|ಪ್ರಕಾಶ್ ಮಂಜೇಶ್ವರಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಧಾನಸಭಾ ಚುನಾವಣಾ ಚಟುವಟಿಕೆಗಳು ಗರಿಗೆದರಿದ್ದು, ಕಾರ್ಯಕ್ರಮಗಳ ಆಯೋಜನೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಮುಂಚೂಣಿಯಲ್ಲಿವೆ. ಮೂರನೇ ಸ್ಥಾನದಲ್ಲಿ ಎಸ್​ಡಿಪಿಐ ಇದೆ. ಜೆಡಿಎಸ್, ಸಿಪಿಐ (ಎಂ), ಸಿಪಿಐ ಹಾಗೂ ಪಕ್ಷೇತರ ಅಭ್ಯರ್ಥಿಗಳ ಪಾತ್ರ ಇಲ್ಲಿ ನಗಣ್ಯ. ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ 7 ಬಿಜೆಪಿ ಕೈಯಲ್ಲಿದೆ. ಮಹಾನಗರ ಪಾಲಿಕೆ, ಜಿಲ್ಲಾ ಪಂಚಾಯಿತಿ ಮತ್ತು ಹೆಚ್ಚಿನ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಅಧಿಕಾರ ಹೊಂದಿರುವ ಬಿಜೆಪಿಯು ಮತ್ತೊಮ್ಮೆ ಜಿಲ್ಲೆಯಲ್ಲಿ ಆಧಿಪತ್ಯ ಸ್ಥಾಪಿಸುವ ಉತ್ಸಾಹದಲ್ಲಿದೆ. ಕರಾವಳಿಯ ಹಿಂದುತ್ವ ಅಲೆ ಪಕ್ಷಕ್ಕೆ ಟ್ರಂಪ್ ಕಾರ್ಡ್. ಇದರೊಂದಿಗೆ ಸಂಘ ಪರಿವಾರದ ಮಾರ್ಗದರ್ಶನ, ಕಾರ್ಯಕರ್ತರ ಕ್ಷೇತ್ರಕಾರ್ಯ ಧನಾತ್ಮಕ ಅಂಶ. ಕಮಲಪಡೆಯ ಹಾಲಿ ಶಾಸಕರೆಲ್ಲರೂ ಈ ಬಾರಿಯೂ ಟಿಕೆಟ್ ಪಡೆಯಲಿದ್ದಾರೆ ಎನ್ನುವ ಸುದ್ದಿ ಇದೆಯಾದರೂ, ಕೆಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಬದಲಾವಣೆ ಸಾಧ್ಯತೆ ಕುರಿತ ಚರ್ಚೆ ಪಕ್ಷದ ಆಂತರಿಕ ವಲಯದಲ್ಲಿ ಕೇಳಿಬರುತ್ತಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ, ಸರ್ಕಾರದ ವೈಫಲ್ಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ಜಿಲ್ಲೆಯಲ್ಲಿ ಪಕ್ಷದ ವೈಭವವನ್ನು ಮರು ಸ್ಥಾಪಿಸಲು ಕಾಂಗ್ರೆಸ್ ಪ್ರಯಾಸಪಡುತ್ತಿದೆ. ಸರ್ವ ಧರ್ವಿುಯರ ಸಮನ್ವಯ ಕಾಂಗ್ರೆಸ್ ಮುಂದಿರುವ ಸವಾಲು. ಈ ನಡುವೆ ಎಲ್ಲ ಕ್ಷೇತ್ರಗಳಲ್ಲಿ ಎಸ್​ಡಿಪಿಐ ಬಲವರ್ಧನೆ ಕಾಂಗ್ರೆಸ್​ಗೆ ತಲೆನೋವು.
