|ಅವಿನಾಶ ಮೂಡಂಬಿಕಾನಬೆಂಗಳೂರು
ದುಪ್ಪಟ್ಟು ಬಾಡಿಗೆ ಆಸೆಗೆ ವಿದೇಶಿಗರ ಪೂರ್ವಾಪರ ಪರಿಶೀಲಿಸದೆ ಮನೆ ಬಾಡಿಗೆಗೆ ಕೊಟ್ಟ ಮಾಲೀಕರು ಇನ್ನು ಮುಂದೆ ಕಂಬಿ ಎಣಿಸಬೇಕಾದ ಪರಿಸ್ಥಿತಿ ಬರಲಿದೆ. ಪಾಸ್​ಪೋರ್ಟ್, ವೀಸಾ ಅವಧಿ ಮುಕ್ತಾಯಗೊಂಡ ನಂತರವೂ ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿಗರಿಂದ ಅಪರಾಧ ಪ್ರಮಾಣ ಹೆಚ್ಚಾಗುತ್ತಿರುವ ಕಾರಣ ಇದನ್ನು ನಿಯಂತ್ರಿಸಲು ರಾಜ್ಯದ ಪೊಲೀಸರು ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ನೈಜೀರಿಯಾ, ಉಗಾಂಡ, ಲಿಬಿಯಾ, ಕೀನ್ಯಾ, ಸೂಡಾನ್, ಬಾಂಗ್ಲಾ, ಪಾಕಿಸ್ತಾನ, ನೇಪಾಳ, ರಷ್ಯಾದ ಸಾವಿರಾರು ಪ್ರಜೆಗಳು ಬೆಂಗಳೂರು, ಮೈಸೂರು, ಉಡುಪಿ, ಕಲಬುರಗಿ, ಭಟ್ಕಳ ಸೇರಿ ಪ್ರಮುಖ ನಗರಗಳಲ್ಲಿ ಅಕ್ರಮವಾಗಿ ನೆಲೆಸಿದ್ದಾರೆ.
ಇಂಥ ವಿದೇಶಿಗರನ್ನು ಗೌಪ್ಯವಾಗಿ ಪತ್ತೆ ಹಚ್ಚುವ ಕಾರ್ಯದಲ್ಲಿ ಪೊಲೀಸರು ತೊಡಗಿದ್ದಾರೆ. ಕಳೆದ ನಾಲ್ಕೂವರೆ ವರ್ಷಗಳಲ್ಲಿ ವಿದೇಶಿಯರು ಅಪರಾಧ ಎಸಗಿರುವುದಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿ 298 ಪ್ರಕರಣ ದಾಖಲಾಗಿದೆ. ವಿದೇಶಿಗರಿಂದ ರಾಜ್ಯದಲ್ಲಿ ಕ್ರೖೆಂ ರೇಟ್ ಹೆಚ್ಚಾಗುತ್ತಿರುವ ಸಂಗತಿ ಹೊರ ಬಿದ್ದ ಬೆನ್ನಲ್ಲೇ ಅಂತಹವರನ್ನು ಗುರುತಿಸಿ ಸ್ವದೇಶಕ್ಕೆ ವಾಪಸ್ ಕಳುಹಿಸಲು ಪೊಲೀಸ್ ಇಲಾಖೆ ಮುಂದಾಗಿದೆ. ಅಪರಾಧ ಚಟುವಟಿಕೆಯಲ್ಲಿ ತೊಡಗಿ ಸಿಕ್ಕಿಬೀಳುತ್ತಿದ್ದ ವಿದೇಶಿ ಪ್ರಜೆಗಳಿಗೆ ರಾಜ್ಯದಲ್ಲಿ ನೆಲೆಸಲು ಅನುಕೂಲ ಮಾಡಿಕೊಡುತ್ತಿದ್ದ ಮನೆ ಮಾಲೀಕರಿಗೆ ಇದುವರೆಗೆ ನೋಟಿಸ್ ಕೊಟ್ಟು ಎಚ್ಚರಿಕೆ ನೀಡಿ ಕಳಿಸಲಾಗುತ್ತಿತ್ತು. ಇನ್ನು ಮುಂದೆ ಮಾಲೀಕರನ್ನೂ ಬಂಧಿಸಲು ಪೊಲೀಸ್ ಇಲಾಖೆ ದಿಟ್ಟ ಹೆಜ್ಜೆಯಿಟ್ಟಿದೆ.
