ಬೆಳಗಾವಿ:ರಾಜ್ಯದಲ್ಲಿ ಕರೊನಾದ ಆತಂಕ ಇಲ್ಲದಿರುವುದರಿಂದ ಹೊಸ ವರ್ಷದ ಸಂಭ್ರಮಾಚರಣೆಗೆ ಯಾವುದೇ ನಿರ್ಬಂಧ ವಿಧಿಸದಿರಲು ನಿರ್ಧರಿಸಿರುವ ಸರ್ಕಾರ, ಕೆಲ ಷರತ್ತುಗಳನ್ನು ಮಾತ್ರ ವಿಧಿಸಲು ಮುಂದಾಗಿದೆ. ಕಂದಾಯ ಸಚಿವ ಆರ್. ಅಶೋಕ್ ಹಾಗೂ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ನೇತೃತ್ವದಲ್ಲಿ ಕಂದಾಯ ಇಲಾಖೆ ವಿಪತ್ತು ನಿರ್ವಹಣೆ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳ ಸಭೆ ನಡೆಸಲಾಯಿತು. ರಾಜ್ಯದಲ್ಲಿ ಕರೊನಾ ವ್ಯಾಪಿಸುವ ಆತಂಕವಿಲ್ಲದಿದ್ದರೂ ಮುನ್ನೆಚ್ಚರಿಕೆ ಸಲುವಾಗಿ ಮಾಸ್ಕ್ ಕಡ್ಡಾಯ ಮಾಡಲಾಗುತ್ತಿದೆ. ಆದರೆ, ಮಾಸ್ಕ್ ಹಾಕದೆ ಇರುವವರಿಗೆ
ಯಾವುದೇ ದಂಡ ಹಾಕದೆ ಜಾಗೃತಿ ಮೂಡಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಮುನ್ನೆಚ್ಚರಿಕೆಯಾಗಿ ಸರ್ಕಾರ ಕೆಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ರಾಜ್ಯದಲ್ಲಿ ಆರೋಗ್ಯ ಮೂಲಸೌಕರ್ಯ ಎಷ್ಟರ ಮಟ್ಟಿಗೆ ಇದೆ ಎಂಬುದನ್ನು ಸಚಿವದ್ವಯರು ಪರಿಶೀಲನೆ ನಡೆಸಿದರು. ಬೂಸ್ಟರ್ ಡೋಸ್ ಕಡ್ಡಾಯವಿಲ್ಲ: ರಾಜ್ಯದಲ್ಲಿ ಕೋವಿಡ್ ಲಸಿಕೆ ಎರಡು ಡೋಸ್​ನಲ್ಲಿ ಶೇ.100 ರಷ್ಟು ಸಾಧನೆ ಮಾಡಲಾಗಿದೆ. ಶೇ.20 ರಷ್ಟು ಜನ ಮಾತ್ರ ಬೂಸ್ಟರ್ ಡೋಸ್ ಪಡೆದಿದ್ದಾರೆ. ಬೂಸ್ಟರ್ ಡೋಸ್ ಪಡೆಯುವುದು ಕಡ್ಡಾಯವಲ್ಲ. ಪಡೆದರೆ ಒಳ್ಳೆಯದು ಎಂಬ ಕಾರಣದಿಂದ ಮಂಗಳವಾರದಿಂದಲೇ ರಾಜ್ಯದಲ್ಲಿ ಬೂಸ್ಟರ್ ಡೋಸ್ ನೀಡುವ ಕಾರ್ಯ ನಡೆಯಲಿದೆ ಎಂದು ಸಚಿವ ಡಾ.ಕೆ. ಸುಧಾಕರ್ ತಿಳಿಸಿದರು.
