| ಕೇಶವಮೂರ್ತಿ ವಿ.ಬಿ. /ವೈ. ಶಿವಶಂಕರ್ ಹಾವೇರಿ/ಕೆಜಿಎಫ್​
ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿನ ಮಧ್ಯವರ್ತಿಗಳ ಹಾವಳಿ ಮತ್ತು ಲಂಚಾವತಾರ ತಪ್ಪಿಸಲು ಕಂದಾಯ ಇಲಾಖೆ ಜಾರಿಗೆ ತಂದಿರುವ ಕಾವೇರಿ 2.0 ತಂತ್ರಾಂಶದಿಂದ ಜನರಿಗೆ ಅನುಕೂಲಕ್ಕಿಂತ ಅನನುಕೂಲವೇ ಹೆಚ್ಚಾಗಿದೆ. ತಾಂತ್ರಿಕ ಮೂಲಸೌಕರ್ಯವನ್ನು ಮೇಲ್ದರ್ಜೆಗೇರಿಸದ ಕಾರಣ ಸರ್ವರ್ ಸಮಸ್ಯೆ ಕಾಡುತ್ತಿದೆ. ಹೊಸ ಸಾಫ್ಟ್​ವೇರ್​ಗೆ ಲಾಗಿನ್ ಆಗಲು, ನೋಂದಣಿಗೆ ಅರ್ಜಿ ಸಲ್ಲಿಸಲು, ಹಣ ಪಾವತಿ, ಋಣಭಾರ ಪತ್ರ ಪಡೆಯಲು, ಸರ್ಟಿಫೈಡ್ ಪತ್ರ ಪಡೆಯುವುದು ಸೇರಿದಂತೆ ಪ್ರತಿಯೊಂದು ಸೇವೆಗೂ ಜನರು ಪರದಾಡುವಂತೆ ಆಗಿದೆ.
ಸಮಸ್ಯೆಗಳು ಒಂದೆರಡಲ್ಲ:ರಾಜ್ಯದ 256 ಸಬ್ ರಿಜಿಸ್ಟ್ರಾರ್ ಕಚೇರಿಗಳ ಪೈಕಿ 220 ಕಡೆಗಳಲ್ಲಿ ಕಾವೇರಿ 2.0 ತಂತ್ರಾಂಶ ಅಳವಡಿಕೆಯಾಗಿದೆ. ಪಾಸ್​ಪೋರ್ಟ್ ಮಾದರಿ ಆನ್​ಲೈನ್ ಸೇವೆ ಒದಗಿಸುವ ವ್ಯವಸ್ಥೆ ಎನ್ನಲಾಗಿದ್ದರೂ ಅವ್ಯವಸ್ಥೆಯೇ ಹೆಚ್ಚಾಗಿದೆ.
ಹಾವೇರಿ ಜಿಲ್ಲೆಯ ಹಾವೇರಿ, ಹಿರೇಕೆರೂರ, ಬ್ಯಾಡಗಿ ಸೇರಿ ಹಲವೆಡೆ ನಗರಸಭೆ ಆಸ್ತಿಗಳ ನೋಂದಣಿಗೆ ಸಲ್ಲಿಸಿರುವ ಅರ್ಜಿಗಳು ಓಪನ್ ಆಗುತ್ತಿಲ್ಲ. ಮತ್ತೊಂದೆಡೆ ಆನ್​ಲೈನ್ ಪೇಮೆಂಟ್ ಮಾಡಿದಾಗ ಬ್ಯಾಂಕ್ ಖಾತೆಯಿಂದ ಮೊತ್ತ ಕಡಿತವಾದರೂ ಖಜಾನೆ-2ಗೆ ತಲುಪಿರುವ ಮಾಹಿತಿ ಸಬ್ ರಿಜಿಸ್ಟ್ರಾರ್​ಗೆ ಸಿಗುತ್ತಿಲ್ಲ. ಪರಿಣಾಮ ಪದೇಪದೆ ಶುಲ್ಕ ಪಾವತಿಸುವಂತೆ ಆನ್​ಲೈನ್​ನಲ್ಲಿ ತೋರಿಸುತ್ತಿದೆ.
