ಬೆಂಗಳೂರು:ಎಕ್ಸಾಂ ದಿನವೇ ಕಾಲೇಜು ವಿದ್ಯಾರ್ಥಿಯೊಬ್ಬ ಸಾವಿಗೀಡಾದ ಪ್ರಕರಣಕ್ಕೆ ಈಗ ತಿರುವು ಸಿಕ್ಕಿದ್ದು, ಏಕೈಕ ಪುತ್ರನನ್ನು ಕಳೆದುಕೊಂಡ ತಾಯಿ, ಸತ್ಯಾಂಶ ಬೇರೆಯೇ ಇದೆ ಎಂದು ಒಂದಷ್ಟು ಪ್ರಶ್ನೆಗಳನ್ನು ಕೇಳಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಅವರು ಈ ತಮ್ಮ ಅಳಲನ್ನು ಪೋಸ್ಟ್ ಮಾಡಿಕೊಂಡಿದ್ದು, ತನ್ನ ಮಗನಿಗೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿದ್ದಾರೆ.
ತನ್ನ ಮಗನ ಫೇಸ್​ಬುಕ್ ಖಾತೆಯಿಂದಲೇ ಪೋಸ್ಟ್ ಮಾಡಿಕೊಂಡಿರುವ ಅವರು, ನಾನು ಆದಿತ್ಯ ಪ್ರಭು ತಾಯಿ ಎಂದು ಪರಿಚಯಿಸಿಕೊಂಡು ಪ್ರಕರಣದ ಕುರಿತಂತೆ ಹಲವಾರು ಅಂಶಗಳನ್ನು ಹಂಚಿಕೊಂಡಿದ್ದಾರೆ.
19 ವರ್ಷದ ನನ್ನ ಮಗ ಬೆಂಗಳೂರಿನ ಆರ್​ಆರ್​ ರೋಡ್ ಕ್ಯಾಂಪಸ್​ನಲ್ಲಿರುವ ಪಿಇಎಸ್ ಕಾಲೇಜಿನಲ್ಲಿ ಸಿಎಸ್​ಇ ಪ್ರಥಮ ವರ್ಷದ ವಿದ್ಯಾರ್ಥಿಯಾಗಿದ್ದ. ಜು. 17ರಂದು ಆತ ಕಾಲೇಜಿನ 8ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ. ಆದಿತ್ಯ ಪರೀಕ್ಷೆ ವೇಳೆ ಕಾಪಿ ಮಾಡಿ ಸಿಕ್ಕಿಬಿದ್ದಿದ್ದ ಎಂದು ಕಾಲೇಜಿನವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದರು. ಆದರೆ ನಾನು ಈ ಪ್ರಕರಣದ ಇನ್ನೊಂದು ಆಯಾಮವನ್ನು ತಿಳಿಸುತ್ತೇನೆ ಎಂದು ಸುದೀರ್ಘವಾಗಿ ಕೆಲವು ಮಾಹಿತಿಗಳನ್ನು ಬರೆದಿದ್ದಾರೆ.
ಜು. 17ರ ಬೆಳಗ್ಗೆ 11.45ಕ್ಕೆ ನನ್ನ ಮಗ ನನಗೆ ಕರೆ ಮಾಡಿ ಮೊಬೈಲ್​ಫೋನ್ ಬ್ಯಾಗ್​ನಲ್ಲಿ ಇಡುವುದನ್ನು ಮರೆತೆ, ಅರ್ಧ ದೂರಕ್ಕೆ ಹೋದ ಮೇಲೆ ಮೊಬೈಲ್​​ಫೋನ್​ ಕಿಸೆಯಲ್ಲೇ ಇರುವುದು ಗೊತ್ತಾಯಿತು. ನಂತರ ಪರೀಕ್ಷೆ ವೇಳೆ ಅದನ್ನು ತೆಗೆದು ಬೆಂಚ್​ ಮೇಲೆ ಅಥವಾ ನೆಲದ ಮೇಲೆ ಇಟ್ಟೆ (ಅವನು ಏನು ಎಲ್ಲಿ ಇಟ್ಟೆ ಅಂತ ಹೇಳಿದ್ದು ಸರಿ ನೆನಪಿಲ್ಲ) ಎಂದಿದ್ದ. ಅಲ್ಲದೆ ಫೋನ್​ ಏರೋಪ್ಲೇನ್ ಮೋಡ್​ನಲ್ಲಿತ್ತು. ನಂತರ ಇನ್​ವಿಜಿಲೇಟರ್ ಫೋನ್​ ವಶಕ್ಕೆ ಪಡೆದಿದ್ದು, ಆತ ಪೂರ್ತಿ ಪರೀಕ್ಷೆ ಬರೆದಿದ್ದ.
