ಬೆಳಗಾವಿ:ರಾಜ್ಯದಲ್ಲಿ ಜಾರಿಯಾಗಿರುವ ರಾಷ್ಟ್ರೀಯ ನೂತನ ಶಿಕ್ಷಣ ನೀತಿಯನ್ನು ರದ್ದುಪಡಿಸಿಲ್ಲ. ಈ ನೀತಿಯ ಆಶಯಗಳಿಗೆ ವಿರೋಧ ಇಲ್ಲದಂತೆ ಪ್ರಾದೇಶಿಕ ಸಮತೋಲನ ಕಾಪಾಡುವ, ರಾಜ್ಯ ಹಾಗೂ ವಿದ್ಯಾರ್ಥಿಗಳ ಹಿತಾಸಕ್ತಿಗೆ ಅನುಗುಣವಾದ ರಾಜ್ಯ ಶಿಕ್ಷಣ ನೀತಿ ರೂಪಿಸಬೇಕಾಗುತ್ತದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಸಮಜಾಯಿಷಿ ನೀಡಿದರು.
ವಿಧಾನ ಪರಿಷತ್​ನಲ್ಲಿ ಎನ್​ಇಪಿ ಕುರಿತ ಸುದೀರ್ಘ ಚರ್ಚೆಗೆ ಶುಕ್ರವಾರ ಉತ್ತರಿಸಿದ ಅವರು, ಕಳೆದ ಎರಡು ಶೈಕ್ಷಣಿಕ ವರ್ಷಗಳಿಂದ ಅವಳಡಿಸಿಕೊಂಡಿರುವ ಪಠ್ಯಕ್ರಮಗಳನ್ನು ಪ್ರಸ್ತುತ ಶೈಕ್ಷಣಿಕ ವರ್ಷಕ್ಕೂ ಮುಂದುವರಿಸಲಾಗಿದೆ. ಈ ಪಠ್ಯಕ್ರಮಗಳನ್ನೇ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿ ಸಮೂಹ ಹಾಗೂ ಮುಂದಿನ ವ್ಯಾಸಂಗಕ್ಕೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಅಭಯ ನೀಡಿದರು.
ಆಮೂಲಾಗ್ರ ಸುಧಾರಣೆ ಅಥವಾ ಬದಲಾವಣೆ ಎನ್ನುವುದು ಶಾಲಾ ಶಿಕ್ಷಣ ವ್ಯವಸ್ಥೆಯಿಂದಲೇ ಆರಂಭಿಸಬೇಕಾಗಿದೆ. ತಳಹದಿ ಗಟ್ಟಿಯಾಗಿದ್ದರೆ ಮಹಡಿ ಸುಭದ್ರವಾಗಿರುತ್ತದೆ. ಆದರೆ ತಳಹದಿಯಾಗಿರುವ ಶಾಲಾ ಶಿಕ್ಷಣ ಬಿಟ್ಟು, ಛಾವಣಿಯಾಗಿರುವ ಉನ್ನತ ಶಿಕ್ಷಣದಲ್ಲಿ ಎನ್​ಇಪಿ ಜಾರಿಗೊಳಿಸಿರುವುದು ಎಷ್ಟು ಸರಿ? ಎಂದು ಡಾ.ಎಂ.ಸಿ.ಸುಧಾಕರ್ ಕೇಳಿದರು.
