ಬೆಂಗಳೂರು: ಅಧಿಕಾರಿಗಳು ಭೂಮಿ ಮೇಲಿರಿ, ಆಕಾಶದಲ್ಲಿ ಹಾರಾಡಬೇಡಿ. ಹಾಗೇ ಹಾರಾಡಿದರೆ ನಿಮ್ಮನ್ನು ಕೆಳಗಿಳಿಸುವುದು ಹೇಗೆ ಎಂಬುದು ನನಗೆ ಗೊತ್ತಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಎಚ್ಚರಿಸಿದರು.
ವಿಕಾಸ ಸೌಧದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಜಿಲ್ಲಾಧಿಕಾರಿ, ತಹಸೀಲ್ದಾರರ ಮಾಸಿಕ ಪ್ರಗತಿ ಪರಿಶೀಲನಾ ಸಭೆ ಉದ್ದೇಶಿಸಿ ಮಾತನಾಡಿದ ಅವರು, ತಹಸೀಲ್ದಾರ್ ಹಾಗೂ ಎಸಿ ನ್ಯಾಯಾಲಯಗಳಲ್ಲಿ ಬಾಕಿ ಇರುವ 1 ವರ್ಷಕ್ಕಿಂತ ಹಳೆಯ ತಕರಾರು ಅರ್ಜಿಗಳನ್ನು ಶೀಘ್ರದಲ್ಲಿ ವಿಲೇವಾರಿಗೊಳಿಸಿ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಆರು ತಿಂಗಳಿಗಿಂತ ಒಂದು ವರ್ಷದ ವರೆಗಿನ ಅತಿಹೆಚ್ಚಿನ ಸಂಖ್ಯೆಯ ತಕರಾರು ಅರ್ಜಿಗಳನ್ನು ವಿಲೇಗೊಳಿಸದೆ ಬಾಕಿ ಉಳಿಸಿಕೊಂಡಿದ್ದ ಉಪ ವಿಭಾಗಾಧಿಕಾರಿಗಳು ಹಾಗೂ ತಹಸೀಲ್ದಾರರ ವಿರುದ್ಧ ಸಚಿವರು ಹರಿಹಾಯ್ದರು.
ತಹಸೀಲ್ದಾರ್ ನ್ಯಾಯಾಲಯದಲ್ಲಿ ಒಂದು ವರ್ಷಕ್ಕಿಂತ ಹಳೆಯ 1318 ಪ್ರಕರಣಗಳು ರಾಯಚೂರಿನಲ್ಲಿ ಬಾಕಿ ಇದ್ದರೆ, ತುಮಕೂರಿನ ಎಸಿ ನ್ಯಾಯಾಲಯದಲ್ಲಿ 6590 ಪ್ರಕರಣಗಳು ಬಾಕಿ ಇವೆ. ಕೋಲಾರದಲ್ಲಿ ಆರು ತಹಸೀಲ್ದಾರರಿದ್ದೂ ಸಹ ಕಳೆದ 20 ದಿನಗಳಲ್ಲಿ ಕೇವಲ 11 ಪ್ರಕರಣಗಳನ್ನು ಮಾತ್ರ ವಿಲೇವಾರಿಗೊಳಿಸಲಾಗಿದೆ. ಬೆಂಗಳೂರು ನಗರ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಯೇನೂ ಇಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜನತಾ ದರ್ಶನದಲ್ಲಿ ಕಂದಾಯ ಇಲಾಖೆಯ ಬಗ್ಗೆಯೇ 458 ದೂರುಗಳು ದಾಖಲಾಗಿವೆ. ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಸರ್ಕಾರ ತಲೆತಗ್ಗಿಸಬೇಕಾ? ಎಂದು ಪ್ರಶ್ನಿಸಿದರು.