ಆರೋಗ್ಯ ಮೂಲಸೌಕರ್ಯ:ರಾಜ್ಯದಲ್ಲಿ ಕರೊನಾ ಬಂದ ನಂತರ ಸರ್ಕಾರಿ ವಲಯದ ಆರೋಗ್ಯ ಕ್ಷೇತ್ರದಲ್ಲಿ ಮೂಲಸೌಕರ್ಯ ಹೆಚ್ಚಿಸಲಾಗಿದೆ. ಹಿಂದೆ ಐಸಿಯು ವೆಂಟಿಲೇಟರ್ 725 ಇದ್ದದ್ದು ಈಗ 2,896ಕ್ಕೆ ಹೆಚ್ಚಿಸಲಾಗಿದೆ. ಆಕ್ಸಿಜನ್ ಬೆಡ್​ಗಳು 4,847 ರಿಂದ 28,206ಕ್ಕೆ ಏರಿಸಲಾಗಿದೆ. ಮಕ್ಕಳ ಹಾಸಿಗೆ 255 ರಿಂದ 427ಕ್ಕೆ ಹೆಚ್ಚಿಸಲಾಗಿದೆ. ಮಕ್ಕಳ ಎನ್​ಐಸಿಯು ಹಾಸಿಗೆಗಳು ಹಿಂದೆ ಇರಲಿಲ್ಲ ಈಗ 593 ಇವೆ. ಒಟ್ಟಾರೆ ಹಾಸಿಗೆಗಳು 50,818ಕ್ಕೆ ಹೆಚ್ಚಾಗಿದೆ. ಎಂಬಿಬಿಎಸ್ ಮಾಡಿದ ವೈದ್ಯರು 2,391, ತಜ್ಞರು 2387 ಜನರಿದ್ದಾರೆ. ಸ್ಟಾಫ್ ನರ್ಸ್​ಗಳು 8,187, ಲ್ಯಾಬ್ ಟೆಕ್ನಿಷಿಯನ್ 2,967 ಜನ ಇದ್ದಾರೆ. ಆಕ್ಸಿಜನ್ ದಾಸ್ತಾನು 1,191 ಮೆಟ್ರಿಕ್ ಟನ್​ಗೆ ಹೆಚ್ಚಿಸಲಾಗಿದೆ ಎಂದು ಸಚಿವ ಸುಧಾಕರ್ ವಿವರಿಸಿದರು.
ಸಭೆ-ಸಮಾರಂಭ ನಿಷೇಧವಿಲ್ಲ:ರಾಜ್ಯದಲ್ಲಿ ರಾಜಕೀಯ ಪಕ್ಷಗಳ ಸಭೆ-ಸಮಾರಂಭಗಳಿಗೆ ನಿಷೇಧವಿಲ್ಲ. ಆದರೆ, ಮಾಸ್ಕ್ ಧರಿಸುವುದನ್ನು ಕಡ್ಡಾಯವಾಗಿರುವಂತೆ ಸಂಘಟಕರು ನೋಡಿಕೊಳ್ಳಬೇಕು ಎಂದು ಸಚಿವ ಸುಧಾಕರ್ ಸ್ಪಷ್ಟಪಡಿಸಿದರು.
ಸಚಿವ ಸಂಪುಟದಲ್ಲಿ ಕರೊನಾ ಸಾಂಕ್ರಾಮಿಕದ ಬರ್ಗೆ ರ್ಚಚಿಸಲಾಗಿದೆ. ಜನರಲ್ಲಿ ಜಾಗೃತಿ ಮೂಡಿಸುವುದು, ಬೂಸ್ಟರ್ ಡೋಸ್ ಹೆಚ್ಚಿಸುವುದು, ಐಎಲ್​ಐ ಮತ್ತು ಸಾರಿ ಕೇಸ್​ಗಳ ಮೇಲೆ ನಿಗಾ, ಜನದಟ್ಟಣೆ ಸ್ಥಳದಲ್ಲಿ ಮಾಸ್ಕ್​ಗಳ ಧಾರಣೆ, ಒಳಾಂಗಣಗಳಲ್ಲಿ ಮಾಸ್ಕ್ ಕಡ್ಡಾಯ ಬಗ್ಗೆ ತಜ್ಞರ ಸಮಿತಿಯೊಂದಿಗೆ ಸಭೆ ನಡೆಸಿ, ಹಂತ ಹಂತವಾಗಿ ನಿಯಮಗಳನ್ನು ಜಾರಿಗೆ ತರಲಾಗುವುದು.
