ನಾಡು ಮೆಚ್ಚಿದ ನಿಸಾರ್ ಇನ್ನಿಲ್ಲ.ಆದರೆ ಅವರ ಭಾವಬುತ್ತಿಯಿಂದ ಉಣಬಡಿಸಿದ ರಸದೌತಣ ಜನರ ಸ್ಮೃತಿಪಟಲದಲ್ಲಿ ಅಚ್ಚೊತ್ತಿದೆ. ಜಾತಿ-ಧರ್ಮದ ಸರಹದ್ದನ್ನು ದಾಟಿನಿಂತ ಸಾಹಿತ್ಯ ಫಕೀರ ನಿಸಾರರನ್ನು ಸರ್ಕಾರ 2017ರಲ್ಲಿ ನಾಡಹಬ್ಬ ದಸರಾ ಉದ್ಘಾಟನೆಗೆ ಆಹ್ವಾನಿಸಿತು. ಈ ಸಂದರ್ಭದಲ್ಲಿ ವಿಜಯವಾಣಿ ಜತೆಗೆ ಮುಕ್ತ ಮನಸ್ಸಿನಿಂದ ಮಾತನಾಡಿದ್ದ ಅವರು, ನಾಡಹಬ್ಬದ ಬಗ್ಗೆ ಅವರ ಕಲ್ಪನೆ ಮಂಡಿಸಿದ್ದರು.
‘ಕುಂಭಮೇಳದಲ್ಲಿ ಕೇವಲ ಹಿಂದೂಗಳು ಸೇರುತ್ತಾರೆ, ಹಜ್​ನಲ್ಲಿ ಮುಸ್ಲಿಮರಷ್ಟೇ, ವ್ಯಾಟಿಕನ್​ನಲ್ಲಿ ಕ್ರಿಶ್ಚಿಯನರಷ್ಟೇ ಸೇರುತ್ತಾರೆ. ಆದರೆ ಮೈಸೂರು ದಸರಾ ಹಾಗಲ್ಲ. ಎಲ್ಲ ಧರ್ಮ, ಜಾತಿ, ಮತ, ಪಂಥ, ಆಚರಣೆಗಳನ್ನು ಮೀರಿ ಸೇರುತ್ತಾರೆ. ಇದು ನಮ್ಮ ದಸರಾ ವೈಶಿಷ್ಟ್ಯ’ ಎಂದು ಮೈಸೂರು ದಸರಾದ ವ್ಯಾಪಕತೆಯನ್ನು ವರ್ಣಿಸಿದ್ದರು.
‘ಮೈಸೂರು ದಸರಾವೆಂದರೆ ಸಾಮಾನ್ಯ ಉತ್ಸವವಲ್ಲ. ಧಾರ್ವಿುಕ ಬೇರನ್ನೂ ಉಳಿಸಿ ಕೊಂಡು, ಸಾಂಸ್ಕೃತಿಕವಾಗಿ ವಿಶ್ವಮಟ್ಟದಲ್ಲಿ ಸದ್ದು ಮಾಡುವ ವಿಶಿಷ್ಟ ನಾಡಹಬ್ಬ. ಅದನ್ನು ಉದ್ಘಾಟಿಸಲು ಹೆಮ್ಮೆ ಇದೆ’ ಎಂದಿದ್ದರು. ಕನ್ನಡದ ಬಗ್ಗೆ ಮಾತನಾಡಿ, ರಾಜಕೀಯ ಪ್ರತಿಷ್ಠೆಗೋಸ್ಕರ ಹಿಂದಿ ಹೇರಿಕೆ ಒಪ್ಪಲಾಗದು. ಕನ್ನಡದ ಮೇಲೆ ನಮ್ಮ ಅಭಿಮಾನ ಹೆಚ್ಚಾಗಬೇಕು. ಶಿಕ್ಷಣದಲ್ಲಿ ಕನ್ನಡ ಕಡ್ಡಾಯವಾಗಬೇಕು, ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲು ಸಿಗಬೇಕು ಎಂದು ಪ್ರತಿಪಾದಿಸಿದ್ದರು.
