ಬೆಂಗಳೂರು:ಜೀವನೋಪಾಯಕ್ಕೆ ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡು, ಸರ್ಕಾರದ ದ್ವಂದ್ವ ನಿಲುವಿನಿಂದಾಗಿ ಎಲ್ಲಿ ಜೈಲು ಪಾಲಾಗಬೇಕಾಗುತ್ತೋ ಎಂಬ ಆತಂಕದಲ್ಲಿದ್ದ ರೈತರಿಗೆ ನಿರಾಳ ಒದಗಿದೆ. ಭೂಕಬಳಿಕೆ ನಿಷೇಧ ಕಾಯ್ದೆ ತಿದ್ದುಪಡಿಗೆ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯಿಸಿದ್ದು, ಈ ಮೂಲಕ ಗ್ರಾಮೀಣ ಭಾಗದ ರೈತರಿಗಿದ್ದ ಬಂಧನ ಭೀತಿ ದೂರಾಗಲಿದೆ.
ಕರ್ನಾಟಕ ಭೂಕಬಳಿಕೆ ನಿಷೇಧ ಕಾಯ್ದೆ ಜಾರಿ ಬಳಿಕ ಬೆಂಗಳೂರಿನಲ್ಲಿ ವಿಶೇಷ ನ್ಯಾಯಾಲಯಗಳು ಕಾರ್ಯಾರಂಭಿಸಿದ್ದವು. ಒಂದೆಡೆ, ಬಗರ್ ಹುಕುಮ್ಲ್ಲಿ ಅಕ್ರಮ-ಸಕ್ರಮಕ್ಕೆ ಮುಂದಾಗಿದ್ದರೆ, ಇನ್ನೊಂದೆಡೆ ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡವರನ್ನು ಭೂಗಳ್ಳರ ಪಟ್ಟಿಗೆ ಸೇರಿಸುವ ಪ್ರಯತ್ನ ನಡೆದಿತ್ತು. ಇದಕ್ಕಾಗಿ ಕಾನೂನು ರಚಿಸಿತ್ತು. ನಿವೃತ್ತ ಐಎಎಸ್ ಅಧಿಕಾರಿ ಬಾಲಸುಬ್ರಮಣ್ಯಂ ಸಮಿತಿ 13 ಲಕ್ಷ ರೈತರಿಂದ ಅಂದಾಜು 30 ಲಕ್ಷ ಎಕರೆ ಭೂಮಿ ಕಬಳಿಕೆಯಾಗಿದೆ ಎಂದು ವರದಿ ನೀಡಿತ್ತು. ಇದರಲ್ಲಿ ಜೀವನೋಪಾಯಕ್ಕಾಗಿ ಸಾಗುವಳಿ ಮಾಡುತ್ತ ಸಕ್ರಮಕ್ಕಾಗಿ ಪ್ರಯತ್ನ ನಡೆಸಿ, ಬಗರ್​ಹುಕುಂ ಸಾಗುವಳಿ ಸಮಿತಿಗಳ ಮುಂದೆ ಅರ್ಜಿ ಸಲ್ಲಿಸಿದವರೂ ಇದ್ದರು.
ನಗರ ಹಾಗೂ ಪಟ್ಟಣ ಪ್ರದೇಶದಲ್ಲಿ ರಿಯಲ್ ಎಸ್ಟೇಟ್ ಹಾಗೂ ಇತರೆ ಉದ್ದೇಶಕ್ಕಾಗಿ ಭೂಮಿ ಕಬಳಿಸಿರುವ ಪ್ರಮಾಣ 50 ರಿಂದ 60 ಸಾವಿರ ಜನರಿರಬಹುದೆಂದು ಅಂದಾಜಿಸಲಾಗಿದೆ. ನಿಜವಾಗಿಯೂ ಕ್ರಮ ಆಗಬೇಕಾಗಿರುವುದು ಇಂತಹ ಭೂಗಳ್ಳರ ವಿರುದ್ಧ. ಆದರೆ, ಈಗ ರೈತರು ಸಹ ಭೂಗಳ್ಳರ ಸಾಲಿಗೆ ಬಂದಿದ್ದರು. ಹೀಗಾಗಿ ಸರ್ಕಾರದ ಮೇಲೆ ಒತ್ತಡವಿತ್ತು. ಆಡಳಿತ ಪಕ್ಷದ ಶಾಸಕರು, ಸಚಿವರೇ ಈ ಕಾನೂನು ಹಿಂಪಡೆಯಬೇಕೆಂದು ಒತ್ತಡ ತಂದಿದ್ದರು. ಗಂಭೀರತೆ ಅರಿತ ಸರ್ಕಾರ ಸಣ್ಣ ರೈತರನ್ನು ಹೊರಗಿಡುವ ತಿದ್ದುಪಡಿ ತರುವುದಾಗಿ ಹೇಳಿತ್ತು. ಐದು ವರ್ಷದ ಬಳಿಕ ಬೊಮ್ಮಾಯಿ ಸರ್ಕಾರ ಈ ಬಗ್ಗೆ ಮನಸ್ಸು ಮಾಡಿದ್ದು, ಮುಂದಿನ ಅಧಿವೇಶನದಲ್ಲಿ ತಿದ್ದುಪಡಿ ಕಾಯ್ದೆ ಮಂಡಿಸಲು ಸಿದ್ಧತೆ ಮಾಡಿದೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಆಗಿನ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹಾಗೂ ಕಾನೂನು ಸಚಿವ ಟಿ.