|ಬಸವರಾಜ ಬೊಮ್ಮಾಯಿಮುಖ್ಯಮಂತ್ರಿ
ಇಂದು ಆಸ್ಪತ್ರೆಗಳಲ್ಲಿ ಸನ್ನದ್ಧತೆ ಪರಿಶೀಲನೆ:ಜಾಗತಿಕವಾಗಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಬೆನ್ನಲ್ಲೇ ಭಾರತದಲ್ಲೂ ನಿಗಾ ವಹಿಸಲಾಗುತ್ತಿದೆ. ಸೋಂಕು ವ್ಯಾಪಿಸಿದ್ದೇ ಆದಲ್ಲಿ, ಚಿಕಿತ್ಸೆಗೆ ಆಸ್ಪತ್ರೆಗಳಲ್ಲಿರುವ ವ್ಯವಸ್ಥೆಯ ಸನ್ನದ್ಧತೆ ಪರಿಶೀಲನೆ (ಮಾಕ್ ಡ್ರಿಲ್) ಮಂಗಳವಾರ ಬೆಂಗಳೂರು ಸೇರಿ ದೇಶಾದ್ಯಂತ ನಡೆಯಲಿದೆ. ಆಮ್ಲಜನಕ ಘಟಕ, ಆಮ್ಲಜನಕ ಉತ್ಪಾದನೆ, ಮೀಸಲು ಹಾಸಿಗೆಗಳು, ಐಸಿಯು ವ್ಯವಸ್ಥೆ, ವೈದ್ಯರು, ನರ್ಸಿಂಗ್ ಸ್ಟಾಫ್ ಮೊದಲಾದವುಗಳ ಸನ್ನದ್ಧತೆಯನ್ನು ಪರಿಶೀಲನೆ ಮಾಡಲಾಗುತ್ತದೆ.
ಒಂದೇ ರೂಲ್ಸ್:ಇಡೀ ರಾಜ್ಯಕ್ಕೆ ಏಕರೂಪದ ನಿಯಮಗಳಿರುತ್ತವೆ, ಬೆಂಗಳೂರಿಗೆ ಪ್ರತ್ಯೇಕ ನಿಯಮಗಳು ಇರುವುದಿಲ್ಲ ವೆಂದು ಕಂದಾಯ ಸಚಿವ ಆರ್. ಅಶೋಕ್ ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದರು.
13 ವಿದೇಶ ಪ್ರಯಾಣಿಕರಲ್ಲಿ ಸೋಂಕು ಪತ್ತೆ:ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕಳೆದೊಂದು ತಿಂಗಳಿಂದ (ನ.22 ರಿಂದ ಡಿ.23ರ ವರೆಗೆ) ಆಗಮಿಸಿರುವ ಪ್ರಯಾಣಿಕರಲ್ಲಿ 13 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಇವರ ಸ್ಯಾಂಪಲ್​ಗಳನ್ನು ಜಿನೋಮಿಕ್ ಸೀಕ್ವೆನ್ಸಿಂಗ್​ಗೂ ಕಳುಹಿಸಲಾಗಿದ್ದು, ಆರೋಗ್ಯ ಇಲಾಖೆ ವರದಿಯ ನಿರೀಕ್ಷೆಯಲ್ಲಿದೆ. 31 ವಿಮಾನಗಳಲ್ಲಿ ಆಗಮಿಸಿದ್ದ 6,110 ಪ್ರಯಾಣಿಕರ ಪೈಕಿ ಸೋಂಕು ಲಕ್ಷಣ ಹೊಂದಿದ್ದ 119 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ಪೈಕಿ 13 ಜನರಲ್ಲಿ ಕೋವಿಡ್ ಸೋಂಕು ವರದಿಯಾಗಿದೆ. ಅದೇ ರೀತಿ ಮಂಗಳೂರು ವಿಮಾನ ನಿಲ್ದಾಣದಲ್ಲಿ 6 ವಿಮಾನಗಳಲ್ಲಿ ಬಂದಿಳಿದಿದ್ದ 723 