ಬೆಂಗಳೂರುಳ:ಇತ್ತೀಚಿನ ದಿನಗಳಲ್ಲಿ ಜೆಡಿಎಸ್ ದೊಡ್ಡಮಟ್ಟದಲ್ಲಿ ಜನ ಬೆಂಬಲ ಪಡೆಯುವಲ್ಲಿ ವಿಫಲವಾದರೂ ಆಗಿಂದಾಗ್ಗೆ ಬಿಜೆಪಿ, ಕಾಂಗ್ರೆಸ್ ಎರಡಕ್ಕೂ ಅನಿವಾರ್ಯವಾಗುತ್ತಲೇ ಇದೆ. ಇದೀಗ ವಿಧಾನಪರಿಷತ್ ವಿಚಾರದಲ್ಲೂ ಜೆಡಿಎಸ್​ಗೆ ಮನ್ನಣೆ ಸಿಗಲಿದೆ!
ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ರಚನೆಯಾದಾಗ ಕಾಂಗ್ರೆಸ್ ವಿಧಾನಪರಿಷತ್​ನ ಸಭಾಪತಿ ಸ್ಥಾನ ಪಡೆದು, ಉಪಸಭಾಪತಿ ಸ್ಥಾನ ಜೆಡಿಎಸ್​ಗೆ ಬಿಟ್ಟುಕೊಟ್ಟಿತು. ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಬಿಜೆಪಿ ವಿಧಾನಸಭೆಯಲ್ಲಿ ಬಹುಮತ ಪಡೆದು ಸರ್ಕಾರ ರಚಿಸಿತು. ಸ್ಪೀಕರ್ ಕೂಡ ಬದಲಾದರು. ಆದರೆ, ಪರಿಷತ್​ನಲ್ಲಿ ಬಿಜೆಪಿ ಬಹುಮತವಿಲ್ಲ. ಇದೀಗ ವಿಧಾನಸಭೆಯಿಂದ ಪರಿಷತ್​ಗೆ ನಡೆದಿರುವ ಚುನಾವಣೆಯಲ್ಲಿ ಬಿಜೆಪಿ ಬಲ ಹೆಚ್ಚಿಸಿಕೊಂಡಿದೆ. ಅಷ್ಟಾದರೂ ಬಹುಮತಕ್ಕೆ ಸಾಕಾಗುವಷ್ಟು ಸದಸ್ಯರನ್ನು ಹೊಂದಿಲ್ಲ.
ಈ ನಡುವೆ ಎರಡು ಪ್ರಮುಖ ಕಾರಣಕ್ಕೆ ಪರಿಷತ್​ನಲ್ಲಿ ಬಿಜೆಪಿ ಸಭಾಪತಿ ಸ್ಥಾನ ತನ್ನದಾಗಿಸಿಕೊಳ್ಳುವ ಅನಿವಾರ್ಯತೆ ಇದೆ. ಕರೊನಾ ಲಾಕ್​ಡೌನ್ ಸಂದರ್ಭದಲ್ಲಿ ಹಲವು ಸುಗ್ರಿವಾಜ್ಞೆ ತಂದಿದೆ, ಅದು ಕಾನೂನು ರೂಪ ಪಡೆದುಕೊಳ್ಳಬೇಕೆಂದರೆ ಪರಿಷತ್​ನಲ್ಲೂ ಚರ್ಚೆಯಾಗಬೇಕು, ಅನುಮತಿ ಪಡೆದುಕೊಳ್ಳಬೇಕು. ಒಂದೊಮ್ಮೆ ವಿಧಾನಸಭೆಯಿಂದ ಕಳಿಸಿದ ವಿಧೇಯಕವನ್ನು ಪರಿಷತ್​ನಲ್ಲಿ ತಿರಸ್ಕರಿಸದೇ ಸಮಿತಿಗಳಿಗೆ ನೀಡಿದರೆ ವಿಧೇಯಕಗಳು ಜಾರಿಯಾಗದೆ ಅತಂತ್ರಸ್ಥಿತಿಯಲ್ಲಿ ಒಂದಷ್ಟು ದಿನ ಉಳಿಯುತ್ತದೆ. ಈ ಕಾರಣಕ್ಕೆ ಪರಿಷತ್​ನಲ್ಲಿ ಜೆಡಿಎಸ್ ಬೆಂಬಲ ಪಡೆದು ಸಭಾಪತಿ ಸ್ಥಾನ ತನ್ನಾದಾಗಿಸಿಕೊಳ್ಳಬೇಕಾಗುತ್ತದೆ. ಜತೆಗೆ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಒಂದಷ್ಟು ಪೈಪೋಟಿ ಸಹಜ. ಸಭಾಪತಿ ಸ್ಥಾನವನ್ನು ತನ್ನದಾಗಿಸಿಕೊಂಡರೆ ಪರಿಷತ್​ನಿಂದ ಆಯ್ಕೆಯಾಗಿ ಸಚಿವರಾಗಿರುವ ಕೋಟಾ ಶ್ರೀನಿವಾಸ ಪೂಜಾರಿ ಅವರನ್ನು ಸಭಾಪತಿ ಸ್ಥಾನದಲ್ಲಿ ಕೂರಿಸಿದರೆ ಒಂದು ಹೆಚ್ಚುವರಿ ಮಂತ್ರಿ ಸ್ಥಾನ ತುಂಬಿಕೊಳ್ಳಲು ಅವಕಾಶವಿದೆ ಎಂಬ ಚರ್ಚೆ ಬಿಜೆಪಿಯಲ್ಲಿ ಇದೆ. ಇದಿನ್ನೂ ಪ್ರಾಥಮಿಕ ಹಂತದ ಚರ್ಚೆಯಷ್ಟೇ.