ಇದನ್ನೂ ಓದಿ:ವಿಶ್ವ ಕುಂದಾಪುರ ಕನ್ನಡ ದಿನಕ್ಕೆ ಸಿಎಂ-ಡಿಸಿಎಂ, ಸಚಿವರು ಸಂಸದರ ಶುಭಾಶಯ: ಬೆಂಗಳೂರಲ್ಲಿ 23ರಂದು ಆಚರಣೆ
ನಂತರ ನನಗೆ ಕರೆ ಮಾಡಿದ್ದ ಮಗ ಅವರು ಕಿರುಕುಳ ನೀಡುತ್ತಿದ್ದಾರೆ, ಇಂಥ ಕೆಲಸ ಮಾಡುವ ಬದಲು ಸಾಯುವುದು ಲೇಸು ಎಂದು ಹೇಳಿದ್ದಾರೆ ಎಂದು ತಿಳಿಸಿ ನನಗೆ ಕಾಲೇಜಿಗೆ ಬರಲು ಹೇಳಿದ್ದ. ಅದಾದ ಕೆಲವು ನಿಮಿಷಗಳ ಬಳಿಕ ಕಾಲೇಜಿಂದ ನನಗೆ ಕರೆ ಬಂದಿದ್ದು, ಬರಲು ಹೇಳಿದ್ದರು. ಇನ್ನೇನು ಪರೀಕ್ಷೆ ಮುಗಿಯಲು ನಾಲ್ಕು ನಿಮಿಷಗಳು ಇರುವಾಗ ಅಂದರೆ 11.26 ನಿಮಿಷಕ್ಕೆ ಕೊಠಡಿ ಪರಿವೀಕ್ಷಕರು ನನ್ನ ಮಗನ ಫೋನ್​ ತೆಗೆದುಕೊಂಡಿದ್ದು ನನಗೆ ಇತರ ವಿದ್ಯಾರ್ಥಿಗಳಿಂದಾಗಿ ತಿಳಿಯಿತು. ನಾನು ಕಾಲೇಜಿಗೆ ಹೋಗಿದ್ದಾಗ ಅಲ್ಲಿ ಕಚೇರಿಯಲ್ಲಿ ಯಾರೂ ಇರಲಿಲ್ಲ, ನಾನು ಒಂದು ಗಂಟೆ ಕಾದಿದ್ದೆ, ಬಳಿಕ ಒಬ್ಬರು ಬಂದರು ಎಂಬುದಾಗಿ ಆದಿತ್ಯ ತಾಯಿ ಹೇಳಿಕೊಂಡಿದ್ದಾರೆ.
ಆದಿತ್ಯನಿಗೆ ಇಲ್ಲೇ ಕುಳಿತುಕೊಳ್ಳಲು ಹೇಳಿದ್ದಾಗಿ ಕಚೇರಿಯಲ್ಲಿ ಇದ್ದವರು ತಿಳಿಸಿದರು. ಆದರೆ ಅಲ್ಲಿ ಆದಿತ್ಯ ಇರಲಿಲ್ಲ. ಆತ ಫ್ರೆಂಡ್ಸ್ ಜೊತೆ ಹೊರಗೆ ಸುತ್ತಾಡಲು ಹೋಗಿರಬಹುದು ಎಂದರು. ಇಂಥ ಗಂಭೀರ ಆರೋಪ ಬಂದಿರುವಾಗ ಆತ ಫ್ರೆಂಡ್ಸ್ ಜೊತೆ ಹೋಗಿರಲು ಸಾಧ್ಯವೇ ಇಲ್ಲ. ಆತ ಅಪಾಯದಲ್ಲಿ ಇರಬಹುದು, ಸಿಸಿಟಿವಿ ಕ್ಲಿಪ್ಪಿಂಗ್​ ಚೆಕ್ ಮಾಡಿ ಎಂದು ಕೇಳಿಕೊಂಡರೂ ಅವರು ಸ್ಪಂದಿಸಲಿಲ್ಲ. ನಂತರ ಒಂದಷ್ಟು ಕರೆಗಳು ಬರಲಾರಂಭಿಸಿದಾಗ ಅವರು ಗಡಿಬಿಡಿಯಲ್ಲಿ ಹೊರಗೆ ಹೋದರು. ನಾನೂ ಅವರ ಜೊತೆ ಹೋದಾಗ ಕ್ಯಾಂಪಸ್​ನ ಇನ್ನೊಂದು ಬದಿಯಲ್ಲಿ ಆ್ಯಂಬುಲೆನ್ಸ್ ಮತ್ತು ಪೊಲೀಸರು ಬಂದಿರುವುದು ಕಾಣಿಸಿತು.
