ಭಗೀರಥ ಜಯಂತಿ ಅಂಗವಾಗಿ ವಿಜಯವಾಣಿ ಮತ್ತು ದಿಗ್ವಿಜಯ ವಾಹಿನಿ ಹಮ್ಮಿಕೊಂಡಿದ್ದ ಕ್ಲಬ್​ ಹೌಸ್​ ಕಾರ್ಯಕ್ರಮದಲ್ಲಿ ಹೊಸದುರ್ಗದ ಭಗೀರಥ ಪೀಠದ ಶ್ರೀ ಪುರುಷೋತ್ತಮಾನಂದಪುರಿ ಸ್ವಾಮೀಜಿಯವರು ಭಗೀರಥ ಮಹರ್ಷಿಯ ಚರಿತ್ರೆಯನ್ನು ವಿವಿಧ ಆಯಾಮಗಳಲ್ಲಿ ಕಟ್ಟಿಕೊಟ್ಟರು. ಜತೆಗೆ, ಉಪ್ಪಾರ ಸಮಾಜದ ಸ್ಥಿತಿಗತಿ ಮತ್ತು ಸಮಾಜದ ಅಭಿವೃದ್ಧಿಗೆ ಭಗೀರಥ ಪೀಠ ಕೈಗೊಂಡಿರುವ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಗಳ ಕುರಿತು ವಿವರಿಸಿದರು.
ಇಕ್ಷಾಕು ವಂಶದ ಪರಂಪರೆ ಅಂದರೆ ಸೂರ್ಯವಂಶ ಕ್ಷತ್ರಿಯರು. ಈ ಭರತ ಖಂಡ ಆಳಿದವರಲ್ಲಿ ಅನೇಕ ಖ್ಯಾತನಾಮರಿದ್ದಾರೆ. ಸಗರ ಮಹಾಚಕ್ರವರ್ತಿ, ದಿಲೀಪ ಮಹಾಚಕ್ರವರ್ತಿ, ಸತ್ಯಹರಿಶ್ಚಂದ್ರ, ಶ್ರೀರಾಮಚಂದ್ರ… ಹೀಗೆ ಬಹಳಷ್ಟು ದೈವಾಂಶ ಸಂಭೂತರು, ಮಹಾತ್ಮರು ಸಿಗುತ್ತಾರೆ. ಅವರಲ್ಲಿ ಭಗೀರಥ ಮಹರ್ಷಿಯ ಜೀವನಕಥೆ ಸ್ಫೂರ್ತಿದಾಯಕ. ಕೋಸಲ ದೇಶದ ದೊರೆ ಸಗರ ಪರಾಕ್ರಮಿಯೂ, ಧರ್ಮಿಷ್ಠನೂ ಆಗಿದ್ದ. ಈತನಿಗೆ ಇಬ್ಬರು ಹೆಂಡತಿಯರು. ಬಹುಕಾಲ ಮಕ್ಕಳಿಲ್ಲದ ಕಾರಣ ದೀರ್ಕಾಲ ತಪಸ್ಸು ಮಾಡಿ ಭೃಗು ಮಹರ್ಷಿಗಳಿಂದ ವರ ಪಡೆದು ಮೊದಲ ಪತ್ನಿ ಕೇಶಿನಿಗೆ ಅಸಮಂಜಸನೆಂಬ ಓರ್ವ ಪುತ್ರ ಹಾಗೂ ಎರಡನೇ ಹೆಂಡತಿ ಸುಮತಿಗೆ 60 ಸಾವಿರ ಮಕ್ಕಳು ಜನಿಸಿದರು.