ತವರಿನ ಪ್ರೀತಿ: ನನಗೋ ಶಿವಮೊಗ್ಗವೆಂದರೆ ಬೆಚ್ಚಗಿನ ಅನುಭವ. ತುಂಗಾನದಿ, ಸೇತುವೆ, ಕಾಲೇಜು, ಮೀನಾಕ್ಷಿಭವನದ ಕೋಣೆ, ಮಸಾಲೆದೋಸೆ ಎಲ್ಲವೂ ನೆನಪಿಸಿಕೊಂಡು ಇಂದಿಗೂ ಖುಷಿಪಟ್ಟುಕೊಳ್ಳುತ್ತೇನೆ. ಮಲೆನಾಡಿನ ಪ್ರಕೃತಿಯೇ ನನಗೆ ಮತ್ತಷ್ಟು ಬರೆಯಲು ಸ್ಪೂರ್ತಿ. ಶಿವಮೊಗ್ಗ ಅದೊಂದು ರೀತಿ ನನಗೆ ತವರು. ತವರಿನಪ್ರೀತಿ ಮರೆಯಲು ಸಾಧ್ಯವೇ? ಎಂದಿದ್ದರು.
ರಾಜರತ್ನಂ ಗರಡಿ
ಶಾಲೆಯಲ್ಲಿ ಕಮಲಮ್ಮ ಮೇಡಂ ‘ಪುಣ್ಯಕೋಟಿ’ಯ ಹಾಡು ಹೇಳಿ ನಿಸಾರ್​ರ ಎಳೆಯ ಮನಸ್ಸನ್ನು ಪ್ರಭಾವಿಸಿಬಿಟ್ಟರು. ಸೆಂಟ್ರಲ್ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿದ್ದ ಡಾ.ಜಿ.ಪಿ.ರಾಜರತ್ನಂ ಅವರ ಸಲಹೆ, ಮಾರ್ಗದರ್ಶನದಲ್ಲಿ ನಿಸಾರ್, ಸುಮತೀಂದ್ರ ನಾಡಿಗ್ ಮತ್ತು ಲಂಕೇಶ್​ಸಾಹಿತ್ಯ ಪ್ರತಿಭೆ ಅರಳಿತು. ರಾಜರತ್ನಂ ಹೊರತಂದ ‘ಪದ್ಯಾಂಜಲಿ’ಯಲ್ಲಿ ನಿಸಾರ್​ರ ಕವನವೂ ಸೇರಿದೆ.
ನಿತ್ಯೋತ್ಸವ ಕನ್ನಡ ಭಾವಗೀತೆಯ ಮೊದಲ ಕ್ಯಾಸೆಟ್
ಟಿವಿಗಳೇ ಇಲ್ಲದ ರೇಡಿಯೋಗಳ ಸಾಮ್ರಾಜ್ಯವಿದ್ದ ಕಾಲವದು. ಕವಿಗಳ ಕಾವ್ಯಕ್ಕೆ ಆಕಾಶವಾಣಿ ಹಾಡಿನ ರೂಪ ಕೊಟ್ಟು ಮನೆಮನೆ ತಲುಪಿಸುತ್ತಿತ್ತು. ಎಪ್ಪತ್ತರ ದಶಕದ ಮಧ್ಯಂತರದಲ್ಲಿ ಇಂಥ ಹಾಡುಗಳು ಕ್ರಾಂತಿಯ ಬೀಜಾಂಕುರಕ್ಕೆ ನಾಂದಿ ಹಾಡಿದವು. ಅದು ಕ್ಯಾಸೆಟ್ ರೂಪದಲ್ಲಿ ಹಾಡುಗಳನ್ನು ತುಂಬಿಕೊಂಡು