ಜನವರಿ 15ರ ಒಳಗಾಗಿ ಆರು ತಿಂಗಳಿಗಿಂತ ಹಳೆಯ ಎಲ್ಲ ಪ್ರಕರಣಗಳನ್ನೂ ಇತ್ಯರ್ಥಗೊಳಿಸಬೇಕು ಎಂದು ಅವರು ಸಮಯದ ಗಡುವು ನೀಡಿದರು.
ಸರ್ಕಾರದ ಸವಲತ್ತುಗಳಿಂದ ವಂಚಿತರಾಗಿರುವ ತಾಂಡ-ಗೊಲ್ಲರಹಟ್ಟಿ ಸೇರಿದಂತೆ ಜನವಸತಿ ಪ್ರದೇಶಗಳನ್ನು ಶೀಘ್ರವೇ ಕಂದಾಯ ಗ್ರಾಮಗಳನ್ನಾಗಿ ಘೋಷಿಸಬೇಕು. ಈ ಬಗ್ಗೆ ಕಳೆದ ಆರು ತಿಂಗಳಿನಿಂದ ಸೂಚನೆ ನೀಡುತ್ತಿದ್ದಾಗ್ಯೂ ಜಿಲ್ಲಾಧಿಕಾರಿಗಳು ಅರ್ಹ ತಾಂಡ-ಗೊಲ್ಲರಹಟ್ಟಿಗಳನ್ನು ಕಂದಾಯ ಗ್ರಾಮಗಳೆಂದು ಘೋಷಿಸಲು ವಿಳಂಬಮಾಡುತ್ತಿರುವುದೇಕೆ? ಎಂದು ಪ್ರಶ್ನಿಸಿದ ಸಚಿವರು, ಬಡಜನರ ಕೆಲಸಕ್ಕೆ ಮೀನಾಮೇಷ ಎಣಿಸಬೇಡಿ ಎಂದು ತರಾಟೆ ತೆಗೆದುಕೊಂಡರು. ಕಂದಾಯ ಗ್ರಾಮ ಘೋಷಣೆ ಜತೆ ಜತೆಗೇ ಎಲ್ಲ ಕುಟುಂಬಗಳಿಗೆ ಹಕ್ಕುಪತ್ರ ಸಿದ್ದಪಡಿಸುವ ಕೆಲಸವೂ ಆಗಬೇಕು. ಜನವರಿ 10ರೊಳಗೆ ಹಕ್ಕುಪತ್ರ ವಿತರಿಸಿ ಎಂದು ಜಿಲ್ಲಾಧಿಕಾರಿಗಳಿಗೆ ತಾಕೀತು ಮಾಡಿದರು.
ಕುಡಿಯುವ ನೀರಿನ ಪೂರೈಕೆಗೆ ಸಂಬಂಧಿಸಿದಂತೆ ಎಲ್ಲ ಜಿಲ್ಲಾಧಿಕಾರಿಗಳು ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಂಡಿರುವ ಬಗ್ಗೆ ಸಚಿವ ಕೃಷ್ಣ ಬೈರೇಗೌಡ ಅವರು ಮೆಚ್ಚುಗೆ ಸೂಚಿಸಿದರು.ಎಲ್ಲ ಜಿಲ್ಲೆಯಲ್ಲೂ ಜಿಲ್ಲಾಧಿಕಾರಿಗಳು ಖಾಸಗಿ ಬೋರ್ ವೆಲ್ಗೆ ಹೆಚ್ಚು ಒತ್ತುನೀಡಿ ಮತ್ತು ಬೋರ್ ವೆಲ್ ದರ ಮಾತುಕತೆಯಲ್ಲೂ ಗಮನವಿರಲಿ ಎಂದರು.ರಾಮನಗರ, ಕೋಲಾರ, ಚಿಕ್ಕ ಬಳ್ಳಾಪುರ ಮತ್ತು ಮೈಸೂರು ಜಿಲ್ಲೆಗಳಲ್ಲಿ ಕೇವಲ 35 ಬೋರ್ ವೆಲ್ ಮಾತ್ರ ಗುರುತಿಸಲಾಗಿದೆ. ಬೇಸಿಗೆಯ ಸಂದರ್ಭದಲ್ಲಿ ಇದು ಸಾಲುತ್ತಾ? ಎಂದು ಪ್ರಶ್ನಿಸಿದರು. ಟ್ಯಾಂಕರ್‌ಗಳಲ್ಲಿ ನೀರು ಪೂರೈಸುವುದಾದರೆ ಮೊದಲೇ ಟೆಂಡರ್ ಆಗಿರಬೇಕು. ತಾಲೂಕುಗಳಲ್ಲಿ ಟಾಸ್ಕ್ ಫೋರ್ಸ್ ಸಭೆ ಆಗದಿದ್ದರೆ ಕೂಡಲೇ ಮಾಡಿ ಎಂದೂ ಸೂಚಿಸಿದರು.
