ಬೆಳಗಾವಿ:ಕೃಷಿ ಪಂಪ್​ಸೆಟ್​ಗಳಿಗೆ ಮೂಲಸೌಕರ್ಯ ಕಲ್ಪಿಸಲು ಆಗುವ ವೆಚ್ಚವನ್ನು ಸಂಪೂರ್ಣವಾಗಿ ರೈತರೇ ಭರಿಸಬೇಕು ಎಂಬ ನಿರ್ಧಾರದಿಂದ ಹಿಂದೆ ಸರಿಯಲು ಸರ್ಕಾರಕ್ಕೆ ಒಲವಿದ್ದರೂ, ಹಣಕಾಸು ಹೊರೆ ವಿಪರೀತವಾಗುವ ಹಿನ್ನೆಲೆಯಲ್ಲಿ ತೀರ್ಮಾನ ಕೈಗೊಳ್ಳಲು ಹಿಂದೇಟು ಹಾಕಿದೆ. ಇದರಿಂದ ರೈತರಿಗೆ ಹೊರೆ ಮುಂದುವರಿದಿದೆ.
ಗುರುವಾರ ನಡೆದ ಸಂಪುಟ ಸಭೆಯಲ್ಲಿ ಈ ಸಂಬಂದ ವಿಸ್ತೃ ಚರ್ಚೆಯಾಗಿದೆ. ಸಚಿವರ ಮಧ್ಯೆ ವಿಭಿನ್ನ ಅಭಿಪ್ರಾಯ ವ್ಯಕ್ತವಾದ ಕಾರಣ ಒಮ್ಮತಕ್ಕೆ ಬರಲು ಸಾಧ್ಯವಾಗಿಲ್ಲ. ಕೃಷಿ ಪಂಪ್​ಸೆಟ್​ಗಳಿಗೆ ಮೂಲಸೌಕರ್ಯ ಕಲ್ಪಿಸಲು ಆಗುವ ವೆಚ್ಚವನ್ನು ರೈತರೇ ಭರಿಸಬೇಕೆಂದು ಸರ್ಕಾರ ಸೆ. 22ರಂದು ನಿರ್ಧರಿಸಿ, ಅಕ್ಟೋಬರ್ 7ರಂದು ಆದೇಶ ಹೊರಡಿಸಿತ್ತು. ಬಳಿಕ ರೈತಾಪಿ ವರ್ಗದಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಈ ಕಾರಣಕ್ಕೆ ಇಂಧನ ಇಲಾಖೆ ಅಧಿಕಾರಿಗಳಿಗೆ ಆದೇಶ ಮರು ಪರಿಶೀಲಿಸಿ ಪ್ರಸ್ತಾವನೆ ಸಲ್ಲಿಸಲು ಸೂಚಿಸಿತ್ತು. ಆ ಪ್ರಕಾರ ಸಂಪುಟ ಸಭೆಗೆ ಇಲಾಖೆ ಮಂಡಿಸಿದ ಪ್ರಸ್ತಾವನೆ ಮೇಲೆ ಚರ್ಚೆ ನಡೆಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶ ವಾಪಸ್ ಪಡೆಯಬೇಕೆಂಬ ಅಪೇಕ್ಷೆ ವ್ಯಕ್ತಪಡಿಸಿದರು. ಆದರೆ ಈ ವೇಳೆ ಕೆಲವು ಸಚಿವರು ವಿರೋಧ ವ್ಯಕ್ತಪಡಿಸಿದರು. ಬಹುದೊಡ್ಡ ವೆಚ್ಚ ಇದಾಗಲಿದೆ. ಈ ಹೊರೆಯನ್ನು ತಡೆದುಕೊಳ್ಳುವುದು ಅಷ್ಟು ಸಲೀಸಲ್ಲ. ಹೀಗಾಗಿ ಇನ್ನೊಮ್ಮೆ ಯೋಚಿಸಿ ತೀರ್ವನಿಸುವುದು ಒಳಿತೆಂದು ಅಭಿಪ್ರಾಯ ವ್ಯಕ್ತಪಡಿಸಿದರು ಎಂದು ಮೂಲಗಳು ತಿಳಿಸಿವೆ.
ಜಲಮಾಲಿನ್ಯ ತಡೆಗೆ ಯತ್ನ:ಕರಾವಳಿ ಭಾಗದ ಜಲಮೂಲಗಳ ಮಾಲಿನ್ಯ ತಡೆಯಲು ಕೆ-ಶೋರ್ ಯೋಜನೆಯನ್ನು 840 ಕೋಟಿ ರೂ. ವೆಚ್ಚದಲ್ಲಿ ಅನುಷ್ಠಾನಗೊಳಿಸಲು ರಾಜ್ಯ ಮಟ್ಟದ ಉನ್ನತ ಮಟ್ಟದ ಸಮಿತಿ ರಚನೆ ಮಾಡಲಾಗುತ್ತಿದೆ. ಜತೆಗೆ ವಿಶೇಷ ಉದ್ದೇಶಿತ ವಾಹಕ ರಚಿಸಲಾಗುತ್ತದೆ. ಈ ಯೋಜನೆಯು ವಿಶ್ವಬ್ಯಾಂಕ್ ಶೇ.70, ಕರ್ನಾಟಕ ಸರ್ಕಾರ ಶೇ.30 ರ ಸಹಯೋಗದಲ್ಲಿ ಅನುಷ್ಠಾನವಾಗಲಿದೆ.
