ಕರ್ನಾಟಕ, ಕೇರಳ, ಗುಜರಾತ್, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಲ್ಲಿ ಹರಡಿರುವ ಪಶ್ಚಿಮಘಟ್ಟಗಳ ಪರಿಸರಸೂಕ್ಷ್ಮ ಪ್ರದೇಶಗಳನ್ನು ರಕ್ಷಿಸುವುದಕ್ಕೆ ಸಂಬಂಧಿಸಿದಂತೆ ಪೊ›. ಮಾಧವ ಗಾಡ್ಗೀಳ್ (2011) ಮತ್ತು ಡಾ. ಕೆ. ಕಸ್ತೂರಿರಂಗನ್ (2013) ಸಮಿತಿಗಳು ನೀಡಿದ್ದ ವರದಿಗಳನ್ನು ಅನುಷ್ಠಾನಗೊಳಿಸುವುದು ಎಷ್ಟು ಅವಶ್ಯ ಎಂಬುದು ಜನರಿಗೆ ಈಗ ಅರಿವಾಗತೊಡಗಿದೆ. ಪರಿಸರಕ್ಕೆ ಎಸಗುವ ಹಾನಿ ಎಷ್ಟು ದುಬಾರಿಯಾಗಿ ಪರಿಣಮಿಸುತ್ತದೆ ಎಂಬುದಕ್ಕೆ ಇತ್ತೀಚೆಗೆ ಸಂಭವಿಸಿರುವ ಸಾಲುಸಾಲು ದುರಂತಗಳೇ ನಿದರ್ಶನವಾಗಿವೆ. ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೂಕುಸಿತದ ದುರಂತ, ಪ್ರಕೃತಿಯೆದುರು ಮನುಷ್ಯ ಎಷ್ಟು ಅಸಹಾಯಕ ಎಂಬುದನ್ನು ದರ್ಶಿಸಿದೆ. ಈ ಘಟನೆ ಹಲವು ಹಳ್ಳಿಗಳನ್ನೇ ಆಪೋಶನ ಪಡೆದುಕೊಂಡಿದ್ದು, 300ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. 200ಕ್ಕಿಂತಲೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ.
ವಯನಾಡು, ಕರ್ನಾಟಕದ ಶಿರಾಡಿ ಘಾಟ್ ಸೇರಿದಂತೆ ಹಲವೆಡೆ ಭೂಕುಸಿತ, ಗುಡ್ಡಜರಿತ ಘಟನೆಗಳು ಮೇಲಿಂದಮೇಲೆ ಸಂಭವಿಸುತ್ತಿರುವುದು ಸರ್ಕಾರಗಳ ಕಣ್ತೆರೆಸುತ್ತಿವೆ. ಕೇರಳದ 14 ಜಿಲ್ಲೆಗಳ ಪೈಕಿ 12 ಜಿಲ್ಲೆಗಳಲ್ಲಿರುವ 123 ಹಳ್ಳಿಗಳ ವ್ಯಾಪ್ತಿಯ 13,108 ಚದರ ಕಿಲೋಮೀಟರ್ ಭೂಪ್ರದೇಶವನ್ನು ಪರಿಸರಸೂಕ್ಷ್ಮ ಭೂಪ್ರದೇಶವಾಗಿ ಪರಿಗಣಿಸಬೇಕು ಎಂದು ಕಸ್ತೂರಿ ರಂಗನ್ ವರದಿ ಶಿಫಾರಸು ನೀಡಿತ್ತು. ಈ 123 ಹಳ್ಳಿಗಳ ಪೈಕಿ 60 ಹಳ್ಳಿಗಳು ಇಡುಕ್ಕಿ ಮತ್ತು ವಯನಾಡ್ ಜಿಲ್ಲಾ ವ್ಯಾಪ್ತಿಯಲ್ಲಿವೆ ಎಂಬುದು ಗಮನಾರ್ಹ. ಕೇಂದ್ರದ ಪರಿಸರ ಮತ್ತು ಅರಣ್ಯ ಸಚಿವಾಲಯವು ಕಸ್ತೂರಿ ರಂಗನ್ ವರದಿ ಜಾರಿ ಸಂಬಂಧ ಈವರೆಗೆ ಐದು ಬಾರಿ ಕರಡು ಅಧಿಸೂಚನೆ ಪ್ರಕಟಿಸಿ, ಆಕ್ಷೇಪಗಳನ್ನು ಆಹ್ವಾನಿಸಿದೆ. ಆದರೆ, ಪ್ರತಿ ಬಾರಿಯೂ ಪ್ರತಿಭಟನೆ ಮತ್ತು ರಾಜಕೀಯ ಮೇಲಾಟಗಳು ನಡೆದು ವರದಿ ಜಾರಿ ನನೆಗುದಿಗೆ ಬಿದ್ದಿದೆ.
