|ಕೆ.ಎನ್.ರಾಘವೇಂದ್ರಮಂಡ್ಯ
ಜಿಲ್ಲಾ ಕೇಂದ್ರವನ್ನು ಒಳಗೊಂಡಿರುವ ಮಂಡ್ಯ ಕ್ಷೇತ್ರದಲ್ಲಿ ಈ ಬಾರಿ ಹೊಸಮುಖಗಳ ಅಬ್ಬರವೇ ಜೋರಾಗುವುದು ಖರೆ. ವಯಸ್ಸಿನ ಕಾರಣದಿಂದ ಜೆಡಿಎಸ್ ಶಾಸಕ ಎಂ.ಶ್ರೀನಿವಾಸ್ ಚುನಾವಣಾ ಕಣದಿಂದ ದೂರ ಉಳಿಯುವುದು ಬಹುತೇಕ ಖಚಿತವಾಗಿದ್ದು, ತಮ್ಮ ಸ್ಥಾನವನ್ನು ಅಳಿಯ, ಜಿಪಂ ಮಾಜಿ ಸದಸ್ಯ ಎಚ್.ಎನ್.ಯೋಗೇಶ್ ಅವರಿಗೆ ಬಿಟ್ಟುಕೊಡಲು ಹಾಗೂ ಅದಕ್ಕಾಗಿ ಜೆಡಿಎಸ್ ಟಿಕೆಟ್ ಕೊಡಿಸಲು ತಂತ್ರಗಾರಿಕೆ ನಡೆಸುತ್ತಿದ್ದಾರೆ. ಆದರೆ, ಅದು ಅಷ್ಟೊಂದು ಸುಲಭವಾಗಿಲ್ಲ. ಕಾರಣ, ‘ನಿತ್ಯ ಸಚಿವ’ ಕೆ.ವಿ.ಶಂಕರಗೌಡರ ಮೊಮ್ಮಗ, ಪಿಇಟಿ ಅಧ್ಯಕ್ಷರೂ ಆದ ಜಿಪಂ ಮಾಜಿ ಸದಸ್ಯ ಕೆ.ಎಸ್.ವಿಜಯಾನಂದ ರೇಸ್​ನಲ್ಲಿ ಮುಂಚೂಣಿಯಲ್ಲಿದ್ದಾರೆ. ಈ ಇಬ್ಬರೊಟ್ಟಿಗೆ ಮನ್​ವುುಲ್ ಅಧ್ಯಕ್ಷ ಬಿ.ಆರ್.ರಾಮಚಂದ್ರು ಹಾಗೂ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಕೆ.ರಾಧಾಕೃಷ್ಣ ಕೀಲಾರ, ಉದ್ಯಮಿ ಮಹಾಲಿಂಗೇಗೌಡ ಮುದ್ದನಘಟ್ಟ ಕೂಡ ಟಿಕೆಟ್​ಗಾಗಿ ಕಸರತ್ತು ನಡೆಸುತ್ತಿದ್ದಾರೆ. ಹಿಂದಿನ ಚುನಾವಣೆಗಳಿಗೆ ಹೋಲಿಸಿದರೆ, ಸಂಘಟನೆಯನ್ನು ಬಲ ಪಡಿಸಿಕೊಳ್ಳುತ್ತಿರುವ ಬಿಜೆಪಿಯಲ್ಲಿಯೂ ಪ್ರಬಲ ಆಕಾಂಕ್ಷಿಗಳಿದ್ದಾರೆ. ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷರೂ ಆದ ಪಕ್ಷದ ಜಿಲ್ಲಾಧ್ಯಕ್ಷ ಸಿ.ಪಿ.ಉಮೇಶ್, ಜಿಪಂ ಮಾಜಿ ಸದಸ್ಯ ಚಂದಗಾಲು ಶಿವಣ್ಣ, ಇತ್ತೀಚೆಗೆ ಜೆಡಿಎಸ್ ತೊರೆದು ಕಮಲ ಹಿಡಿದಿರುವ ಅಶೋಕ್ ಜಯರಾಂ ಮತ್ತು ಮಾಜಿ ಅಧಿಕಾರಿ ಲಕ್ಷ್ಮೀ ಅಶ್ವಿನ್​ಗೌಡ ಕೂಡ ರೇಸ್​ನಲ್ಲಿದ್ದಾರೆ. ಇನ್ನು ಕಾಂಗ್ರೆಸ್​ನಿಂದ ಕಳೆದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ರವಿಕುಮಾರ್ ಗಣಿಗ ಮತ್ತು ಉದ್ಯಮಿ ರವಿ ಬೋಜೇಗೌಡ, ಮಾಜಿ ಸಚಿವ ಎಂ.ಎಸ್.ಆತ್ಮಾನಂದ, ಡಾ.