ಧರ್ಮಸ್ಥಳದ ಧರ್ವಧಿಕಾರಿಯಾಗಿದ್ದ ರತ್ನವರ್ಮ ಹೆಗ್ಗಡೆ ಶಾಸಕರಾದ ಕ್ಷೇತ್ರ ಬೆಳ್ತಂಗಡಿ. ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರಿಗೆ ರಾಜ್ಯಸಭಾ ಸದಸ್ಯತ್ವದ ಗೌರವ ನೀಡಿರುವುದು ಈ ಬಾರಿ ಬಿಜೆಪಿಗೆ ವರವಾಗಲಿದೆ. ಬಿಜೆಪಿಯ ಹಾಲಿ ಶಾಸಕ ಹರೀಶ್ ಪೂಂಜಾ ಅಖಾಡಕ್ಕಿಳಿಯುವುದು ಖಂಡಿತ. ಶಾಸಕರಾಗಿ ಮೊದಲ ಅವಧಿಯಲ್ಲೇ ಪ್ರಧಾನಿ ನರೇಂದ್ರ ಮೋದಿ ತನಕ ಸಂಪರ್ಕ ವಿಸ್ತರಿಸಿಕೊಂಡ ಹೆಗ್ಗಳಿಕೆ ಪೂಂಜಾರದು. ಪ್ರಧಾನಿ ಆಯುಷ್ಯ ವೃದ್ಧಿಗಾಗಿ ಧರ್ಮಸ್ಥಳದಲ್ಲಿ ಮೃತ್ಯುಂಜಯ ಯಾಗ ನಡೆಸಿ ಪ್ರಸಾದವನ್ನು ಅರ್ಚಕರೊಂದಿಗೆ ಪ್ರಧಾನಿಯವರಿಗೇ ನವದೆಹಲಿಯಲ್ಲಿ ಹಸ್ತಾಂತರಿಸಿದ್ದು ಸಂಪರ್ಕಕ್ಕೆ ನಿದರ್ಶನ. ಅಭಿವೃದ್ಧಿ ಕಾರ್ಯಗಳ ಅನುಷ್ಠಾನದಲ್ಲೂ ನಿಸ್ಸೀಮ. ಕಾಂಗ್ರೆಸ್ ಕಡೆಯಿಂದ ಮಾಜಿ ಶಾಸಕ ವಸಂತ ಬಂಗೇರ ಸ್ಪರ್ಧೆಗೆ ಸಿದ್ಧರಾಗಿದ್ದರೂ, ಪಕ್ಷ ಹೊಸಬರಿಗೆ ಮಣೆ ಹಾಕುವ ಸಾಧ್ಯತೆ ಗೋಚರಿಸುತ್ತಿದೆ. ಬೆಸ್ಟ್ ಫೌಂಡೇಶನ್​ನ ರಕ್ಷಿತ್ ಶಿವರಾಂ ಹಾಗೂ ವಿಧಾನ ಪರಿಷತ್ ಸದಸ್ಯ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಹರೀಶ್ ಕುಮಾರ್ ಹೆಸರು ಕೇಳಿಬರುತ್ತಿವೆ.
ರಮಾನಾಥ ರೈ ಅವರನ್ನು ಹಿಂದಿಕ್ಕಿ ಗೆಲುವಿನ ನಗೆ ಬೀರಿದ್ದ ಬಂಟ್ವಾಳ ಶಾಸಕ ರಾಜೇಶ್ ನಾಯ್್ಕ ಉಳಿಪ್ಪಾಡಿ ಇನ್ನೊಮ್ಮೆ ಸ್ಪರ್ಧಿಸುವ ಆಸಕ್ತಿ ಹೊಂದಿಲ್ಲ ಎಂದೇ ವಿಶ್ಲೇಷಿಸಲಾಗಿತ್ತು. ಆದರೆ ಇದ್ದಕ್ಕಿದ್ದಂತೆ ‘ಕಮಲೋತ್ಸವ’ ಎಂಬ ಅದ್ದೂರಿ ಕಾರ್ಯಕ್ರಮ ಮೂಲಕ ರಾಜ್ಯ ಬಿಜೆಪಿಯ ಗಮನ ಸೆಳೆದ ನಾಯ್್ಕ ಸ್ಪರ್ಧಾಸಕ್ತಿಯನ್ನು ಬಹಿರಂಗಪಡಿಸಿದ್ದಾರೆ. ಸರಳ ಸಜ್ಜನಿಕೆಯ ಅವರು ರಾಜಕೀಯ ಪ್ರವೇಶದಿಂದ ಹೆಸರು ಹಾಳುಮಾಡಿಕೊಂಡಿಲ್ಲ. ಆದ್ದರಿಂದಲೇ ಅವರ ಬಗ್ಗೆ ಕ್ಷೇತ್ರದ ಜನರು ಮೃದುಭಾವ ಹೊಂದಿದ್ದಾರೆ. ಪಕ್ಷದ ಕಾರ್ಯಕರ್ತರು ವಿಶ್ವಾಸ ಕಳೆದುಕೊಂಡಿಲ್ಲ. ಇವರ ವಿರುದ್ಧ ಕಾಂಗ್ರೆಸ್ ಬಿ.ರಮಾನಾಥ ರೈ ಅವರನ್ನು ಕಣಕ್ಕಿಳಿಸುವುದು ಶತಃಸಿದ್ಧ. ಈ ಕ್ಷೇತ್ರವನ್ನು ಆರು ಬಾರಿ ಗೆಲ್ಲುವ ಮೂಲಕ ದಾಖಲೆ ಬರೆದವರು ರೈ. ಗೃಹ, ಸಾರಿಗೆ, ಮೀನುಗಾರಿಕೆ, ಬಂದೀಖಾನೆ, ಅರಣ್ಯ ಸಹಿತ ವಿವಿಧ ಮಹತ್ವದ ಖಾತೆಗಳನ್ನು ನಿರ್ವಹಿಸಿದ ಅನುಭವಿ. ಸರ್ಕಾರಿ ಅಧಿಕಾರಿಗಳಿಂದ ಜನಪರ ಕೆಲಸ ಮಾಡಿಸಿಕೊಳ್ಳುವಲ್ಲಿ ಜನಪ್ರಿಯತೆ ಇದೆಯಾದರೂ, ಕಳೆದ ಚುನಾವಣೆ ಸಂದರ್ಭ ಅಂಟಿಕೊಂಡ ‘ಹಿಂದು ವಿರೋಧಿ’ ಹಣೆಪಟ್ಟಿ ಸೋಲುಣಿಸಿತ್ತು.