ಕಾಲಾನಂತರ ಸಗರನಿಗೆ ನೂರು ಅಶ್ವಮೇಧ ಯಾಗ ಮಾಡಿ ಇಂದ್ರ ಪದವಿ ಹೊಂದಬೇಕು ಎಂಬ ಹಂಬಲ ಉಂಟಾಯಿತು. ಅದಕ್ಕಾಗಿ ಯಾಗದ ಪ್ರಕ್ರಿಯೆ ನಡೆಸಿ ಕುದುರೆಯನ್ನು ಅಲಂಕರಿಸಿ, ಪೂಜಿಸಿ ಕಳುಹಿಸಿದ. ಇದಕ್ಕೆ ಹೆದರಿದ ದೇವೇಂದ್ರನು ವೇಷಬದಲಿಸಿ ಯಾಗದ ಕುದುರೆಯನ್ನು ಅಪಹರಿಸಿದ. ಸಗರ ಅದನ್ನು ಹುಡುಕಿಕೊಂಡು ಬರುವಂತೆ ತನ್ನ 60 ಸಾವಿರ ಮಕ್ಕಳಿಗೆ ಸೂಚಿಸಿದ. ಅವರೆಲ್ಲರೂ ಇಡೀ ಭೂಮಂಡಲದಲ್ಲಿ ಹುಡುಕಾಡಿ, ನಂತರ ಪಾತಾಳ ಲೋಕದ ಕಪಿಲ ಮುನಿಯ ಆಶ್ರಮ ತಲುಪಿದರು. ಅಲ್ಲಿ ಯಾಗದ ಕುದುರೆ ನೋಡಿದ ಅವರು ಅದನ್ನು ಅಪಹರಿಸಿದ್ದು ಕಪಿಲ ಮುನಿಗಳು ಎಂದು ಭಾವಿಸಿ ತಪಸ್ಸು ಮಾಡುವಂತೆ ನಟಿಸುತ್ತಿದ್ದಾರೆ ಎಂದು ಅವರ ತಪಸ್ಸಿಗೆ ಭಂಗ ಉಂಟು ಮಾಡಿದರು. ಇದರಿಂದ ಮುನಿಗಳ ಕೋಪಾವೇಶಕ್ಕೆ ತುತ್ತಾಗಿ 60 ಸಾವಿರ ಮಕ್ಕಳು ಭಸ್ಮವಾದರು. ಕೇಶಿನಿಯ ಮಗ ಅಸಮಂಜಸ ಬಂದು ಪ್ರಯತ್ನಿಸಿದರೂ ಸದ್ಗತಿ ದೊರಕಿಸಲು ಆಗಲಿಲ್ಲ. ಬಳಿಕ ಅಸಮಂಜಸನ ಮಗ ಅಂಶುಮಂತನು ಕಪಿಲ ಮಹರ್ಷಿ ಬಳಿ ಬಂದು ಕೇಳಿದಾಗ “ಯಾಗವನ್ನು ಸಂಪನ್ನಗೊಳಿಸಿ ದೇವಗಂಗೆಯನ್ನು ತಂದು ಸಗರನ ಮಕ್ಕಳ ಚಿತಾಭಸ್ಮದ ಮೇಲೆ ಹರಿಸಿದರೆ ನಿನ್ನ ಪಿತೃವರ್ಗಕ್ಕೆ ಸದ್ಗತಿ ದೊರೆಯುತ್ತದೆ’ ಎಂದು ಹೇಳಿದ. ಅಂಶುಮಂತನಿಂದ ಸಾಧ್ಯವಾಗಲಿಲ್ಲ. ಆತನ ಮಗ ದಿಲೀಪ ಚಕ್ರವರ್ತಿಯಿಂದಲೂ ಸಾಧ್ಯವಾಗಲಿಲ್ಲ.
