|ಬೇಲೂರು ಹರೀಶಬೆಂಗಳೂರು
ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ಜನರು ಪಾವತಿಸುವ ಕೆಲಭಾಗ ಹಣ ಅಧಿಕಾರಿಗಳ ಖಾಸಗಿ ಖಾತೆಗೆ ವರ್ಗಾವಣೆಯಾಗಿ ದುರ್ಬಳಕೆಯಾಗುತ್ತಿರುವ ವಿಚಾರ ಬೆಳಕಿಗೆ ಬಂದ ಬೆನ್ನಲ್ಲೇ, ಸರ್ಕಾರಿ ಖಜಾನೆ ಸೇರುವ ಅದೇ ಹಣ ರಾಜ್ಯದಲ್ಲಿರುವ ನಕ್ಸಲರು ಹಾಗೂ ಉಗ್ರ ಸಂಘಟನೆಗಳ ಕೃತ್ಯಕ್ಕೂ ಬಳಕೆಯಾಗುತ್ತಿರುವ ಸ್ಪೋಟಕ ಸಂಗತಿ ಬಯಲಾಗಿದೆ.
ಉಪನೋಂದಣಿ ಕಚೇರಿಗಳಲ್ಲಿ ಆಸ್ತಿ, ಸ್ಥಿರಾಸ್ತಿ, ಕರಾರುಪತ್ರ, ಸಾಲ ತೀರುವಳಿ, ಋಣಬಾಧ್ಯತಾ ಪತ್ರ ಹಾಗೂ ಸಾಗುವಳಿ ಜಮೀನು ಒಪ್ಪಂದ ಸಂಬಂಧ ಜನರು ಪಾವತಿಸುವ ಶುಲ್ಕವನ್ನು ಸರ್ಕಾರಕ್ಕೆ ಜಮೆ ಮಾಡದೆ ಕೆಲ ಅಧಿಕಾರಿಗಳು ಕಾನೂನುಬಾಹಿರವಾಗಿ ತಮ್ಮ ವೈಯಕ್ತಿಕ ಖಾತೆಗಳಿಗೆ ವರ್ಗಾವಣೆ ಹಾಗೂ ಸೈಬರ್ ಹ್ಯಾಕ್ ಮೂಲಕ ಹವಾಲದಂತಹ ವ್ಯವಹಾರಗಳಿಗೆ ಬಳಸಿಕೊಳ್ಳುತ್ತಿರುವುದು ಇತ್ತೀಚೆಗೆ ಬಹಿರಂಗವಾಗಿತ್ತು. ಈ ಕಾರಣಕ್ಕೆ ಆನ್​ಲೈನ್ ಪಾವತಿ ವ್ಯವಸ್ಥೆ ಜಾರಿಗೊಳಿಸಲಾಗಿತ್ತು.
ಇದೀಗ ಅನಧಿಕೃತ ಅಥವಾ ಅಸ್ತಿತ್ವ ಇಲ್ಲದ ಖಾತೆಗಳಿಗೆ ಹವಾಲಾ ಹಣವನ್ನು ಜಮೆ ಮಾಡಿ ಅದು ಭಯೋತ್ಪಾದನೆ ಮತ್ತು ನಕ್ಸಲ್ ಚಟುವಟಿಕೆಗಳಿಗೆ ಪಾವತಿಯಾಗುತ್ತಿರುವ ಬಗ್ಗೆ ಬಲವಾದ ಅನುಮಾನ ಮೂಡಿದೆ. ಇಲಾಖೆಯ ಸಬ್ ರಿಜಿಸ್ಟ್ರಾರ್​ರೊಬ್ಬರು ಸರ್ಕಾರಕ್ಕೆ ಬರೆದಿರುವ ಪತ್ರದಲ್ಲಿ ಭಯೋತ್ಪಾದನೆ ಮತ್ತು ನಕ್ಸಲ್ ಚಟುವಟಿಕೆಗಳಿಗೆ ಹಣ ಸಂದಾಯವಾಗುತ್ತಿರುವ ಬಗ್ಗೆ ಸಾಕ್ಷ್ಯ ಸಮೇತ ಉಲ್ಲೇಖಿಸಿದ್ದಾರೆ. ಈ ಪತ್ರ ‘ವಿಜಯವಾಣಿ’ಗೆ ಲಭ್ಯವಾಗಿದೆ.