ಬಿ. ಜಯಚಂದ್ರ ಕಾಯ್ದೆ ತಿದ್ದುಪಡಿಗೆ ಪ್ರಯತ್ನಿಸಿದ್ದರು. ಆದರೆ, ಸಂಪುಟ ಸಭೆಯಲ್ಲಿ ಸಚಿವರಿಂದ ವಿರೋಧ ವ್ಯಕ್ತವಾಗಿತ್ತು. ಬಳಿಕ ಯಡಿಯೂರಪ್ಪರತ್ತ ರೈತರು ಆಸೆಗಣ್ಣಿನಿಂದ ಎದುರು ನೋಡುತ್ತಿದ್ದರು. ಅಂದು ಅವರು ನಡೆಸಿದ ಪ್ರಯತ್ನ ಈಗ ಬೊಮ್ಮಾಯಿ ಅವಧಿಯಲ್ಲಿ ರ್ತಾಕ ಅಂತ್ಯದತ್ತ ಸಾಗಿದೆ.
ಪ್ರಸ್ತಾವಿತ ತಿದ್ದುಪಡಿ ಕರಡು ಯಾವುದೇ ರೀತಿಯಲ್ಲಿಯೂ ವಿಧೇಯಕದ ಮೂಲ ಕರಡಿಗೆ ವಿರುದ್ಧವಾಗಿರದೆ, ಗ್ರಾಮೀಣ ಪ್ರದೇಶದ ರೈತರ ಹಾಗೂ ಇತರರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸುವುದರಿಂದ ರಕ್ಷಣೆ ನೀಡಲಿದೆ.
|ಆರಗ ಜ್ಞಾನೇಂದ್ರಗೃಹ ಸಚಿವ
ಕೆಂಪಣ್ಣ ವಿರುದ್ಧ ಕಿಡಿ:ನಲವತ್ತು ಪರ್ಸೆಂಟ್ ಕಮೀಷನ್ ವಿಚಾರದಲ್ಲಿ ದೂರು ಕೊಡದೆ, ದಾಖಲೆಯನ್ನೂ ಸಲ್ಲಿಸದೆ ನಿರಂತರವಾಗಿ ಸರ್ಕಾರವನ್ನು ಹೀಗಳೆಯುವ ಗುತ್ತಿಗೆದಾರರ ಸಂಘದ ವಿರುದ್ಧ ಸರ್ಕಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದಿದ್ದು, ಸಿದ್ದರಾಮಯ್ಯ ಚಿತಾವಣೆಯಿಂದ ಈ ರೀತಿ ಆರೋಪ ಮಾಡುತ್ತಿದ್ದು, ತೀಕ್ಷ್ಣವಾಗಿ ಪ್ರತ್ಯುತ್ತರ ನೀಡಲು ಸಂಪುಟ ಸದಸ್ಯರು ನಿರ್ಧರಿಸಿದ್ದಾರೆ.
ಹುತಾತ್ಮರ ಕುಟುಂಬಕ್ಕೆ ಸರ್ಕಾರಿ ನೌಕರಿ:ರಾಜ್ಯದಲ್ಲಿ ಹುತಾತ್ಮ ಯೋಧರ ಅವಲಂಬಿತರಿಗೆ ಇನ್ನು ಮುಂದೆ ಸರ್ಕಾರಿ ನೌಕರಿ ದೊರೆಯಲಿದೆ. ಸದ್ಯ 200 ಮಂದಿ ನೌಕರಿ ಪಡೆಯಲು ಅರ್ಹರಿದ್ದಾರೆ ಎಂದು ಅಂದಾಜಿಸಲಾಗಿದೆ. ಈವರೆಗೆ ಹುತಾತ್ಮ ಯೋಧರ ಕುಟುಂಬಕ್ಕೆ 50 ಲಕ್ಷ ರೂ. ಎಕ್ಸಗ್ರೇಷಿಯ ಮೊತ್ತ ಮತ್ತು 6040 ಅಳತೆಯ ನಿವೇಶನ ಕೊಡಲಾಗುತ್ತಿತ್ತು. ಇನ್ನು ಮುಂದೆ ಅದನ್ನು ಕೈಬಿಟ್ಟು ಅನುಕಂಪದ ಆಧಾರದಲ್ಲಿ ಸರ್ಕಾರಿ ನೌಕರಿ ಕೊಡಲು ತೀರ್ವನಿಸಲಾಗಿದೆ.