ಹಿಂದಿನ ಶಿಕ್ಷಣ ವ್ಯವಸ್ಥೆಯ ಲೋಪಗಳು, ಗುರಿ ತಲುಪಿದ್ದರ ಬಗ್ಗೆ ಎನ್​ಇಪಿಗೆ ರಚಿತ ಸಮಿತಿಯು ಅಧ್ಯಯನ ಮಾಡಿಲ್ಲ. ಬೋಧಕರು, ಬೋಧಕೇತರ ಸಿಬ್ಬಂದಿ, ಮೂಲ ಸವಲತ್ತುಗಳ ಕುರಿತು ಶ್ವೇತಪತ್ರ ಹೊರಡಿಸಬೇಕಾದ ಅವಶ್ಯಕತೆ ಮನಗಂಡಿಲ್ಲ. ಕೌಶಲಾಭಿವೃದ್ಧಿ ತರಬೇತಿಗೆ ಬೇಕಾದ ಸವಲತ್ತು, ನುರಿತ ಸಿಬ್ಬಂದಿ ವ್ಯವಸ್ಥೆ ಬಗ್ಗೆಯೂ ಗಮನಹರಿಸಿಲ್ಲ, ಜಾಗತೀಕರಣ, ಬಹುಪ್ರವೇಶ, ಬಹು ವಿಷಯ ವ್ಯಾಸಂಗ, ವಿದೇಶದಲ್ಲಿ ಉತ್ತಮವಾದ ಶಿಕ್ಷಣ ವ್ಯವಸ್ಥೆಗೆ ಗಮನವೆಂದು ಹೇಳಿದರೆ ಸಾಲುವುದಿಲ್ಲ. ಕಾರ್ಯಸಾಧು, ಪ್ರಯೋಜನ, ಫಲಿತಾಂಶ ಆಧಾರಿತ ಆಲೋಚನಾಕ್ರಮಗಳು ಅಷ್ಟೇ ಮುಖ್ಯವಾಗಿದೆ ಎಂದರು.
ಜಿಎಸ್​ಡಿಪಿಯ ಶೇ.6 ಅನುದಾನವನ್ನು ಶಿಕ್ಷಣ ಕ್ಷೇತ್ರಕ್ಕೆ ಮೀಸಲಿಡಬೇಕು ಎಂದಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ವಿಷಯದಲ್ಲಿ ಅನಾಧಾರ ತೋರುತ್ತಿವೆ. ಎನ್​ಇಪಿ ಮಹತ್ವವನ್ನು ಸಾರುವ ಕೇಂದ್ರ ಸರ್ಕಾರ ಮೊದಲ ವರ್ಷ ಒಂದು ಲಕ್ಷ ಕೋಟಿ ರೂ. ಕ್ರಮೇಣ ಈ ಅನುದಾನ ಹೆಚ್ಚಿಸುವ ನೀತಿ-ನಿರ್ಧಾರ ಕೈಗೊಂಡಿದ್ದರೆ, ಎನ್​ಇಪಿ ವಿಚಾರದಲ್ಲಿ ಬದ್ಧತೆಯಿದೆ ಎಂದು ಒಪ್ಪಿಕೊಳ್ಳಲು ಸಾಧ್ಯವಿತ್ತು ಎಂದು ಡಾ.ಎಂ.ಸಿ.ಸುಧಾಕರ್ ಕುಟುಕಿದರು.
ಅಧ್ಯಯನ ಮಾಡಿಲ್ಲ: ಎನ್​ಇಪಿ ಪರವಾಗಿ ದೊಡ್ಡ ಧ್ವನಿ ಎತ್ತಿದವರು, ಒತ್ತಾಯಿಸಿದವರು ಅದರಲ್ಲಿರುವ ಅಂಶಗಳನ್ನು ಪೂರ್ಣವಾಗಿ ಅಧ್ಯಯನ ಮಾಡಿಲ್ಲ. ನೀತಿ ರೂಪಿಸಿದವರು ವಾಸ್ತವಿಕ ಪರಿಸ್ಥಿತಿ ಪರಿಗಣಿಸಿಲ್ಲ. ಪ್ರಾಥಮಿಕ, ಪ್ರೌಢ ಪಠ್ಯಗಳಲ್ಲಿ ತಮಗೆ ಅನುಕೂಲಕರ ವಿಚಾರ ಸೇರ್ಪಡೆ ಮಾಡಿದ್ದು, ಸಂರಚನೆಯೇ ನಿರ್ಲಕ್ಷ್ಯಕ್ಕೆ ಒಳಗಾಗಿದೆ ಎಂದರು.