ದಿಲೀಪನ ಮಗ ಭಗೀರಥ ಮಹಾಚಕ್ರವರ್ತಿ ಕೋಸಲ ದೇಶದ ರಾಜನಾಗಿ ಪಟ್ಟಾಭಿಷಕ್ತನಾದ. ತನ್ನ ಪೂರ್ವಜರು ಕಪಿಲ ಮಹರ್ಷಿ ಕೋಪಕ್ಕೆ ತುತ್ತಾಗಿ ಭಸ್ಮವಾದದ್ದು, ಅವರಿಗೆ ಸದ್ಗತಿ ದೊರಕಿಸಲು ದೇವಗಂಗೆಯನ್ನು ಕರೆತರಲು ಹಿರಿಯರು ನಡೆಸಿದ ಪ್ರಯತ್ನ ವಿಲವಾದ ವಿಚಾರ ತಿಳಿಯಿತು. ಆಗ ಭಗೀರಥನು ದೇವಗಂಗೆಯನ್ನು ಭೂಲೋಕಕ್ಕೆ ಕರೆತರಲು ನಿರ್ಧರಿಸಿದ. ಕಾಡಿಗೆ ಹೋಗಿ ದೀರ್ಕಾಲ ತಪಸ್ಸನ್ನು ಆಚರಿಸಿದ. ಬ್ರಹ್ಮದೇವನು ಪ್ರತ್ಯಕ್ಷನಾಗಿ ದೇವಗಂಗೆಯನ್ನು ಕುರಿತು ಪ್ರಾರ್ಥಿಸುವಂತೆ ಹೇಳಿದ. ಮತ್ತೆ ತಪಸ್ಸು ಆರಂಭಿಸಿದ ಭಗೀರಥನ ಬಳಿ ದೇವಗಂಗೆ ಬಂದು “ನನ್ನ ರಭಸಕ್ಕೆ ಭೂಮಂಡಲವೇ ನಾಶವಾಗುತ್ತದೆ’ ಎಂದು ಹೇಳಿದಳು. ಆಗ ಬ್ರಹ್ಮನ ಸಲಹೆಯಂತೆ ಭಗೀರಥನು ಶಿವನ ಕುರಿತು ತಪಸ್ಸು ಮಾಡಿದ. ಶಿವನು ಪ್ರತ್ಯಕ್ಷನಾಗಿ “ನೀನು ಗಂಗೆಯನ್ನು ಪ್ರಾರ್ಥಿಸು. ನಾನು ಧುಮ್ಮಿಕ್ಕುವ ಗಂಗೆಯ ರಭಸವನ್ನು ಜಟೆಯಲ್ಲಿ ಕಟ್ಟಿಹಾಕಿ ಶಾಂತಳಾದ ನಂತರ ಭೂಮಿಗೆ ಹರಿಸುತ್ತೇನೆ’ ಎಂದು ಅಭಯವನ್ನಿತ್ತ.
ಸಗರ ಪುತ್ರರಿಗೆ ಸದ್ಗತಿಶಿವನ ಆಜ್ಞೆಯಂತೆ ಭಗೀರಥನನ್ನು ಹಿಂಬಾಲಿಸುತ್ತಾ ಗಂಗೆ ಸಾಗುತ್ತಿರುವಾಗ ದಾರಿಮಧ್ಯ ಭಗೀರಥ ಜಹ್ನು ಋಷಿಗಳ ಆಶ್ರಮ ಪ್ರವೇಶಿಸಿದಂತೆಯೇ ಪ್ರವಾಹದ ಪರಿಸ್ಥಿತಿ ಎದುರಾದಾಗ ಮಹರ್ಷಿಯು ಗಂಗೆಯನ್ನು ಕುಡಿದುಬಿಡುತ್ತಾರೆ. ಭಗೀರಥನು ಜಹ್ನುಮುನಿಯಲ್ಲಿ ಪ್ರಾರ್ಥಿಸುತ್ತ ತನ್ನ ಉದ್ದೇಶವನ್ನು ತಿಳಿಸುತ್ತಾನೆ. ಆಗ ಋಷಿಗಳು ತಮ್ಮ ಕಿವಿಯಿಂದ ಗಂಗೆಯನ್ನು ಹೊರಬಿಡುತ್ತಾರೆ. ಭಗೀರಥನು ಪಾತಾಳ ಸೇರಿ ಅಲ್ಲಿದ್ದ ಭಸ್ಮರಾಶಿಯ ಮುಂದೆನಿಂತು ಪ್ರಾರ್ಥಿಸುತ್ತಾನೆ. ಅದರಂತೆ ಗಂಗೆಯು ಭಸ್ಮರಾಶಿಯ ಮೇಲೆ ಹರಿದು ಸಗರ ಚಕ್ರವರ್ತಿಯ ಅರವತ್ತು ಸಾವಿರ ಮಕ್ಕಳಿಗೆ ಸದ್ಗತಿ ಕರುಣಿಸುತ್ತಾಳೆ. ತನ್ನ ಪೂರ್ವಜರ ಸದ್ಗತಿಗಾಗಿ, ರಾಜ್ಯಪದವಿ ತ್ಯಾಗಮಾಡಿ, ಹಲವು ಅಡ್ಡಿ ಆತಂಕಗಳನ್ನು ಎದುರಿಸಿ ನಿರಂತರ ಪ್ರಯತ್ನದ ಮೂಲಕ ಅಸಾಧ್ಯವಾದದ್ದನ್ನು ಸಾಧ್ಯವಾಗಿಸಿದನು ಭಗೀರಥ. ಹಾಗಾಗಿಯೇ “ಭಗೀರಥ ಪ್ರಯತ್ನ’ ಎಂದು ಹೇಳುತ್ತೇವೆ.
ಜಯಂತಿ ಆಚರಣೆಭಗೀರಥನನ್ನು ಸ್ಮರಿಸುವ ಸಲುವಾಗಿ ಪ್ರತಿ ವರ್ಷ ವಸಂತ ಋತುವಿನ ವೈಶಾಖ ಮಾಸದ ಗಂಗಾ ಸಪ್ತಮಿ (7ನೇ ದಿನ) ಯಂದು ಭಗೀರಥ ಜಯಂತಿ ಆಚರಿಸಲಾಗುತ್ತದೆ. ಈ ದಿನ ಗಂಗಾಸ್ನಾನದಿಂದ ಮಾಡಿದ ಪಾಪಗಳು ನಾಶವಾಗುತ್ತದೆ ಮತ್ತು ಗಂಗಾ ತಟದಲ್ಲಿ ಪಿತೃಯವನ್ನು ಮಾಡಿದರೆ ಪಿತೃವರ್ಗಕ್ಕೆ ಸದ್ಗತಿ ಹೊಂದುತ್ತದೆ ಎಂಬ ನಂಬಿಕೆ ಇದೆ. ರಾಜ್ಯ ಸರ್ಕಾರದ ವತಿಯಿಂದ 2017-18 ರಿಂದ ರಾಜ್ಯಾದ್ಯಂತ ಭಗೀರಥ ಜಯಂತಿ ಆಚರಿಸಲಾಗುತ್ತಿದೆ. ಭಗೀರಥ ಪೀಠದಲ್ಲಿ ಈ ಬಾರಿ ನಡೆಯುವ ಭಗೀರಥ ಜಯಂತಿಯಲ್ಲಿ ಮುಖ್ಯಮಂತ್ರಿಗಳು ಪಾಲ್ಗೊಳ್ಳಲಿದ್ದಾರೆ.
ಬಾಲ್ಯವಿವಾಹ ತಡೆಗೆ ಪಾದಯಾತ್ರೆ8&10 ವರ್ಷಗಳ ಹಿಂದೆ ಚಾಮರಾಜನಗರದಲ್ಲಿ ಬಾಲ್ಯವಿವಾಹ ತಡೆಗಾಗಿ ಪ್ರತಿಜ್ಞಾವಿಧಿ ಬೋಧನೆ ಮಾಡಲಾಗಿದೆ; ಜಾಗೃತಿ ಮೂಡಿಸುವ ಕೆಲಸ ಮಾಡಲಾಗಿದೆ. ಆದಾಗಿಯೂ ಬಾಲ್ಯವಿವಾಹ ನಡೆಯುತ್ತಿದೆ. ಮತ್ತೊಮ್ಮೆ ರಾಜ್ಯಾದ್ಯಂತ ಪಾದಯಾತ್ರೆ ನಡೆಸಿ ಜನರಲ್ಲಿ ಅರಿವು ಮೂಡಿಸಲಾಗುವುದು ಎಂದು ಕೇಳುಗರ ಪ್ರಶ್ನೆಯೊಂದಕ್ಕೆ ಸ್ವಾಮೀಜಿ ಉತ್ತರಿಸಿದರು.