ಬಲಾಬಲವೇನು?
75 ಸದಸ್ಯ ಬಲದ ಮೇಲ್ಮನೆಯಲ್ಲಿ ಇತ್ತೀಚೆಗೆ ಮುಗಿದ ಪರಿಷತ್ ಚುನಾವಣೆ ಬಳಿಕ ಬಿಜೆಪಿ ಬಲ 23ಕ್ಕೇರಿದೆ. ಕಾಂಗ್ರೆಸ್ 29 ಸ್ಥಾನ ಹೊಂದಿದ್ದರೆ, ಜೆಡಿಎಸ್ 14 ಸ್ಥಾನ ಹೊಂದಿದೆ. 9 ಸ್ಥಾನ ಖಾಲಿ ಇದ್ದು, ಐದು ನಾಮ ನಿರ್ದೇಶನ ಸ್ಥಾನ ಬಿಜೆಪಿ ಪಾಲಿಗೆ ವರ. ಹೊಸ ಆಯ್ಕೆ ನಡೆದ ಕೂಡಲೆ ಬಿಜೆಪಿ ಬಲ 28ಕ್ಕೇರಿಕೆಯಾಗಲಿದೆ. ಎರಡು ಪದವೀಧರ, ಎರಡು ಶಿಕ್ಷಕರ ಕ್ಷೇತ್ರದ ಚುನಾವಣೆ ಯಾವಾಗ ನಡೆಯುತ್ತದೆಂಬ ಬಗ್ಗೆ ಸ್ಪಷ್ಟತೆ ಇಲ್ಲ. ಹೀಗಾಗಿ ಜೆಡಿಎಸ್-ಕಾಂಗ್ರೆಸ್​ನ ಪರಿಷತ್ ಮೈತ್ರಿ ಸದ್ಯಕ್ಕೆ ಅಬಾಧಿತ. ಒಂದು ವೇಳೆ ಬಿಜೆಪಿಯೇ ಪೂರ್ಣ ಬಹುಮತ ಪಡೆದುಕೊಳ್ಳುವವರೆಗೆ ಕಾಯಬೇಕೆಂದರೆ 2022ರ ಜನವರಿಯಲ್ಲಿ ಸ್ಥಳೀಯ ಸಂಸ್ಥೆಯಿಂದ ಪರಿಷತ್​ನ 25 ಸ್ಥಾನಗಳಿಗೆ ನಡೆವ ಚುನಾವಣೆವರೆಗೆ ಕಾಯಬೇಕು. ಈ 25ರಲ್ಲಿ ಹಾಲಿ ಕಾಂಗ್ರೆಸ್ 14, ಬಿಜೆಪಿ 6, ಜೆಡಿಎಸ್ 4 ಮತ್ತು ಒಬ್ಬ ಪಕ್ಷೇತರ ಆರಿಸಿಬಂದಿದ್ದಾರೆ.
ಜೆಡಿಎಸ್ ಅನಿವಾರ್ಯ
ಇದೀಗ ಜೆಡಿಎಸ್ ಆಟ ಆರಂಭವಾಗಲಿದೆ. ಪರಿಷತ್​ಗೆ ಸೀಮಿತವಾದ ಕಾಂಗ್ರೆಸ್ ಜತೆಗಿನ ಮೈತ್ರಿಯಿಂದ ಜೆಡಿಎಸ್​ಗೆ ಉಪಸಭಾಪತಿ ಸ್ಥಾನ ಸಿಕ್ಕಿದೆ. ಬಿಜೆಪಿ ಜತೆ ಮೈತ್ರಿ ಮಾಡಿಕೊಂಡರೂ ಅದೇ ಸ್ಥಾನ. ಅದಕ್ಕಿಂತ ಹೆಚ್ಚಿನದೇನು ಸಿಗದು. ಆದರೆ, ಜೆಡಿಎಸ್ ಬಗ್ಗೆ ಕಾಂಗ್ರೆಸ್ ಪ್ರತಿಜ್ಞಾ ಸಮಾರಂಭದಲ್ಲಿ ಇನ್ನೆಂದಿಗೂ ಮೈತ್ರಿ ಬೇಡ, ಲೋಕಸಭೆ ಚುನಾವಣೆಯಲ್ಲಿ ಮೈತ್ರಿಯಿಂದಲೇ ಸೋತೆವು ಎಂಬ ಕಾಂಗ್ರೆಸಿಗರ ಮಾತು ಜೆಡಿಎಸ್ ನಾಯಕರಿಗೆ ಬೇಸರ ತರಿಸಿದೆ. ಈ ಮಾತಿನ ಅಡ್ಡ ಪರಿಣಾಮವಾದರೆ ಸಭಾಪತಿ ಬಿಜೆಪಿಗೆ ಸುಲಭ ತುತ್ತು ಎಂಬ ಮಾತು ಕೇಳಿಬರುತ್ತಿದೆ.
ಮನೆಗೆ ಬರುತ್ತೇ ಫೈವ್ ಸ್ಟಾರ್​ ಹೋಟೆಲ್​ ಊಟ; ಬಟ್ಟೆನೂ ತೊಳೆದು ಕೊಡ್ತಾರೆ…!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − four =
Remember me