ಪೊಲೀಸರ ಮಾಸ್ಟರ್​ಪ್ಲ್ಯಾನ್​:ಅಕ್ರಮವಾಗಿ ನೆಲೆಸಿರುವ ವಿದೇಶಿಗರನ್ನು ಪತ್ತೆ ಹಚ್ಚಲು ಬೆಂಗಳೂರು ಪೊಲೀಸರು ಮಾಸ್ಟರ್​ಪ್ಲಾನ್ ಮಾಡಿದ್ದಾರೆ. ‘ರಿಜಿಸ್ಟ್ರೇಷನ್ ಆಪ್’ ಹೆಸರಿನ ಹೊಸ ಆಪ್ ರೂಪಿಸಿದ್ದು, 15 ದಿನದೊಳಗೆ ಕಾರ್ಯರೂಪಕ್ಕೆ ಬರಲು ಸಿದ್ಧವಾಗಿದೆ. ವಿದೇಶಿಗರಿಗೆ ಬಾಡಿಗೆಗೆ ಮನೆ ನೀಡುವ ಮಾಲೀಕರು ರಿಜಿಸ್ಟ್ರೇಷನ್ ಆಪ್​ನಲ್ಲಿ ಅವರ ಫೋಟೋ, ದೇಶದ ಹೆಸರು, ವೀಸಾ ಅವಧಿ ಮುಕ್ತಾಯಗೊಳ್ಳುವ ವಿವರ, ಪಾಸ್​ಪೋರ್ಟ್, ಉದ್ಯೋಗ ಸೇರಿ ಎಲ್ಲ ವಿವರಗಳನ್ನೂ ಕಡ್ಡಾಯವಾಗಿ ಅಪ್​ಲೋಡ್ ಮಾಡಬೇಕಿದೆ. ಸದ್ಯ ರಿಜಿಸ್ಟ್ರೇಷನ್ ಆಪ್ ಪ್ರಾಯೋಗಿಕ ಹಂತದಲ್ಲಿದೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ವಿಜಯವಾಣಿಗೆ ತಿಳಿಸಿದ್ದಾರೆ.
15 ಮಾಲೀಕರಿಗೆ ನೋಟಿಸ್:ನಗರ ಪೂರ್ವ ವಿಭಾಗದಲ್ಲಿ 15 ಮಂದಿ ಮನೆ ಮಾಲೀಕರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದ್ದು, ಇವರ ವಿರುದ್ಧ ಕ್ರಮ ಕೈಗೊಳ್ಳಲು ಪ್ರಕ್ರಿಯೆ ಆರಂಭವಾಗಿದೆ. ಈ ಪೈಕಿ ರಾಮಮೂರ್ತಿನಗರ ಠಾಣಾ ವ್ಯಾಪ್ತಿಯಲ್ಲಿ ವಿದೇಶಿಯರಿಗೆ ನೀಡಿದ್ದ ಒಂದು ಮನೆ ಸೀಜ್ ಮಾಡಲಾಗಿದೆ. ಒಂದೂವರೆ ತಿಂಗಳ ಹಿಂದೆ ನಡೆದಿದ್ದ ಬಾಂಗ್ಲಾ ಯುವತಿ ಮೇಲೆ ನಡೆದ ದೌರ್ಜನ್ಯ ಪ್ರಕರಣ ಸಂಬಂಧ ಮನೆ ಮಾಲೀಕರು ಬಾಡಿಗೆದಾರರ ಕುರಿತು ಪೂರ್ವಾಪರ ಪರಿಶೀಲಿಸದೆ ಬಾಡಿಗೆಗೆ ನೀಡಿದ್ದರು ಎನ್ನಲಾಗಿದೆ.
ನಿಯಮ ಏನಿದೆ?:ವಿದೇಶಗಳಿಂದ ಬಂದು ಬಾಡಿಗೆ ಮನೆ ಪಡೆಯುವವರ ವೀಸಾ ಮತ್ತು ಪಾಸ್​ಪೋರ್ಟ್ ಸೇರಿ ಎಲ್ಲ ದಾಖಲೆಗಳು ಸರಿಯಾಗಿರಬೇಕು. ಎಫ್​ಆರ್​ಆರ್​ಒ ಇಲಾಖೆಯಲ್ಲಿ ನೋಂದಣಿಯಾಗಿ ಅನುಮತಿ ಪಡೆದಿರಬೇಕು. ಈ ನಿಯಮ ಪಾಲಿಸದವರಿಗೆ ಮನೆ, ರೂಮು, ಹೋಟೆಲ್​ಗಳಲ್ಲಿ ರೂಂ ಬಾಡಿಗೆಗೆ ನೀಡಬಾರದು. ವಿದೇಶಿಗರಿಗೆ ಬಾಡಿಗೆಗೆ ಕೊಟ್ಟ 15 ದಿನಗಳ ಒಳಗೆ ಅವರ ಕುರಿತಾದ ಮಾಹಿತಿಯನ್ನು ಸ್ಥಳೀಯ ಠಾಣೆಗೆ ನೀಡಬೇಕು. ಹಳೆ ಬಾಡಿಗೆದಾರರು ಮನೆ ಖಾಲಿ ಮಾಡಿದರೆ, ಹೊಸಬರು ಬಾಡಿಗೆಗೆ ಬಂದರೆ ಆ ಕುರಿತಾದ ಮಾಹಿತಿ ಯನ್ನೂ 15 ದಿನಗಳ ಒಳಗಾಗಿ ಸ್ಥಳೀಯ ಠಾಣೆಗೆ ಒದಗಿಸಬೇಕು.
ನಿಖರ ಅಂಶ ಸಿಕ್ಕಿಲ್ಲ:ರಾಜ್ಯದಲ್ಲಿ 1,700ಕ್ಕೂ ಅಧಿಕ ವಿದೇಶಿಯರು ಅಕ್ರಮವಾಗಿ ನೆಲೆಸಿದ್ದರೂ ಬೆರಳೆಣಿಕೆಯಷ್ಟು ಕೇಸ್ ದಾಖಲಾಗಿದೆ. ಆಫ್ರಿಕಾ ಖಂಡದ ಪ್ರಜೆಗಳು ಡ್ರಗ್ಸ್, ಕಳ್ಳತನ, ಸೈಬರ್ ವಂಚನೆಯಲ್ಲಿ ತೊಡಗಿದರೆ, ಬಾಂಗ್ಲಾ, ನೇಪಾಳ, ರಷ್ಯಾ ದೇಶದವರು ವೇಶ್ಯಾವಾಟಿಕೆ, ಕಳ್ಳಸಾಗಾಣಿಕೆಯಲ್ಲಿ ಹೆಚ್ಚಾಗಿ ಶಾಮೀಲಾಗುತ್ತಿದ್ದಾರೆ. ಪಾಕಿಸ್ತಾನದವರು ಪೊಲೀಸರ ಕಣ್ತಪ್ಪಿಸಿ ರಾಜ್ಯದ ಕರಾವಳಿ, ಪ್ರಮುಖ ನಗರಗಳ ಹೊರ ವಲಯಗಳಲ್ಲಿ ನೆಲೆಸಿದ್ದಾರೆ. ಅಕ್ರಮ ವಾಸಿಗಳ ನಿಖರ ಅಂಕಿ-ಅಂಶ ಸರ್ಕಾರಕ್ಕೂ ಸಿಕ್ಕಿಲ್ಲ. ಜಾಗತಿಕ ಮಟ್ಟದಲ್ಲಿ ವಿಶ್ವದ ಎಲ್ಲ ದೇಶಗಳಿಂದ ವಿದ್ಯಾಭ್ಯಾಸ, ಉದ್ಯೋಗ, ಉದ್ಯಮ, ಪ್ರವಾಸೋದ್ಯಮ ಸೇರಿ ನಾನಾ ಕಾರಣಗಳಿಂದ ವಿದೇಶಿ ಪ್ರಜೆಗಳು ಕರ್ನಾಟಕಕ್ಕೆ ಆಗಮಿಸಿ ಇಲ್ಲೇ ಉಳಿಯುತ್ತಿದ್ದಾರೆ. ಮನೆ ಮಾಲೀಕರು, ಹೋಟೆಲ್, ಪೇಯಿಂಗ್ ಗೆಸ್ಟ್, ಹಾಸ್ಟೆಲ್ ನಡೆಸುವವರು, ಶಿಕ್ಷಣ ಸಂಸ್ಥೆಗಳು, ಕಂಪನಿಗಳು ಪೂರ್ವಾಪರ ಪರಿಶೀಲಿಸದೇ ವಿದೇಶಿಗರಿಗೆ ನೆಲೆ ನೀಡುತ್ತಿರುವುದು ದುರಂತ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಾಜ್ಯ ರಾಜಧಾನಿಯಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿಯರಿಗೆ ಬಾಡಿಗೆ ನೀಡಿದ 13ಕ್ಕೂ ಅಧಿಕ ಮನೆ ಮಾಲೀಕರಿಗೆ ಕೆಲ ದಿನಗಳ ಹಿಂದೆ ನೋಟಿಸ್ ನೀಡಲಾಗಿದೆ. ಅಕ್ರಮ ವಾಸಿಗಳ ಪತ್ತೆ ಕಾರ್ಯ ಚುರುಕುಗೊಂಡಿದೆ. ಮಾಲೀಕರು ಪೂರ್ವಾಪರ ಪರಿಶೀಲಿಸಿ ವಿದೇಶಿಗರಿಗೆ ಬಾಡಿಗೆ ನೀಡಿದರೆ ಉತ್ತಮ.
|ಕಮಲ್ ಪಂತ್ಪೊಲೀಸ್ ಆಯುಕ್ತ, ಬೆಂಗಳೂರು
ಪ್ರಾಣಿಗಳ ಥರ ಕಾಡಿದ್ರು, ಒಬ್ರೂ ನೆರವಿಗೆ ಬರಲಿಲ್ಲ; ಇದು ಕೋಟ್ಯಧಿಪತಿ ಉದ್ಯಮಿಯ ಸಂಕಟದ ಕಥೆ..

ದೇಶದ ಒಟ್ಟು ಕೋವಿಡ್​ ಪ್ರಕರಣಗಳಲ್ಲಿ ಅರ್ಧಕ್ಕೂ ಹೆಚ್ಚು ಇವೆರಡು ರಾಜ್ಯಗಳಲ್ಲೇ ಇವೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 1 =
Remember me
