ಶಿವಮೊಗ್ಗ: ಕೆಎಫ್​ಡಿ ಪಶ್ಚಿಮ ಘಟ್ಟದ ಜಿಲ್ಲೆಗಳಿಗೆ ಅಂಟಿದ ಶಾಪ. ಈ ಭಾಗದಲ್ಲಿ ಕರೊನಾಗಿಂತ ಭೀಕರವಾಗಿ ಬಾಧಿಸು ತ್ತಿರುವ ರೋಗಕ್ಕೆ ಈವರೆಗೆ ಲಕ್ಷಣ ಆಧರಿಸಿ ಚಿಕಿತ್ಸೆ ನೀಡಲಾಗುತ್ತಿದೆಯೇ ಹೊರತು ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಇದೀಗ ಸಂಶೋಧನಾ ಕೇಂದ್ರ ಎಲ್ಲಿ ಆರಂಭಿಸಬೇಕು ಎನ್ನುವ ವಿಚಾರದಲ್ಲಿ ಕಿತ್ತಾಟ ನಡೆದಿದೆ.
ಶಿವಮೊಗ್ಗ ಜಿಲ್ಲೆಗೆ ಮಂಜೂರಾಗಿರುವ ಸಂಶೋಧನಾ ಕೇಂದ್ರ ಕೇವಲ ಮಂಗನ ಕಾಯಿಲೆಗೆ ಮಾತ್ರ ಸೀಮಿತವಾಗದೆ ನಿಫಾ, ಹೆಚ್1ಎನ್1, ಡೆಂಘೆ ಸೇರಿ
ಹಲವು ವೈರಾಣುಗಳಿಂದ ಉಂಟಾಗುವ ರೋಗಗಳ ಬಗ್ಗೆ ಸಂಶೋಧನೆ ಮಾಡುವಂತಿರಬೇಕು ಎಂಬ ಆಶಯ ಆರೋಗ್ಯ ಇಲಾಖೆಯದ್ದು. ಪ್ಚಶಿಮಘಟ್ಟ ವ್ಯಾಪ್ತಿಯಲ್ಲಿ ಹೊಸದಾಗಿ ಕಾಣಿಸಿಕೊಳ್ಳುತ್ತಿರುವ ರೋಗಗಳ ಬಗ್ಗೆಯೂ ಸಂಶೋಧನೆ ನಡೆಸುವ ಉದ್ದೇಶವಿದೆ.
ಈ ವರ್ಷ ರಾಜ್ಯದಲ್ಲಿ ಕೆಎಫ್​ಡಿಗೆ ಈಗಾಗಲೇ ಆರು ಜನ ಮೃತಪಟ್ಟಿದ್ದಾರೆ. ಸೋಂಕಿತರ ಸಂಖ್ಯೆ 200 ದಾಟಿದೆ ಸಮೀಪಿಸುತ್ತಿದೆ. ಶಿವಮೊಗ್ಗ, ಉತ್ತರ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ಈ ವರ್ಷ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಬಗ್ಗೆ ರ್ಚಚಿಸಲು ಆರೋಗ್ಯ ಸಚಿವರ ಸಮ್ಮುಖದಲ್ಲಿ ಏ.15 ರಂದು ಬೆಂಗಳೂರಿನಲ್ಲಿ ಸಭೆ ಕರೆಯಲಾಗಿದ್ದು, ಈ ಸಭೆ ಔಪಚಾರಿಕವಾಗದೆ ಏನಾದರೂ ಪರಿಹಾರದ ನಿಟ್ಟಿನಲ್ಲಿ ನಿರ್ಣಯ ಕೈಗೊಳ್ಳಬಹುದು ಎನ್ನುವ ನಿರೀಕ್ಷೆ ಇದೆ.