ಕೃಷ್ಣ ಕೈ ಟಿಕೆಟ್ ಆಕಾಂಕ್ಷಿತರು. ಇವರ ನಡುವೆ, ಕೆಪಿಸಿಸಿ ಉಪಾಧ್ಯಕ್ಷ ಎನ್.ಚಲುವರಾಯಸ್ವಾಮಿ ಅವರನ್ನು ಕರೆತರುವ ಪ್ರಯತ್ನವೂ ನಡೆಯುತ್ತಿದೆ ಎನ್ನುವ ಮಾತುಗಳಿವೆ. ರೈತ ಸಂಘದ ಅಭ್ಯರ್ಥಿಯಾಗಿ ಆರ್ಗ್ಯಾನಿಕ್ ಮಂಡ್ಯದ ಸಂಸ್ಥಾಪಕ ಎಸ್.ಸಿ.ಮಧುಚಂದನ್ ಕಣಕ್ಕಿಳಿಯುವುದು ಪಕ್ಕಾ.
ಘಟನಾಘಟಿ ರಾಜಕೀಯ ನಾಯಕರು ಪ್ರತಿನಿಧಿಸಿದ್ದ ಮದ್ದೂರು ಕ್ಷೇತ್ರದಲ್ಲಿ ಚುನಾವಣಾ ಕಾವು ಜೋರಾಗಿದೆ. ಎಚ್.ಡಿ. ದೇವೇಗೌಡರ ಬೀಗರಾದ ಶಾಸಕ ಡಿ.ಸಿ.ತಮ್ಮಣ್ಣ ಅವರೇ ಈ ಬಾರಿಯೂ ಜೆಡಿಎಸ್​ನಿಂದ ಕಣಕ್ಕಿಳಿಯುವುದು ಪಕ್ಕಾ. ಕ್ಷೇತ್ರದಲ್ಲಿ ತಮ್ಮದೇ ಆದ ಪ್ರಭಾವ ಹೊಂದಿರುವ ಡಿಸಿಟಿ ಅವರಿಗೆ ಎದುರಾಗಲು ಯುವಕರ ದಂಡೇ ಕಾಯುತ್ತಿದೆ. ಹಿಂದೆ ಡಿಸಿಟಿ ಅವರ ಜತೆಗಿದ್ದ ಎಸ್.ಪಿ.ಸ್ವಾಮಿ ಬದಲಾದ ರಾಜಕೀಯದಿಂದ ಕಮಲ ಹಿಡಿಯುವುದರ ಜತೆಗೆ, ಶ್ರೀನಿಧಿ ಪ್ರತಿಷ್ಠಾನದ ಹೆಸರಿನಲ್ಲಿ ಸಾಮಾಜಿಕ ಸೇವೆ ಮಾಡುತ್ತಾ ಕ್ಷೇತ್ರದಲ್ಲಿ ತಮ್ಮದೇ ಪ್ರಭಾವ ಬೆಳೆಸಿಕೊಂಡಿದ್ದಾರೆ. ಅಂತೆಯೆ, ಬಿಜೆಪಿಯಿಂದ ಕಣಕ್ಕಿಳಿದು ಡಿಸಿಟಿಗೆ ಟಾಂಗ್ ಕೊಡಲು ಸಜ್ಜಾಗಿದ್ದಾರೆ. ಇನ್ನು ಕಾಂಗ್ರೆಸ್​ನಿಂದ ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರ ಸಹೋದರನ ಮಗ ಗುರುಚರಣ್ ಅಭ್ಯರ್ಥಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಈಗಾಗಲೆ ಅಧಿಕೃತವಾಗಿ ಘೊಷಣೆ ಮಾಡಿದ್ದಾರೆ. ಇನ್ನು ಯಾವುದೇ ಪಕ್ಷದಲ್ಲಿಯೂ ಗುರುತಿಸಿಕೊಳ್ಳದೆ ತಮ್ಮ ಟ್ರಸ್ಟ್ ಮೂಲಕ ಸಾಮಾಜಿಕ ಸೇವೆಗಳಲ್ಲಿ ತೊಡಗಿರುವ ಕದಲೂರು ಉದಯ್ ಕಣಕ್ಕಿಳಿಯುವ ಹುಮ್ಮಸ್ಸಿನಲ್ಲಿದ್ದು, ರಾಜಕೀಯ ಪಕ್ಷದ ಅಚ್ಚರಿಯ ಅಭ್ಯರ್ಥಿಯಾದರೂ ಆಶ್ಚರ್ಯವಿಲ್ಲ. ಒಂದು ವೇಳೆ ಈ ಎಲ್ಲರೂ ಅಖಾಡಕ್ಕೆ ಬಂದರೆ ಸ್ಪರ್ಧೆ ಕಠಿಣವಾಗಲಿದ್ದು, ಗೆಲುವು ಯಾರಿಗೂ ಸುಲಭವಲ್ಲ.