ಇ-ಆಫೀಸ್ ಅನ್ನು ಸಮರ್ಪಕವಾಗಿ ಬಳಸದ ಅಧಿಕಾರಿಗಳನ್ನೂ ಸಹ ಸಚಿವರು ತರಾಟೆಗೆ ತೆಗೆದುಕೊಂಡರು. ಹೆಸರಿಗೆ ಇ-ಆಫೀಸ್ ಅನುಷ್ಠಾನಗೊಳಿಸಿ ಶೇ.100 ರಷ್ಟು ಅನುಷ್ಠಾನ ಆಗದಿದ್ದರೆ ನಮ್ಮ ಉದ್ದೇಶವೇ ವ್ಯರ್ಥ ಎಂದು ಕಿಡಿಕಾರಿದರು.ಚಾಮರಾಜನಗರದಂತಹ ಅತ್ಯಂತ ಹಿಂದುಳಿದ ಜಿಲ್ಲೆಯಲ್ಲೂ ಇ-ಆಫೀಸ್ ಪರಿಣಾಮಕಾರಿಯಾಗಿ ಜಾರಿಯಾಗಿದೆ. ಆದರೆ ಮುಂದುವರೆದ ಜಿಲ್ಲೆಗಳಿಗೇನು ಕಷ್ಟ? ಎಂದು ಅಸಮಾಧಾನ ಹೊರಹಾಕಿದರು.ಮುಂದಿನ ಸೋಮವಾರದಿಂದಲೇ ಎಸಿ-ಡಿಸಿ ಹಾಗೂ ತಹಸೀಲ್ದಾರ್ ಕಚೇರಿಗಳಲ್ಲಿ ಶೇ.100 ರಷ್ಟು ಇ-ಆಫೀಸ್ ಮೂಲಕವೇ ನಿರ್ವಹಿಸಬೇಕು. ಭೌತಿಕ ದಾಖಲೆಗಳನ್ನು ಇನ್ನು ಸ್ವೀಕರಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.ರೈತರ ಒಟ್ಟಾರೆ ಜಮೀನಿನ ಸಂಪೂರ್ಣ ವಿಸ್ತೀರ್ಣವನ್ನು ಫ್ರೂಟ್ಸ್ ತಂತ್ರಾಂಶದಲ್ಲಿ ನಮೂದಿಸುವುದು, ಬಗರ್ ಹುಕುಂ ಸಮಿತಿ ರಚನೆಗೆ ಒತ್ತು ನೀಡುವುದು, ರೆಕಾರ್ಡ್ ರೂಂ ನಿರ್ವಹಣೆ ಮತ್ತು ಡಿಜಿಟಲೀಕರಣ ಸೇರಿದಂತೆ ಹಲವು ಮಹತ್ವದ ವಿಚಾರಗಳನ್ನು ಸಭೆಯಲ್ಲಿ ಚರ್ಚಿಸಲಾಯಿತು.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:fourteen − five =
Remember me