ಸಾಗರದಲ್ಲೇ ಕೆಎಫ್​ಡಿ ಸಂಶೋಧನಾ ಕೇಂದ್ರ ಆರಂಭಿಸಬೇಕು ಎಂಬುದು ಶಾಸಕ ಹರತಾಳು ಹಾಲಪ್ಪ ಅವರ ಒತ್ತಾಯ. ಆದರೆ ಈ ಸಮಸ್ಯೆ ಕೇವಲ ಸಾಗರ ತಾಲೂಕಿಗೆ ಸೀಮಿತವಾಗಿಲ್ಲ. ಪಶ್ಚಿಮ ಘಟ್ಟದ ಜಿಲ್ಲೆಗಳಿಗೆ ಶಾಪವಾಗಿ ಪರಿಣಮಿಸಿದೆ. ಎಲ್ಲ ದೃಷ್ಟಿಯಿಂದ ಜಿಲ್ಲಾ ಕೇಂದ್ರದಲ್ಲಿ ಆರಂಭ ಮಾಡುವುದು ಸೂಕ್ತ ಎನ್ನುವುದು ಮತ್ತೊಂದು ವಾದ.
15 ಕೋಟಿ ರೂ. ಅನುದಾನ: ಸಾಗರ ತಾಲೂಕಿನ ಅರಳಗೋಡು ಗ್ರಾಮದಲ್ಲಿ ಕಳೆದ ವರ್ಷ ಕೆಎಫ್​ಡಿ ಕರಾಳ ಛಾಯೆ ಕಾಣಿಸಿಕೊಂಡಿತ್ತು. 23 ಮಂದಿ ಜಿಲ್ಲೆಯಲ್ಲಿ ಮೃತಪಟ್ಟಿದ್ದರು. ಆಗ ಕೆಎಫ್​ಡಿ ನಿಯಂತ್ರಣದಲ್ಲಿ ಆರೋಗ್ಯ ವೈಫಲ್ಯದ ಬಗ್ಗೆ ದೊಡ್ಡ ಕೂಗು ಕೇಳಿಸಿಕೊಂಡಿತ್ತು. ಇದೇ ಕಾರಣದಿಂದ ಆಗಿನ ಸರ್ಕಾರ 10 ಕೋಟಿ ರೂ. ಅನುದಾನ ಘೊಷಿಸಿ ಸಂಶೋಧನಾ ಕೇಂದ್ರ ತೆರೆಯುವುದಾಗಿ ತಿಳಿಸಿತ್ತು. ಯಡಿಯೂರಪ್ಪ ಸಿಎಂ ಆದ ಬಳಿಕ ಸಂಶೋಧನಾ ಕೇಂದ್ರದ ಅನುದಾನ 15 ಕೋಟಿ ರೂ.ಗೆ ಏರಿಕೆಯಾಯಿತು. ಸಂಶೋಧನಾ ಕೇಂದ್ರ ಸ್ಥಾಪನೆಗೆ ಸಾಗರದ ವರದಹಳ್ಳಿ ರಸ್ತೆಯ ಕೆಎಸ್​ಆರ್​ಟಿಸಿ ಡಿಪೋ ಪಕ್ಕದ 6.24 ಎಕರೆ ಪ್ರದೇಶವನ್ನು ಗುರುತಿಸಿ ಜಿಲ್ಲಾಧಿಕಾರಿಗೆ ಪ್ರಸ್ತಾವನೆ ಕಳುಹಿಸಲಾಗಿದೆ.