ಹೈಟೆಕ್ ಜೈಲು:ಶಿವಮೊಗ್ಗದಲ್ಲಿ 80 ಕೋಟಿ ರೂ. ವೆಚ್ಚದಲ್ಲಿ ಅತ್ಯುನ್ನತ ಕಾರಾಗೖಹ ಹಾಗೂ ವಸತಿಗೖಹ ನಿಮಾಣ, 20 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಭದ್ರತೆ ಉಪಕರಣ ಹಾಗೂ ಇತರೆ ಮೂಲಸೌಲಭ್ಯ ಒದಗಿಸುವ ಯೋಜನೆಗೆ ಸಂಪುಟ ಸಭೆಯು ಆಡಳಿತಾತ್ಮಕ ಅನುಮೋದನೆ ನೀಡಿದೆ. ಜೈಲಿನಲ್ಲಿ ಅತ್ಯುನ್ನತ ತಂತ್ರಜ್ಞಾನ ಬಳಕೆ ಮಾಡುವ ಮೂಲಕ ಅಕ್ರಮ ತಡೆಯಲು ಯೋಜನೆ ರೂಪಿಸಲಾಗಿದೆ. ರಾಯಚೂರು ಕೖಷಿ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಮಿಲೆಟ್ ವ್ಯಾಲ್ಯು ಚೈನ್ ಪಾರ್ಕ್ ನಿಮಾಣ ಮಾಡಲು 25 ಕೋಟಿ ರೂ. ಒದಗಿಸಲಾಗಿದೆ.
60 ತಾಲೂಕಲ್ಲಿ ಆದರ್ಶ ಪ.ಪೂ ಕಾಲೇಜು:ಆಯ್ದ 60 ಅಭಿವೖದ್ಧಿ ಆಕಾಂಕ್ಷೆಯುಳ್ಳ ತಾಲೂಕುಗಳಲ್ಲಿನ ವಿಜ್ಞಾನ ಸಂಯೋಜನೆ ಹೊಂದಿರುವ 60 ಪದವಿಪೂರ್ವ ಕಾಲೇಜುಗಳನ್ನು ಆದರ್ಶ ಪದವಿಪೂರ್ವ ಕಾಲೇಜನ್ನಾಗಿ ಪರಿವರ್ತಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಈ ಯೋಜನೆಗೆ ಆಯ್ಕೆಯಾದ ಪ್ರತಿ ಕಾಲೇಜಿಗೆ 83.30 ಲಕ್ಷದಂತೆ ಒಟ್ಟು 50 ಕೋಟಿ ರೂ. ಒದಗಿಸಲಾಗುತ್ತದೆ.
ವಿಶೇಷ ವಾಹಕ ರಚನೆ:ಕಲಬುರಗಿಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜಂಟಿ ಸಹಭಾಗಿತ್ವದಲ್ಲಿ ಪಿಎಂ ಮಿತ್ರ ಪಾರ್ಕ್ ಯೋಜನೆಯಡಿ ಜವಳಿ ಪಾರ್ಕ್ ಸ್ಥಾಪನೆ ಸಂಬಂಧ ವಿಶೇಷ ವಾಹಕ ರಚಿಸಲು ಸಂಪುಟ ಅನುಮೋದನೆ ನೀಡಿದೆ. ದೇಶಾದ್ಯಂತ ಏಳು ಸ್ಥಳಗಳಲ್ಲಿ ಜವಳಿ ಘಟಕಗಳನ್ನು ಸ್ಥಾಪಿಸುವ ಪ್ರಸ್ತಾಪ ಬಂದಾಗ ರಾಜ್ಯ ಸರ್ಕಾರ ಕಲಬುರಗಿಯಲ್ಲಿ ಈ ಘಟಕ ಸ್ಥಾಪನೆಗೆ ಶಿಫಾರಸು ಮಾಡಿತ್ತು. ಅಲ್ಲಿನ ಫಿರೋಜಾಬಾದ್​ನ ಹೊನ್ನಕಿರಣಗಿ ಎಂಬಲ್ಲಿ ಒಂದು ಸಾವಿರ ಎಕರೆ ಭೂಮಿಯನ್ನು ಈ ಜವಳಿ ಪಾರ್ಕ್ ನಿರ್ವಣಕ್ಕೆ ಮೀಸಲಿಡಲಾಗಿದೆ. ಈ ಘಟಕ ಸ್ಥಾಪನೆಯಾದ ಬಳಿಕ ಎರಡು ಲಕ್ಷದಷ್ಟು ನೇರ ಉದ್ಯೋಗ ಸಿಗುವ ಸಾಧ್ಯತೆ ಇದೆ.
