳು, ಆತನೇ ಹತ್ಯೆಯ ಸಂಚುಗಾರ ಎನ್ನುವುದನ್ನು ದೃಢಪಡಿಸುವ ಮಾಹಿತಿ ಸಿಕ್ಕಿದೆ ಎಂದು ಧಾರವಾಡದ ಪ್ರಧಾನ ಮುಖ್ಯ ನ್ಯಾಯಾಲಯ(ಕಿರಿಯ ವಿಭಾಗ)ಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ ತಿಳಿಸಿದ್ದಾರೆ.
ರಾಜಕೀಯ ದ್ವೇಷದ ಕಾರಣದಿಂದಲೇ ಯೋಗೀಶಗೌಡ ಹತ್ಯೆ ನಡೆದಿದೆ. ಆಗ ಸಚಿವರಾಗಿದ್ದ ವಿನಯ ಕುಲಕರ್ಣಿಯೇ ಹತ್ಯೆಯ ಸಂಚು ನಡೆಸಿದ್ದರು ಎನ್ನುವುದನ್ನು ಸಿಬಿಐ ಅಧಿಕಾರಿಗಳು ವಿವರವಾಗಿ ತಿಳಿಸಿದ್ದಾರೆ.
ಚುನಾವಣೆಯಿಂದ….: 2016ರ ಜಿ.ಪಂ. ಚುನಾವಣೆಯಿಂದ ಹಿಂದೆ ಸರಿಯುವಂತೆ ವಿನಯ ಕುಲಕರ್ಣಿ ಯೋಗೀಶಗೌಡಗೆ ಹೇಳಿದ್ದರು. ಅದಕ್ಕೆ ಯೋಗೀಶಗೌಡ ಒಪ್ಪಿರಲಿಲ್ಲ. ಪರಸ್ಪರರಲ್ಲಿ ವಾಕ್ಸಮರವೂ ಆಗಿತ್ತು. ಮುಂದೆ ಚುನಾವಣೆಗೆ ಕೆಲವೇ ಗಂಟೆ ಮೊದಲು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿ ಯೋಗೀಶಗೌಡ ಬಂಧನವಾಗಿತ್ತು. ‘ನಿನ್ನನ್ನು ಕೊಲೆ ಮಾಡಿಸಲು ವಿನಯ ಕುಲಕರ್ಣಿ ಸಂಚು ನಡೆಸಿದ್ದಾರೆ’ ಎಂದು ಯೋಗೀಶಗೌಡಗೆ ಅನಾಮಧೇಯ ಪತ್ರವೂ ಬಂದಿತ್ತು.
ಸಚಿವರಾಗಿದ್ದ ವಿನಯ ಕುಲಕರ್ಣಿ 22.04.2016ರಂದು ಧಾರವಾಡ ಜಿ.ಪಂ.ದಲ್ಲಿ ಸಭೆ ಕರೆದಿದ್ದರು. ಆವಾಗ ಜಿ.ಪಂ. ಸದಸ್ಯನಾಗಿದ್ದ ಯೋಗೀಶಗೌಡ ಮತ್ತು ಸಚಿವ ಕುಲಕರ್ಣಿ ಮಧ್ಯೆ ಗಂಭೀರ ವಾಕ್ಸಮರ ಆಗಿತ್ತು. ಪರಸ್ಪರರು ಕೆಕ್ಕರಗಣ್ಣಿಂದ ನೋಡಿಕೊಂಡಿದ್ದರು. ಬಹಿರಂಗವಾಗಿಯೇ ತನಗೆ ಸವಾಲು ಹಾಕಿದ್ದ ಯೋಗೀಶಗೌಡ ವಿಷಯದಲ್ಲಿ ಉಂಟಾದ ವೈಯಕ್ತಿಕ ಮತ್ತು ರಾಜಕೀಯ ದ್ವೇಷದ ಕಾರಣದಿಂದ ವಿನಯ ಕುಲಕರ್ಣಿ ಕೊಲೆಗೆ ಸಂಚು ರೂಪಿಸಿದ್ದರು. ಈ ಸಂಚನ್ನು ಕಾರ್ಯಗತಗೊಳಿಸುವ ಜವಾಬ್ದಾರಿಯನ್ನು ತನ್ನ ಸಹಚರ ಬಸವರಾಜ ಮುತ್ತಗಿಗೆ ವಹಿಸಿದ್ದರು ಎಂದು ಆರೋಪಿಗಳ ವಿಚಾರಣೆಯಿಂದ ತಿಳಿದುಬಂದಿರುವುದಾಗಿ ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ ಸಿಬಿಐ ತಿಳಿಸಿದೆ.