ಐತಿಹಾಸಿಕ ಧಾರ್ವಿುಕ ಕ್ಷೇತ್ರ ಮೇಲುಕೋಟೆಯನ್ನು ಪ್ರತಿನಿಧಿಸುತ್ತಿರುವ ಶಾಸಕ ಸಿ.ಎಸ್. ಪುಟ್ಟರಾಜು ಜೆಡಿಎಸ್​ನಿಂದ ಮತ್ತೆ ಸ್ಪರ್ಧೆ ಮಾಡುವುದು ಖಚಿತ. ಕೆಲ ದಿನದ ಹಿಂದೆ ಕಾಂಗ್ರೆಸ್ ಸೇರುತ್ತಾರೆನ್ನುವ ವದಂತಿ ಹಬ್ಬಿತ್ತು. ಆದರೆ ಈ ಮಾತನ್ನು ಸಾರಸಗಟಾಗಿ ಸಿಎಸ್​ಪಿ ತಿರಸ್ಕರಿಸಿದ್ದಾರೆ. ಯಾವುದೇ ಸರ್ಕಾರವಿದ್ದರೂ ಅನುದಾನ ತಂದು ಕೆಲಸ ಮಾಡುವುದರ ಜತೆಗೆ, ಕ್ಷೇತ್ರದಲ್ಲಿ ವರ್ಚಸ್ಸು ಹೊಂದಿರುವ ಇವರಿಗೆ ಎದುರಾಳಿಯಾಗಲು ಬಿಜೆಪಿಯಿಂದ ಯುವ ಉತ್ಸಾಹಿ ಡಾ.ಇಂದ್ರೇಶ್ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ತಮ್ಮ ಟ್ರಸ್ಟ್ ಮೂಲಕ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕಾಂಗ್ರೆಸ್​ನಿಂದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ.ಎಚ್.ಎನ್. ರವೀಂದ್ರ, ಮಾಜಿ ಶಾಸಕ ಹಲಗೇಗೌಡ ಅವರ ಪುತ್ರ, ಜಿಪಂ ಮಾಜಿ ಸದಸ್ಯ ತ್ಯಾಗರಾಜು ಆಕಾಂಕ್ಷಿಯಾಗಿದ್ದಾರೆ. ರೈತ ಸಂಘದಿಂದ ದಿವಂಗತ ಕೆ.ಎಸ್. ಪುಟ್ಟಣ್ಣಯ್ಯ ಅವರ ಮಗ ದರ್ಶನ್ ಅಖಾಡಕ್ಕೆ ಬರುವುದು ಖಚಿತ. ಹಿಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ರೈತ ಸಂಘ ಹೊಂದಾಣಿಕೆ ಮಾಡಿಕೊಂಡಿರುವುದೂ ಇದೆ. ಆದ್ದರಿಂದ ಈ ಬಾರಿ ಏನೆಂದು ಕಾದುನೋಡಬೇಕಿದೆ. ಈ ನಡುವೆ, ಕಾಂಗ್ರೆಸ್​ನಲ್ಲಿ ಗುರುತಿಸಿಕೊಂಡಿದ್ದ ಸಮಾಜ ಸೇವಕ ಬಿ.ರೇವಣ್ಣ ಸದ್ಯಕ್ಕೆ ರಾಜಕೀಯದಿಂದ ದೂರವಿದ್ದು, ಮುಂದಿನ ದಿನಗಳಲ್ಲಿ ಯಾವ ನಡೆ ಅನುಸರಿಸುತ್ತಾರೆನ್ನುವ ಕುತೂಹಲವಿದೆ.