ಹೊರಬಂದ ಹೊಸ ತಂತ್ರಜ್ಞಾನ. ಖ್ಯಾತ ಸಂಗೀತ ನಿರ್ದೇಶಕ ಮೈಸೂರು ಅನಂತಸ್ವಾಮಿ ನಿಸಾರ್ ಅವರ ‘ನಿತ್ಯೋತ್ಸವ’ ಹೆಸರಿನ ಕ್ಯಾಸೆಟ್​ಗೆ ಜೀವ ಕೊಟ್ಟರು. ಅವತ್ತಿನಿಂದ ಇವತ್ತಿನವರೆಗೆ ಸಾವಿರಾರು ಕ್ಯಾಸೆಟ್​ಗಳು, ಸಿಡಿಗಳು ಬಂದಿರಬಹುದು ಆದರೆ ಇವತ್ತೂ ‘ನಿತ್ಯೋತ್ಸವ’ ನಿತ್ಯನೂತನ! ‘ಜೋಗದಸಿರಿ ಬೆಳಕಿನಲ್ಲಿ ತುಂಗೆಯ ತೆನೆ ಬಳುಕಿನಲ್ಲಿ’ ಹಾಡು ಇವತ್ತಿಗೂ ತನ್ನ ಜನಪ್ರಿಯತೆ ಬಿಟ್ಟುಕೊಟ್ಟಿಲ್ಲ. ಭಾವಗೀತೆಯಲ್ಲಿ ನಂಬರ್ 1 ಕ್ಯಾಸೆಟ್/ಸಿಡಿ ಇದ್ದರೆ ಬಹುಶಃ ನಿತ್ಯೋತ್ಸವಕ್ಕೆ ಆ ಕೀರ್ತಿ ಸಲ್ಲುತ್ತದೆ.
ಸದಭಿರುಚಿಯ ಖ್ಯಾತಿ
ನಿಸಾರ್ ಬರೆದಿರುವ ಕವನಗಳಲ್ಲಿ ಸಾವಿರಾರು ಜನರ ಮನಸ್ಸನ್ನು ಗೆದ್ದ ಕವನವೆಂದರೆ ‘ಮಾಸ್ತಿ’. ಹಲವು ವರ್ಷಗಳು ಶಾಲಾ-ಕಾಲೇಜುಗಳ ಪಠ್ಯಪುಸ್ತಕಗಳ ಗುಣಗೌರವಕ್ಕೆ ಸಂದಿರುವ ಪುಸ್ತಕ ಇದು. ಸಂಜೆಯಾಯಿತು. ಗುಟ್ಟಹಳ್ಳಿಯ ತಮ್ಮ ಮನೆಯಿಂದ ಮಾಸ್ತಿ ಗಾಂಧಿ ಬಜಾರಿನ ಕ್ಲಬ್ ಕಡೆ ಹೊರಡುತ್ತಾರೆ. ಕೈಯಲ್ಲಿ ಛತ್ರಿ ಹಿಡಿದಿದ್ದಾರೆ ಅದು ಭಿಕ್ಷುಕರ ಹುಡುಗರನ್ನು ಓಡಿಸಲು, ದನ ಕಾಗೆ ಓಡಿಸುವ ಸಲುವಾಗಿ. ನಿಧಾನವಾಗಿ ನಡೆಯುತ್ತ ದಾರಿಯಲ್ಲಿ ಕಂಡ ಜನರನ್ನು ಮಾತನಾಡಿಸಿ ಮಾಸ್ತಿ ಕ್ಲಬ್ಬಿಗೆ ಬರುತ್ತಾರೆ. ಬರುವುದು ಲೋಕಸಂಪರ್ಕಕ್ಕಾಗಿ, ಎಲೆಯ ಮೇಲಿನ ಹುಚ್ಚಿನಿಂದಲ್ಲ. ಅಲ್ಲಿಯೂ ಎಲ್ಲರೊಡನೆ ಸಂತೋಷವಾಗಿ ಮಾತನಾಡುತ್ತಾರೆ. ಸಂಜೆ ಏರಿದ ಮೇಲೆ ಮತ್ತೆ ಮನೆಗೆ ಹೊರಡುತ್ತಾರೆ. ದಾರಿಯಲ್ಲಿ ಮುಳ್ಳು ಗಾಜಿನ ಚೂರು (ಜೀವನದ ದಾರಿಯಲ್ಲಿ ಇವೆಲ್ಲ ಇದ್ದದ್ದೆ) ಪಕ್ಕಕ್ಕೆ ಎಸೆಯುತ್ತಾರೆ. ಅವರು ರಸ್ತೆಯ ಅಂಚಿನಲ್ಲಿ ಮರೆಯಾಗುವವರೆಗೆ ನಿಸಾರ್ ಕವಿತೆ ಮಾಸ್ತಿಯವರನ್ನು ಹಿಂಬಾಲಿಸುತ್ತದೆ. ಕೊನೆಗೆ ಅವರು ಚಿರಸ್ಮರಣೀಯವಾದ ಸಾಲುಗಳನ್ನು ಬರೆದಿದ್ದಾರೆ:
‘ಸಂದ ಜೀವನದೊಂದು ರೀತಿಯಂತೆ | ಸರಳ ಸದಭಿರುಚಿಯ ಖ್ಯಾತಿಯಂತೆ’
ಸಾವಿರ ಪುಟ ಮೀರಿದ ಅಭಿನಂದನಾ ಗ್ರಂಥ
ಪ್ರಾಯಶಃ ಕನ್ನಡದಲ್ಲಿ ಒಬ್ಬ ಕವಿಗೆ ಸಾವಿರ ಪುಟಗಳಿಗೂ ಮಿಕ್ಕಿದ ಬೃಹತ್ ಅಭಿನಂದನೆ ಗ್ರಂಥ ಹೊರಬಂದಿರುವುದು ದಾಖಲೆಯೇ ಸರಿ. ಆ ದಾಖಲೆ ಕವಿ ನಿಸಾರ್ ಅಹಮದ್ ಹೆಸರಿನಲ್ಲಿದೆ. ಈ ಕೃತಿಯಲ್ಲೊಂದು ವಿಶೇಷ ಇದೆ. ನಿಸಾರ್ ಅವರ ಐದು ದಶಕಗಳ ಕಾವ್ಯಸಾಧನೆಯ ಅಗಾಧ ಪ್ರಮಾಣದ ಕಾವ್ಯಕುಸುರಿಯಲ್ಲಿನ ವಸ್ತುವೈವಿಧ್ಯ ಕುರಿತು ನೂರಾರು ವಿದ್ವಾಂಸರು ಬರೆದ ಲೇಖನಗಳು ಸೇರ್ಪಡೆ ಆಗಿವೆ. ಇಲ್ಲಿ ಅವರ ವ್ಯಕ್ತಿತ್ವ, ಅವರು ಪಡೆದ ಸ್ಥಾನಮಾನಗಳ ಬಗ್ಗೆ ಯಾವುದೇ ಪ್ರಶಂಸೆ ಇಲ್ಲದಿರುವುದು ಗಮನಾರ್ಹ. ಇಷ್ಟು ದೊಡ್ಡಗಾತ್ರದ ಕೃತಿಯ ಎಲ್ಲ ಲೇಖನಗಳನ್ನೂ ನಿಸಾರರೇ ಕಣ್ಣಾಡಿಸಿ, ಸ್ವತಃ ಕರಡು ತಿದ್ದಿ, ಪುಸ್ತಕ ವಿನ್ಯಾಸಕ್ಕೂ ತಲೆಕೆಡಿಸಿಕೊಂಡಿದ್ದರು ಅನ್ನುವುದು ಗಮನಾರ್ಹ.