ಪ್ರಯಾಣಿಕರಲ್ಲಿ 17 ಮಂದಿಯ ಸ್ಯಾಂಪಲ್ ಪಡೆಯಲಾಗಿತ್ತು. ಸೋಂಕು ಪ್ರಕರಣ ದೃಢಪಟ್ಟಿಲ್ಲ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ರಾಜ್ಯದ ಶಾಲೆ ಮತ್ತು ಕಾಲೇಜುಗಳಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು, ಸ್ಯಾನಿಟೈಜರ್ ಬಳಕೆ ಕಡ್ಡಾಯ ಮಾಡಲಾಗಿದೆ. ಅಗತ್ಯಬಿದ್ದರೆ ಕೊಠಡಿಗೂ ಸ್ಯಾನಿಟೈಸ್ ಮಾಡಿಸಬೇಕೇ ಹೊರತು ಕಡ್ಡಾಯವೇನೂ ಅಲ್ಲ ಎಂದು ಸಚಿವ ಅಶೋಕ್ ತಿಳಿಸಿದರು. ಅಧಿಕಾರಿಗಳ ತಂಡ ಆಸ್ಪತ್ರೆಗಳಲ್ಲಿ ಹಾಸಿಗೆ ವ್ಯವಸ್ಥೆ, ಆಕ್ಸಿಜನ್ ವ್ಯವಸ್ಥೆ ಎಷ್ಟಿದೆ ಎಂಬುದನ್ನು ಕಾಲಕಾಲಕ್ಕೆ ಪರಿಶೀಲನೆ ನಡೆಸಬೇಕು ಎಂಬ ಸೂಚನೆ ನೀಡಲಾಗಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಶೇ.2 ರಷ್ಟು ರ್ಯಾಂಡಂ ಪರೀಕ್ಷೆ ಮಾಡಲಾಗುತ್ತಿದ್ದು, ಸೋಂಕಿತರಿಗೆ ಬೆಂಗಳೂರಿನ ಬೌರಿಂಗ್ ಹಾಗೂ ಮಂಗಳೂರಿನ ವೆನ್​ಲಾಕ್ ಆಸ್ಪತ್ರೆಯಲ್ಲಿ ಹಾಸಿಗೆ ಮೀಸಲಿರಿಸಲಾಗಿದೆ. ಅಂತಹವರನ್ನು ಕ್ವಾರಂಟೈನ್ ಮಾಡಲಾಗುತ್ತದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ವಿವರಿಸಿದರು.
ಬಿಎಫ್.7 ಪತ್ತೆಯಾಗಿಲ್ಲ:ರಾಜ್ಯದಲ್ಲಿ ಈವರೆಗೂ ಬಿಎಫ್.7 ಸೋಂಕು ಪತ್ತೆಯಾಗಿಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಸ್ಪಷ್ಟಪಡಿಸಿದ್ದಾರೆ. ದೇಶದಲ್ಲಿ ಈಗಾಗಲೇ ಬಿಎಫ್.7 ರೂಪಾಂತರ ತಳಿ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಆಗಮಿಸಿರುವ, ಸೋಂಕು ದೃಢಪಟ್ಟಿರುವ ವಿದೇಶ ಪ್ರಯಾಣಿಕರ ಮಾದರಿಗಳನ್ನು ಜಿನೋಮಿಕ್ ಸೀಕ್ವೆನ್ಸಿಂಗ್ ನಡೆಸಲಾಗುತ್ತಿದೆ ಎಂದು ಟ್ವೀಟ್​ನಲ್ಲಿ ತಿಳಿಸಿದ್ದಾರೆ.


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two − 2 =
Remember me
