ಡಿಪಿಎನ್ ಶ್ರೇಷ್ಠಿ ಚಿತ್ರದುರ್ಗಕೋಟೆನಾಡು ಚಿತ್ರದುರ್ಗ ಎಸ್​ಸಿ ಮೀಸಲು ಕ್ಷೇತ್ರದಲ್ಲಿ ಕಾಂಗ್ರೆಸ್​ನಿಂದ ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಹಾಗೂ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಮಾಜಿ ಡಿಸಿಎಂ ಗೋವಿಂದ ಕಾರಜೋಳ ನಡುವೆ ಬಿರುಸಿನ ಸ್ಪರ್ಧೆ ಏರ್ಪಟ್ಟಿದೆ. ಬಿಜೆಪಿ ಅಳೆದೂ ತೂಗಿ ಅಭ್ಯರ್ಥಿ ಪ್ರಕಟಿಸಿದ್ದರೆ, ಕಾಂಗ್ರೆಸ್ ಕೂಡ ವಿಳಂಬ ನೀತಿ ಅನುಸರಿಸಿತ್ತು. ಈ ಮಧ್ಯೆ ಬಿಜೆಪಿ ಟಿಕೆಟ್ ಸಿಗದೆ ಬಂಡಾಯ ಸಾರಿದ ಎಂ.ಸಿ.ರಘುಚಂದನ್, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ನಡೆಸಿದ ಸಂಧಾನ ಸಭೆಯಲ್ಲಿ ಅಧಿಕೃತ ಅಭ್ಯರ್ಥಿಗೆ ಬೆಂಬಲಿಸುವುದಾಗಿ ತಿಳಿಸಿದ್ದಾರೆ. ಇನ್ನು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಡಾ.ಜೆ.ಜೆ. ಹಟ್ಟಿ ತಿಪ್ಪೇಸ್ವಾಮಿ ನಾಮಪತ್ರ ಸಲ್ಲಿಕೆ ಕೊನೇ ದಿನದವರೆಗೂ ಕಾದು ನೋಡುವುದಾಗಿ ಹೇಳಿರುವುದರಿಂದ ಕಣದಲ್ಲಿ ಒಂದಷ್ಟು ವ್ಯತ್ಯಾಸಗಳಾಗುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ. 1952ರ ಮೊದಲ ಚುನಾವಣೆಯಲ್ಲಿ ರಾಷ್ಟ್ರೀಯ ನಾಯಕ ಎಸ್. ನಿಜಲಿಂಗಪ್ಪ ಜಯದೊಂದಿಗೆ ಕ್ಷೇತ್ರ ಕಾಂಗ್ರೆಸ್ ವಶವಾಗಿತ್ತು. 2008ರ ಕ್ಷೇತ್ರ ಮರುವಿಂಗಡಣೆ ಬಳಿಕ 2009ರಲ್ಲಿ ಎಸ್​ಸಿಗೆ ಮೀಸಲಾಗಿ ಜನಾರ್ದನಸ್ವಾಮಿ ಗೆಲುವಿನೊಂದಿಗೆ ಬಿಜೆಪಿ ಖಾತೆ ತೆರೆಯಿತು. 2014ರಲ್ಲಿ ಜನಾರ್ದನಸ್ವಾಮಿ ಅವರನ್ನು ಕಾಂಗ್ರೆಸ್​ನ ಚಂದ್ರಪ್ಪ ಮಣಿಸಿದರು. 2019 ರಲ್ಲಿ ಕಾಂಗ್ರೆಸ್ಸಿನ ಚಂದ್ರಪ್ಪ ವಿರುದ್ಧ ಗೆದ್ದ ಬಿಜೆಪಿಯ ಎ.ನಾರಾಯಣಸ್ವಾಮಿ ಕ್ಷೇತ್ರವನ್ನು ಮರುವಶ ಮಾಡಿಕೊಂಡರು. ಕಳೆದ ಬಾರಿ ಎಸ್​ಸಿ ಎಡಗೈ ಸಮುದಾಯದ ಚಂದ್ರಪ್ಪ ವರ್ಸಸ್ ನಾರಾಯಣಸ್ವಾಮಿ ಎಂದಿದ್ದ ಜಿದ್ದಾಜಿದ್ದಿ, ಈ ಬಾರಿ ಸ್ಥಳೀಯ- ಪರಕೀಯ ಕೂಗಿನ ನಡುವೆ ಇದೇ ಸಮುದಾಯದ ಚಂದ್ರಪ್ಪ ವರ್ಸಸ್ ಕಾರಜೋಳ ಎಂದು ಬದಲಾಗಿದೆ.
