ಬೆಂಗಳೂರು:ರಾಜ್ಯದಲ್ಲಿ ಸುಪ್ರಭಾತ-ಆಜಾನ್ ವಿಚಾರವಾಗಿ ಸಭೆ ಕರೆದಿರುವ ಮುಖ್ಯಮಂತ್ರಿ ಬಸವರಾಜ್​ ಬೊಮ್ಮಾಯಿ ಆ ಸಂಬಂಧ ಮಹತ್ವದ ಸೂಚನೆ ನೀಡಿದ್ದಾರೆ. ಧ್ವನಿವರ್ಧಕ ಬಳಸಿ ಆಜಾನ್-ಸುಪ್ರಭಾತ ಬಿತ್ತರಿಸುತ್ತಿರುವ ಪ್ರಕರಣದ ಕುರಿತು ಇಂದು ಜಿಲ್ಲೆಗಳ ಮುಖ್ಯಕಾರ್ಯನಿರ್ವಹಣಾಧಿಕಾರಿಗಳ ಸಭೆ ಕರೆದ ಸಿಎಂ ಕೆಲವು ಸೂಚನೆಗಳನ್ನು ನೀಡಿದ್ದಾರೆ. ಈ ಕುರಿತು ಬಳಿಕ ಸುದ್ದಿಗಾರರಿಗೆ ಅವರು ಮಾಹಿತಿ ನೀಡಿದ್ದಾರೆ.
ಸಾರ್ವಜನಿಕ ಸ್ಥಳಗಳಲ್ಲಿ ಧ್ವನಿವರ್ಧಕ ಬಳಕೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಆದೇಶ ಹೊರಡಿಸಿದೆ. ಅದಕ್ಕೆ ಸಂಬಂಧಿಸಿದಂತೆ 2002ರಲ್ಲಿ ಕರ್ನಾಟಕದ ಅಂದಿನ ಸರ್ಕಾರ ಒಂದು ಆದೇಶ ಹೊರಡಿಸಿದೆ. ಅದನ್ನು ಸೌಹಾರ್ದಯುತವಾಗಿ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಸಾರ್ವಜನಿಕ ಧ್ವನಿವರ್ಧಕ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಆದೇಶವಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಶಿಫಾರಸಿನ ಅನ್ವಯ ಕೇಂದ್ರ ಸರ್ಕಾರ ಆಜ್ಞೆ ಮಾಡಿದೆ. ಯಾವ ಸಂದರ್ಭಗಳಲ್ಲಿ ಹಾಗೂ ಧ್ವನಿವರ್ಧಕಗಳಲ್ಲಿ ಎಷ್ಟು ಪ್ರಮಾಣದ ಡೆಸಿಬಲ್ ಇರಬೇಕು ಎನ್ನುವ ಕೋಷ್ಟಕ ಇದೆ. 2000ನೇ ಇಸವಿಯಲ್ಲಿ ಕರ್ನಾಟಕ ಸರ್ಕಾರ ಈ ಆಜ್ಞೆಯ ಪಾಲನೆಗೆ ಆದೇಶ ಮಾಡಿತ್ತು. ಈ ರೀತಿ ಸುಪ್ರೀಂ ಕೋರ್ಟ್ ಆದೇಶ, ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಆದೇಶಗಳನ್ನು ಪರಿಪಾಲನೆ ಮಾಡಲು ತೀರ್ಮಾನಿಸಲಾಗಿದೆ ಎಂದರು.
ಆದೇಶದ ಪರಿಪಾಲನೆಗೆ ಸೂಚನೆ:ಆದೇಶದ ಅನುಷ್ಠಾನಕ್ಕಾಗಿ ಡಿವೈಎಸ್‍ಪಿ ದರ್ಜೆಯ ಅಧಿಕಾರಿಗಳಿರಬೇಕು, ವರ್ಷವಿಡೀ ಸಾರ್ವಜನಿಕ ಧ್ವನಿವರ್ಧಕ ಬಳಸುವವರು ಪರವಾನಗಿ ತೆಗೆದುಕೊಳ್ಳುವುದೂ ಸೇರಿದಂತೆ ಹಲವಾರು ವಿಚಾರಗಳು ಆದೇಶದಲ್ಲಿವೆ. ಆದೇಶದ ಈ ಎಲ್ಲ ಅಂಶಗಳ ಪರಿಪಾಲನೆಗೆ ಸೂಚನೆ ನೀಡಲಾಗಿದೆ. ಈ ಆದೇಶದ ಅನುಷ್ಠಾನಕ್ಕೆ ಸೂಕ್ತ ಮಾರ್ಗಸೂಚಿ ನೀಡಲಾಗುವುದು ಎಂದರು.
ಕಾನೂನು ಕೈಗೆತ್ತಿಕೊಳ್ಳುವಂತಿಲ್ಲ:ಧ್ವನಿವರ್ಧಕ ವಿಚಾರದಲ್ಲಿ ಯಾರೂ ಕಾನೂನನ್ನು ಕೈಗೆ ತೆಗೆದುಕೊಳ್ಳಬಾರದು. ಆದೇಶವನ್ನು ಎಲ್ಲರೂ ಪರಿಪಾಲನೆ ಮಾಡಬೇಕು. ಆಗ ಎಲ್ಲದಕ್ಕೂ ಪರಿಹಾರ ದೊರೆಯುತ್ತದೆ. ಉತ್ತರಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಇದೇ ರೀತಿಯ ಪಾಲನೆ ಆಗುತ್ತಿದೆ ಎಂದು ತಿಳಿಸಿದರು.
ಅನಧಿಕೃತವಾಗಿರುವ ಲೌಡ್​ಸ್ಪೀಕರ್​ಗಳ ಕುರಿತಾಗಿ ಅನುಮತಿ ಪಡೆಯಲು 15 ಅಥವಾ 1 ತಿಂಗಳಲ್ಲಿ ಅರ್ಜಿ ಆಹ್ವಾನಿಸಲಾಗುವುದು ಎಂದು ಅವರು ತಿಳಿಸಿದ್ದು, ಈ ವಿಷಯವಾಗಿ ಇಂದು ಅಥವಾ ನಾಳೆ ಸುತ್ತೋಲೆ ಹೊರಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಒಂದು ಮುತ್ತಿನ ಕಥೆ: ಮದುವೆಯಂತೂ ತ್ವರಿತ, ಅದು ಬಿಂದುವಲ್ಲ ಹರಿತ!; ಖ್ಯಾತ ನಟನ ಸ್ಪಷ್ಟೀಕರಣ..

ಅಲ್ಲೊಂದು ಕೆರೆ, ಇಲ್ಲೊಂದು ಕೆರೆ; ಎರಡೂ ಕಡೇ ಒಂದೇ ಥರದ ಸಾವು: ಸತ್ತವರಿಬ್ಬರಿಗೂ ಒಂದು ಸಾಮ್ಯತೆ!

Sign in to your account
Please enter an answer in digits:2 × 5 =
Remember me
