| ರಮೇಶ ದೊಡ್ಡಪುರ ಬೆಂಗಳೂರು
ಕೇಂದ್ರ, ರಾಜ್ಯ ಸರ್ಕಾರಗಳ ಸಾಕಷ್ಟು ಯೋಜನೆಗಳ ಹೊರತಾಗಿಯೂ ದೇಶದಲ್ಲಿ ಅಪೌಷ್ಟಿಕತೆ ಸಮಸ್ಯೆ ಮುಂದಿನ ಪೀಳಿಗೆಯ ಭವಿಷ್ಯವನ್ನೇ ಮಂಕಾಗಿಸುವ ಆತಂಕ ಸೃಷ್ಟಿಸಿದೆ.
ಸರ್ಕಾರದ ಪೌಷ್ಟಿಕಾಂಶ ಪುನರ್ವಸತಿ ಕೇಂದ್ರದಲ್ಲಿ ಚಿಕಿತ್ಸೆ ಪಡೆದ ನಂತರವೂ ಶೇ.65 ಮಕ್ಕಳಲ್ಲಿ ಅಪೌಷ್ಟಿಕತೆ ಮುಂದುವರಿದಿರುವ ವಿಚಾರ ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರದ ಸಮೀಕ್ಷೆಯಲ್ಲಿ ಬಯಲಾಗಿದೆ. ದಕ್ಷಿಣಕ್ಕಿಂತ ಉತ್ತರ ಕರ್ನಾಟಕದಲ್ಲಿ, ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳಲ್ಲಿ, ಇತರ ವರ್ಗಗಳಿಗಿಂತ ಪರಿಶಿಷ್ಟ ಸಮುದಾಯಗಳಲ್ಲಿ ಈ ಸಮಸ್ಯೆ ಹೆಚ್ಚಿರುವುದು ಬೆಳಕಿಗೆ ಬಂದಿದೆ.
ಅಭಿವೃದ್ಧಿಗೆ ಅಡಚಣೆ:ಅಪೌಷ್ಟಿಕತೆ ಮಕ್ಕಳಲ್ಲಿ ಅಸ್ವಸ್ಥತೆಗೆ ಕಾರಣವಾಗುವುದರ ಜೊತೆಗೆ, ಮುಂದೆ ಅದೇ ಮಕ್ಕಳುವಯಸ್ಕರಾದಾಗ ದೈಹಿಕ ಶಕ್ತಿಯನ್ನು ಕುಂದಿಸುತ್ತದೆ. ಉತ್ಪಾದಕತೆ ಮೇಲೆ ನೇರ ಪರಿಣಾಮ ಬೀರುವ ಈ ಸಮಸ್ಯೆ ದೇಶದ ಅಭಿವೃದ್ಧಿಗೂ ಮಾರಕ. ಅಪೌಷ್ಟಿಕತೆ ನಿವಾರಿಸಲು ರಾಜ್ಯಾದ್ಯಂತ ಪೌಷ್ಟಿಕಾಂಶ ಪುನರ್ವಸತಿ ಕೇಂದ್ರ ಸ್ಥಾಪಿಸಲಾಗಿದೆ. ಇಲ್ಲಿ ಕೆಲವು ದಿನ ಮಟ್ಟಿಗೆ ತಾಯಿ ಮಗುವನ್ನು ದಾಖಲಿಸಿಕೊಂಡು ವಿಶೇಷ ಕಾಳಜಿ ನೀಡಲಾಗುತ್ತದೆ. ಅಧ್ಯಯನದ ಪ್ರಕಾರ, ಪುನರ್ವಸತಿ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆದ ನಂತರವೂ ಶೇ.65 ಮಕ್ಕಳಲ್ಲಿ ಪೌಷ್ಟಿಕಾಂಶ ಕೊರತೆ ಕಂಡುಬಂದಿದೆ. ಅಂದರೆ ಚಿಕಿತ್ಸೆ ಪಡೆದ ನಂತರವೂ ವಯಸ್ಸಿಗೆ ತಕ್ಕ ತೂಕ ಗಳಿಸಲು ಸಾಧ್ಯವಾಗಿಲ್ಲ. ಕೇಂದ್ರಗಳಲ್ಲಿ ದಾಖಲಾದ ಬಹುತೇಕ ಮಕ್ಕಳು ಬಡ ಕುಟುಂಬದವರಾಗಿದ್ದು, ಅಪೌಷ್ಟಿಕತೆ, ಬಡತನಕ್ಕೆ ನೇರ ಸಂಬಂಧ ಇರುವುದನ್ನೂ ವರದಿ ಬೊಟ್ಟು ಮಾಡಿದೆ.
ರಾಜ್ಯದಲ್ಲಿ ಅಧಿಕ
ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (ಎನ್​ಎಫ್​ಎಚ್​ಎಸ್) ಪ್ರಕಾರ ದೇಶದಲ್ಲಿ 5 ವರ್ಷದೊಳಗಿನ ಶೇ.35.8 ಮಕ್ಕಳು ವಯಸ್ಸಿಗಿಂತ ಕಡಿಮೆ ತೂಕ ಹೊಂದಿದ್ದಾರೆ. ಶೇ.38.4 ಮಕ್ಕಳು ಕುಂಠಿತ ಬೆಳವಣಿಗೆ, ಶೇ.21 ಮಕ್ಕಳು ದುರ್ಬಲ ಹಾಗೂ ಶೇ.58.5 ಮಕ್ಕಳು ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಕರ್ನಾಟಕವೂ ದೇಶದ ಸರಾಸರಿಯೊಂದಿಗೆ ಹೊಂದಿಕೆಯಾಗುವಂತೆಯೇ ಅಪೌಷ್ಟಿಕತೆ ಪ್ರಮಾಣ ಹೊಂದಿದೆ.
