ನವದೆಹಲಿ:ಕಳೆದ ಐದು ದಿನಗಳಿಂದ ಸಿಎಂ ಸ್ಥಾನಕ್ಕಾಗಿ ನಡೆದ ಹಗ್ಗಜಗ್ಗಾಟಕ್ಕೆ ಇಂದು ಅಂತಿಮ ತೆರೆಬಿದ್ದಿದೆ. ಮುಂದಿನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್​ ಆಯ್ಕೆಯಾಗಿದ್ದು, ಇಂದು ಅಧಿಕೃತವಾಗಿ ಘೋಷಣೆಯಾಗಿದೆ. ಕಳೆದ ಐದು ದಿನಗಳಿಂದ ಸಿಎಂ ಸ್ಥಾನಕ್ಕೆ ಪಟ್ಟುಹಿಡಿದಿದ್ದ ಡಿಕೆಶಿ ಅವರ ಮನವೊಲಿಸುವಲ್ಲಿ ಕಾಂಗ್ರೆಸ್​ ಅಧಿನಾಯಕಿ ಸೋನಿಯಾ ಗಾಂಧಿ ಪಾತ್ರ ಇಲ್ಲಿ ಬಹುಮುಖ್ಯವಾಗಿದೆ. ರಾಹುಲ್​ ಗಾಂಧಿ ಮಾತಿಗೂ ಒಪ್ಪದ ಡಿಕೆಶಿ ಅಂತಿಮವಾಗಿ ಸೋನಿಯಾ ಗಾಂಧಿ ಮಾತಿಗೆ ಕರಗಿ ಸಿಎಂ ರೇಸ್​ನಿಂದ ಹಿಂದೆ ಸರಿದಿದ್ದಾರೆ.
ಸೋನಿಯಾ ಗಾಂಧಿ ಅವರು ಸದ್ಯ ಹಿಮಾಚಲ ಪ್ರದೇಶದ ಪ್ರವಾಸದಲ್ಲಿದ್ದಾರೆ. ಕಳೆದ ಐದು ದಿನಗಳಿಂದ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್​ ಅವರು ಸಿಎಂ ಸ್ಥಾನಕ್ಕಾಗಿ ದೆಹಲಿಯಲ್ಲಿ ಶತಪ್ರಯತ್ನ ನಡೆಸಿದರು. ಅಂತಿಮವಾಗಿ ಇದರಲ್ಲಿ ಸಿದ್ದರಾಮಯ್ಯಗೆ ಗೆಲುವಾಗಿದೆ. ಹಾಗಂತ ಐದು ವರ್ಷವೂ ಸಿದ್ದರಾಮಯ್ಯ ಅವರೇ ಸಿಎಂ ಆಗಿರುವುದಿಲ್ಲ. ಬದಲಿಗೆ ಅಧಿಕಾರ ಹಂಚಿಕೆ ಸೂತ್ರದ ಅಡಿಯಲ್ಲಿ ಸಿದ್ದು ಮತ್ತು ಡಿಕೆಶಿ ನಡುವೆ ಸಿಎಂ ಸ್ಥಾನ ಹಂಚಿಕೆಯಾಗಲಿದೆ. ಈ ಒಂದು ಭರವಸೆ ಮೇಲೆ ಡಿಕೆಶಿ ಸಿಎಂ ಸ್ಥಾನದ ರೇಸ್​ನಿಂದ ಹಿಂದೆ ಸರಿದಿದ್ದಾರೆ ಎಂದು ತಿಳಿದುಬಂದಿದೆ. ಸ್ವತಃ ಸೋನಿಯಾ ಗಾಂಧಿಯವರೇ ಈ ಭರವಸೆ ನೀಡಿದ್ದಾರೆ ಎಂದು ಕಾಂಗ್ರೆಸ್​ನ ಉನ್ನತ ಮೂಲಗಳು ತಿಳಿಸಿವೆ.
ಇದನ್ನೂ ಓದಿ:ಕನ್ನಡಿಗರ ಹಿತ ರಕ್ಷಣೆಗೆ ನಮ್ಮ ಕೈಗಳು ಸದಾ ಒಂದಾಗಿರಲಿವೆ: ಸಿದ್ದರಾಮಯ್ಯ
ಪಕ್ಷದ ಹಿತಾಸಕ್ತಿ ದೃಷ್ಟಿಯಿಂದ ಸಿಎಂ ಸ್ಥಾನವನ್ನು ಡಿಕೆಶಿ ತ್ಯಾಗ ಮಾಡಿರುವುದಾಗಿ ಅವರ ಆಪ್ತ ಮೂಲಗಳು ತಿಳಿಸಿವೆ. ಈ ಬಗ್ಗೆ ಮಾತನಾಡಿರುವ ಡಿಕೆಶಿ ಸಹೋದರ ಡಿ.ಕೆ. ಸುರೇಶ್​, ಕಾಂಗ್ರೆಸ್​ ಹಿರಿಯ ನಾಯಕರ ನಿರ್ಧಾರ ನಮಗೆ ಸಂತೋಷ ಉಂಟು ಮಾಡಿಲ್ಲ. ಆದರೆ, ರಾಜ್ಯದ ಹಿತಾದೃಷ್ಟಿಯಿಂದ ಈ ನಿರ್ಧಾರವನ್ನು ಒಪ್ಪಿಕೊಂಡಿದ್ದೇವೆ. ನನ್ನ ಅಣ್ಣ ಸಿಎಂ ಆಗಬೇಕೆಂಬ ಆಸೆ ಇತ್ತು ಎಂದು ಹೇಳಿದ್ದಾರೆ.