ಅಲ್ಲಿ ನನ್ನ ಮಗನನ್ನು ನೋಡಿ ಆಘಾತಗೊಂಡು ಕಿರುಚಿದೆ. ಆಗ ನನ್ನ ಮಗ ಜೀವಂತ ಇಲ್ಲ ಎಂದು ಹೇಳಿದರು. ನನ್ನ ಮಗನನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸುವಂತೆ ಗೋಗರೆದರೂ ಕೇಳಲಿಲ್ಲ. ಅಂಥ ಪರಿಸ್ಥಿತಿಯಲ್ಲೂ 2-3 ಜನ ನನ್ನನ್ನು ಹಿಡಿದು ಮಗನ ಬಳಿಗೆ ಕರೆದುಕೊಂಡು ಹೋಗಿ ಆದಿತ್ಯನೇ ಎಂದು ಗುರುತಿಸಿ ಖಚಿತ ಪಡಿಸಲು ತಿಳಿಸಿದರು. ಅಲ್ಲದೆ ಒಂದು ಪತ್ರಕ್ಕೆ ಸಹಿ ಮಾಡಲು ಒತ್ತಾಯಿಸಿದರು. ಹಾಗೆ ಸಹಿ ಮಾಡಿದ ಬಳಿಕವಷ್ಟೇ ಆಸ್ಪತ್ರೆಗೆ ಕರೆದೊಯ್ಯುವುದು ಎಂದರು. ಒತ್ತಾಯದಿಂದ ನನ್ನ ಸಹಿ ತೆಗೆದುಕೊಳ್ಳಲಾಯಿತು.
ನಾನು ಒಬ್ಬಳೇ ಅಸಹಾಯಕಳಾಗಿ ಇದ್ದ ಪರಿಸ್ಥಿತಿಯ ಲಾಭ ಪಡೆದು ಅವರು ಪ್ರಕರಣದಿಂದ ನುಣುಚಿಕೊಳ್ಳಲು ಯತ್ನಿಸಿದ್ದಾರೆ. ತಕ್ಷಣ ಬಂದ ನನ್ನ ಫ್ರೆಂಡ್​, ಮನೆಯವರು ಬರುವವರಿಗೆ ಯಾವುದಕ್ಕೂ ಸೈನ್ ಮಾಡಬೇಡ ಎಂದರು. ನಂತರ ನಮ್ಮ ಫ್ರೆಂಡ್ಸ್ ಮತ್ತು ಫ್ಯಾಮಿಲಿಯವರು ಬಂದು ತನಿಖೆಗೆ ಆಗ್ರಹಿಸಿದರು. ಅಷ್ಟಾದ ಮೇಲಷ್ಟೆ ಫೊರೆನ್ಸಿಕ್ ತಂಡದವರನ್ನು ಕರೆಸಿಕೊಳ್ಳಲಾಯಿತು. ಆಮೇಲಷ್ಟೇ ಶ್ವಾನದಳ ಬಂತು, ಸಿಸಿಟಿವಿ ಪರಿಶೀಲನೆ, ಕೆಲವರ ವಿಚಾರಣೆ ನಡೆಯಿತು. ಇಷ್ಟೆಲ್ಲ ಆಗುವಾಗ ರಾತ್ರಿ 7.30 ಆಗಿತ್ತು. ಅಲ್ಲಿಯವರೆಗೂ ಕಾಲೇಜಿನ ಜವಾಬ್ದಾರಿಯುತ ಸ್ಥಾನದಲ್ಲಿರುವ ಯಾರೂ ಸ್ಥಳಕ್ಕೆ ಬಂದಿರಲಿಲ್ಲ. ಒಬ್ಬರು ಅಡ್ಮಿನ್ ಮಾತ್ರ ಇದ್ದರು. 7.30ಕ್ಕೆ ವಿಸಿ ಬಂದು ನಮ್ಮನ್ನು ಭೇಟಿ ಮಾಡಿ, ಆಗಿದ್ದಕ್ಕೆ ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿ:ಇಲ್ಲೊಂದು ವಿಚಿತ್ರ ಮದುವೆ: ವರನಿಗೆ ಹೊಡೆದು ಬಡಿದು ಮಾಂಗಲ್ಯ ಕಟ್ಟಿಸಿಕೊಂಡ ವಧು: ಅಷ್ಟಕ್ಕೂ ಯಾಕೆ ಇದೆಲ್ಲ..?