ಗುರುಪೀಠ ಸ್ಥಾಪನೆಭಗೀರಥ ಗುರುಪೀಠದ ಪರಂಪರೆಯಲ್ಲಿ ಈವರೆಗೆ 13 ಜಗದ್ಗುರುಗಳು ಆಗಿದ್ದಾರೆ. ಹಿಂದಿನ ಜಗದ್ಗುರು ಲೇಪಾಕ್ಷ ಸ್ವಾಮೀಜಿ 12ನೇ ಜಗದ್ಗುರುಗಳು. ಮೊದಲು ಚಿತ್ರದುರ್ಗದಲ್ಲಿ ಮಠ ಇತ್ತು. ನಂತರ ಚಳ್ಳಕೆರೆ ತಾಲೂಕು ಉಪಾಹಾರಟ್ಟಿಗೆ ಸ್ಥಳಾಂತರ ಆಗಿ ಅಲ್ಲಿಯೂ ಮಠ ಇದೆ. 1960ರಲ್ಲಿ ಲೇಪಾಕ್ಷ ಸ್ವಾಮೀಜಿ ಹೊಸದುರ್ಗ ತಾಲೂಕಿನ ಹಾಲೂರು ರಾಮೇಶ್ವರ ಕ್ಷೇತ್ರದ ಬ್ರಹ್ಮವಿದ್ಯಾನಗರದಲ್ಲಿ ಭಗೀರಥ ಗುರುಪೀಠ ಸ್ಥಾಪಿಸಿದರು. ಆಗಿನ ಮುಖ್ಯಮಂತ್ರಿ ಎಸ್​. ನಿಜಲಿಂಗಪ್ಪ ಅವರು ಪೀಠಕ್ಕೆ 500 ಎಕರೆ ಜಮೀನು ಮಂಜೂರು ಮಾಡಿದರು. ಈ ಜಮೀನಿನಲ್ಲಿ ಬಡ ಹಾಗೂ ಕೂಲಿಕಾರ್ಮಿಕರನ್ನು ಕರೆತಂದು ಸಾಕಾರ ಬೇಸಾಯ ಸಂ ಸ್ಥಾಪಿಸಿ ಕೃಷಿ ಮಾಡಿಸಿದ ಲೇಪಾಕ್ಷ ಸ್ವಾಮೀಜಿ, ಅವರಿಗೆ ತಲಾ 4 ಎಕರೆ ಜಮೀನು ನೀಡಿ ಬದುಕು ಕಟ್ಟಿಕೊಟ್ಟರು. ಅವರ ನಂತರ ದೀೆ ಪಡೆದ ತಾವು ಸಾಕಾರ ಕೃಷಿ ಪದ್ಧತಿ ಮೂಲಕ ಸಾಮೂಹಿಕವಾಗಿ ಕೃಷಿ ಕೆಲಸದ ಜತೆಗೆ ವಿದ್ಯಾ ಕೇಂದ್ರಗಳನ್ನು ಸ್ಥಾಪಿಸಿ ಅಕ್ಷರ ಮತ್ತು ಅನ್ನ ದಾಸೋಹ ನಡೆಸುತ್ತಿರುವುದಾಗಿ ಶ್ರೀ ಪುರುಷೋತ್ತಮಾನಂದಪುರಿ ಸ್ವಾಮೀಜಿ ತಿಳಿಸಿದರು.