ವಿಭಿನ್ನ ರಾಜಕಾರಣಕ್ಕೆ ಹೆಸರುವಾಸಿ ಯಾಗಿರುವ ನಾಗಮಂಗಲದಲ್ಲಿ ಈ ಬಾರಿ ಮೂವರ ನಡುವೆ ಚುನಾವಣಾ ಕಾಳಗ ನಡೆಯುವ ಸಾಧ್ಯತೆ ದಟ್ಟವಾಗಿದೆ. ಕ್ಷೇತ್ರದಲ್ಲಿ ಮೂವರ ಹೊರತು ಪರ್ಯಾಯ ಹೆಸರುಗಳೇ ಇಲ್ಲ ಎನ್ನುವುದು ಗಮನಾರ್ಹ. ಜೆಡಿಎಸ್​ನಿಂದ ಶಾಸಕ ಸುರೇಶ್​ಗೌಡ, ಕಾಂಗ್ರೆಸ್​ನಿಂದ ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಹಾಗೂ ಜೆಡಿಎಸ್​ನಿಂದ ಹೊರಬಿದ್ದಿರುವ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ. ಇನ್ನು ಎಚ್.ಡಿ.ದೇವೇಗೌಡರ ಕುಟುಂಬಕ್ಕೆ ಈ ಕ್ಷೇತ್ರ ಪ್ರಮುಖವಾಗಿದೆ. ರಾಜಕೀಯ ಎದುರಾಳಿ ಎನ್.ಚಲುವರಾಯಸ್ವಾಮಿ ಅವರನ್ನು ಸೋಲಿಸಲು ಕಳೆದ ಚುನಾವಣೆಯಲ್ಲಿ ಖುದ್ದು ಎಚ್​ಡಿಡಿ, ಎಚ್​ಡಿಕೆ ಅಖಾಡಕ್ಕೆ ಇಳಿದಿದ್ದರು. ಅಂತೆಯೆ, ಈ ಬಾರಿಯೂ ಚುನಾವಣೆ ಜಿದ್ದಾಜಿದ್ದಿಯಾಗುವುದರಲ್ಲಿ ಅನುಮಾನವಿಲ್ಲ. ಆದರೆ ಎಲ್.ಆರ್.ಶಿವರಾಮೇಗೌಡ ಜೆಡಿಎಸ್​ನಿಂದ ಹೊರಬಂದಿರುವುದು ಹಾಗೂ ಮಾಜಿ ಎಂಎಲ್​ಸಿ ಎನ್.ಅಪ್ಪಾಜಿಗೌಡ ಪಕ್ಷದಿಂದ ಅಂತರ ಕಾಯ್ದುಕೊಂಡಿರುವುದು ಜೆಡಿಎಸ್​ಗೆ ನುಂಗಲಾರದ ತುತ್ತಾಗಿದೆ.