ತನಿಖೆ ವೇಳೆ ಸಿಬಿಐ ಅಧಿಕಾರಿಗಳು, ಘಟನಾ ಸಂದರ್ಭದಲ್ಲಿ ವಿನಯ ಕುಲಕರ್ಣಿ ಎರಡೆರಡು ಸಲ ದೆಹಲಿಗೆ ಭೇಟಿ ನೀಡಿರುವುದು, ಬೆಂಗಳೂರಿನ ಹೋಟೆಲ್​ನಲ್ಲಿ ಕೊಠಡಿ ಕಾಯ್ದಿರಿಸಿದ್ದು ಸೇರಿ ವಿವಿಧ ಮಾಹಿತಿ, ದಾಖಲೆಗಳನ್ನು ಬಹಳ ಪರಿಶ್ರಮದಿಂದ ಸಂಗ್ರಹಿಸಿರುವುದು ತಿಳಿದುಬಂದಿದೆ.
ಇತ್ತ ಕೊಲೆ, ಅತ್ತ ದಿಲ್ಲಿಗೆ…
2016ರ ಜೂನ್ 15ರಂದು ಬೆಳ್ಳಂಬೆಳಗ್ಗೆ ಧಾರವಾಡದಲ್ಲಿ ತನ್ನದೇ ಮಾಲೀಕತ್ವದ ಉದಯ ಜಿಮ್ೆ ಎಂದಿನಂತೆ ಬಂದ ಯೋಗೀಶಗೌಡನನ್ನು ದುಷ್ಕರ್ವಿುಗಳು ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದರು.
ಈ ಘಟನೆಗೆ ಮುನ್ನ ಮತ್ತು ಘಟನೆ ನಂತರ ವಿನಯ ಕುಲಕರ್ಣಿ ದೆಹಲಿಗೆ ಪ್ರವಾಸ ಮಾಡಿದ್ದು, ಘಟನೆ ವೇಳೆ ತಾನು ಜಿಲ್ಲಾ ಕೇಂದ್ರದಲ್ಲಿ ಇರಲೇ ಇಲ್ಲ. ರಾಜಧಾನಿ ಮತ್ತು ದೆಹಲಿ ಮಧ್ಯೆ ಪ್ರವಾಸ ಮಾಡುತ್ತ ಏನೋ ಪ್ರಮುಖವಾದ ಕೆಲಸದಲ್ಲಿ ತೊಡಗಿಕೊಂಡಿದ್ದೆ ಎಂದು ಬಿಂಬಿಸಲು ಪ್ರಯತ್ನಿಸಿದ್ದರು.
2016ರ ಜೂ. 12ರಂದು ದೆಹಲಿಗೆ ತೆರಳಿದ್ದ ಕುಲಕರ್ಣಿ 13ರಂದು ಬೆಂಗಳೂರಿಗೆ ವಾಪಸಾಗಿದ್ದರು. ಜೂ. 16ರಂದು ಪುನಃ ದೆಹಲಿಗೆ ತೆರಳಿ 18ರಂದು ರಾಜಧಾನಿಗೆ ವಾಪಸಾಗಿದ್ದರು. ಪ್ರಯಾಣದ ದಿನವೇ ವಿಮಾನ ಟಿಕೆಟ್ ಪಡೆಯಲಾಗಿತ್ತು ಎಂಬುದನ್ನು ಸಿಬಿಐ ದಾಖಲೆ ಸಹಿತವಾಗಿ ಖಚಿತಪಡಿಸಿಕೊಂಡಿರುವುದಾಗಿ ನ್ಯಾಯಾಲಯಕ್ಕೆ ತಿಳಿಸಿದೆ.