ಸಿಎಂ ಸ್ಥಾನಕ್ಕೆ ನಡೆದ ಸಾಕಷ್ಟು ಹಗ್ಗಜಗ್ಗಾಟದ ನಡುವೆ ನಿನ್ನೆ (ಮೇ 17) ಸಂಜೆ ಡಿಕೆಶಿ ಅವರಿಗೆ ಸೋನಿಯಾ ಗಾಂಧಿ ಅವರು ಮಾಡಿದ ಒಂದು ಕರೆ ಎಲ್ಲ ಗೊಂದಲಗಳಿಗೂ ತೆರೆಎಳೆದಿದೆ. ಸೋನಿಯಾ ಅವರ ಮಾತಿಗೆ ಕರಗಿದ ಡಿಕೆಶಿ, ಅಂತಿಮವಾಗಿ ಸಿಎಂ ರೇಸ್​ನಿಂದ ಹಿಂದೆ ಸರಿದು ಉಪಮುಖ್ಯಮಂತ್ರಿ ಸ್ಥಾನಕ್ಕೆ ಒಪ್ಪಿಕೊಂಡಿದ್ದಾರೆ.
ಹಾಗಾದರೆ ಸೋನಿಯಾ ಗಾಂಧಿ ಅವರು ಡಿಕೆಶಿಗೆ ಹೇಳಿದ್ದೇನು ಎಂಬುವುದನ್ನು ನೋಡುವುದಾದರೆ, ಕರ್ನಾಟಕದ ಚುನಾವಣೆ ಗೆಲುವಿನಲ್ಲಿ ನಿಮ್ಮ ಪಾತ್ರ ಏನು ಎಂಬುದು ನಮಗೆ ತಿಳಿದಿದೆ. ನನ್ನ ಜವಾಬ್ದಾರಿಯನ್ನು ನಿಭಾಯಿಸಲು ನಾನು ಇಲ್ಲಿ ಕುಳಿತಿದ್ದೇನೆ. ನೀವು ನಮ್ಮನ್ನೂ ಅರ್ಥ ಮಾಡಿಕೊಳ್ಳಬೇಕು. ಸಿದ್ದರಾಮಯ್ಯ ಅವರಿಗೆ ಎರಡೂವರೆ ವರ್ಷ ಅವಕಾಶ ಮಾಡಿಕೊಡಿ. ಅವಧಿ ಮುಗಿಯುತ್ತಿದ್ದಂತೆ ಅವರೇ ರಾಜೀನಾಮೆ ನೀಡಲಿದ್ದಾರೆ. ಮುಖ್ಯಮಂತ್ರಿ ಸ್ಥಾನದಲ್ಲಿ ಇದ್ದುಕೊಂಡೇ ಗೌರವಯುತವಾಗಿ ರಾಜಕೀಯಕ್ಕೆ ವಿದಾಯ ಹೇಳಲು ಬಯಸುತ್ತಿದ್ದಾರೆ. ಹೀಗಾಗಿ ಅವಕಾಶ ಮಾಡಿಕೊಡಿ. ಆ ಬಳಿಕ ಅಧಿಕಾರ ಹಸ್ತಾಂತರವಾಗಲಿದೆ. ನಿಮ್ಮ ನೇತೃತ್ವದಲ್ಲೇ ಲೋಕಸಭಾ ಚುನಾವಣೆಯು ಸಹ ನಡೆಯಲಿದೆ. ನೀವು ಬಯಸಿದ ಸ್ಥಾನ ನಿಮಗೆ ಬರಲಿದೆ. ಈ ಬಾರಿ ಒಂದು ಅವಕಾಶ ಬಿಟ್ಟುಕೊಡಿ ಎಂದು ಸೋನಿಯಾ ಗಾಂಧಿ ಹೇಳಿದ್ದು, ಈ ಮಾತಿಗೆ ಕರಗಿದ ಡಿಕೆಶಿ ಒಲ್ಲದ ಮನಸ್ಸಿನಿಂದ ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ:ಸಿದ್ದರಾಮಯ್ಯ ಸಿಎಂ, ಡಿಕೆಶಿ ಡಿಸಿಎಂ ಎಂದು ಅಧಿಕೃತ ಘೋಷಣೆ: ಉಪ ಮುಖ್ಯಮಂತ್ರಿ ಎಷ್ಟು ಜನ?
ಅಂದಹಾಗೆ ಶನಿವಾರ ನೂತನ ಸಿಎಂ ಆಗಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಆಗಿ ಡಿಕೆಶಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಕಂಠೀರವ ಕ್ರೀಡಾಂಗಣದಲ್ಲಿ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಡೆಯಲಿದೆ.(ಏಜೆನ್ಸೀಸ್​)
ಕಂಬಳ ಮತ್ತು ಜಲ್ಲಿಕಟ್ಟುಗೆ ಸುಪ್ರೀಂ ಕೋರ್ಟ್​ ಹಸಿರು ನಿಶಾನೆ

ಹೆಲ್ಮೆಟ್​ ಧರಿಸದ ಮಹಿಳಾ ಪಿಎಸ್​ಐ; ಟ್ವೀಟ್ ವೈರಲ್ ಆಗುತ್ತಿದ್ದಂತೆ ಪ್ರಕರಣ ದಾಖಲು, ದಂಡ ವಿಧಿಸಿದ ಪೊಲೀಸರು

ಬಸ್-ಟ್ರಕ್ ಡಿಕ್ಕಿ; ಮದುವೆ ಮನೆಗೆ ಹೊರಟಿದ್ದ 4 ಜನ ಮೃತ್ಯು, 14 ಮಂದಿಗೆ ಗಾಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 2 =
Remember me