ಡಿ ವರ್ಗದ ನೇಮಕಕ್ಕೆ ಮೌಖಿಕ ಸಂದರ್ಶನವಿಲ್ಲ:ಕೆಪಿಎಸ್​ಸಿ ಮೂಲಕ ನೇಮಕ ಮಾಡುವ ಡಿ ವರ್ಗದ ಎಲ್ಲ ನೇಮಕಾತಿಗೆ ಮೌಖಿಕ ಸಂದರ್ಶನ ನಡೆಸದಂತೆ ಸರ್ಕಾರ ಕಾಯ್ದೆಗೆ ಸಣ್ಣ ತಿದ್ದುಪಡಿ ತರುತ್ತಿದ್ದು, ಸಂಪುಟ ಸಭೆ ಈ ಪ್ರಸ್ತಾವನೆಗೆ ಅನುಮೋದನೆ ನೀಡಿದೆ. ಕೆಪಿಎಸ್​ಸಿ ಕಾಯ್ದೆಗೂ ತಿದ್ದುಪಡಿ ತರುವ ಮೂಲಕ ಡಿ ವರ್ಗದ ನೇಮಕಾತಿಗೆ ಮೌಖಿಕ ಸಂದರ್ಶನ ನಡೆಸದೆ ಕೇವಲ ಲಿಖಿತ ಪರೀಕ್ಷೆ ಆಧಾರದಲ್ಲಿ ನೇಮಕ ನಡೆಯಲಿದೆ ಎಂದು ಜೆ.ಸಿ. ಮಾಧುಸ್ವಾಮಿ ತಿಳಿಸಿದ್ದಾರೆ.
ತೂಗುಗತ್ತಿಯಿಂದ ಪಾರು:2014ರಿಂದ ಜಾರಿಯಲ್ಲಿರುವ ಕಾಯ್ದೆ ಪ್ರಕಾರ ಭೂ ಒತ್ತುವರಿದಾರರಿಗೆ 5 ವರ್ಷ ಜೈಲು, -ಠಿ;50 ಸಾವಿರ ದಂಡ, ನೆರವಾಗುವ ಅಧಿಕಾರಿಗಳಿಗೆ -ಠಿ;1 ಲಕ್ಷ ದಂಡ, 5 ವರ್ಷ ಜೈಲು ಎಂದಿದೆ. ಭೂ ವಿಶೇಷ ಕೋರ್ಟ್ ಸೂಚನೆಯಂತೆ ಕಂದಾಯ ಇಲಾಖೆ ಅಧಿ ಕಾರಿಗಳು ನೋಟಿಸ್ ನೀಡಿದ್ದಾರೆ. ವಿಶೇಷ ಕೋರ್ಟ್​ನಲ್ಲಿ 25 ಸಾವಿರಕ್ಕೂ ಹೆಚ್ಚು ದೂರು ಗಳಿದ್ದು, ಈ ಪೈಕಿ 6 ಸಾವಿರಕ್ಕೂ ಹೆಚ್ಚು ಪ್ರಕರಣಗಳ ವಿಚಾರಣೆ ನಡೆದಿದೆ. 10ಕ್ಕೂ ಹೆಚ್ಚು ಕೇಸ್​ಗಳಲ್ಲಿ ರೈತರಿಗೆ ಶಿಕ್ಷೆಯೂ ಆಗಿದೆ.
ಸೆ.12ರಿಂದ ಅಧಿವೇಶನ:ವಿಧಾನ ಮಂಡಲ ಮಳೆಗಾಲದ ಅಧಿವೇಶನ ಸೆ.12ರಿಂದ 23ರವರೆಗೆ ನಡೆಯಲಿದೆ. ಶನಿವಾರ, ಭಾನುವಾರ ಹೊರತುಪಡಿಸಿ, ಒಟ್ಟು 10 ದಿನ ಕಲಾಪ ಇರಲಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − two =
Remember me