ಮಂಗಳೂರು ನಗರ ಉತ್ತರ ಕ್ಷೇತ್ರದಲ್ಲಿ ಬಿಜೆಪಿ ಹಾಲಿ ಶಾಸಕ ಡಾ.ವೈ ಭರತ್ ಶೆಟ್ಟಿ ಮತ್ತು ಕಾಂಗ್ರೆಸ್​ನಿಂದ ಮಾಜಿ ಶಾಸಕ ಬಿ.ಎ.ಮೊೖದಿನ್ ಬಾವ ಪೈಪೋಟಿ ಖಚಿತ. ಜಿ.ಎ.ಬಾವ, ಕೃಪಾ ಅಮರ ಆಳ್ವ, ಇನಾಯತ್ ಅಲಿ, ಪ್ರಸಾದ್ ರಾಜ್ ಕಾಂಚನ್ ಕಾಂಗ್ರೆಸ್ ಟಿಕೆಟ್ ಪಡೆಯಲು ಶ್ರಮಿಸುತ್ತಿದ್ದಾರೆ. ಕಳೆದ ಬಾರಿ ಹಿಂದುತ್ವದ ಅಲೆ ಮತ್ತು ಬಿಜೆಪಿ ಮುಖಂಡ ದೀಪಕ್ ಕೊಲೆ ಪ್ರಕರಣ ಭಾರಿ ಸದ್ದು ಮಾಡಿದ್ದು, ಕಾಂಗ್ರೆಸ್ ಸೋಲಿಗೆ ಕಾರಣವಾಯಿತು ಎಂಬುದು ಆ ಪಕ್ಷದ ಪೋಸ್ಟ್ ಮಾರ್ಟಂ ವರದಿ. 2004, 2008ರಲ್ಲಿ ಉದ್ಯಮಿ ಕೃಷ್ಣ ಜೆ.ಪಾಲೆಮಾರ್ ಬಿಜೆಪಿಯಿಂದ ಗೆಲುವು ಸಾಧಿಸಿದ್ದರು. 2013ರಲ್ಲಿ ಕ್ಷೇತ್ರವನ್ನು ಕಾಂಗ್ರೆಸ್​ನ ಬಿ.ಎ.ಮೊೖದಿನ್ ಗೆದ್ದುಕೊಂಡಿದ್ದರು. 2018ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಯ ಡಾ.ವೈ ಭರತ್ ಶೆಟ್ಟಿ ಜಯ ಪಡೆದರು.
ಬಿಜೆಪಿಯಿಂದ ಶಾಸಕ ಡಿ. ವೇದವ್ಯಾಸ ಕಾಮತ್ ಅಖಾಡಕ್ಕಿಳಿಯುವ ಸಾಧ್ಯತೆಯೇ ಹೆಚ್ಚು. ಕಾಂಗ್ರೆಸ್​ನಿಂದ ಮಾಜಿ ಶಾಸಕ ಜೆ.ಆರ್.ಲೋಬೊ ಮತ್ತು ವಿಧಾನಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ ಟಿಕೆಟ್ ಆಕಾಂಕ್ಷಿಗಳು. ಈ ಬಾರಿ ಕಾಂಗ್ರೆಸ್​ನಿಂದ ಹಿಂದು ಅಭ್ಯರ್ಥಿಗೆ ಟಿಕೆಟ್ ನೀಡಬೇಕು. ಎಂಎಲ್ಸಿ ಅಥವಾ ರಾಜ್ಯಸಭಾ ಸ್ಥಾನಗಳಲ್ಲಿ ಕ್ರಿಶ್ಚಿಯನ್ ಅಭ್ಯರ್ಥಿ ಸೂಕ್ತ ಎಂದು ಸಕ್ರಿಯ ಕಾರ್ಯಕರ್ತರು, ಕೆಲವು ಮುಖಂಡರು ಪಕ್ಷದ ವೇದಿಕೆಯಲ್ಲಿ ಬಲವಾಗಿ ಒತ್ತಾಯಿಸುತ್ತಿದ್ದಾರೆ. ಸಂಭಾವ್ಯ ಹೊಸ ಮುಖಗಳ ಪಟ್ಟಿಯಲ್ಲಿ ಮಾಜಿ ಮೇಯರ್ ಶಶಿಧರ ಹೆಗ್ಡೆ ಹೆಸರು ಕೇಳಿಬರುತ್ತಿವೆ.
ಜಿಲ್ಲೆಯ ಏಕೈಕ ಮೀಸಲು (ಪರಿಶಿಷ್ಟ ಜಾತಿ) ಕ್ಷೇತ್ರ ಸುಳ್ಯವನ್ನು ಶಾಸಕರಾಗಿ ಸತತ ಕಳೆದ ಆರು ಅವಧಿಯಿಂದ ಪ್ರತಿನಿಧಿಸುತ್ತಿರುವ ಮೀನುಗಾರಿಕೆ ಸಚಿವ ಎಸ್.ಅಂಗಾರ ಮತ್ತೆ ಸ್ಪರ್ಧಿಸುವುದು ಖಚಿತ. ಅಂಗಾರ ಅವರ ಎದುರು ಕಾಂಗ್ರೆಸ್​ನಿಂದ ಸ್ಪರ್ಧಿಸಿ ಸತತ ನಾಲ್ಕು ಬಾರಿ ಸೋಲು ಕಂಡಿರುವ ಡಾ.ಬಿ.ರಘು ಈ ಬಾರಿ ಸ್ಪರ್ಧಿಸಲು ಆಸಕ್ತರಾಗಿಲ್ಲ. ಹಾಗಾಗಿ ಕೈಟಿಕೆಟ್​ಗೆ ನಂದಕುಮಾರ್ ಮತ್ತು ಕೃಷ್ಣಪ್ಪ ಹೆಸರು ಕೇಳಿಬರುತ್ತಿವೆ.
ಪುತ್ತೂರು ಕ್ಷೇತ್ರದಲ್ಲಿಯೂ ಬಿಜೆಪಿಯ ಹಾಲಿ ಶಾಸಕ, ಮಾಜಿ ಜಿಲ್ಲಾ ಅಧ್ಯಕ್ಷ ಸಂಜೀವ ಮಠಂದೂರು ಅವರನ್ನೇ ಕಣಕ್ಕಿಳಿಸುವ ಸಾಧ್ಯತೆ ಇದೆ. ಬಿಜೆಪಿ ರಾಜ್ಯಾಧ್ಯಕ್ಷ ಈ ಕ್ಷೇತ್ರಕ್ಕೆ ಪದೇಪದೆ ಭೇಟಿ ನೀಡುತ್ತಿದ್ದು, ರಾಜ್ಯ ರಾಜಕಾರಣದಲ್ಲಿ ಸಕ್ರಿಯರಾಗುವ ಸಾಧ್ಯತೆ ಇರಬಹುದೇ ಎಂಬ ಮಾತು ಬಿಜೆಪಿ ವಲಯದಲೇ ಚರ್ಚೆಯಲ್ಲಿದೆ. ಕಾಂಗ್ರೆಸ್​ನಿಂದ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಮತ್ತೆ ಅದೃಷ್ಟ ಪರೀಕ್ಷೆಗೆ ಯತ್ನಿಸುವ ಸಾಧ್ಯತೆ ಕಾಣಿಸುತ್ತಿಲ್ಲ. ಕಾಂಗ್ರೆಸ್ ಬ್ಲಾಕ್ ಮಾಜಿ ಅಧ್ಯಕ್ಷ ಹೇಮನಾಥ ಶೆಟ್ಟಿ ಕಾವು, ರಾಜ್ಯ ಸಮಾಜ ಕಲ್ಯಾಣ ಮಂಡಳಿ ಮಾಜಿ ಅಧ್ಯಕ್ಷೆ ದಿವ್ಯಪ್ರಭಾ ಚಿಲ್ತಡ್ಕ, ರಾಜ್ಯ ಇಂಟಕ್ ಕಾರ್ಯಾಧ್ಯಕ್ಷ ರಾಕೇಶ್ ಮಲ್ಲಿ ಕಾಂಗ್ರೆಸ್ ಕಡೆಯಿಂದ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ.
