ಬೆಂಗಳೂರು: ಎಲೆಚುಕ್ಕೆ ರೋಗ ದುಃಸ್ವಪ್ನವಾಗಿ ಕಾಡುತ್ತಿರುವ ಸಂದರ್ಭದಲ್ಲಿ ಅಡಕೆ ಬೆಳೆಗಾರರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ಅಡಕೆಯಲ್ಲಿ ಕ್ಯಾನ್ಸರ್​ಗೆ ಕಾರಣವಾಗುವ ಅಂಶಗಳಿಲ್ಲ. ಬದಲಿಗೆ ಕ್ಯಾನ್ಸರ್​ಗೇ ಅಡಕೆ ಮದ್ದು ಎಂಬುದು ವೈಜ್ಞಾನಿಕ ಸಂಶೋಧನೆಯಿಂದ ಸಾಬೀತಾಗಿದೆ.
ವಿಧಾನ ಪರಿಷತ್​ನಲ್ಲಿ ಗಮನಸೆಳೆಯುವ ಸೂಚನೆಯಡಿ ಮಂಗಳವಾರ ನಡೆದ ಚರ್ಚೆಗೆ ಗೃಹ ಸಚಿವ, ರಾಜ್ಯ ಅಡಕೆ ಟಾಸ್ಕ್ ಫೋರ್ಸ್ ಅಧ್ಯಕ್ಷ ಆರಗ ಜ್ಞಾನೇಂದ್ರ ಉತ್ತರಿಸಿದ ವೇಳೆ ಈ ವಿಷಯ ಬಹಿರಂಗಪಡಿಸಿದರು. ಪ್ರತಿಷ್ಠಿತ ಎಂ.ಎಸ್.ರಾಮಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ಪ್ರಯೋಗಗಳು, ಅಧ್ಯಯನ ನಡೆಸಿದ ವರದಿಯನ್ನು ಅಡಕೆ ಕಾರ್ಯಪಡೆಗೆ ಮಂಗಳವಾರ ಸಲ್ಲಿಸಿದೆ. ಅಡಕೆ ಉತ್ಪನ್ನವು ಆರೋಗ್ಯಕ್ಕೆ ಪೂರಕವೆಂದು ವೈಜ್ಞಾನಿಕವಾಗಿ ಸಾಬೀತುಪಡಿಸಿದ್ದು, ಯಾವುದೇ ಹಾನಿಕಾರಕ ಅಂಶಗಳಿಲ್ಲ ಎನ್ನುವುದನ್ನು ದೃಢಪಡಿಸಿದೆ.
ಸಂಸ್ಥೆಯು ನಡೆಸಿದ ಪ್ರಾಥಮಿಕ ಸಂಶೋಧನೆಗಳ ಪ್ರಕಾರ ಕ್ಯಾನ್ಸರ್​ಕಾರಕ ಅಂಶಗಳಿಲ್ಲ, ಅದನ್ನು ಗುಣಪಡಿಸಲು ಬೇಕಾದ ಔಷಧೀಯ ಅಂಶಗಳಿವೆ. ಅಷ್ಟೇ ಅಲ್ಲ, ತೀವ್ರತರಹದ ಗಾಯ ಗುಣಪಡಿಸುವ, ಮಧುಮೇಹ ಸಮಸ್ಯೆ ನಿಯಂತ್ರಣ, ಹೃದಯ ಸಂಬಂಧಿತ ಕಾಯಿಲೆಗಳು, ಉದರದ ಅಲ್ಸರ್ ಹಾಗೂ ಇನ್ನಿತರ ಸಮಸ್ಯೆಗಳ ಪರಿಹಾರಕ್ಕೆ ಆಶಾದಾಯಕ ಫಲಿತಾಂಶಗಳು ಬಂದಿವೆ ಎಂದು ವಿವರಿಸಿದರು.