ಅತಿಥಿ ಉಪನ್ಯಾಸಕರ ಮೇಲೆ ಉನ್ನತ ಶಿಕ್ಷಣ ಅವಲಂಬಿಸಿದೆ. ಮೂಲಸವಲತ್ತುಗಳನ್ನು ಪೂರ್ಣ ಪ್ರಮಾಣದಲ್ಲಿ ಒದಗಿಸಿಲ್ಲ. ವಸ್ತುಸ್ಥಿತಿ ಹೀಗಿರುವಾಗ ಬಹುಪ್ರವೇಶ, ಬಹು ವ್ಯಾಸಂಗದ ಬಗ್ಗೆ ಪ್ರಸ್ತಾಪಿಸಿರುವುದು ಅನುಷ್ಠಾನ ಯೋಗ್ಯವಲ್ಲವೆಂದು ಪ್ರತಿಪಾದಿಸಿದರು. ವಸ್ತುಸ್ಥಿತಿ ಮನವರಿಕೆಯಾಗಿದ್ದರಿಂದಲೇ ರಾಜ್ಯ ಶಿಕ್ಷಣ ನೀತಿ ರೂಪಿಸುವುದಕ್ಕೆ ರಾಜ್ಯ ಸರ್ಕಾರ ಮುಂದಾಗಿದ್ದು, ತಜ್ಞರ ಸಮಿತಿ ರಚಿಸಲಾಗಿದೆ. ರಾಷ್ಟ್ರೀಯ ನೂತನ ಶಿಕ್ಷಣ ನೀತಿಯ ಆಶಯಗಳನ್ನು ಒಳಗೊಂಡು ನೀತಿ ರೂಪಿಸಲಾಗುತ್ತದೆ ಎಂದು ಸುಧಾಕರ್ ತಿಳಿಸಿದರು.
ಮೋದಿ ವ್ಯಾಸಂಗ ಗದ್ದಲ:ವಿಶ್ವವಿದ್ಯಾಲಯ, ಕಾಲೇಜುಗಳಲ್ಲಿ ಸೆಲ್ಪಿ ಪಾಯಿಂಟ್ ಸ್ಥಾಪಿಸಲು ಯುಜಿಸಿ ಸುತ್ತೋಲೆ ಹೊರಡಿಸಿದ್ದು, ಈ ಸ್ವಾಯತ್ತ ಸಂಸ್ಥೆಯ ಬಗ್ಗೆ ಅನುಮಾನ ಉಂಟಾಗುತ್ತದೆ. ಸೆಲ್ಪಿ ಪಾಯಿಂಟ್​ನಲ್ಲಿ ಪ್ರಧಾನಿಯವರ ಫೋಟೊ ಬರುತ್ತದೆ. ಸಾಧಕರು, ದಾರ್ಶನಿಕರ ಫೋಟೊ ಬಂದಿದ್ದರೆ ಒಪ್ಪಬಹುದಿತ್ತು. ಆದರೆ ಪ್ರಧಾನಿಯವರ ವ್ಯಾಸಂಗ ಏನೆಂಬುದು ಗೊತ್ತಿಲ್ಲವೆಂದಾಗ ಬಿಜೆಪಿಯವರು ಆಕ್ಷೇಪಿಸಿದರೆ, ಆಡಳಿತ ಪಕ್ಷದವರು ಸಮರ್ಥನೆಗೆ ಇಳಿದರು. ಎರಡೂ ಕಡೆಯವರ ವಾಗ್ವಾದ, ಪರಸ್ಪರ ದೋಷಾರೋಪಣೆ, ಮನುವಾದಿಗಳು, ಬೆಂಕಿ ಹಚ್ಚುವವರು ಎಂಬ ಪರಸ್ಪರ ಹೀಗಳೆಯುವ ಭರದಲ್ಲಿ ಸಭಾಪತಿ ಪದೇಪದೆ ನೀಡಿದ ಸೂಚನೆಗೂ ಸ್ಪಂದಿಸಲಿಲ್ಲ. ಗದ್ದಲ ನಿಯಂತ್ರಣಕ್ಕೆ ಬಾರದ ಕಾರಣ ಸಭಾಪತಿ ಹೊರಟ್ಟಿಯವರು ಸದನವನ್ನು ದಿಢೀರನೆ ಸೋಮವಾರಕ್ಕೆ ಮುಂದೂಡಿದರು.