ನೀತಿ ಅನಿವಾರ್ಯತೆ
ಪೌಷ್ಟಿಕಾಂಶ ಪುನರ್ವಸತಿ ಕೇಂದ್ರಗಳಲ್ಲಿನ ಸಿಬ್ಬಂದಿಗೆ ತಾಂತ್ರಿಕ ತರಬೇತಿ ಹಾಗೂ ಹರಿಯಾಣ, ತಮಿಳುನಾಡು ಮಾದರಿಯಲ್ಲಿ ರಾಜ್ಯದಲ್ಲೂ ಪೌಷ್ಟಿಕಾಂಶ ನೀತಿ ತರುವ ಅಗತ್ಯವಿದೆ.
ಹೆಣ್ಣು ಮಕ್ಕಳಲ್ಲಿ ಅಧಿಕ
ಹೆಣ್ಣು ಮಕ್ಕಳಲ್ಲಿ ಅಪೌಷ್ಟಿಕತೆ ಪ್ರಮಾಣ ಹೆಚ್ಚಿದೆ. ಶೇ.60.7 ಗಂಡು ಮಕ್ಕಳು ಕಡಿಮೆ ತೂಕ ಹೊಂದಿದ್ದರೆ ಈ ಪ್ರಮಾಣ ಹೆಣ್ಣು ಮಕ್ಕಳಲ್ಲಿ ಶೇ.68.3 ಕಂಡುಬಂದಿದೆ. ಇತರೆ ಸಮುದಾಯಗಳ ಮಕ್ಕಳಲ್ಲಿ ಶೇ.63.04 ಮಕ್ಕಳು ಕಡಿಮೆ ತೂಕ ಹೊಂದಿದ್ದರೆ ಎಸ್​ಸಿ-ಎಸ್​ಟಿ ಸಮುದಾಯದ ಶೇ.71.43 ಮಕ್ಕಳು ಕಡಿಮೆ ತೂಕದಿಂದ ಬಳಲುತ್ತಿದ್ದಾರೆ.
ಉತ್ತರ ಕರ್ನಾಟಕ ಭೀಕರ
ದಕ್ಷಿಣ ಕರ್ನಾಟಕಕ್ಕೆ ಹೋಲಿಸಿದರೆ ಉತ್ತರ ಕರ್ನಾಟಕದ ಮಕ್ಕಳ ಅಪೌಷ್ಟಿಕತೆ ಅತ್ಯಂತ ಗಂಭೀರವಾಗಿದೆ. ಕಡಿಮೆ ತೂಕದ ಪ್ರಮಾಣ ದಕ್ಷಿಣ ಕರ್ನಾಟಕದಲ್ಲಿ ಶೇ.21-ಶೇ.26.5ರವರೆಗಿದ್ದರೆ ಉತ್ತರ ಕರ್ನಾಟಕದಲ್ಲಿ ಶೇ.38ರಿಂದ ಶೇ.56ರವರೆಗಿದೆ. ರಕ್ತ ಹೀನತೆ ಪ್ರಮಾಣ ದಕ್ಷಿಣ ಕರ್ನಾಟಕದಲ್ಲಿ ಶೇ.48-ಶೇ.60 ಇದ್ದರೆ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಶೇ. ಶೇ.50-ಶೇ.74ರವರೆಗಿದೆ. ಪೌಷ್ಟಿಕಾಂಶಭರಿತ ಆಹಾರದ ಅಲಭ್ಯತೆ, ನಿತ್ಯ ಜೀವನದಲ್ಲಿ ಹಣ್ಣು ತರಕಾರಿಗಳ ಸೇವನೆ ಇಲ್ಲದಿರುವುದು, ಜಾಗೃತಿಯ ಕೊರತೆ ಇದಕ್ಕೆ ಕಾರಣ ಎನ್ನಲಾಗಿದೆ.
ದಕ್ಷಿಣದಲ್ಲಿ ಹೆಚ್ಚು
ದಕ್ಷಿಣ ಭಾರತದ ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಅಪೌಷ್ಟಿಕತೆ ಪ್ರಮಾಣ ಅಧಿಕವಾಗಿದೆ. ಕಡಿಮೆ ತೂಕದ ಮಕ್ಕಳ ಪ್ರಮಾಣ ಆಂಧ್ರ ಪ್ರದೇಶದಲ್ಲಿ ಶೇ.31.9, ತೆಲಂಗಾಣದಲ್ಲಿ ಶೇ. 28.3, ತಮಿಳುನಾಡಿನಲ್ಲಿ ಶೇ. 23.8 ಹಾಗೂ ಕೇರಳದಲ್ಲಿ ಶೇ.16.1 ಇದ್ದರೆ ಕರ್ನಾಟಕದಲ್ಲಿ ಶೇ.35.2 ಇದೆ. ಅದೇ ರೀತಿ ಬೆಳವಣಿಗೆ ಕುಂಠಿತ ಮಕ್ಕಳ ಪ್ರಮಾಣ (ಶೇ. 36) ಹಾಗೂ ರಕ್ತ ಹೀನತೆಯ ಮಕ್ಕಳ ಪ್ರಮಾಣದಲ್ಲೂ (ಶೇ.60.9) ಕರ್ನಾಟಕವೇ ಅಪಾಯದ ಸ್ಥಿತಿಯಲ್ಲಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + ten =
Remember me