ಮೌರ್ಯದಲ್ಲಿ ಕೊಠಡಿ
ಬೆಂಗಳೂರಿನ ಮೌರ್ಯ ಹೋಟೆಲ್​ನ 555ನೇ ನಂಬರ್​ನ ಕೊಠಡಿಯನ್ನು ವಿನಯ ಕುಲಕರ್ಣಿ 2016ರ ಜೂ. 8ರಿಂದ 20ರವರೆಗೆ ಕಾಯ್ದಿರಿಸಿಕೊಂಡಿದ್ದನ್ನು ಸಿಬಿಐ ಪತ್ತೆ ಹಚ್ಚಿದೆ. ಕೊಲೆ ಕೃತ್ಯವನ್ನು ವಹಿಸಿಕೊಂಡಿದ್ದ ತನ್ನ ಜತೆಗಾರರಿಗಾಗಿ ಈ ಕೊಠಡಿ ಕಾಯ್ದಿರಿಸಿದ್ದರು. ಅಲ್ಲಿ ಕೊಲೆಗಾರರೊಂದಿಗೆ ಭೇಟಿಯಾಗಿದ್ದರು.
ಕೊಲೆ ಸಂಚಿನ ಜಾರಿಯನ್ನು ವಹಿಸಿಕೊಂಡಿದ್ದ ಬಸವರಾಜ ಮುತ್ತಗಿ ಜೂ. 16ರಂದು ರಾತ್ರಿ 1.30ರ ಹೊತ್ತಿಗೆ ಬೆಂಗಳೂರಿನ ಸದಾಶಿವ ನಗರದಲ್ಲಿ ವಿನಯ ಕುಲಕರ್ಣಿ ಹಾಗೂ ಜತೆಗಾರರನ್ನು ಭೇಟಿಯಾಗಿದ್ದರು ಎನ್ನುವುದು ಸಾಕ್ಷಿಗಳ ಹೇಳಿಕೆಯಿಂದ ಖಚಿತವಾಗಿದೆ. ನಿಜವಾದ ಹಂತಕರ ಬದಲಿಗೆ, ತಾವೇ ಹತ್ಯೆಯ ಆರೋಪಿಗಳು ಎಂದು ಬಸವರಾಜ ಮುತ್ತಗಿ, ವಿಕ್ರಂ ಬಳ್ಳಾರಿ, ಕೀರ್ತಿಕುಮಾರ ಕುರಹಟ್ಟಿ, ಸಂದೀಪ ಸವದತ್ತಿ, ವಿನಾಯಕ ಕಟಗಿ, ಮಹಾಬಳೇಶ್ವರ ಉರ್ಫ್ ಮುದುಕಪ್ಪ ಹೊಂಗಲ್ (1ರಿಂದ 6ರವರೆಗಿನವರು)ಸ್ಥಳೀಯ ಪೊಲೀಸರ ಎದುರು ಹಾಜರಾಗಲು ವಿನಯ ಕುಲಕರ್ಣಿ ವ್ಯವಸ್ಥೆ ಮಾಡಿದ್ದರು. ಕುಲಕರ್ಣಿ ಮತ್ತು ಅವರ ಸಿಬ್ಬಂದಿ, ಜತೆಗಾರರ ಫೋನ್ ಕರೆ ವಿವರಗಳು ಇದನ್ನು ಸ್ಪಷ್ಟವಾಗಿ ಖಚಿತಪಡಿಸುತ್ತವೆ ಎಂದು ಸಿಬಿಐ ಹೇಳಿದೆ.