ದುಶ್ಚಟವನ್ನು ಜೋಳಿಗೆಗೆ ಹಾಕಿ:ನೀರಿನ ಸಮಸ್ಯೆ ನಿವಾರಿಸಲು ಕೆರೆ ನಿರ್ಮಿಸಿ ಸಿರಿಧಾನ್ಯಗಳನ್ನು ಬೆಳೆಸುತ್ತಿದ್ದೇವೆ. “ದುಶ್ಚಟಗಳನ್ನು ನಮ್ಮ ಜೋಳಿಗೆಗೆ ಹಾಕಿ ಆರೋಗ್ಯಕರ ಜೀವನ ನಡೆಸಿ’ ಎಂದು ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಮದ್ಯನಿಷೇಧ ಮಾಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ.
ಭುವನೇಶ್ವರಿ ಪ್ರತಿಮೆ ಸ್ಥಾಪನೆ:ಭಗೀರಥ ಗುರುಪೀಠದಲ್ಲಿ ಕನ್ನಡಾಂಬೆ ಭುವನೇಶ್ವರಿ ದೇವಿಯ ಬೃಹತ್​ ಪ್ರತಿಮೆ ಸ್ಥಾಪಿಸಿ ಅಲ್ಲಿ ಆದಿಕವಿ ಪಂಪ, ರನ್ನ, ಜನ್ನರಿಂದ ಈಗಿನ ಕವಿ ಸಾಹಿತಿಗಳ ಪರಿಚಯಿಸುವ ಕೆಲಸ ನಡೆಯುತ್ತಿದೆ.
ಮೀಸಲಾತಿಗೆ ಒತ್ತಾಯ:ಉಪ್ಪಾರ ಸಮಾಜದವರು ಹಿಂದೆ ಉಪ್ಪು ತಯಾರಿಸುವ ವೃತ್ತಿ ಮಾಡುತ್ತಿದ್ದರು. ಗಾಂಧಿ ನೇತೃತ್ವದಲ್ಲಿ ನಡೆದ ಉಪ್ಪಿನ ಸತ್ಯಾಗ್ರಹ ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಭದ್ರ ಬುನಾದಿ ಹಾಕಿತು. ಅದರಲ್ಲಿ ಉಪ್ಪಾರ ಸಮುದಾಯದ ಪಾತ್ರವೂ ಇದೆ. ಈ ಸಮಾಜ ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಹಾಗೂ ರಾಜಕೀಯವಾಗಿ ಹಿಂದುಳಿದಿದೆ. ಹಾಗಾಗಿ ಮೀಸಲಾತಿ ಕಲ್ಪಿಸಲು ಸರ್ಕಾರಕ್ಕೆ ಒತ್ತಾಯ ಮಾಡಲಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಕುಲಶಾಸ್ತ್ರ ಅಧ್ಯಯನ ಸಮಿತಿ ರಚಿಸಿದ್ದು, ವರದಿ ಆಧರಿಸಿ ಕೇಂದ್ರ ಸರ್ಕಾರಕ್ಕೆ ಅದನ್ನು ಶಿಾರಸು ಮಾಡಿ ಮೀಸಲಾತಿ ಕಲ್ಪಿಸಬೇಕು ಎಂದು ಮನವಿ ಮಾಡಲಾಗಿದೆ.
ನಿಗಮಗಳಿಗೆ 100 ಕೋಟಿ ರೂ. ಅನುದಾನ ಬೇಕು:ಉಪ್ಪಾರ ಅಭಿವೃದ್ಧಿ ನಿಗಮ ಸ್ಥಾಪಿಸಿ ಅನೇಕ ಯೋಜನೆಗಳನ್ನು ರೂಪಿಸಲಾಗಿದೆ. ಆದರೆ ಅನುದಾನ ಕೊರತೆಯಿದೆ. ನಿಗಮಗಳಿಗೆ ಕನಿಷ್ಠ 100 ಕೋಟಿ ರೂ. ಅನುದಾನ ನೀಡಿದಾಗ ಮಾತ್ರ ಯೋಜನೆಗಳನ್ನು ತಲುಪಿಸಲು ಸಾಧ್ಯ.
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
Sign in to your account
Please enter an answer in digits:4 × 4 =
Remember me
