ಹೋರಾಟ ಚುರುಕುಗೊಳಿಸಲು ಸಮಿತಿ ನಿರ್ಧಾರ | ಸುದೀರ್ಘ ಪ್ರತಿಭಟನೆಗೆ ಸಿಗುತ್ತಾ ಪ್ರತಿಫಲ?
ರಾಯಚೂರು:ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆಯಾಗಬೇಕೆಂಬ ಹೋರಾಟ ಸತತ ಎರಡು ವರ್ಷಗಳಿಂದ ನಗರದಲ್ಲಿ ಸಾಗಿದೆ. ಲೋಕಸಭೆ ಚುನಾವಣೆ ಮುಗಿಯುತ್ತಿದ್ದಂತೆ ಕಲ್ಯಾಣ ಕರ್ನಾಟಕ ಭಾಗದ ನೂತನ ಸಂಸದರ ಮೇಲೆ ಏಮ್ಸ್ ಹೋರಾಟಗಾರರು ಒತ್ತಡ ಹೇರಲು ನಿರ್ಧರಿಸಿದ್ದಾರೆ. ಈ ಮೂಲಕ ಬೇಡಿಕೆಯನ್ನು ಸಂಸದರ ಮೂಲಕ ಅಧಿವೇಶನದ ವೇಳೆ ಕೇಂದ್ರದ ಮುಂದಿಟ್ಟು ಒತ್ತಡ ಹೇರಲು ಸಿದ್ಧತೆಗೆ ಮುಂದಾಗಿದ್ದಾರೆ.
ನಗರದಲ್ಲಿ ಏಮ್ಸ್ ಸ್ಥಾಪಿಸುವಂತೆ ಒತ್ತಾಯಿಸಿ 757 ದಿನದಿಂದ ನಿರಂತರ ಧರಣಿ ನಡೆದಿದೆ. ರಾಯಚೂರು ಏಮ್ಸ್ ಹೋರಾಟ ಸಮಿತಿ ವತಿಯಿಂದ ನಡೆಯತ್ತಿರುವ ಹೋರಾಟಕ್ಕೆ ವಿವಿಧ ಸಂಘಟನೆಗಳ ಬೆಂಬಲವೂ ಸಿಕ್ಕಿದೆ. ಸುದೀರ್ಘ ಅವಧಿ ಹೋರಾಟದ ನಂತರವೂ ಕೇಂದ್ರದಿಂದ ಹೆಚ್ಚಿನ ಲಾಭವೇನೂ ಆಗಿಲ್ಲ. ಹೀಗಾಗಿ ಹೋರಾಟಗಾರರು ಅಸಮಾಧಾನಗೊಂಡಿದ್ದು, ಇದೀಗ ಹೋರಾಟ ಚುರುಕಿಗೆ ನಿರ್ಧರಿಸಿದ್ದಾರೆ.
ರಾಯಚೂರಿನಲ್ಲೇ ಏಮ್ಸ್ ಸ್ಥಾಪಿಸುವಂತೆ ಒತ್ತಾಯಿಸಿ ಎರಡು ವರ್ಷದಿಂದ ನಿರಂತರ ಹೋರಾಟ ನಗರದಲ್ಲಿ ನಡೆಯುತ್ತಿದೆ. ನಗರ ಸೇರಿದಂತೆ ಜಿಲ್ಲೆಗೆ ಯಾರೇ ಸಚಿವರು, ಹಿರಿಯ ಅಧಿಕಾರಿಗಳು ಭೇಟಿ ನೀಡಿದರೂ ಅವರಿಗೆ ಸಮಿತಿಯಿಂದ ಮನವಿ ಸಲ್ಲಿಸಿ ಒತ್ತಾಯಿಸುತ್ತಾ ಬರಲಾಗಿದೆ. ಸಿಎಂ ಸಿದ್ದರಾಮಯ್ಯಗೂ ಈ ಕುರಿತು ನಿಯೋಗ ತೆರಳಿ ಮನವಿ ಸಲ್ಲಿಸಲಾಗಿದೆ. ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆಯಾದರೆ ಸೂಕ್ತ ಎಂದು ರಾಜ್ಯ ಸರ್ಕಾರವು ಕೇಂದ್ರಕ್ಕೆ ಎರಡು ಸಲ ಪತ್ರ ಬರೆದು ಸುಮ್ಮನಾಗಿದೆ. ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರವು ರಾಜ್ಯದ ಕಾಂಗ್ರೆಸ್ ಸರ್ಕಾರದ ಮನವಿಗೆ ಕ್ಯಾರೇ ಎಂದಿಲ್ಲ. ಪರಿಣಾಮ 757 ದಿನ ಹೋರಾಟ ನಡೆದುಬಂದಿದೆ.