ರೆಸಾರ್ಟ್​ನಲ್ಲಿ ವಾಸ
ಬೆಂಗಳೂರಿನಿಂದ ಧಾರವಾಡಕ್ಕೆ ಮೊದಲ ಸಲ ಬಂದಿದ್ದ ಸುಪಾರಿ ಹಂತಕರನ್ನು ದಾಂಡೇಲಿಯ ಹಾರ್ನ್​ಬಿಲ್ ರೆಸಾರ್ಟ್​ಗೆ ಕರೆದೊಯ್ದು ಉಳಿಸಲಾಗಿತ್ತು. ರೆಸಾರ್ಟ್ ಮಾಲೀಕ ರೂಪೇಂದ್ರ ರಾವ್, ವಿನಯ ಕುಲಕರ್ಣಿಗೆ ಚೆನ್ನಾಗಿ ಪರಿಚಿತ. ಆರೋಪಿ ಬಸವರಾಜ ಮುತ್ತಗಿಯನ್ನು ರೂಪೇಂದ್ರ ರಾವ್ ಆ ದಿನ ಫೋನ್ ಮೂಲಕ ಸಂರ್ಪಸಿರುವ ಮಾಹಿತಿಯನ್ನು ಸಿಬಿಐ ಸಂಗ್ರಹಿಸಿದೆ.
ಸಾಕ್ಷ್ಯ ನಾಶ: ವಿನಯ ಕುಲಕರ್ಣಿ ಸಾಕ್ಷ್ಯ ನಾಶಕ್ಕೆ ಯತ್ನಿಸಿದ್ದಾರೆ. ಅಂದಿನ ತನಿಖಾಧಿಕಾರಿಯಾಗಿದ್ದ ಪೊಲೀಸ್ ಇನ್​ಸ್ಪೆಕ್ಟರ್ ಚನ್ನಕೇಶವ ಟಿಂಗರೀಕರ ಮತ್ತು ತನಿಖೆಯ ಅಧೀಕ್ಷಣಾಧಿಕಾರಿಯಾಗಿದ್ದ ಎಸಿಪಿ ವಾಸುದೇವ ನಾಯ್ಕ ಸಹ ಸಾಕ್ಷಿ ನಾಶ ಮತ್ತು ಸಾಕ್ಷಿ ಸೃಷ್ಟಿಯಲ್ಲಿ ಭಾಗಿಯಾಗಿರುವುದು ತನಿಖೆ ವೇಳೆ ಕಂಡುಬಂದಿದೆ.
ಕಟ್ಟುಕತೆ
ಯೋಗೀಶಗೌಡ ಹತ್ಯೆಗೆ ಮೊದಲು 24.05.2016ರಂದು ಬಸವರಾಜ ಮುತ್ತಗಿ ಮತ್ತು ನಾಗೇಂದ್ರ ತೋಡಕರ ಮಧ್ಯೆ ರಿಯಲ್ ಎಸ್ಟೇಟ್ ಒಪ್ಪಂದವೊಂದು ವಿನಯ ಕುಲಕರ್ಣಿ ಮಧ್ಯಸ್ಥಿಕೆಯಲ್ಲೇ ನಡೆದಿತ್ತು. ಇದೇ ಕಾರಣಕ್ಕೆ ಮುತ್ತಗಿ ಮತ್ತು ಯೋಗೀಶಗೌಡ ಮಧ್ಯೆ ದ್ವೇಷ ಉಂಟಾಗಿತ್ತು ಎಂದು ಮೊದಲು ತನಿಖೆ ನಡೆಸಿದ್ದ ಸ್ಥಳೀಯ ಪೊಲೀಸರು ದಾಖಲೆಗಳಲ್ಲಿ ಹೇಳಿದ್ದಾರೆ. ಆದರೆ, ನ್ಯಾಯಾಲಯದಲ್ಲಿ ಮತ್ತು ಸಿಬಿಐ ಅಧಿಕಾರಿಗಳ ವಿಚಾರಣೆ ವೇಳೆ ಯೋಗೀಶಗೌಡ ಜತೆ ಅಂಥ ಯಾವುದೇ ವಿವಾದ ಇರಲಿಲ್ಲ ಎಂದು ಜಾಗದ ಮಾಲೀಕ ಹೇಳಿದ್ದಾರೆ. ಕೊಲೆ ಸಂಚನ್ನು ಕಾರ್ಯಗತಗೊಳಿಸಲೆಂದೇ ರಿಯಲ್ ಎಸ್ಟೇಟ್ ಒಪ್ಪಂದದ ಕಟ್ಟುಕತೆ ಸೃಷ್ಟಿಸಲಾಗಿತ್ತು ಎಂದು ಸಿಬಿಐ ಹೇಳಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − 8 =
Remember me