ಮಂಡ್ಯ ಜಿಲ್ಲೆ ಬನ್ನೂರು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಆಸ್ತಿ ವರ್ಗಾವಣೆ ಸಲುವಾಗಿ ನೋಂದಣಿ ಮಾಡಿದಾಗ ಡಾಕ್ಯುಮೆಂಟ್ ಸಮರಿ ರಿಪೋರ್ಟ್​ನಲ್ಲಿ ಬರೆದುಕೊಟ್ಟವರ ಮತ್ತು ಬರೆಸಿಕೊಂಡವರ ಫೋಟೋ ಮತ್ತು ಬೆರಳಚ್ಚು ಮುದ್ರಣವಾಗಿತ್ತು. ಆದರೆ ಪ್ರಮಾಣಪತ್ರದಲ್ಲಿ ಬರೆದುಕೊಟ್ಟವರ ಫೋಟೋ ಮತ್ತು ಬೆರಳಚ್ಚು ಮುದ್ರಣವಾಗದೆ ಪ್ರಿಂಟ್ ಆಗಿರುವ ಪ್ರಕರಣ ಬೆಳಕಿಗೆ ಬಂದಿದೆ.
ಕೋರ್ಟ್​ನಲ್ಲಿ ಇರುವ ಭೂವ್ಯಾಜ್ಯ, ಖಾತೆ-ಕಂದಾಯ ವರ್ಗಾವಣೆಗೆ ತಡೆಯಾಜ್ಞೆ ಕೊಟ್ಟಿರುವುದು ಪಹಣಿಯಲ್ಲಿ ಉಲ್ಲೇಖಿಸಲಾಗುತ್ತದೆ. ಆಸ್ತಿ ನೋಂದಣಿಗೂ ಮುನ್ನ ಇಸಿ (ಎನ್ಕ್ಂಬರೆನ್ಸ್ ಸರ್ಟಿಫಿಕೇಟ್) ಪಡೆದು ಮುಂದುವರಿಯುತ್ತಾರೆ. ಜನರು ಇಸಿ ಪಡೆದಾಗ ಖಚಿತ ಮಾಹಿತಿ ಸಿಗುತ್ತಿಲ್ಲ. ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ದಿನಕ್ಕೊಂದು ಸಮಸ್ಯೆ ಎದುರಾಗುತ್ತಿದೆ.
ಡಿಜಿಟಲ್ ಆಡಳಿತ, ಇ-ಆಫೀಸ್ ಅನುಷ್ಠಾನದ ದಿನಗಳಿಂದಲೂ ಕಾಡುತ್ತಿರುವ ಸರ್ವರ್ ಸಮಸ್ಯೆಯನ್ನು ಈವರೆಗೂ ಸರಿಪಡಿಸಿಲ್ಲ ಎಂಬ ದೂರು ತಾಂತ್ರಿಕ ಮೂಲಸೌಕರ್ಯದ ದುಸ್ಥಿತಿಯನ್ನು ಬಿಂಬಿಸುತ್ತಿದೆ. ಕಾಲಕ್ಕೆ ತಕ್ಕಂತೆ ಇಂಟರ್​ನೆಟ್ ಸ್ಪೀಡ್, ಬ್ಯಾಂಡ್​ವಿಡ್ತ್​ಗಳಲ್ಲಿ ಬದಲಾವಣೆ ತಂದಿಲ್ಲ. ಇದರಿಂದ ದೂರದ ಊರುಗಳಿಂದ ಸರ್ಟಿಫೈಡ್ ಕಾಪಿ (ಸಿಸಿ), ಕರಾರುಪತ್ರ, ಸಾಲ ತೀರುವಳಿ, ಋಣಬಾಧ್ಯತಾ ಪತ್ರ ಮತ್ತು ಸಾಗುವಳಿ ಜಮೀನು ಒಪ್ಪಂದ ನೋಂದಣಿ ಕಾರ್ಯಕ್ಕೆ ಆಗಮಿಸುವ ಜನರು ಬರಿಗೈಯಲ್ಲಿ ವಾಪಸ್ಸಾಗುವಂತಾಗಿದೆ.