ಮೆಚ್ಚುಗೆಗೆ ತರಾತುರಿವರಿಷ್ಠರ ಮೆಚ್ಚುಗೆ ಗಳಿಸುವುದಕ್ಕಾಗಿ ಹಿಂದಿನ ಬಿಜೆಪಿ ಸರ್ಕಾರ ತರಾತುರಿಯಲ್ಲಿ ಎನ್​ಇಪಿ ಜಾರಿಗೊಳಿಸಿತು. ಶಾಲಾ ಶಿಕ್ಷಣದಲ್ಲಿ ಮೊದಲು ಜಾರಿಗೆ ತರುವ ಬದಲು ಉನ್ನತ ಶಿಕ್ಷಣದಲ್ಲಿ ಅನುಷ್ಠಾನಕ್ಕೆ ತಂದು, ರಾಷ್ಟ್ರದಲ್ಲಿ ನಾವೇ ಮೊದಲು ಎಂದು ಬೆನ್ನು ತಟ್ಟಿಕೊಂಡಿತು. ಎನ್​ಇಪಿಗೆ ಬೇಕಾದ ಬೋಧಕರು, ಪಾಠೋಕರಣ, ಪೀಠೋಪಕರಣ, ತರಗತಿ ಕೊಠಡಿಗಳು, ಸ್ಮಾರ್ಟ್ ಕ್ಲಾಸ್ ಮುಂತಾದ ಸವಲತ್ತುಗಳನ್ನು ಕಡೆಗಣಿಸಿತು. ಎನ್​ಇಪಿ ಅನುಷ್ಠಾನ ಪೂರ್ವ ರಚಿಸಿದ್ದ ಟಾಸ್ಕ್ ಫೋರ್ಸ್ ನೀಡಿದ್ದ ಸಲಹೆ, ಶಿಫಾರಸುಗಳನ್ನು ಪುರಸ್ಕರಿಸಲಿಲ್ಲ. ಬಿಜೆಪಿ ಆಡಳಿತವಿರುವ ಗುಜರಾತ್, ಮಧ್ಯಪ್ರದೇಶ ಮತ್ತಿತರ ರಾಜ್ಯಗಳಲ್ಲಿ ಎನ್​ಇಪಿ ಜಾರಿಗೆ ತರಲಿಲ್ಲ. ಆದರೆ ರಾಜ್ಯದಲ್ಲಿ ಆತುರಾತುರವಾಗಿ ತಂದಿದ್ದರಿಂದ ಅದರಲ್ಲಿರುವ ಹುಳುಕುಗಳು ಬಯಲಾಗಿದ್ದು, ಹಿಂದಿನ ಸರ್ಕಾರ ಒಂದರ್ಥದಲ್ಲಿ ದೊಡ್ಡ ಉಪಕಾರ ಮಾಡಿದೆ ಎಂದು ಡಾ.ಎಂ.ಸಿ.ಸುಧಾಕರ್ ವ್ಯಂಗ್ಯವಾಡಿದರು.
ABVP ಕೇವಲ ಸಂಘಟನೆಯಲ್ಲ, ಅದೊಂದು ಆಂದೋಲನ: ರಾಷ್ಟ್ರೀಯ ಸಮ್ಮೇಳನದಲ್ಲಿ ಅಮಿತ್ ಷಾ ಹೇಳಿಕೆ

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ: ಮೋಹನ್ ನಾಯಕ್ ಜಾಮೀನು ಮಂಜೂರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × four =
Remember me
