ಬೆಂಗಳೂರು:ವಿಮೆ ಮಾಡಿಸಲಾಗಿದ್ದ ವಾಹನವನ್ನು ನಿಲುಗಡೆ ಮಾಡಿದ್ದ ಸಂದರ್ಭದಲ್ಲಿ ಕರ್ತವ್ಯನಿರತ ಚಾಲಕ ಹೃದಯಾಘಾತದಿಂದ ಮೃತಪಟ್ಟರೆ, ಘಟನೆ ಸಂದರ್ಭದಲ್ಲಿ ವಾಹನ ಬಳಕೆಯಲ್ಲಿರಲಿಲ್ಲ ಎಂಬ ಕಾರಣ ನೀಡಿ ಪರಿಹಾರ ನೀಡುವ ಹೊಣೆಗಾರಿಕೆಯಿಂದ ಇನ್ಶೂರೆನ್ಸ್ ಕಂಪನಿ ನುಣುಚಿಕೊಳ್ಳಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ.
ಹೃದಯಾಘಾತದಿಂದ ಮೃತಪಟ್ಟಿದ್ದ ಟಿಪ್ಪರ್ ಲಾರಿ ಚಾಲಕ ಈರಣ್ಣ ಎಂಬುವರ ಉತ್ತರಾಧಿಕಾರಿಗಳಿಗೆ 3 ಲಕ್ಷ ರೂ. ಪರಿಹಾರ ನೀಡುವಂತೆ ಕಾರ್ವಿುಕ ಆಯುಕ್ತರು 2009ರಲ್ಲಿ ನೀಡಿದ್ದ ಆದೇಶ ಪ್ರಶ್ನಿಸಿ ನ್ಯಾಷನಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್ ಸಲ್ಲಿಸಿದ್ದ ಮೇಲ್ಮನವಿ ವಜಾಗೊಳಿಸಿರುವ ನ್ಯಾಯಮೂರ್ತಿ ಎಚ್.ಪಿ.ಸಂದೇಶ್ ಅವರಿದ್ದ ಪೀಠ ಈ ಆದೇಶ ಮಾಡಿದೆ.
ನಿಂತಿದ್ದ ವಾಹನದಲ್ಲೇ ಸಾವು:ಲಾರಿ ಚಾಲಕ ಈರಣ್ಣ ಸುರತ್ಕಲ್ ಸಮೀಪದ ಇದ್ಯಾ ಗ್ರಾಮದಲ್ಲಿ ಪೆಟ್ರೋಲ್ ಬಂಕ್​ವೊಂದರ ಬಳಿ ವಾಹನ ನಿಲ್ಲಿಸಿಕೊಂಡಿದ್ದರು. ಆಗ ಹೃದಯಾಘಾತವಾಗಿ ವಾಹನದಲ್ಲೇ ಮೃತಪಟ್ಟಿದ್ದರು. ಈರಣ್ಣನ ಅಪ್ರಾಪ್ತ್ತ ಮಕ್ಕಳು ಪರಿಹಾರ ಕೋರಿ ಕಾರ್ವಿುಕ ಆಯುಕ್ತರ ಮುಂದೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಆಯುಕ್ತರು, ಶೇ.12ರ ಬಡ್ಡಿ ಸಹಿತ 3,03,620 ರೂ. ಪರಿಹಾರ ಪಾವತಿಸುವಂತೆ 2009ರ ಆ.20ರಂದು ವಿಮಾ ಕಂಪನಿಗೆ ಆದೇಶಿಸಿದ್ದರು. ಈ ಆದೇಶ ವಿರುದ್ಧ ಇನ್ಶೂರೆನ್ಸ್ ಕಂಪನಿ ಹೈಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿತ್ತು.