ಮೂಲ ಪತ್ತೆ, ಸಿಸಿಬಿಗೆ ದೂರು:ನಕ್ಸಲರು ಮತ್ತು ಭಯೋತ್ಪಾದಕ ಬೆಂಬಲಿತ ಸಂಘಟನೆಗಳಿಗೆ ಹಣ ಪಾವತಿಸಲು ಅನುಕೂಲವಾಗಲೆಂದು ನಕಲಿ ಗುರುತಿನ ಚೀಟಿ ಮತ್ತು ಪ್ಯಾನ್ ಕಾರ್ಡ್​ಗಳನ್ನು ಸೃಷ್ಟಿಸಲಾಗುತ್ತಿದೆ. ಇಂತಹ ನಕಲಿ ಖಾತೆಗಳಿಗೆ ಕಾನೂನು ಬಾಹಿರ ಚಟುವಟಿಕೆಗಳಿಗಾಗಿ ಅನ್ಯ ರಾಜ್ಯಗಳಿಂದ ಹವಾಲಾ ಹಣ ಪೂರೈಕೆಯಾಗುತ್ತಿದೆ. ಆದರೆ, ಇದರ ಮೂಲ ಎಲ್ಲಿ? ಯಾರಿಂದ? ಯಾಕೆ? ಎಂಬುದರ ಅಂಶಗಳ ಬಗ್ಗೆ ಸಮರ್ಪಕವಾಗಿ ಪರಿಶೀಲಿಸಿ ತನಿಖೆ ಕೈಗೊಳ್ಳಬೇಕು ಎಂದು ಕೇಂದ್ರ ಅಪರಾಧ ದಳಕ್ಕೆ (ಸಿಸಿಬಿ) ಸಬ್ ರಿಜಿಸ್ಟ್ರಾರ್ ದೂರು ನೀಡಿದ್ದಾರೆ.
ಪಾವತಿ ವರದಿ ಪರಿಶೀಲಿಸಿ:ಉಪನೋಂದಣಿ ಕಚೇರಿಗಳಲ್ಲಿ ಸಾಕಷ್ಟು ಅಕ್ರಮ ವ್ಯವಹಾರಗಳು ನಡೆಯುತ್ತಿವೆ. ಈ ಪೈಕಿ ಬೆರಳಣಿಕೆಯಷ್ಟು ಪ್ರಕರಣಗಳು ಮಾತ್ರ ಬೆಳಕಿಗೆ ಬರುತ್ತಿವೆ. ಈ ಬಗ್ಗೆ ಸಮರ್ಪಕವಾಗಿ ತನಿಖೆ ನಡೆಸುವ ಅಗತ್ಯವಿದೆ. ಪ್ರತಿ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಪಾವತಿ ವರದಿಯನ್ನು ಪರಿಶೀಲಿಸಿದರೆ ಅನೇಕ ಅಕ್ರಮಗಳು ಬಹಿರಂಗವಾಗಲಿವೆ.
ಶೃಂಗೇರಿಯ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಕಳೆದ ಜುಲೈನಲ್ಲಿ ಅಲ್ ಇಮ್ರಾನ್ ಎಂಬ ಫಲಾನುಭವಿ ಹೆಸರಿನಲ್ಲಿ ಮುದ್ರಾಂಕ ಶುಲ್ಕ ಅರಣ್ಯ ಇಲಾಖೆ ಶೀರ್ಷಿಕೆಯಡಿ ಪಾವತಿಯಾಗಿತ್ತು. ಈ ವೇಳೆ ಇ-ಪೇಮೆಂಟ್ ಫೈಲ್ ಸಂಖ್ಯೆ ಪರಿಶೀಲಿಸಿದಾಗ ಒಂದೇ ಸಂಖ್ಯೆಯ ತಲಾ 2 ಬಿಲ್​ಗಳಿಗೆ ಮತ್ತು ಒಂದೇ ಸಂಖ್ಯೆಯ 4 ಬಿಲ್​ಗಳು ಸೇರಿ ಒಟ್ಟು 8 ಬಿಲ್​ಗಳಿಂದ ಹಾಗೂ ಆರು ವೋಚರ್ ಸಂಖ್ಯೆಗಳಿಂದ ಈ ಹೆಸರಿಗೆ ಒಟ್ಟಾರೆ 25,96,858 ರೂ. ಪಾವತಿಯಾಗಿದೆ. ಆದರೆ, ಶೃಂಗೇರಿಯಲ್ಲಿ ಈ ಹೆಸರಿನ ಸಂಸ್ಥೆಯೇ ಇಲ್ಲ. ಗೂಗಲ್​ನಲ್ಲಿ ಶೋಧಿಸಿದಾಗ ಉಗ್ರ ಸಂಘಟನೆಗಳನ್ನು ಬೆಂಬಲಿಸಿದ ಸಂಸ್ಥೆ ಎಂದು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಇದು ದೇಶದ ಆಂತರಿಕ ಭದ್ರತೆ ಮತ್ತು ಸಾರ್ವಭೌಮತೆಗೆ ಧಕ್ಕೆ ತರಬಹುದಾದ ಆತಂಕವನ್ನು ಹುಟ್ಟು ಹಾಕಿದೆ. ಈ ಪಾವತಿಗಳು ಶೃಂಗೇರಿ ಅರಣ್ಯ ಇಲಾಖೆಗೆ ಸಂಬಂಧಪಟ್ಟಿದೆ. 2020ರ ಜುಲೈನಲ್ಲಿ ಕಚೇರಿ ಲೆಕ್ಕ ಮರು ಹೊಂದಾಣಿಕೆ ಸಂದರ್ಭ ಶೃಂಗೇರಿ ಉಪನೋಂದಣಿ ಕಚೇರಿಯ ಜಮಾ ವಿವರಗಳಲ್ಲಿ ವಾಸ್ತವವಾಗಿ ಕೇವಲ 9 ಲಕ್ಷ ರೂ. ಸರ್ಕಾರಕ್ಕೆ ಜಮಾಯಿಸಿದ್ದರೂ ಖಜಾನೆ ಇಲಾಖೆ ನಮೂನೆ ಕೆಟಿಸಿ 25ರಲ್ಲಿ 36 ಲಕ್ಷಕ್ಕಿಂತ ಅಧಿಕ ಮೊತ್ತ ದಾಖಲಾಗಿದೆ. ಹಾಗಾಗಿ 14 ಬಿಲ್​ಗಳ ಪಾವತಿ ಬಗ್ಗೆ ಪರಿಶೀಲಿಸಬೇಕಿದೆ.
2020ರ ಜು.8ರಂದು ಲೆಕ್ಕ ಶೀರ್ಷಿಕೆ 2225ರಲ್ಲಿ ಇ-ಪೇಮೆಂಟ್ ಫೈಲ್ ಸಂಖ್ಯೆ ಸೇರಿ ಇನ್ನಿತರ ಬೇರೆಬೇರೆ ಸಂಖ್ಯೆಯಲ್ಲಿ ಚಾಣಕ್ಯ ಎಂಟರ್​ಪ್ರೖೆಸಸ್ ಹೆಸರಿನಲ್ಲಿ ಒಟ್ಟಾರೆ 8,12,177 ರೂ. ಹಣ ಪಾವತಿಯಾಗಿದೆ. ಸಮಾಜ ಕಲ್ಯಾಣ, ಮಕ್ಕಳ ಮತ್ತು ಹಿಂದುಳಿದ ವರ್ಗಗಳ ಇಲಾಖೆಯ ಪೇಮೆಂಟ್ ಲೆಕ್ಕ ಶೀರ್ಷಿಕೆಗಳಡಿ ಇದು ಪಾವತಿಯಾಗಿದೆ. ಇದು ದಾವಣಗೆರೆಯ ಖಾಸಗಿ ಸಂಸ್ಥೆ ಎಂದು ಅನಧಿಕೃತವಾಗಿ ತಿಳಿದುಬಂದಿದೆ. ಸಂಸ್ಥೆಯ ಮಾಲೀಕ ಶೃಂಗೇರಿಯವರಾಗಿದ್ದು, ದಾವಣಗೆರೆ ವಿಳಾಸ ಬಳಸಿ ವ್ಯವಹರಿಸಿದ್ದಾರೆ. ಶೃಂಗೇರಿಯ ಸಮಾಜ ಕಲ್ಯಾಣಾಧಿಕಾರಿ ತಮ್ಮ ಕಚೇರಿಯಿಂದ ಸಂಸ್ಥೆಯೊಂದರ ಹೆಸರಿನಲ್ಲಿ 2017ರಿಂದ 2021ರವರೆಗೆ ಅವಧಿಯಲ್ಲಿ ಯಾವುದೇ ಬಿಲ್ ಪಾವತಿಸಿಲ್ಲ ಎಂಬುದು ಆರ್​ಟಿಐಯಲ್ಲಿ ತಿಳಿಸಿದ್ದಾರೆ. ಇದು ನಕ್ಸಲರಿಗೆ ಆರ್ಥಿಕವಾಗಿ ಹಣ ಸಂಗ್ರಹಣೆ ನಡೆಯುತ್ತಿದೆ ಎಂಬ ಅನುಮಾನ ಬರುತ್ತಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.







ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × two =
Remember me
