|ಮಂಜುನಾಥ ಕೆ.ಬೆಂಗಳೂರುಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ನಡೆದಿರುವ ಶಿಕ್ಷಕರ ನೇಮಕಾತಿ ಹಗರಣದ ಸಿಐಡಿ ತನಿಖೆಯಲ್ಲಿ ಮತ್ತಷ್ಟು ರೋಚಕ ಸಂಗತಿಗಳು ಬಯಲಾಗಿವೆ. ಮುಖ್ಯ ಆಯ್ಕೆ ಪಟ್ಟಿಯಲ್ಲಿ ಸ್ಥಾನ ಪಡೆದು ಕರ್ತವ್ಯಕ್ಕೆ ಹಾಜರಾಗದ ಅಭ್ಯರ್ಥಿಗಳ ಬದಲಿಗೆ ಅದೇ ಹೆಸರಿನ, ಪರೀಕ್ಷೆಯನ್ನೇ ಬರೆಯದ, ಅರ್ಹತೆಯೂ ಇಲ್ಲದ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ಪ್ರತಿ ಕೊಟ್ಟಿರುವುದು ತನಿಖೆಯಲ್ಲಿ ದೃಢಪಟ್ಟಿದೆ.
2012-13 ಹಾಗೂ 2014-15ನೇ ಸಾಲಿನಲ್ಲಿ ಸರ್ಕಾರಿ ಪ್ರೌಢಶಾಲೆಗಳ ಗ್ರೇಡ್-2 ಸಹಶಿಕ್ಷಕರು ಹಾಗೂ ಗ್ರೇಡ್-1 ದೈಹಿಕ ಶಿಕ್ಷಣ ಶಿಕ್ಷಕರ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಈಗಾಗಲೇ 12 ಜನರನ್ನು ಸಿಐಡಿ ಬಂಧಿಸಿದೆ. ಆರೋಪಿಗಳ ಕಸ್ಟಡಿ ಅವಧಿ ಬುಧವಾರಕ್ಕೆ ಅಂತ್ಯಗೊಳ್ಳಲಿದೆ. ಹಗರಣದಲ್ಲಿ ಕೆಲ ರಾಜಕಾರಣಿಗಳೂ ಭಾಗಿಯಾಗಿರುವ ಬಗ್ಗೆ ಅನುಮಾನ ಹಿನ್ನೆಲೆ ತನಿಖೆ ಮುಂದುವರಿಸಲು ಸಿಐಡಿ ಅಧಿಕಾರಿಗಳು ಬಂಧಿತರನ್ನು ಮತ್ತೆ ವಶಕ್ಕೆ ಪಡೆಯುವ ಸಾಧ್ಯತೆ ಇದೆ. ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯ ಆಂತರಿಕ ತನಿಖೆ ಹಾಗೂ ಸಿಐಡಿ ತನಿಖೆ ಸಂದರ್ಭದಲ್ಲಿ ನೇಮಕಾತಿಯಲ್ಲಿ ಅಕ್ರಮ ನಡೆದಿರುವುದಕ್ಕೆ ಸಾಕ್ಷ್ಯಾಧಾರ ಲಭ್ಯವಾಗಿದೆ.
ಆಯ್ಕೆಯಾದವರು ಸಲ್ಲಿಸಿರುವ ದಾಖಲೆ ಹಾಗೂ ಹುದ್ದೆಗೆ ನೇಮಕಗೊಂಡವರ ದಾಖಲೆಗಳು ಬೇರೆ ಬೇರೆಯಾಗಿವೆ. ಶಿಕ್ಷಣ ಇಲಾಖೆಯ ಅಧಿಕಾರಿಗಳು ತನಿಖೆ ನಡೆಸಿದ ಸಂದರ್ಭದಲ್ಲಿ ಕೇಂದ್ರೀಕೃತ ದಾಖಲಾತಿ ಘಟಕದಲ್ಲಿರುವ ಅಭ್ಯರ್ಥಿಗಳ ದಾಖಲೆಗಳಿಗೂ ಜಿಲ್ಲಾ ಉಪ ನಿರ್ದೇಶಕರ ಕಚೇರಿಯಲ್ಲಿನ ದಾಖಲೆಗಳಿಗೂ ವ್ಯತ್ಯಾಸವಿರುವುದು ಪತ್ತೆಯಾಗಿದೆ.
ನಿರ್ದಿಷ್ಟ ಅಭ್ಯರ್ಥಿ ಪಡೆದಿರುವ ಅಂಕಗಳು ಕೂಡ ಜಿಲ್ಲಾ ದಾಖಲೆಗಳೊಂದಿಗೆ ಹೊಂದಾಣಿಕೆಯಾಗಿಲ್ಲ. ತುಮಕೂರು ಜಿಲ್ಲಾ ಉಪ ನಿರ್ದೇಶಕರ ಕಚೇರಿಯಲ್ಲಿನ ದಾಖಲೆಗಳನ್ನು ಪರಿಶೀಲಿಸಿದಾಗ ಆಯಾ ವರ್ಗಕ್ಕೆ ನಿಗದಿಯಾದ ಮೆರಿಟ್ ಕಟ್ ಆಫ್​ಗಿಂತಲೂ ಕಡಿಮೆ ಮೆರಿಟ್ ಇರುವವರಿಗೂ ನೇಮಕಾತಿ ಆದೇಶ ನೀಡಿರುವುದು ಕಂಡು ಬಂದಿದೆ.