ಯಲ್ಲಮ್ಮ ಗುಡ್ಡ ಪ್ರಾಧಿಕಾರ:ಅಧಿವೇಶನದಲ್ಲಿ ಮಂಡಿಸಲು 4 ಮಸೂದೆಗಳಿಗೆ ಸಂಪುಟ ಸಭೆ ಹಸಿರು ನಿಶಾನೆ ನೀಡಿದೆ. ಬಿಬಿಎಂಪಿ ಮತ್ತು ಇತರೆ ಕಾನೂನು ತಿದ್ದುಪಡಿ ವಿಧೇಯಕ, ಕರ್ನಾಟಕ ಅನುಸೂಚಿತ ಜಾತಿಗಳ ಉಪಯೋಜನೆ ಮತ್ತು ಬುಡಕಟ್ಟು ಉಪಯೋಜನೆ (ಯೋಜನೆ, ಆರ್ಥಿಕ ಸಂಪನ್ಮೂಲಗಳ ಹಂಚಿಕೆ ಮತ್ತು ಬಳಕೆ) ತಿದ್ದುಪಡಿ ವಿಧೇಯಕ ಹಾಗೂ ಹಂಪಿ ವಿಶ್ವ ಪರಂಪರೆ ನಿರ್ವಹಣೆ ಪ್ರಾಧಿಕಾರ ತಿದ್ದುಪಡಿ ವಿಧೇಯಕ ಇದೇ ಅಧಿವೇಶನದಲ್ಲಿ ಮಂಡನೆಯಾಗಲಿದೆ. ಯಲ್ಲಮ್ಮ ಗುಡ್ಡ ಅಭಿವೃದ್ಧಿ ಪ್ರಾಧಿಕಾರ ರಚಿಸಲು ಸರ್ಕಾರ ತೀರ್ವನಿಸಿದ್ದು, ಈ ಸಂಬಂಧ ವಿಧೇಯಕ ಅಧಿವೇಶನದಲ್ಲಿ ಮಂಡನೆಯಾಗುವುದು. ಸಮಾಜ ಕಲ್ಯಾಣ ಸಚಿವ ಮಹದೇವಪ್ಪ, ಯಲ್ಲಮ್ಮ ಗುಡ್ಡದಲ್ಲಿ ದಲಿತ ಹೆಣ್ಣು ಮಕ್ಕಳನ್ನು ಹೆಚ್ಚಿನ ಸಂಖ್ಯೆಯಲ್ಲಿ ದೇವದಾಸಿ ಪದ್ಧತಿಗೆ ದೂಡುತ್ತಾರೆ. ಪ್ರಾಧಿಕಾರ ಈ ಬಗ್ಗೆ ಗಮನ ಹರಿಸಬೇಕೆಂದು ಸಲಹೆ ನೀಡಿದರು.
7ಡಿ ಬ್ಲಾಕ್:ಎಸ್ಸಿ/ಎಸ್ಟಿ ಸಮುದಾಯಕ್ಕೆ ಬಜೆಟ್ ಅನುದಾನದಲ್ಲಿ ಮೀಸಲು ಇಟ್ಟ ಹಣವನ್ನು ಅನ್ಯ ಉದ್ದೇಶಕ್ಕೆ ಬಳಸಲು ಅವಕಾಶ ಕೊಡುತ್ತಿದ್ದ 7ಡಿ ಉಪಬಂಧವನ್ನು ರದ್ದು ಪಡಿಸಲು ಸರ್ಕಾರ ನಿರ್ಧರಿಸಿದೆ. ಈ ಸಂಬಂಧ ತಿದ್ದುಪಡಿ ಕಾಯ್ದೆಯನ್ನು ಸದನದಲ್ಲಿ ಮಂಡಿಸಲು ಸಂಪುಟ ಸಭೆ ನಡೆಸಿದೆ.
ನೇರ ನೇಮಕಕ್ಕೆ ಸ್ಪರ್ಧಾತ್ಮಕ ಪರೀಕ್ಷೆ:ಕಂದಾಯ ಇಲಾಖೆಯಲ್ಲಿನ ಗ್ರಾಮ ಆಡಳಿತಾಧಿಕಾರಿಗಳ ಹುದ್ದೆಯನ್ನು ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನೇರ ನೇಮಕಾತಿ ಮಾಡಲು ಸಂಪುಟ ಸಭೆ ಅನುಮೋದನೆ ನೀಡಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 4 =
Remember me