ಕಂಪನಿ ವಾದವೇನು?:ಪ್ರಕರಣದಲ್ಲಿ ಲಾರಿ ಚಾಲಕ ಹೃದಯಾಘಾತದಿಂದ ಮೃತಪಟ್ಟಿದ್ದು, ಆ ಸಂದರ್ಭದಲ್ಲಿ ವಾಹನ ಬಳಕೆಯಲ್ಲಿರಲಿಲ್ಲ. ನಿಲುಗಡೆ ಮಾಡಲಾಗಿದ್ದ ವಾಹನದಲ್ಲಿದ್ದಾಗ ಸಾವು ಸಂಭವಿಸಿದೆ. ಲಾರಿ ಮಾಲೀಕರು ನೀಡಿರುವ ದೂರಿನಲ್ಲಿ ಚಾಲಕನಿಗೆ ಪ್ರತಿದಿನ ಮದ್ಯಪಾನ ಮಾಡುವ ಅಭ್ಯಾಸವಿತ್ತು ಎಂದು ತಿಳಿಸಿದ್ದಾರೆ. ಆದ್ದರಿಂದ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ವಿಮಾ ಕಂಪನಿ ವಾದಿಸಿತ್ತು.
ದಾಖಲೆ ಪರಿಶೀಲಿಸಿದರೆ, ಚಾಲಕ ಕರ್ತವ್ಯದಲ್ಲಿ ಇಲ್ಲದ ಸಂದರ್ಭದಲ್ಲಿ ಮೃತಪಟ್ಟಿದ್ದಾನೆಂದು ವಿಮಾ ಕಂಪನಿ ಹೇಳುತ್ತಿಲ್ಲ. ಕೆಲಸದಲ್ಲಿದ್ದಾಗಲೇ ಆತ ಮೃತಪಟ್ಟಿದ್ದಾನೆಂದು ಸಂಸ್ಥೆ ಒಪ್ಪಿಕೊಳ್ಳುತ್ತದೆ. ಚಾಲಕ ಮಾದಕ ದ್ರವ್ಯ ಸೇವಿಸುತ್ತಿದ್ದನೆಂದು ಕಂಪನಿ ಆರೋಪಿಸಿದೆ. ಆದರೆ, ಆತ ಮಾದಕ ದ್ರವ್ಯ ಸೇವಿಸುತ್ತಿದ್ದ ಅಥವಾ ಮದ್ಯಪಾನ ಮಾಡಿದ್ದ ಎಂಬುದನ್ನು ಸಾಬೀತುಪಡಿಸಲು ಯಾವುದೇ ಸಾಕ್ಷ್ಯವಿಲ್ಲ. ಮರಣೋತ್ತರ ಪರೀಕ್ಷೆಯಲ್ಲೂ ಆ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಚಾಲಕನದ್ದು ಸಹಜ ಸಾವು. ಆದ್ದರಿಂದ ಪರಿಹಾರ ನೀಡುವ ಹೊಣೆಗಾರಿಕೆ ಇಲ್ಲ ಎಂಬ ಕಂಪನಿಯ ವಾದವನ್ನು ಒಪ್ಪಲಾಗದು. ಕೆಲಸ ನಿರ್ವಹಣೆಯಲ್ಲಿ ಎದುರಾಗಬಹುದಾದ ಅಪಾಯಗಳನ್ನು ಗಮನದಲ್ಲಿಟ್ಟುಕೊಂಡು ವಿಮೆ ಮಾಡಿಸಲಾಗಿರುತ್ತದೆ. ಚಾಲಕ ಮೃತಪಟ್ಟಾಗ ಆತ ಕೆಲಸದ ಮೇಲಿದ್ದ ಎಂದು ಮಾಲೀಕರೂ ಒಪ್ಪಿಕೊಂಡಿದ್ದಾರೆ. ಆದ್ದರಿಂದ ಪರಿಹಾರ ಪಾವತಿಸಲೇಬೇಕು ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಕಾರ್ವಿುಕ ಆಯುಕ್ತರ ಆದೇಶವನ್ನು ಎತ್ತಿಹಿಡಿದಿದೆ.
ಇಂಡಿಯಾ ಟಾಪ್‌ 10 ಹೀರೋಗಳ ಪಟ್ಟಿ ಬಿಡುಗಡೆ: ದಳಪತಿಗೆ ಅಗ್ರಸ್ಥಾನ, ರಾಕಿ ಭಾಯ್‌ಗೆ…!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + 3 =
Remember me