ಜಿಲ್ಲಾ ಕೇಂದ್ರದಲ್ಲಿ ಅನುಕೂಲಗಳೇನು?: ಈಗಾಗಲೇ ಶಿವಮೊಗ್ಗದಲ್ಲಿ ಆರ್​ಟಿಪಿಸಿಆರ್ ಕೇಂದ್ರ ಕಾರ್ಯನಿರ್ವಹಿಸುತ್ತಿದೆ. ಸಿಮ್್ಸ ಬೋಧನಾ ಆಸ್ಪತ್ರೆಯೂ ಇದೆ. ನುರಿತ ತಂತ್ರಜ್ಞರು, ವೈದ್ಯರು, ಆಧುನಿಕ ಪ್ರಯೋಗಾಲಯದ ಉಪಕರಣಗಳೂ ಲಭ್ಯವಿದೆ. ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿಗೆ ಹೊಂದಿಕೊಂಡಿರುವ ಆರ್​ಟಿಪಿಸಿಆರ್ ಕೇಂದ್ರದ ಪಕ್ಕದಲ್ಲೇ ಸಂಶೋಧನಾ ಕೇಂದ್ರ ಆರಂಭಿಸಲು ಅಗತ್ಯ ಭೂಮಿಯ ಲಭ್ಯತೆಯಿದೆ. ಮುಖ್ಯವಾಗಿ ಸಂಶೋಧನಾ ಕೇಂದ್ರದ ಅತ್ಯಾಧುನಿಕ ಯಂತ್ರೋಪಕರಣಗಳ ನಿರ್ವಹಣೆ ಹಾಗೂ ಕಾಲದಿಂದ ಕಾಲಕ್ಕೆ ಅವುಗಳ ಕ್ಷಮತೆ ನೋಡಿಕೊಳ್ಳಲು ಮುಂಬೈ ಇಲ್ಲವೇ ಬೆಂಗಳೂರಿನಿಂದ ತಂತ್ರಜ್ಞರು ಬರಬೇಕಾಗುತ್ತದೆ. ಅವರು ಜಿಲ್ಲಾ ಕೇಂದ್ರಕ್ಕೆ ಬರಲು ಮನಸ್ಸು ಮಾಡುವುದೇ ಕಷ್ಟ. ಇನ್ನು ತಾಲೂಕು ಕೇಂದ್ರದವರೆಗೂ ಹೋಗಿ ಸಂಶೋಧನಾ ಕೇಂದ್ರದ ಯಂತ್ರೋಪಕರಣಗಳ ಕ್ಷಮತೆ ಪರೀಕ್ಷಿಸುತ್ತಾರೆ ಎಂಬುದನ್ನು ನಿರೀಕ್ಷಿಸಲು ಸಾಧ್ಯವಿಲ್ಲ ಎನ್ನುತ್ತಾರೆ ಆರೋಗ್ಯ ಇಲಾಖೆ ಕೆಲ ಅಧಿಕಾರಿಗಳು. ಅಲ್ಲದೆ ಈ ವರ್ಷ ಕೆಎಫ್​ಡಿ ವೈರಾಣು ಪರೀಕ್ಷೆಗೆ ಸಂಬಂಧಿಸಿದಂತೆ ಶಿವಮೊಗ್ಗ
ಆರ್​ಟಿಪಿಸಿಆರ್ ಕೇಂದ್ರಕ್ಕೆ ನೆರೆಯ ಚಿಕ್ಕಮಗಳೂರು, ದಾವಣಗೆರೆ, ಉತ್ತರ ಕನ್ನಡ, ಚಾಮರಾಜ ನಗರ, ಬೆಳಗಾವಿ, ಮಡಿಕೇರಿ, ಹಾಸನ ಜಿಲ್ಲೆಗಳಿಂದ ರಕ್ತದ ಮಾದರಿಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲಾ ಕೇಂದ್ರದಲ್ಲಿ ಅತ್ಯಾಧುನಿಕ ಸಂಶೋಧನಾ ಕೇಂದ್ರ ಆರಂಭವಾದರೆ ಅನುಕೂಲ ಎಂಬ ಅಭಿಪ್ರಾಯ ಆರೋಗ್ಯ ಇಲಾಖೆಯಲ್ಲಿದೆ.
ಪಶ್ಚಿಮಘಟ್ಟವೇ ಆ ವಾಸಸ್ಥಾನ:ಪಶ್ಚಿಮಘಟ್ಟ ಭಾಗದಲ್ಲಿ ಕೆಎಫ್​ಡಿ ವೈರಸ್ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಮಂಗನಕಾಯಿಲೆ ಕಾಣಿಸಿಕೊಂಡಿರುವ ರಾಜ್ಯದ ಐದೂ ಜಿಲ್ಲೆಗಳು ಪಶ್ಚಿಮ ಘಟ್ಟದ ವ್ಯಾಪ್ತಿಯಲ್ಲೇ ಇವೆ. ಇನ್ನು ಚಾಮರಾಜನಗರ ಜಿಲ್ಲೆ, ತಮಿಳುನಾಡಿನ ನೀಲಗಿರಿ, ಕೇರಳದ ವೈನಾಡು ಹಾಗೂ ಮಲಪ್ಪುರಂ, ಗೋವಾ ರಾಜ್ಯದ ಪಾಲಿ, ಮಹಾರಾಷ್ಟ್ರದ ಸಾವಂತವಾಡಿ ಎಂಬ ಹಳ್ಳಿ ಕೂಡಾ ಪಶ್ಚಿಮ ಘಟ್ಟದ ವ್ಯಾಪ್ತಿಯಲ್ಲೇ ಇವೆ. ವಿಶೇಷವೆಂದರೆ ಕೆಎಫ್​ಡಿ ಪಶ್ಚಿಮಘಟ್ಟದ ನಿತ್ಯಹರಿಧ್ವರ್ಣದ ಕಾಡುಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ. ಬದಲಿಗೆ ಎಲೆ ಉದುರುವ ಕಾಡುಗಳಲ್ಲಿ ಮಾತ್ರ ಈ ವೈರಾಣು ವೃದ್ಧಿಯಾಗುತ್ತದೆ.
