|ರವಿ ಗೋಸಾವಿಬೆಳಗಾವಿ
ಸಾವಯವ ಕೃಷಿಯಲ್ಲಿ ‘ಕಪ್ಪು ಬಂಗಾರ’ ಎಂದೇ ಹೆಸರಾಗಿರುವ ಎರೆಹುಳು ಗೊಬ್ಬರ ಉತ್ಪಾದನೆ ಹೆಚ್ಚಳ ಹಾಗೂ ಕೃಷಿಯಲ್ಲಿ ಉತ್ಪಾದನಾ ವೆಚ್ಚ ತಗ್ಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ‘ರೈತ ಬಂಧು’ ಎಂಬ ವಿನೂತನ ಅಭಿಯಾನ ರೂಪಿಸಿದೆ.
ಇದರಡಿ ರಾಜ್ಯದಲ್ಲಿ 1.50 ಲಕ್ಷಕ್ಕೂ ಅಧಿಕ ಎರೆಹುಳು ಗೊಬ್ಬರ ತೊಟ್ಟಿ ನಿರ್ವಣದ ಗುರಿ ಹಾಕಿಕೊಂಡಿದೆ. ಸ್ವಾತಂತೊ್ರ್ಯೕತ್ಸವದಂದು ಈ ಅಭಿಯಾನಕ್ಕೆ ಚಾಲನೆ ನೀಡಲು ರೂಪುರೇಷೆ ಸಿದ್ಧಪಡಿಸಿರುವ ಸರ್ಕಾರ, ಎಲ್ಲ ಗ್ರಾಪಂ ಅಭಿವೃದ್ಧಿ ಅಧಿಕಾರಿ, ತಾಂತ್ರಿಕ ಸಂಯೋಜಕರು, ಬಿಎಫ್​ಟಿಗಳು, ಕಾಯಕ ಮಿತ್ರ ಹಾಗೂ ಕಾಯಕ ಬಂಧುಗಳಿಗೆ ಕೃಷಿ ಇಲಾಖೆ ಮೂಲಕ ತರಬೇತಿ ನೀಡುತ್ತಿದೆ.
‘ಸಾವಯವ ನಡಿಗೆ’ ಜಾಥಾ ಮೂಲಕ ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳಲಾಗಿದೆ. ಎರೆಹುಳು ಗೊಬ್ಬರ ಬಳಕೆಯಿಂದ ಮಣ್ಣಿನ ಭೌತಿಕ, ರಾಸಾಯನಿಕ ಮತ್ತು ಜೈವಿಕ ಗುಣ ದ್ವಿಗುಣಗೊಳ್ಳುವುದಲ್ಲದೆ ಫಲವತ್ತತೆಯಿಂದ ಉತ್ಪನ್ನಗಳ ಗುಣಮಟ್ಟ ಹಾಗೂ ಶೇಖರಣೆ ಅವಧಿಯೂ ಅಧಿಕಗೊಳ್ಳುತ್ತದೆ. ಇಂದು ಕೃಷಿಯಲ್ಲಿ ಪ್ರತಿ ಎಕರೆಗೆ ಸರಾಸರಿ 6ರಿಂದ 8 ಸಾವಿರ ರೂ. ವರೆಗೆ ಉತ್ಪಾದನೆ ವೆಚ್ಚವಿದೆ. ಎರೆಹುಳು ಗೊಬ್ಬರ ಉತ್ಪಾದಿಸಿ ಬಳಸಿದರೆ ಶೇ. 25-30 ವೆಚ್ಚ ಕಡಿಮೆಯಾಗಲಿದೆ. ಈ ನಿಟ್ಟಿನಲ್ಲಿ ಸರ್ಕಾರ 5.52.71.0 ಹಾಗೂ 3.62.71.0 ಅಳತೆಯ 2 ಮಾದರಿಯ ತೊಟ್ಟಿ ನಿರ್ವಿುಸುತ್ತಿದೆ. ಪ್ರತಿ ಯೊಂದಕ್ಕೂ ಕ್ರಮವಾಗಿ 27 ಸಾವಿರ ಹಾಗೂ 21 ಸಾವಿರ ರೂ. ನಿರ್ವಣವೆಚ್ಚ ಭರಿಸಲು ನರೇಗಾದಡಿ ಕ್ರಮ ವಹಿಸಲಾಗಿದೆ.
ಯಡಿಯೂರಪ್ಪ ಬಜೆಟ್ ಆದ್ಯತೆ:ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಂಡಿಸಿದ್ದ ಕೊನೆಯ ಬಜೆಟ್​ನಲ್ಲಿ ರೈತರ ಆದಾಯ ದ್ವಿಗುಣಗೊಳಿಸುವುದು, ಕೃಷಿ ಉತ್ಪನ್ನಗಳ ವೆಚ್ಚ ತಗ್ಗಿಸುವುದು ಹಾಗೂ ಸಾವಯವ ಕೃಷಿಗೆ ಉತ್ತೇಜನ ನೀಡಲು ವಿಶೇಷ ಆದ್ಯತೆ ನೀಡಿದ್ದರು. ಅದನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿದಿದೆ.