ಪ್ರತಿಷ್ಠೆಯ ಕಣ:ಕಳೆದ ಬಾರಿ ಸೋಲಿನ ಕಹಿ ಉಂಡಿರುವ ಕಾಂಗ್ರೆಸ್​ಗೆ ಈ ಚುನಾವಣೆ ಪ್ರತಿಷ್ಠೆಯಾಗಿದೆ. ಗ್ಯಾರಂಟಿಗಳು, ಅಧಿಕ ಸಂಖ್ಯೆ ಶಾಸಕರ ಬಲವನ್ನು ಚಿಮ್ಮು ಹಲಗೆಯಾಗಿಸಿಕೊಂಡು ಗೆಲುವು ಗ್ಯಾರಂಟಿ ಮಾಡಿಕೊಳ್ಳಲು ತಂತ್ರ ರೂಪಿಸುತ್ತಿದೆ.ಕ್ಷೇತ್ರವನ್ನು ತನ್ನಲ್ಲಿಯೇ ಉಳಿಸಿಕೊಂಡು, ಪ್ರಧಾನಿ ಮೋದಿ ಅವರ ಕೈ ಬಲಪಡಿಸುವ ಇರಾದೆ ಬಿಜೆಪಿಯದು. ಎನ್​ಡಿಎ ಜನಪರ ಯೋಜನೆಗಳು, ಕೇಂದ್ರದ ಗ್ಯಾರಂಟಿ ಭರವಸೆಗಳು, ಪ್ರಧಾನಿ ಮೋದಿ ಹವಾ, ರಾಮಮಂದಿರ ನಿರ್ಮಾಣ ಹಾಗೂ ಜೆಡಿಎಸ್ ಮೈತ್ರಿಯ ಲಾಭ ಪಡೆದು ಕಮಲ ಅರಳಿಸುವ ವಿಶ್ವಾಸ ಬಿಜೆಪಿಯಲ್ಲಿದೆ.
ಕಾಂಗ್ರೆಸ್ ಶಾಸಕರು ಅಧಿಕ:ಎಂಟು ತಾಲೂಕುಗಳನ್ನು ಹೊಂದಿರುವ ಕ್ಷೇತ್ರದಲ್ಲಿ 7 ಕಾಂಗ್ರೆಸ್ ಶಾಸಕರಿದ್ದಾರೆ. ಪುತ್ರನಿಗೆ ಟಿಕೆಟ್ ಸಿಗದ ಕಾರಣಕ್ಕೆ ಮುನಿಸಿಕೊಂಡಿದ್ದ ಚಿತ್ರದುರ್ಗ ಜಿಲ್ಲೆಯ ಏಕೈಕ ಬಿಜೆಪಿ ಶಾಸಕ ಚಂದ್ರಪ್ಪ ಈಗ ತಣ್ಣಗಾಗಿದ್ದಾರೆ. ಕ್ಷೇತ್ರ ವ್ಯಾಪ್ತಿಯಲ್ಲಿ 1841937 ಮತದಾರರಿದ್ದಾರೆ. ಪುರುಷರು 919064 ಹಾಗೂ ಮಹಿಳೆಯರು 922769 ಹಾಗೂ ಇತರೆ 104 ಮತದಾರರು ಇದ್ದಾರೆ.
ಬಸವನಾಡಿನಲ್ಲಿ ಜನಿಸಿದ ನನಗೆ ಬಸವ ತತ್ವದಲ್ಲಿ ಅಪಾರ ನಂಬಿಕೆಯಿದೆ. ನಿಮ್ಮ ಅನುಭವದ ಅಗತ್ಯವಿದೆ, ಈ ಬಾರಿ ಸಂಸತ್ತಿಗೆ ಸ್ಪರ್ಧಿಸಿ ಎಂದು ಹಿರಿಯ ನಾಯಕರು ಸೂಚಿಸಿದ್ದಾರೆ. ಪಕ್ಷದ ಶಿಸ್ತಿನ ಸಿಪಾಯಿಯಾಗಿ ವರಿಷ್ಠರ ಆಣತಿ ಮೀರುವ ಶಕ್ತಿ ನನಗಿಲ್ಲ. ಮೋದಿ ಅವರಿಂದಾಗಿ ಕಳೆದ 10 ವರ್ಷಗಳಲ್ಲಿ ದೇಶದಲ್ಲಿ ಅಭಿವೃದ್ಧಿ ಕಾರ್ಯಗಳು ದುಪ್ಪಟ್ಟಾಗಿವೆ.
| ಗೋವಿಂದ ಕಾರಜೋಳ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ
ಕಾಂಗ್ರೆಸ್ಸಿಗೆ ಉಲ್ಲಾಸಭರಿತ ವಾತಾವರಣವಿದೆ. ಅಧಿಕಾರಾವಧಿಯಲ್ಲಿ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಿದ ತೃಪ್ತಿ ಇದೆ. ಗೆದ್ದಾಗ, ಸೋತಾಗ ಕ್ಷೇತ್ರದ ನಂಟು ಬಿಟ್ಟಿಲ್ಲ. ರಾಜ್ಯ ಸರ್ಕಾರದ ಗ್ಯಾರಂಟಿಗಳು, ಪಕ್ಷದ ಜಾತ್ಯತೀತ ನಿಲುವು, ಕಾರ್ಯಕರ್ತರು, ಜನರ ಉತ್ಸಾಹದ ಬಗ್ಗೆ ವಿಶ್ವಾಸವಿದೆ. ನನ್ನ ನಡವಳಿಕೆ ಬಗ್ಗೆ ಜನಮೆಚ್ಚುಗೆ ಇದೆ.
| ಬಿ.ಎನ್.ಚಂದ್ರಪ್ಪ ಕಾಂಗ್ರೆಸ್ ಅಭ್ಯರ್ಥಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × four =
Remember me