ಕೋಟೆನಾಡು ಶ್ರೀರಂಗಪಟ್ಟಣದಲ್ಲಿ ತ್ರಿಕೋನ ಸ್ಪರ್ಧೆ ನಡೆಯುವ ಸಾಧ್ಯತೆ ಸದ್ಯಕ್ಕೆ ಕಂಡುಬರುತ್ತಿದೆ. ಕ್ಷೇತ್ರದ ಹಲವು ದಶಕಗಳ ಸಮಸ್ಯೆಯನ್ನು ಪರಿಹಾರ ಮಾಡಿಸಿರುವ ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಮತ್ತೆ ಸ್ಪರ್ಧೆಗಿಳಿಯುವುದು ಖಚಿತ. ಇವರಿಗೆ ಎದುರಾಳಿಯಾಗಲು ಮಾಜಿ ಶಾಸಕ ರಮೇಶ ಬಂಡಿಸಿದ್ದೇಗೌಡ ಕಾಂಗ್ರೆಸ್​ನಿಂದ ಸಜ್ಜಾಗಿದ್ದಾರೆ. ಆದರೆ ಕಾಂಗ್ರೆಸ್​ನಲ್ಲಿ ಮೂಲ ಮತ್ತು ವಲಸಿಗ ಎನ್ನುವ ಮಾತು ಆಗಾಗ ಕೇಳಿಬರುತ್ತಿವೆ. ಈ ನಡುವೆ, ಇವರಿಬ್ಬರಿಗೆ ಎದುರಾಗಿ ಪ್ರಭಾವಿ ಯುವ ಮುಖಂಡ ಇಂಡುವಾಳು ಎಸ್.ಸಚ್ಚಿದಾನಂದ ಅಖಾಡದಲ್ಲಿ ಅಬ್ಬರಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ತಮ್ಮ ಟ್ರಸ್ಟ್ ಮೂಲಕ ಸೇವಾ ಕಾರ್ಯಕ್ರಮಗಳನ್ನು ಮಾಡುತ್ತಿರುವ ಇವರು ಬಿಜೆಪಿ ಸೇರಿ ಚುನಾವಣೆಗೆ ಬರಲು ಸಿದ್ಧವಾಗಿದ್ದಾರೆ. ಹಿಂದಿನ ಚುನಾವಣೆಗಳಲ್ಲಿ ಬೇರೆಯವರಿಗೆ ಸಾಥ್ ಕೊಡುತ್ತಿದ್ದ ಸಚ್ಚಿದಾನಂದ, ಈ ಬಾರಿ ಖುದ್ದು ಅಖಾಡಕ್ಕೆ ಬರಲು ಗಟ್ಟಿ ನಿರ್ಧಾರ ಮಾಡಿದ್ದಾರೆ. ಇನ್ನು ಡಾ.ಸಿದ್ದರಾಮಯ್ಯ, ಕೆ.ಎಸ್. ನಂಜುಂಡೇಗೌಡ ಕೂಡ ಬಿಜೆಪಿ ಟಿಕೆಟ್ ಆಕಾಂಕಿಗಳಾಗಿದ್ದಾರೆ.
ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರ ಮಳವಳ್ಳಿಯಲ್ಲಿ ಈ ಬಾರಿಯೂ ಸಾಂಪ್ರದಾಯಿಕ ಎದುರಾಳಿಗಳೇ ಮುಖಾಮುಖಿಯಾಗಲಿದ್ದಾರೆ. ಕಾಂಗ್ರೆಸ್​ನಿಂದ ಮಾಜಿ ಸಚಿವ ಪಿ.ಎಂ.ನರೇಂದ್ರಸ್ವಾಮಿ, ಜೆಡಿಎಸ್​ನಿಂದ ಶಾಸಕ ಡಾ.ಕೆ.ಅನ್ನದಾನಿ ಹೆಸರೇ ಅಂತಿಮ. ಬಿಜೆಪಿಯಿಂದ ಮಾಜಿ ಸಚಿವ ಬಿ.ಸೋಮಶೇಖರ್ ಅವರೇ ಆಕಾಂಕ್ಷಿಯಾಗಿದ್ದು, ಇವರೊಟ್ಟಿಗೆ ಕೆಂಗೇರಿ ಪುರಸಭೆ ಮಾಜಿ ಸದಸ್ಯ ಮುನಿರಾಜು ರೇಸ್​ನಲ್ಲಿದ್ದಾರೆ. ಇನ್ನು ಬಿಎಸ್ಪಿಯಿಂದ ಪಕ್ಷದ ರಾಜ್ಯಾಧ್ಯಕ್ಷ ಕೃಷ್ಣಮೂರ್ತಿ ಅಖಾಡಕ್ಕೆ ಇಳಿಯಲು ಸಜ್ಜಾಗಿದ್ದಾರೆ. ಕ್ಷೇತ್ರದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ನೇರ ಫೈಟ್ ಇದ್ದರೂ ಉಳಿದವರು ತೆಗೆದುಕೊಳ್ಳುವ ಮತಗಳು ನಿರ್ಣಾಯಕವಾಗುತ್ತವೆ. ಇನ್ನು ಜೆಡಿಎಸ್​ನ ಎಂಎಲ್​ಸಿ ಮರಿತಿಬ್ಬೇಗೌಡ ಪಕ್ಷದಿಂದ ದೂರವಾಗಿದ್ದು, ಅವರು ‘ಕೈ’ ಹಿಡಿಯುವುದು ಪಕ್ಕಾ. ಇದು ಚುನಾವಣೆಯಲ್ಲಿ ಪ್ರಮುಖ ಅಂಶವಾಗಲಿದೆ.