ಎರೆಹುಳು ಗೊಬ್ಬರ ಮಾರುಕಟ್ಟೆಗೆ ನೆರವು:ಅಭಿಯಾನದ ಉದ್ದೇಶ ಈಡೇರಿಕೆಗಾಗಿ ಜಿಲ್ಲಾ ಮತ್ತು ತಾಲೂಕು ಮಟ್ಟದ ಸಮಿತಿ ರಚಿಸಿದೆ. ಜಿಪಂ ಸಿಇಒ, ಕೃಷಿ ಇಲಾಖೆ, ತೋಟಗಾರಿಕೆ, ಪಶುಸಂಗೋಪನೆ, ರೇಷ್ಮೆ ಹಾಗೂ ಅರಣ್ಯ ಇಲಾಖೆಯ ಉಪನಿರ್ದೇಶಕರು ಹಾಗೂ ಕೃಷಿ ತಜ್ಞವಿಜ್ಞಾನಿಗಳು ಸಮಿತಿಯಲ್ಲಿರಲಿದ್ದಾರೆ. ಎರೆಹುಳು ಗೊಬ್ಬರದ ಬಗ್ಗೆ ಅರಿವು ಮೂಡಿಸುವುದು, ತಾಂತ್ರಿಕ ನೆರವು, ಉತ್ಪಾದಿತ ಗೊಬ್ಬರಕ್ಕೆ ಸೂಕ್ತ ಮಾರುಕಟ್ಟೆ ಒದಗಿಸಿ ರೈತರಿಗೆ ಅನುಕೂಲ ಕಲ್ಪಿಸುವುದು ಈ ಸಮಿತಿಯ ಜವಾಬ್ದಾರಿಯಾಗಿದೆ. ರೈತರಿಗಷ್ಟೇ ಅಲ್ಲದೆ, ಮಹಿಳಾ ಸ್ವಹಾಯ ಗುಂಪುಗಳೂ ತೊಟ್ಟಿಗಳನ್ನು ನಿರ್ವಿುಸಿಕೊಂಡು ಉದ್ಯಮಶೀಲರಾಗಲು ಅವಕಾಶ ನೀಡಲಾಗಿದೆ.
ಗುರಿ ಸಾಧಿಸಿದವರಿಗೆ ಪ್ರಶಸ್ತಿ:ರೈತ ಬಂಧು ಅಭಿಯಾನವನ್ನು ಆಗಸ್ಟ್ 15ರಂದು ಆರಂಭಿಸಿ ಅಕ್ಟೋಬರ್ 15ಕ್ಕೆ ಮುಕ್ತಾಯಗೊಳಿಸುವ ಕಾಲಮಿತಿ ಹಾಕಿಕೊಳ್ಳಲಾಗಿದೆ. ಈ ಎರಡೇ ತಿಂಗಳಲ್ಲಿ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಕನಿಷ್ಠ 25ರಂತೆ ರಾಜ್ಯಾದ್ಯಂತ 1,50,375 ಎರೆಹುಳು ತೊಟ್ಟಿ ನಿರ್ಮಾಣ ಗುರಿ ಹಾಕಿಕೊಳ್ಳಲಾಗಿದೆ. ಆ ಪೈಕಿ ಬೆಳಗಾವಿಗೆ ಗರಿಷ್ಠ (12,650) ಹಾಗೂ ಬೆಂಗಳೂರಿಗೆ ಕನಿಷ್ಠ (2,325) ಸಂಖ್ಯೆಯಲ್ಲಿ ತೊಟ್ಟಿ ನಿರ್ವಣದ ಗುರಿ ನೀಡಲಾಗಿದೆ. ಉಳಿದಂತೆ ತುಮಕೂರು- 8,250, ಶಿವಮೊಗ್ಗ- 6,775, ಹಾಸನ- 6,675, ಮೈಸೂರು- 6,650, ಕಲಬುರಗಿ- 6,600 ಹಾಗೂ ಬಳ್ಳಾರಿ- 5,925 ಹೆಚ್ಚಿನ ಗುರಿ ಹೊಂದಿರುವ ಜಿಲ್ಲೆಗಳಾಗಿವೆ. ನಿಗದಿತ ಅವಧಿಯಲ್ಲಿ ಹೆಚ್ಚಿನ ಗುರಿಸಾಧನೆ ಮಾಡಿದ ಜಿಪಂ ಹಾಗೂ ತಾಪಂಗಳಿಗೆ ರಾಜ್ಯೋತ್ಸವದಂದು ಪ್ರಶಸ್ತಿಯನ್ನೂ ನೀಡಲಾಗುತ್ತದೆ.
ರೈತ ಬಂಧು ಅಭಿಯಾನದಡಿ ಗ್ರಾಪಂ, ತಾಪಂ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಪ್ರತಿ ಗ್ರಾಪಂಗೆ 25ರಂತೆ ಬೆಳಗಾವಿ ಜಿಲ್ಲೆಗೆ 12,650 ಗುರಿ ನೀಡಲಾಗಿದೆ. ಅಭಿಯಾನಕ್ಕೆ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದಂದು ಅಧಿಕೃತ ಚಾಲನೆ ನೀಡಲಾಗುವುದು.
|ದರ್ಶನ್ ಎಚ್.ವಿ.ಜಿಪಂ ಸಿಇಒ, ಬೆಳಗಾವಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − four =
Remember me