ಸ್ಥಿರಾಸ್ತಿ ಮೇಲೆ ನೋಂದಣಿ ಆಗಿರುವ ಇತಿಹಾಸ ತಿಳಿಯಲು ಇಸಿ (ಎನ್ಕ್ಂಬರೆನ್ಸ್ ಸರ್ಟಿಫಿಕೇಟ್) ಪಡೆಯುತ್ತಾರೆ. 2004ರ ನಂತರದ ದಾಖಲೆ ನೋಂದಣಿಗೆ ಆನ್​ಲೈನ್​ನಲ್ಲಿ ಇಸಿ ಲಭ್ಯವಿದೆ. ಕಾವೇರಿ 2.0ರಲ್ಲಿ ಸರ್ಚ್ ಕೊಟ್ಟಾಗ ಋಣಭಾರ ಇಲ್ಲವೆಂದು ತೋರಿಸುತ್ತಿದೆ. ಇದರಿಂದ ರಿಯಲ್ ಎಸ್ಟೇಟ್, ಬ್ಯಾಂಕ್ ಸಾಲಸೌಲಭ್ಯ ವಿತರಣೆಗೆ ತೊಡಕಾಗಿದೆ. ಕೋರ್ಟ್ ಮೆಟ್ಟಿಲೇರಿದರೆ ಅಧಿಕಾರಿಗಳ ತಲೆದಂಡ ಖಚಿತ ಎನ್ನಲಾಗಿದೆ.
ಮಗಳ ಆಸ್ತಿಯೊಂದರ ನೋಂದಣಿಗೆ ಹಾವೇರಿ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಅರ್ಜಿ ಸಲ್ಲಿಸಿ ಒಂದು ವಾರ ಕಳೆದರೂ ನೋಂದಣಿ ಆಗಿಲ್ಲ. ಪ್ರತಿದಿನ ಹೋದಾಗ ಸರ್ವರ್ ಸಮಸ್ಯೆ ಎಂದು ಹೇಳಿ ವಾಪಸ್ ಕಳುಹಿಸುತ್ತಿದ್ದಾರೆ.
| ಗುರುಪಾದಗೌಡ ಪಾಟೀಲ, ಹಾವೇರಿ ನಿವಾಸಿ
ಪ್ರತಿ ತಾಲೂಕಿನಲ್ಲಿ ಒಂದೊಂದು ದಿನ ತಂತ್ರಾಂಶ ಅಳವಡಿಸಲಾಗುತ್ತಿದೆ. ಹೊಸ ಸಾಫ್ಟ್​ವೇರ್ ಆದ್ದರಿಂದ ಒಂದೊಂದೇ ಸಮಸ್ಯೆಗಳು ಗಮನಕ್ಕೆ ಬರುತ್ತಿವೆ. ಶೀಘ್ರವೇ ಸಮಸ್ಯೆ ಬಗೆಹರಿಯಲಿದೆ.
| ಎನ್.ಕೆ. ಹೆಸರೂರ, ಹಾವೇರಿ ಉಪ ನೋಂದಣಾಧಿಕಾರಿ
ಕೆಲವೊಮ್ಮೆ ಆನ್​ಲೈನ್ ಪೇಮೆಂಟ್ ತೆಗೆದುಕೊಳ್ಳುತ್ತಿಲ್ಲ. ಜನರ ಸಹಕಾರವೂ ಅಗತ್ಯ. ಸ್ವಲ್ಪ ದಿನದಲ್ಲಿ ಎಲ್ಲವೂ ಸರಿಯಾಗಲಿದೆ.
| ವಿಶ್ವನಾಥ ಸುಬೇದಾರ, ರಾಣೆಬೆನ್ನೂರ ಉಪ ನೋಂದಣಾಧಿಕಾರಿ
ಆದ್ಯತೆ ಮೇರೆಗೆ ಸಮಸ್ಯೆ ಪರಿಹರಿಸಲಾಗುವುದು. ಋಣಭಾರ ಪ್ರಮಾಣಪತ್ರ ಸಮಸ್ಯೆ 2-3 ದಿನಗಳಲ್ಲಿ ಬಗೆಹರಿಸಲಾಗುವುದು.
| ಶ್ರೀದೇವಿ, ಕೋಲಾರ ಜಿಲ್ಲಾ ನೋಂದಣಾಧಿಕಾರಿ


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + six =
Remember me