ಜಿಲ್ಲೆಯ ಮೊದಲ ಬಿಜೆಪಿ ಶಾಸಕ ಎನ್ನುವ ಹೆಗ್ಗಳಿಕೆ ಹೊಂದಿರುವ ಸಚಿವ ಕೆ.ಸಿ.ನಾರಾಯಣಗೌಡ ಈಗಾಗಲೆ ಹಲವು ಪಕ್ಷಗಳನ್ನು ಸುತ್ತಾಡಿಕೊಂಡು ಬಂದಿದ್ದಾರೆ. ಸರ್ಕಾರದ ಕಾರ್ಯಕ್ರಮ, ಸೌಲಭ್ಯವನ್ನು ಕ್ಷೇತ್ರಕ್ಕೆ ಸೀಮಿತಗೊಳಿಸಿಕೊಂಡಿರುವ ಕೆಸಿಎನ್ ಮುಂದಿನ ಚುನಾವಣೆ ವೇಳೆಗೆ ಕಾಂಗ್ರೆಸ್​ಗೆ ಸೇರಲಿದ್ದಾರೆನ್ನುವ ಮಾತು ಜೋರಾಗಿಯೇ ಇದೆ. ಯಾವುದೇ ಪಕ್ಷದಿಂದ ಸ್ಪರ್ಧಿಸಿದರೂ ಗೆಲುವು ಸುಲಭವಾಗಲೆನ್ನುವಂತೆ ತಂತ್ರಗಾರಿಕೆ ಮಾಡಿಕೊಂಡಿದ್ದಾರೆ. ಸದ್ಯದ ಮಟ್ಟಿಗೆ ಬಿಜೆಪಿಯಿಂದ ಇವರ ಹೆಸರೇ ಅಂತಿಮ. ಜೆಡಿಎಸ್​ನಿಂದ ಮನ್​ವುುಲ್ ನಿರ್ದೇಶಕರೂ ಆದ ಜಿಪಂ ಮಾಜಿ ಸದಸ್ಯ ಎಚ್.ಟಿ. ಮಂಜು, ಪುರಸಭೆ ಸದಸ್ಯ ಬಸ್ ಸಂತೋಷ್, ಹಿರಿಯ ಮುಖಂಡರಾದ ಬಿ.ಎಲ್.ದೇವರಾಜು ಹಾಗೂ ಬಸ್ ಕೃಷ್ಣೇಗೌಡ ರೇಸ್​ನಲ್ಲಿದ್ದಾರೆ. ಇತ್ತೀಚಿನ ಬೆಳವಣಿಗೆ ಎಂಬಂತೆ ಭವಾನಿ ರೇವಣ್ಣ ಕ್ಷೇತ್ರಕ್ಕೆ ಬರಬಹುದೆನ್ನುವ ಮಾತಿದೆ. ಕಾಂಗ್ರೆಸ್​ನಿಂದ ಮಾಜಿ ಶಾಸಕ ಕೆ.ಬಿ. ಚಂದ್ರಶೇಖರ್, ಉದ್ಯಮಿ ವಿಜಯ ರಾಮೇಗೌಡ, ಮಾಜಿ ಶಾಸಕ ಬಿ. ಪ್ರಕಾಶ್, ಕಿಕ್ಕೇರಿ ಸುರೇಶ್ ಆಕಾಂಕ್ಷಿಯಾಗಿದ್ದಾರೆ.
‘ನನ್ನನ್ಯಾರೋ ಕೊಲೆ ಮಾಡ್ತಾರೆ’ ಎಂದು ಪೊಲೀಸರಿಗೆ ಆಗಾಗ ಕರೆ ಮಾಡ್ತಿದ್ದ ಮಹಿಳೆಯ ಕೊಲೆ!

ತಲಾಖ್ ಕೊಟ್ಟ ಗಂಡ; ಪ್ರಧಾನಿ ಮೋದಿ ಗಮನಕ್ಕೆ ತಂದು ಆತ್ಮಹತ್ಯೆಗೆ ಯತ್ನಿಸಿದ ಮಾಜಿ ಉಪಮಹಾಪೌರೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − seven =
Remember me