ಮೂಡುಬಿದರೆ ಕ್ಷೇತ್ರದಲ್ಲಿ ಬಿಜೆಪಿಯಿಂದ ಹಾಲಿ ಶಾಸಕ ಉಮಾನಾಥ ಕೋಟ್ಯಾನ್ ಅದೃಷ್ಟ ಪರೀಕ್ಷೆಗೆ ಅಡ್ಡಿಯಿಲ್ಲ. ಶಾಸಕರಾಗಿ ದೀರ್ಘಕಾಲದ ಅನುಭವ ಹೊಂದಿರುವ ಮಾಜಿ ಸಚಿವ ಕಾಂಗ್ರೆಸ್​ನ ಅಭಯಚಂದ್ರ ಜೈನ್ ಈ ಬಾರಿ ಸ್ಪರ್ಧಿಸುತ್ತಿಲ್ಲ. ಅವರ ಜಾಗ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಅವರಿಗೆ. ಎರಡು ವರ್ಷಗಳಿಂದ ಕ್ಷೇತ್ರಾದ್ಯಂತ ಓಡಾಡುತ್ತಿರುವ ರೈ ಮತದಾರರ ವಿಶ್ವಾಸಗಳಿಸಲು ಯತ್ನಿಸುತ್ತಿದ್ದಾರೆ. ರಾಜಕೀಯ ಗುರು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೃಪೆಯಿಂದ ಅವರು ಟಿಕೆಟ್ ಪಡೆಯುವ ಸಾಧ್ಯತೆ ಅಧಿಕ. ಕಳೆದ ಬಾರಿ ಇಲ್ಲಿಂದ ಟಿಕೆಟ್ ಪಡೆಯಲು ತೀವ್ರ ಪ್ರಯತ್ನ ನಡೆಸಿದ ಐವನ್ ಡಿಸೋಜ ಈ ಬಾರಿ ಪ್ರಯತ್ನ ಕೈಬಿಟ್ಟಂತಿದೆ.
ಅಲ್ಪಸಂಖ್ಯಾತರ ಪ್ರಾಬಲ್ಯವಿರುವ ಮಂಗಳೂರು ಕ್ಷೇತ್ರವನ್ನು (ಉಳ್ಳಾಲ) ಸತತ ನಾಲ್ಕನೇ ಬಾರಿ ಯು.ಟಿ. ಖಾದರ್ ಪ್ರತಿನಿಧಿಸುತ್ತಿದ್ದು, ಕಾಂಗ್ರೆಸ್ ಅಭ್ಯರ್ಥಿ ಯಾರೆಂಬ ಪ್ರಶ್ನೆಗೆ ಆಸ್ಪದವೇ ಇಲ್ಲ. ಬಿಜೆಪಿ ಇಲ್ಲಿಂದ ಯಾರನ್ನು ಕಣಕ್ಕಿಳಿಸಲಿದೆ ಎನ್ನುವ ಚಿತ್ರಣ ಇನ್ನೂ ಅಸ್ಪಷ್ಟ. ಸಂತೋಷ್ ಕುಮಾರ್ ರೈ ಬೋಳಿಯಾರ್ (ಕಳೆದ ಅವಧಿಯ ಅಭ್ಯರ್ಥಿ), ಪಕ್ಷದ ಮಂಡಲ ಅಧ್ಯಕ್ಷ ಚಂದ್ರಹಾಸ ಪಂಡಿತ್ ಹೌಸ್ ಮತ್ತು ಜಿಪಂ ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ ಹೆಸರು ಆಕಾಂಕ್ಷಿಗಳ ಪಟ್ಟಿಯಲ್ಲಿದೆ. ಖಾದರ್ ಜನಪ್ರಿಯತೆ ಮುಂದೆ ಬಿಜೆಪಿ ಅಭ್ಯರ್ಥಿಗೆ ಗೆಲುವು ಸುಲಭದ ಮಾತಲ್ಲ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 1 =
Remember me
