ಬೆಂಗಳೂರು:ಸಬ್ ಇನ್​ಸ್ಪೆಕ್ಟರ್​ಗಳ ನೇಮಕಾತಿ ಪರೀಕ್ಷೆ ಅಕ್ರಮ ಕೋಲಾಹಲ ಎಬ್ಬಿಸಿರುವ ನಡುವೆಯೇ 1242 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲೂ ಗೋಲ್‍ಮಾಲ್ ನಡೆದಿರುವುದು ದೃಢಪಟ್ಟಿದೆ. ಈ ಅಕ್ರಮದ ಬಗ್ಗೆ ವಿಜಯವಾಣಿ ಪ್ರಕಟಿಸಿದ ಸರಣಿ ವರದಿಗಳ ತರುವಾಯ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿ, ಪ್ರಶ್ನೆಪತ್ರಿಕೆ ಸೋರಿಕೆ ಆರೋಪದಲ್ಲಿ ಅತಿಥಿ ಉಪನ್ಯಾಸಕಿಯೊಬ್ಬರ ಬಂಧನವಾಗಿದೆ. ಅಕ್ರಮಕ್ಕೆ ಸಾಥ್ ಕೊಟ್ಟವರಿಗಾಗಿ ಹುಡುಕಾಟ ಮುಂದುವರಿದಿದೆ.
ಏನಿದು ಪ್ರಕರಣ?:2022ರ ಮಾ.12ರಿಂದ 16ರವರೆಗೆ ಸ್ಪರ್ಧಾತ್ಮಕ ಪರೀಕ್ಷೆಗಳು ನಡೆದಿದ್ದವು. ಒಟ್ಟು 33 ಸಾವಿರ ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದರು. ಪರೀಕ್ಷೆಗೂ ಮುನ್ನವೇ ತಲಾ ಹುದ್ದೆಗೆ 40 ಲಕ್ಷ ರೂ.ವರೆಗೆ ನಿಗದಿಪಡಿಸಲಾಗಿದ್ದು, ಡೀಲ್ ಒಪ್ಪಿಕೊಂಡು ಮುಂಗಡ ಹಣ ಕೊಟ್ಟವರಿಗೆ ಹುದ್ದೆ ಫಿಕ್ಸ್ ಭರವಸೆ ನೀಡಲಾಗುತ್ತಿರುವ ಬಗ್ಗೆ ಅಭ್ಯರ್ಥಿಗಳು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದರು. ಇದರ ಬೆನ್ನತ್ತಿದ್ದ ವಿಜಯವಾಣಿ ಅಕ್ರಮದ ಮಾಹಿತಿ ಸಂಗ್ರಹಿಸಿ ‘ಲೆಕ್ಚರರ್ ಹುದ್ದೆಗೆ 40 ಲಕ್ಷ ರೂಪಾಯಿ ಡೀಲ್!?’ ಶೀರ್ಷಿಕೆಯಡಿ ಮಾ.11ರಂದು ಮುಖಪುಟದಲ್ಲಿ ವಿಶೇಷ ವರದಿ ಪ್ರಕಟಿಸಿತ್ತು.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಯಾವುದೇ ಅಕ್ರಮ ನಡೆದಿಲ್ಲ ಎಂದು ಸಮರ್ಥಿಸಿಕೊಂಡಿತ್ತು. ನಂತರವೂ ವಿಜಯವಾಣಿ ಸರಣಿ ವರದಿಗಳನ್ನು ಪ್ರಕಟಿಸುವ ಮೂಲಕ ಸತ್ಯ ಬಯಲಿಗೆಳೆಯುವ ಪ್ರಯತ್ನ ಮಾಡಿತ್ತು. ಕೊನೆಗೆ ಕೆಇಎ ಮಲ್ಲೇಶ್ವರ ಠಾಣೆಗೆ ದೂರು ದಾಖಲಿಸಿತ್ತು. ತನಿಖೆ ಆರಂಭಿಸಿದ ಪೊಲೀಸರು, ಭೂಗೋಳ ಶಾಸ್ತ್ರ ವಿಷಯದ ಪ್ರಶ್ನೆಪತ್ರಿಕೆ ಸೋರಿಕೆ ಮಾಡಿರುವ ಆರೋಪದ ಮೇಲೆ ಮೈಸೂರು ಮೂಲದ ಅತಿಥಿ ಉಪನ್ಯಾಸಕಿ ಸೌಮ್ಯ(32) ಎಂಬುವರನ್ನು ಭಾನುವಾರ ಬಂಧಿಸಿದ್ದಾರೆ. ಸೌಮ್ಯ ಮೈಸೂರಿನಲ್ಲಿರುವುದನ್ನು ಪತ್ತೆಹಚ್ಚಿದ ಮಲ್ಲೇಶ್ವರ ಪೊಲೀಸರ ತಂಡ ಭಾನುವಾರವೇ ಬಂಧಿಸಿ, ಬೆಂಗಳೂರಿಗೆ ಕರೆತಂದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಪ್ರಶ್ನೆಪತ್ರಿಕೆ ಸೋರಿಕೆ ಸಂಬಂಧ ಆಕೆಯನ್ನು ಹೆಚ್ಚಿನ ವಿಚಾರಣೆಗೊಳಪಡಿಸಲು ಎಸಿಎಂಎಂ ನ್ಯಾಯಾಲಯಕ್ಕೆ ಸೋಮವಾರ ಅರ್ಜಿ ಸಲ್ಲಿಸಿದ್ದಾರೆ. ಕೋರ್ಟ್ ಅನುಮತಿ ಮೇರೆಗೆ ವಶಕ್ಕೆ ಪಡೆದು ವಿಚಾರಣೆ ನಡೆಸಲಿದ್ದು, ಆಕೆಯ ಹೇಳಿಕೆ ಆಧರಿಸಿ ಅಕ್ರಮದ ಹಿಂದಿರುವ ಹಲವರನ್ನು ಬಂಧಿಸುವ ಸಾಧ್ಯತೆ ಇದೆ.
ಎಫ್​ಐಆರ್​ನಲ್ಲೇನಿದೆ?:ಕೆಇಎ ಕಾರ್ಯ ನಿರ್ವಾಹಕ ನಿರ್ದೇಶಕಿ ರಮ್ಯಾ ಕೊಟ್ಟಿರುವ ದೂರಿನ ಆಧಾರದ ಮೇಲೆ ಮಲ್ಲೇಶ್ವರ ಠಾಣೆ ಪೊಲೀಸರು ಸೌಮ್ಯ ವಿರುದ್ಧ ಎಫ್​ಐಆರ್ ದಾಖಲಿಸಿಕೊಂಡಿದ್ದಾರೆ. ಕೆಇಎದಿಂದ ಮಾ.14ರಂದು ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ನೇರ ನೇಮಕಾತಿಗಾಗಿ ಸ್ಪರ್ಧಾತ್ಮಕ ಪರೀಕ್ಷೆ ನಡೆದಿದೆ.
ಮಾ.14ರಂದು ನಡೆದ ಭೂಗೋಳ ಶಾಸ್ತ್ರ ವಿಷಯದ ಪ್ರಶ್ನೆ ಪತ್ರಿಕೆಯ 18 ಪ್ರಶ್ನೆಗಳು ಪರೀಕ್ಷಾ ಸಮಯಕ್ಕಿಂತ ಮುಂಚಿತವಾಗಿ ಬೆಳಗ್ಗೆ 8.30ಕ್ಕೆ ಸೌಮ್ಯ ಮೊಬೈಲ್​ನಿಂದ ಬೇರೆ- ಬೇರೆ ಮೊಬೈಲ್​ಗಳ ವಾಟ್ಸ್​ಆಪ್​ಗಳಿಗೆ ರವಾನೆಯಾಗಿರುವ ದೂರು ಬಂದಿದೆ. ಸೌಮ್ಯ ವಾಟ್ಸ್​ಆಪ್​ನಲ್ಲಿ ರವಾನಿಸಿದ 4 ಇಮೇಜ್​ಗಳಲ್ಲಿನ 18 ಬಹು ಅಯ್ಕೆ ಮಾದರಿಯ ಉತ್ತರಸಹಿತ ಪ್ರಶ್ನೆಗಳು ಯಥಾವತ್ತಾಗಿ ಪ್ರಶ್ನೆ ಪತ್ರಿಕೆಯಲ್ಲಿ ಬಂದಿದೆ. ಸೌಮ್ಯ ಹಾಗೂ ಇತರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಎಫ್​ಐಆರ್​ನಲ್ಲಿ ಉಲ್ಲೇಖಿಸಲಾಗಿದೆ.
ಹುದ್ದೆ ಗಿಟ್ಟಿಸಲು ಪೈಪೋಟಿ:ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ಮೂಲ ವೇತನ 51,700 ರೂ. ಇದ್ದು, ಇತರೆ ಭತ್ಯೆ ಸೇರಿ ಬೆಂಗಳೂರಿನವರಿಗೆ 88 ಸಾವಿರ ರೂ. ಹಾಗೂ ಹೊರ ಜಿಲ್ಲೆಯವರಿಗೆ 78 ಸಾವಿರ ರೂ.ವರೆಗೆ ವೇತನ ದೊರೆಯುತ್ತದೆ. ಈ ಕಾರಣಕ್ಕಾಗಿ ಈ ಹುದ್ದೆಗಳನ್ನು ಗಿಟ್ಟಿಸಲು ಭಾರಿ ಪೈಪೋಟಿ ಇದೆ. ಡೀಲ್ ಮೊತ್ತ ಫಿಕ್ಸ್ ಆಗುವುದೇ ಆಯಾ ಹುದ್ದೆಗಳಿಗೆ ನಿಗದಿಯಾಗಿರುವ ವೇತನದ ಅನ್ವಯ. ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೂ ಭಾರಿ ಮೊತ್ತ ನಿಗದಿಯಾಗಿತ್ತು ಎಂದು ಹೇಳಲಾಗುತ್ತಿದೆ.
ದೂರು ಕೊಟ್ಟರೂ ನಿರ್ಲಕ್ಷ್ಯ:ಪರೀಕ್ಷಾ ಸಂಬಂಧಿತ ಸಮಸ್ಯೆಗಳಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ರೂಪಿಸಿದ್ದ ಸಹಾಯವಾಣಿಗೆ ಕರೆ ಮಾಡಿದ್ದ ಹಲವು ಅಭ್ಯರ್ಥಿಗಳು, ಪರೀಕ್ಷೆಗೂ ಮುನ್ನವೇ ಡೀಲ್ ನಡೆಯುತ್ತಿರುವ ಬಗ್ಗೆ ದೂರು ಕೊಟ್ಟಿದ್ದರು. ಆದರೆ, ಕೆಇಎ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿರಲಿಲ್ಲ. ‘ವಿಜಯವಾಣಿ’ ಕಡೆಯಿಂದಲೂ ಕರೆ ಮಾಡಿ ಅಕ್ರಮದ ಬಗ್ಗೆ ಮಾಹಿತಿ ನೀಡಲಾಗಿತ್ತು. ಆದರೆ, ಅಧಿಕಾರಿಗಳು ಸಾಕ್ಷಿ ಇದ್ದರೆ ನೀಡಿ, ಇಲ್ಲ ಸುಮ್ಮನೆ ಪರೀಕ್ಷೆ ಬರೀರಿ ಎಂದು ನಿರ್ಲಕ್ಷ್ಯ ತೋರಿದ್ದರು.
ಮೊಬೈಲ್​ನಿಂದ ಪ್ರಶ್ನೆ ರವಾನೆ!:ಭೂಗೋಳ ಶಾಸ್ತ್ರ ವಿಷಯದ ಪ್ರಶ್ನೆಪತ್ರಿಕೆಯ 18 ಪ್ರಶ್ನೆಗಳು ಪರೀಕ್ಷಾ ಸಮಯಕ್ಕಿಂತ ಮುಂಚಿತವಾಗಿ ಸೌಮ್ಯ ಅವರ ಮೊಬೈಲ್​ನಿಂದ ಬೇರೆಯವರಿಗೆ ರವಾನೆಯಾಗಿರುವುದು ಮೇಲ್ನೋಟಕ್ಕೆ ಪತ್ತೆಯಾಗಿದೆ. ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಬಳಿಕವೇ ಆಕೆಗೆ ಪ್ರಶ್ನೆಪತ್ರಿಕೆ ಯಾರಿಂದ? ಹೇಗೆ ಸಿಕ್ಕಿದೆ? ಎಂಬುದರ ಬಗ್ಗೆ ಮಾಹಿತಿ ಸಿಗಲಿದೆ. ಈ ಅಕ್ರಮದ ಕಿಂಗ್​ಪಿನ್ ಯಾರು ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಈಗಾಗಲೇ ಸೌಮ್ಯ ಅವರ ಮೊಬೈಲ್ ವಶಕ್ಕೆ ಪಡೆದು ಪರಿಶೀಲಿಸಿರುವ ಪೊಲೀಸರು, ಪ್ರಶ್ನೆಪತ್ರಿಕೆಯನ್ನು ಯಾರಿಗೆಲ್ಲ ಕಳುಹಿಸಿದ್ದಾರೆ ಎಂಬುದನ್ನು ಪತ್ತೆಹಚ್ಚಿದ್ದಾರೆ.