ಉತ್ತರ ಕನ್ನಡದಲ್ಲೂ ಕೆಎಫ್​ಡಿ
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನಲ್ಲಿ ಎರಡು ದಿನದಲ್ಲಿ ಹೊಸ 9 ಪ್ರಕರಣ ಪತ್ತೆಯಾಗಿವೆ. ಜಿಲ್ಲೆಯಲ್ಲಿ ಈ ವರ್ಷ ಒಟ್ಟಾರೆ ಸೋಂಕಿತರ ಸಂಖ್ಯೆ 33ಕ್ಕೆ ಏರಿದೆ. ನಾಲ್ವರಿಗೆ ಮಂಗನಕಾಯಿಲೆ ಇರುವುದು ಭಾನುವಾರ ದೃಢವಾಗಿದ್ದರೆ, ಸೋಮವಾರ ಇನ್ನೂ ಐದು ಹೊಸ ಪ್ರಕರಣ ಖಚಿತವಾಗಿವೆ ಎಂಬ ಮಾಹಿತಿ ಇದೆ. ಆದರೆ, ಆರೋಗ್ಯ ಅಧಿಕಾರಿಗಳು ಇದುವರೆಗೂ ಅದನ್ನು ಅಧಿಕೃತವಾಗಿ ಬಹಿರಂಗಗೊಳಿಸಿಲ್ಲ. ಕಳೆದ ವರ್ಷ 86 ಜನರಲ್ಲಿ ಸೋಂಕು ಕಂಡು ಬಂದಿತ್ತು. ಅದರಲ್ಲಿ 6 ಜನರು ಮೃತಪಟ್ಟಿದ್ದರು.
ಮತ್ತೆ ಇಬ್ಬರಿಗೆ ಮಂಗನ ಕಾಯಿಲೆ ಸೋಂಕು
ತೀರ್ಥಹಳ್ಳಿ ತಾಲೂಕಿನಲ್ಲಿ ಮತ್ತೆ ಇಬ್ಬರಿಗೆ ಕೆಎಫ್​ಡಿ ಸೋಂಕು ತಗಲುಲಿದ್ದು, ಸೋಂಕಿತರ ಸಂಖ್ಯೆ 120ಕ್ಕೇರಿದೆ. ಕೋಣಂದೂರು ಆರೋಗ್ಯ ಕೇಂದ್ರ ವ್ಯಾಪ್ತಿಯ ತೊರೆಬೈಲು ಗ್ರಾಮದ 58 ವರ್ಷ ಪ್ರಾಯದ ಶೇಷಪ್ಪ ಹಾಗೂ ಹೊದಲ ಗ್ರಾಮದ 19 ವರ್ಷದ ಸುಮನ್ ಇವರಿಗೆ ಕೆಎಫ್ ಡಿ ಸೋಂಕು ತಗುಲಿರುವುದು ಖಚಿತವಾಗಿದೆ. ಸುಮನ್ ಅವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಶೇಷಪ್ಪ ಅವರನ್ನು ತೀರ್ಥಹಳ್ಳಿ ಜೆಸಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಅರವಿಂದ ಅಕ್ಲಾಪುರ
ಊರಿಂದ ಊರಿಗೆ ಹೋಗಲು ಈ ದಂಪತಿ ಬಳಸಿದ್ದು ಏನು… ನೀವೇ ನೋಡಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − four =
Remember me