ಸುಪ್ರೀಂ ಕೋರ್ಟ್​ಗೆ ವರದಿ ಸಲ್ಲಿಕೆ: ಸುಪ್ರೀಂ ಕೋರ್ಟ್​ಗೆ ಈ ವರದಿ ಸಲ್ಲಿಸಬೇಕೆಂದು ಸದನ ಒಕ್ಕೊರಲಿನಿಂದ ಒತ್ತಾಯಿಸಿದಾಗ ಆರಗ ಜ್ಞಾನೇಂದ್ರ ಪ್ರತಿಕ್ರಿಯಿಸಿ, ಅಡಕೆ ಸೇವನೆಯಿಂದ ಆಗುವ ಆರೋಗ್ಯದ ಲಾಭಗಳ ಕುರಿತು ಕಂಡು ಬಂದಿರುವ ವೈಜ್ಞಾನಿಕ ಸಂಶೋಧನಾ ವರದಿಗಳನ್ನು ರಾಜ್ಯದ ವಕೀಲರ ಮೂಲಕ ಸುಪ್ರೀಂ ಕೋರ್ಟ್​ಗೆ ಸಲ್ಲಿಸಲಾಗುವುದು ಎಂದರು. ಅಡಕೆಯಲ್ಲಿ ಕ್ಯಾನ್ಸರ್​ಕಾರಕ ಅಂಶಗಳಿವೆ ಎಂದು ಸುಪ್ರೀಂ ಕೋರ್ಟ್​ಗೆ ಕೇಂದ್ರ ಸರ್ಕಾರ ವರದಿ ಸಲ್ಲಿಸಿತ್ತು. ಇದರಿಂದಾಗಿ ಅಡಕೆ ಬೆಳೆಗಾರರ ಮೇಲೆ ಆತಂಕದ ತೂಗುಗತ್ತಿಯಿತ್ತು. ಇದೀಗ ಅಡಿಕೆ ಸೇವನೆಯಿಂದ ಹತ್ತು ಹಲವು ಲಾಭಗಳಿವೆ ಎಂದು ತಜ್ಞರ ಸಂಶೋಧನಾ ವರದಿಯಿಂದ ವೇದ್ಯವಾಗಿದೆ ಎಂದು ಹೇಳಿದರು. ಇದಕ್ಕೂ ಮುನ್ನ ಬಿಜೆಪಿಯ ಕೆ.ಪ್ರತಾಪಸಿಂಹ ನಾಯಕ ಅವರು ತುರ್ತು ಮಹತ್ವದ ವಿಷಯದಡಿ ಅಡಕೆ ಬೆಳೆಗೆ ಎಲೆಚುಕ್ಕ ರೋಗ ಉಲ್ಬಣಿಸಿರುವತ್ತ ಸರ್ಕಾರದ ಗಮನಸೆಳೆದಾಗ ಆರಗ ಜ್ಞಾನೇಂದ್ರ ಉತ್ತರಿಸಿ, ಕೇಂದ್ರ ಸರ್ಕಾರ ನೇಮಿಸಿರುವ ವೈಜ್ಞಾನಿಕ ತಂಡವು ರೋಗಬಾಧಿತ ಶಿವಮೊಗ್ಗ, ದಕ್ಷಿಣಕನ್ನಡ ಹಾಗೂ ಚಿಕ್ಕಮಗಳೂರು ಜಿಲೆಗಳಿಗೆ ಭೇಟಿ ನೀಡಿ ಪರಿಹಾರೋಪಾಯಗಳನ್ನು ಶಿಫಾರಸು ಮಾಡಿದೆ. ದೀರ್ಘಾವಧಿಗೆ ಮೋಡ ಮುಸುಕಿದ ವಾತಾವರಣ ಎಲೆಚುಕ್ಕೆ ರೋಗ ಹುಟ್ಟುಹಾಕಿದ್ದು, ಗಾಳಿಯಲ್ಲಿ ಹರಡುತ್ತಿರುವುದು ಸಮಸ್ಯೆ ಉಲ್ಬಣಕ್ಕೆ ಕಾರಣವಾಗಿದೆ. ವಿಜ್ಞಾನಿಗಳ ತಂಡದ ಶಿಫಾರಸಿನಂತೆ ಸಸ್ಯ ಸಂರಕ್ಷಣಾ ಔಷಧಿಯನ್ನು ರೈತರಿಗೆ ತಲಾ ಹೆಕ್ಟೇರ್​ಗೆ ನಾಲ್ಕು ಸಾವಿರ ರೂ. ಸಹಾಯಧನ ನೀಡಲಾಗುತ್ತಿದೆ ಎಂದರು.