ಬಂಧಿತಳೂ ಅಭ್ಯರ್ಥಿ:ಸೌಮ್ಯ ಅವರು ಮೈಸೂರಿನ ಕುವೆಂಪುನಗರದ ಪಿಯುಸಿ ಕಾಲೇಜೊಂದರಲ್ಲಿ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಕಳೆದ ಮಾರ್ಚ್​ನಲ್ಲಿ ಪರೀಕ್ಷೆ ಬರೆದಿದ್ದರು. ಭೂಗೋಳಶಾಸ್ತ್ರದ ಪರೀಕ್ಷೆ ಆರಂಭವಾಗುವುದಕ್ಕಿಂತ 1 ಗಂಟೆ ಮೊದಲು ಸ್ನೇಹಿತೆಯೊಬ್ಬಳಿಗೆ 18 ಪ್ರಶ್ನೆಗಳನ್ನು ವಾಟ್ಸ್​ಆಪ್​ನಲ್ಲಿ ಸೌಮ್ಯ ಕಳುಹಿಸಿದ್ದಾರೆ. ಸೌಮ್ಯ ಸ್ನೇಹಿತೆ ಬೆಂಗಳೂರಿನ ನಿವಾಸಿ ರಾಮಕೃಷ್ಣ ಎಂಬುವವರ ಮೊಬೈಲ್​ಗೆ ಪ್ರಶ್ನೆಪತ್ರಿಕೆ ಕಳುಹಿಸಿದ್ದಳು. ನಂತರ ಪ್ರಶ್ನೆಪತ್ರಿಕೆ ಎಲ್ಲೆಡೆ ಸೋರಿಕೆ ಆಗಿದೆ. ಬೆಳಗ್ಗೆ 10 ಗಂಟೆಗೆ ನಡೆಯಬೇಕಿದ್ದ ಪರೀಕ್ಷೆಯ ಪ್ರಶ್ನೆಪತ್ರಿಕೆ ಬೆಳಿಗ್ಗೆ 8.30ಕ್ಕೆ ಸೋರಿಕೆ ಮಾಡಿರುವ ಪ್ರಮುಖ ಆರೋಪಿಗಳ ಸುಳಿವು ಪೊಲೀಸರಿಗೆ ಸಿಕ್ಕಿದೆ.
ಯಾರೀ ಸೌಮ್ಯ?:ಆರೋಪಿ ಸೌಮ್ಯ ಮೈಸೂರು ವಿಶ್ವವಿದ್ಯಾಲಯದ ಭೂಗೋಳ ಶಾಸ್ತ್ರ ವಿಭಾಗದಲ್ಲಿ ಅತಿಥಿ ಉಪನ್ಯಾಸಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೈಸೂರು ವಿವಿಯಲ್ಲೇ ಎಂ.ಎಸ್ಸಿ ಸ್ನಾತಕೋತ್ತರ ಪದವಿ ಪಡೆದು, ಜಿಐಎಸ್ ಆಂಡ್ ಅಗ್ರಿಕಲ್ಚರ್ ಜಿಯೋಗ್ರಫಿಯಲ್ಲಿ ಪಿಎಚ್​ಡಿ ಮುಗಿಸಿದ್ದಾರೆ. ಪ್ರಸ್ತುತ ಪೋಸ್ಟ್ ಡಾಕ್ಟರಲ್ ಫೆಲೋಶಿಪ್ ಅಧ್ಯಯನ ನಡೆಸುತ್ತಿದ್ದಾರೆ.
ವಿಚ್ಛೇದಿತೆ ಜತೆ 4 ವರ್ಷ ಲಿವಿಂಗ್ ಟುಗೆದರ್ ಇದ್ದು, ಮೂರನೇ ಮದ್ವೆ ಮಾಡ್ಕೊಂಡ ಭೂಪ!

ಹಿಜಾಬ್​ಗಾಗಿ ಪಿಯುಸಿ ಪರೀಕ್ಷೆಯನ್ನೇ ಬಹಿಷ್ಕರಿಸಿದ ಆರು ವಿದ್ಯಾರ್ಥಿನಿಯರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + twenty =
Remember me