ಒಂದೇ ದಿನ 2 ಎಫ್​ಐಆರ್:2012-13ನೇ ಸಾಲಿನ ಸರ್ಕಾರಿ ಪ್ರೌಢಶಾಲೆಗಳ ಗ್ರೇಡ್-2 ಸಹಶಿಕ್ಷಕರ ನೇಮಕಾತಿಯಲ್ಲಿ ಮಹೇಶ ಶ್ರೀಮಂತ ಸೂಸಲಾಡಿ ಎಂಬುವರು ಅಕ್ರಮವಾಗಿ ನೇಮಕಾತಿ ಹೊಂದಿರುವುದಾಗಿ ಶಿಕ್ಷಣ ಇಲಾಖೆ ನೀಡಿದ ದೂರಿನ ಅನ್ವಯ 2022ರ ಆ.12ರಂದು ಬೆಂಗಳೂರಿನ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿತ್ತು. ನಂತರ 2014-15ನೇ ಸಾಲಿನ ಸರ್ಕಾರಿ ಪ್ರೌಢಶಾಲೆಗಳ ಗ್ರೇಡ್-2 ಸಹಶಿಕ್ಷಕರು ಹಾಗೂ ಗ್ರೇಡ್-1 ದೈಹಿಕ ಶಿಕ್ಷಕರ ನೇಮಕಾತಿಯಲ್ಲಿ ಅರ್ಹರಲ್ಲದ 11 ಅಭ್ಯರ್ಥಿಗಳನ್ನು ನೇಮಕಾತಿ ಮಾಡಿರುವ ಬಗ್ಗೆ ತನಿಖೆ ನಡೆಸುವಂತೆ ಶಿಕ್ಷಣ ಇಲಾಖೆ ನೀಡಿದ ದೂರಿನ ಮೇರೆಗೆ ಅದೇ ದಿನ ವಿಧಾನಸೌಧ ಪೊಲೀಸ್ ಠಾಣೆಯಲ್ಲೇ ಇನ್ನೊಂದು ಎಫ್​ಐಆರ್ ದಾಖಲಾಗಿತ್ತು. ಆರೋಪಿಗಳ ಮಾಹಿತಿ ಸಂಗ್ರಹಿಸಿದ್ದ ಸಿಐಡಿ ತಂಡಗಳು ಸೆ.6ರಂದು ಏಕಕಾಲದಲ್ಲಿ ದಾಳಿ ನಡೆಸಿ 11 ಅಭ್ಯರ್ಥಿಗಳನ್ನು ಬಂಧಿಸಿದ್ದವು. ಒಟ್ಟಾರೆ ಪ್ರಕರಣದಲ್ಲಿ ಅಧಿಕಾರಿ ಸೇರಿ ಈವರೆಗೆ 12 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಗೊತ್ತಾಗಿದ್ದು ಹೇಗೆ?:2014-15ನೇ ಸಾಲಿನಲ್ಲಿ ನಡೆಸಲಾಗಿದ್ದ ಪ್ರೌಢ ಶಾಲಾ ಶಿಕ್ಷಕರ ನೇಮಕಾತಿಯಲ್ಲಿ ಅಕ್ರಮ ನಡೆದಿರುವ ಬಗ್ಗೆ ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ ಸೇರಿ ಕೆಲ ಸಂಘಟನೆಗಳು ದೂರು ನೀಡಿ ತನಿಖೆಗೆ ಆಗ್ರಹಿಸಿದ್ದವು. ಶಿಕ್ಷಣ ಇಲಾಖೆಯ ಆಂತರಿಕ ಪರಿಶೀಲನೆಯಲ್ಲಿ ಅಕ್ರಮ ನಡೆದಿರುವುದು ಮೇಲ್ನೋಟಕ್ಕೆ ಗೊತ್ತಾಗಿತ್ತು. ಈ ವಿಚಾರ ಗಮನಕ್ಕೆ ಬಂದ ನಂತರ ರಾಜ್ಯ ಸರ್ಕಾರ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿತ್ತು.
ಹೇಗೆಲ್ಲ ಅಕ್ರಮ ನಡೆದಿದೆ?
ಎಫ್​ಡಿಎ ಅಮಾನತು:ಸಹ ಶಿಕ್ಷಕರ ಅಕ್ರಮ ನೇಮಕಾತಿಯ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಬೆಂಗಳೂರು ವಿಭಾಗ ಸಹ ನಿರ್ದೇಶಕರ ಕಚೇರಿಯ ಪ್ರಥಮ ದರ್ಜೆ ಸಹಾಯಕ ಕೆ.ಎಸ್. ಪ್ರಸಾದ್​ನನ್ನು ಶಿಕ್ಷಣ ಇಲಾಖೆ ಸೇವೆಯಿಂದ ಅಮಾನತು ಮಾಡಿದೆ. ಈತನನ್ನು ಸಿಐಡಿ ಪೊಲೀಸರು ಸೆ.6ರಂದು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು.
ಬಂಧಿತ ಶಿಕ್ಷಕರು
ಅಪ್ರಾಪ್ತನಿಗೆ ಬಲವಂತವಾಗಿ ಶಸ್ತ್ರಚಿಕಿತ್ಸೆ ನಡೆಸಿ ಲಿಂಗಪರಿವರ್ತನೆ: ವೈದ್ಯೆ ವಿರುದ್ಧದ ಕೇಸ್​ ರದ್ದು ಮಾಡಲು ಹೈಕೋರ್ಟ್​ ನಕಾರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × five =
Remember me