ಕೇಂದ್ರಕ್ಕೆ ಪ್ರಸ್ತಾವನೆ:ನುರಿತ ಕಾರ್ವಿುಕರ ಕೊರತೆ ಹಿನ್ನೆಲೆಯಲ್ಲಿ ಅಡಕೆ ಕಟಾವಿಗೆ ಬಳಸುವ ಫೈಬರ್ ದೋಟಿ ಖರೀದಿಗೆ ಸಬ್ಸಿಡಿ ವಿತರಣೆ, ಸಮಗ್ರ ಪೋಷಕಾಂಶಗಳ ನಿರ್ವಹಣೆ, ಕರೊನಾ ಲಸಿಕೆ ಮಾದರಿಯಲ್ಲಿ ಎಲೆಚುಕ್ಕೆ ಹಾಗೂ ಹಳದಿರೋಗದ ಶಾಶ್ವತ ಪರಿಹಾರ ಔಷಧ ಸಂಶೋಧನೆ ಇತ್ಯಾದಿಗಳಿಗೆ 197 ಕೋಟಿ ರೂ. ನೆರವು ಕೋರಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂಬ ಮಾಹಿತಿ ನೀಡಿದರು. ಮರು ವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ಅಡಕೆ ಬೆಳೆ ಸೇರಿಸಿದ್ದು, ರೋಗದಿಂದ ನಷ್ಟವಾದ ಬೆಳೆಗೆ ಪ್ರತಿ ಹೆಕ್ಟೇರ್​ಗೆ 28 ಸಾವಿರ ರೂ.ನಂತೆ ಗರಿಷ್ಠ ಎರಡು ಹೆಕ್ಟೇರ್​ಗೆ ಪರಿಹಾರ ನೀಡುತ್ತಿದ್ದು, ಕಾಫಿ, ತಾಳೆಎಣ್ಣೆ ಇತ್ಯಾದಿ ಪರ್ಯಾಯ ಬೆಳೆಗಳ ಬಗ್ಗೆ ರೈತರಿಗೆ ಮಾಹಿತಿ ನೀಡಲಾಗಿದೆ. ಅಡಕೆ ಉಪ ಉತ್ಪನ್ನಗಳ ಉತ್ತೇಜಿಸಲು ಖಾಸಗಿ ಅಭಿವೃದ್ಧಿಪಡಿಸಿರುವ ಸಾಬೂನು, ಬಣ್ಣ, ಸಿರಪ್, ವೈನ್, ಅಡಕೆ ಹಾಳೆ, ದೊನ್ನೆ, ಸೊಳ್ಳೆಬತ್ತಿ, ವೈನ್ ಇತ್ಯಾದಿಗಳಿಗೆ ವ್ಯಾಪಕ ಪ್ರಚಾರ ನೀಡಲಾಗುತ್ತಿದೆ ಎಂದು ಆರಗ ಜ್ಞಾನೇಂದ್ರ ವಿವರಿಸಿದರು.
ಬಿಜೆಪಿಯ ಡಾ.ತೇಜಸ್ವಿನಿಗೌಡ ಅಡಕೆಯಲ್ಲಿ ಕ್ಯಾನ್ಸರ್​ಕಾರಕ ಅಂಶಗಳಿವೆ ಎಂಬ ವರದಿ ನೀಡಿದ್ದರ ಹಿಂದೆ ಅಂತಾರಾಷ್ಟ್ರೀಯ ಸಂಚಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದರು.
ವಿದೇಶಿ ಅಡಕೆಗಳ ಮೇಲಿನ ಕನಿಷ್ಠ ಆಮದು ಬೆಲೆಯನ್ನು 351 ರೂ.ಗೆ ಏರಿಸುವ ಮೋದಿ ನೇತೃತ್ವದ ಸರ್ಕಾರದ ನಡೆಯನ್ನು ಸ್ವಾಗತಿಸುತ್ತಾ, ಸದಾ ರೈತರ ಹಿತ ಕಾಯುವ ಮೋದಿ ಅವರಿಗೆ ನಾನು ಧನ್ಯವಾದ ತಿಳಿಸುತ್ತೇನೆ.
| ಶೋಭಾ ಕರಂದ್ಲಾಜೆ ಕೇಂದ್ರ ಸಚಿವೆ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 1 =
Remember me