ಪರಿಸರಸೂಕ್ಷ್ಮ ಪ್ರದೇಶದಲ್ಲಿ ದಟ್ಟ ಜನವಸತಿ ಇದ್ದು, 123 ಹಳ್ಳಿಗಳ ಸಾವಿರಾರು ಕುಟುಂಬಗಳನ್ನು ಸ್ಥಳಾಂತರ ಮಾಡಿ, ಪುನರ್ವಸತಿ ಕಲ್ಪಿಸಬೇಕಾಗುತ್ತದೆ ಎಂಬ ಸಬೂಬು ನೀಡುತ್ತಿರುವ ಕೇರಳ ಸರ್ಕಾರ, ವಯನಾಡಿನ 102.6 ಚದರ ಕಿ.ಮೀ. ಪ್ರದೇಶವು ತೀವ್ರ ಭೂಕೂಸಿತದ ಅಪಾಯದಲ್ಲಿದೆ ಎಂಬ ವಾಸ್ತವವನ್ನು ನಿರ್ಲಕ್ಷಿಸಿಕೊಂಡೇ ಬಂದಿದೆ. ಹವಾಮಾನ ಬದಲಾವಣೆಯಿಂದ ಭೂಕುಸಿತದ ಅಪಾಯ ಹೆಚ್ಚಾಗಿರುವ ಭೂಪ್ರದೇಶ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದು, ಇನ್ನಾದರೂ ಎಚ್ಚೆತ್ತುಕೊಳ್ಳಬೇಕು. ಇಂಥ ಸೂಕ್ಷ್ಮ ಪ್ರದೇಶಗಳಲ್ಲಿ ಗಣಿಗಾರಿಕೆ, ಕ್ವಾರಿ, ಮರ ಕಡಿಯುವಂಥ ಪರಿಸರ ವಿರೋಧಿ ಚಟುವಟಿಕೆಗಳನ್ನು ತಡೆಯಬೇಕು ಮತ್ತು ವಾಣಿಜ್ಯ ಚಟುವಟಿಕೆಯನ್ನು ಸಹ ನಿಷೇಧಿಸಬೇಕು. ಮುಖ್ಯವಾಗಿ, ಅಪಾಯಕಾರಿ ಸ್ಥಳಗಳಲ್ಲಿ ವಾಸಿಸುತ್ತಿರುವ ಸಾವಿರಾರು ಕುಟುಂಬಗಳ ಮನವೊಲಿಸಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಈಗಲಾದರೂ ಸಂಬಂಧಿಸಿದ ರಾಜ್ಯ ಸರ್ಕಾರಗಳು, ಪಕ್ಷಗಳು ರಾಜಕೀಯ ಮರೆತು ಮುಂದಾಗಬೇಕು. ಅದಕ್ಕೆ ಮುನ್ನ ಸ್ಪಷ್ಟ ಸಾರ್ವಜನಿಕ ಅಭಿಪ್ರಾಯ ರೂಪಿಸಲು ಕೇಂದ್ರ ಮತ್ತು ಸಂಬಂಧಿಸಿದ ರಾಜ್ಯ ಸರ್ಕಾರಗಳು ಮುಂದಾಗಬೇಕು.

ದೆಹಲಿ ಕೋಚಿಂಗ್ ಸೆಂಟರ್ ದುರಂತ: ಸಿಬಿಐ ತನಿಖೆಗೆ ದೆಹಲಿ ಹೈಕೋರ್ಟ್ ಆದೇಶ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × five =
Remember me