1. ಪರೀಕ್ಷೆ ಮುಗಿಯಲು 4 ನಿಮಿಷ ಇರುವಾಗ ಮೊಬೈಲ್ ಫೋನ್​ ನೋಡಿದ್ದಾರೆ ಎಂದರೆ ಇಬ್ಬರು ಇನ್​​ವಿಜಿಲೇಟರ್​ ಪರೀಕ್ಷಾ ಕೊಠಡಿಯಲ್ಲಿ ಏನು ಮಾಡುತ್ತಿದ್ದರು. ನನ್ನ ಮಗ ಕಾಪಿ ಮಾಡಿದ್ದೇ ಆಗಿದ್ದರೆ ಅವರು ಪರೀಕ್ಷೆ ಪೂರ್ತಿ ಬರೆಯಲು ಬಿಟ್ಟಿರುತ್ತಿದ್ದರೇ?2. ಒಂದು ವೇಳೆ ಆತ ಕಾಪಿ ಮಾಡಿದ್ದರೆ ನಿಯಮ ಪ್ರಕಾರ ಕ್ರಮತೆಗೆದುಕೊಳ್ಳಬೇಕು, ಮಾನಸಿಕ ಕಿರುಕುಳ ಯಾಕೆ ನೀಡಬೇಕು?3. ಗಂಭೀರ ಆರೋಪ ಹೊರಿಸಿ ಆತನನ್ನು ವಶಕ್ಕೆ ಪಡೆದು ಕೂರಿಸಿದ ಬಳಿಕ ಯಾಕೆ ಆತನ ಬಗ್ಗೆ ಗಮನ ಹರಿಸಲಿಲ್ಲ? ಆ ರೀತಿಯಲ್ಲಿ ಮಾನಸಿಕವಾಗಿ ಪ್ರಚೋದನೆ ನೀಡಿ ಆತನನ್ನು ಒಬ್ಬನೇ ಬಿಟ್ಟಿದ್ದೇಕೆ?4. ಹಾರಿ ಬಿದ್ದವ ನಮ್ಮ ಕಾಲೇಜಿನ ವಿದ್ಯಾರ್ಥಿ ಅಲ್ಲ ಎಂದು ಅವರು ಪೊಲೀಸರಿಗೆ ಮಾಹಿತಿ ನೀಡಿದ್ದರು ಹಾಗೂ ಶವ ತೆಗೆಸಲು ಒತ್ತಾಯಿಸಿದ್ದರು ಎಂದು ಆಮೇಲೆ ನನಗೆ ತಿಳಿಯಿತು. 12.50ರಿಂದ ನಾನು ಕಾಲೇಜಿನಲ್ಲೇ ಕಾಯುತ್ತಿದ್ದರೂ 2.15ಕ್ಕೆ ನಾನು ಮಗನ ದೇಹ ನೋಡಿದ್ದು. ಕಾಲೇಜಿನವರಿಗೆ ಆತ ಹಾರಿದ್ದು ಮೊದಲೇ ಗೊತ್ತಿದ್ದರೂ ಯಾಕೆ ತಿಳಿಸಿರಲಿಲ್ಲ?ಹೀಗೆ ಇನ್ನಷ್ಟು ಪ್ರಶ್ನೆಗಳನ್ನು ಕೇಳಿರುವ ಅವರು ತನ್ನ ಮಗನಿಗೆ ನ್ಯಾಯ ದೊರಕಿಸಲು ನೆರವಾಗಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಮಕ್ಕಳನ್ನು ಡೌನ್​ಲೋಡ್ ಮಾಡಿಕೊಳ್ಳುವ ಕಾಲ ಬರಬಹುದಾ?; ಇದೇನಿದು ಅಪ್ಪ-ಅಮ್ಮ ಇಲ್ಲದೆ ಮಗು ಹುಟ್ಟಿಸೋ ಪ್ರಯತ್ನ!

ಏಯ್.. ಎಲ್ಲಿಗೆ ಬಂತು ಎಐ(AI)?; ಸೆX ರೋಬೋಗಳಲ್ಲೂ ಕೃತಕ ಬುದ್ಧಿಮತ್ತೆ; ಹಾಸಿಗೆಯಲ್ಲಿ ಸಂಗಾತಿಯೇ ಬೇಕಾಗಲ್ವಂತೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + three =
Remember me