ಡಾ.ರಾಜ್ ಜತೆ ನಿಕಟ ಬಾಂಧವ್ಯ
ಬಹಳಷ್ಟು ವರ್ಷ ಮದ್ರಾಸ್ (ಇವತ್ತಿನ ಚೆನ್ನೈ)ನಲ್ಲಿ ನೆಲೆಸಿದ್ದ ಕನ್ನಡ ಚಿತ್ರರಂಗದ ವರನಟ ಡಾ. ರಾಜಕುಮಾರ್ ಗೋಕಾಕ್ ಚಳವಳಿಯ ಸಂದರ್ಭಕ್ಕೆ ಕರ್ನಾಟಕಕ್ಕೆ ಬಂದು ನೆಲೆಸಿದರು. ಆಗ ಕೆಲವು ಸಾಹಿತಿಗಳೊಂದಿಗೆ ನಿಕಟ ಸಂಪರ್ಕ ಬಂತು. ಅದರಲ್ಲಿ ನಿಸಾರ್ ಅಹಮದ್ ಕೂಡ ಒಬ್ಬರು. ರಾಜ್ ಭಾಗವಹಿಸುತ್ತಿದ್ದ ಕೆಲವು ಸಿನಿಮಾ ಸಮಾರಂಭಗಳಲ್ಲಿ ನಿಸಾರ್ ಅತಿಥಿಗಳಾಗಿರುತ್ತಿದ್ದರು. ಇಬ್ಬರ ಕುಟುಂಬದ ನಡುವೆ ಮಧುರ ಬಾಂಧವ್ಯ ಬೆಳೆದಿತ್ತು. ನಿಸಾರ್ ಮನೆಗೆ ರಾಜ್ ಬಂದಿದ್ದರು. ರಾಜ್ ಬಂದು ಕುಳಿತಿದ್ದ ಸ್ಥಳವನ್ನು ನಿಸಾರ್ ಗುರುತು ಹಾಕಿ ಅದನ್ನು ಪೂಜಾಸ್ಥಳದಂತೆ ನೋಡಿಕೊಂಡಿದ್ದರು.
ಅಜ್ಜ ಅಲ್ಲ ಅಂಕಲ್…
ನಿಸಾರ್ ವಯಸ್ಸಾದರೂ ಠಾಕುಠೀಕಾಗಿ ಇರುತ್ತಿದ್ದರು. ಅವರ ವೇಷಭೂಷಣ ಆಧುನಿಕವಾಗಿತ್ತು. ದೀರ್ಘವಾದ ಭಾಷಣ ಮಾಡುವುದು ಅವರ ಸ್ವಭಾವ. ಪಾಯಿಂಟ್​ಗಳನ್ನು ಬರೆದುಕೊಂಡು ಬಂದು ಭಾಷಣ ಮಾಡುತ್ತಿದ್ದರು. ಸಂದರ್ಶನವೊಂದರಲ್ಲಿ ಹೇಳಿಕೊಂಡಿರುವಂತೆ- ‘ನಾನಂತೂ ನನ್ನನ್ನು ವೃದ್ಧ ಅಂತ ಅಂದ್ಕೊಂಡೇ ಇಲ್ಲ. ಯಾರಾದರೂ ಮಕ್ಕಳು ನನ್ನನ್ನು ಅಜ್ಜ ಅಂದರೆ ಅವರಿಗೆ ಚಾಕ್ಲೇಟ್ ಕೊಟ್ಟು, ಅಂಕಲ್ ಅಂತ ಕರೀ, ಅಂತೀನಿ’.
‘ಕರೊನಾ ಹೋರಾಟದ ಮಧ್ಯೆ ಕಂಡುಬಂತು ದೇಶದ ಒಗ್ಗಟ್ಟು…’- ವಿಡಿಯೋ ಶೇರ್​ ಮಾಡಿ, ‘ಪ್ರಣಾಮಗಳು’ ಎಂದ್ರು ಪ್ರಧಾನಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × five =
Remember me