ಸುದೀರ್ಘ ಅವಧಿಯ ಹೋರಾಟವನ್ನು ಕೇಂದ್ರ ಸರ್ಕಾರ ಕಡೆಗಣಿಸಿದೆ. ಈಗ ಲೋಕಸಭೆ ಫಲಿತಾಂಶ ಹೊರಬೀಳುತ್ತಿದ್ದಂತೆಯೇ ಹೋರಾಟ ಸಮಿತಿ ಮತ್ತೆ ಹೊಸದಾಗಿ ಆಯ್ಕೆಯಾಗಿರುವ ಸಂಸದ ಮೇಲೆ ಏಮ್ಸ್ ಗಾಗಿ ಒತ್ತಡ ಹೇರಲು ನಿರ್ಧರಿಸಿದೆ. ಮುಂದಿನ ತಿಂಗಳು ನಡೆಯಲಿರುವ ಮುಂಗಾರು ಅಧಿವೇಶನದ ವೇಳೆಯೇ ಹೊಸದಿಲ್ಲಿಯಲ್ಲಿ ಹೈ.ಕ.ಸಾಂಸ್ಕೃತಿಕ ವೇದಿಕೆಯಿಂದ ಸಂಸದರಿಗೆ ಸನ್ಮಾನ ಸಮಾರಂಭ ಆಯೋಜಿಸಿದ್ದು, ಅಲ್ಲಿಯೇ ಏಮ್ಸ್ ಸ್ಥಾಪನೆ ನಿಟ್ಟಿನಲ್ಲಿ ಒತ್ತಡ ಹೇರಲು ಚಿಂತನೆ ನಡೆಸಿದೆ. ಅದಕ್ಕೂ ಮೊದಲು ಕಲ್ಯಾಣ ಕರ್ನಾಟಕದ ಕಾಂಗ್ರೆಸ್‌ನಿಂದ ಆಯ್ಕೆಯಾಗಿರುವ ಎಲ್ಲ ಸಂಸದರನ್ನು ಒಗ್ಗೂಡಿಸಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೋರಾಟ ಚುರುಕುಗೊಳಿಸುವ ಬಗ್ಗೆ ಚರ್ಚೆ ಆರಂಭಗೊಂಡಿದೆ. ಕೊಪ್ಪಳದ ಗವಿಮಠದ ಶ್ರೀಗಳನ್ನು ಹೋರಾಟದ ವೇಳೆ ಪಾಲ್ಗೊಳ್ಳುವಂತೆ ಮನವಿ ಮಾಡಲು ಸಮಿತಿ ನಿರ್ಧರಿಸಿದ್ದು, ಶೀಘ್ರ ಶ್ರೀಗಳ ಭೇಟಿಗೆ ತೆರಳುವ ಸಾಧ್ಯತೆಯಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೋರಾಟವನ್ನು ಚುರುಕುಗೊಳಿಸುವ ಜತೆಗೆ ಅಧಿವೇಶನದಲ್ಲಿ ಸಂಸದರಿಂದಲೇ ವಿಷಯ ಪ್ರಸ್ತಾಪಿಸುವಂತೆ ಮಾಡಿ, ಕೇಂದ್ರದಲ್ಲಿ ಮುಂದಿನ ದಿನಗಳಲ್ಲಿ ರಚನೆಯಾಗುವ ಸರ್ಕಾರಕ್ಕೆ ಒತ್ತಡ ಹೇರಲು ತಂತ್ರಗಾರಿಕೆ ರೂಪಿಸಲಾಗಿದೆ.

ಕೇಂದ್ರದ ಬಿಜೆಪಿ ಸರ್ಕಾರ ರಾಯಚೂರಿನಲ್ಲಿ ಏಮ್ಸ್ ಸ್ಥಾಪಿಸುವ ನಿಟ್ಟಿನಲ್ಲಿ ತೋರುತ್ತಿರುವ ತಾತ್ಸಾರದಿಂದ ರೋಸಿ ಹೋಗಿದ್ದೇವೆ. 757 ದಿನಗಳ ನಿರಂತರ ಹೋರಾಟದ ಹೊರತಾಗಿಯೂ ಯಾವುದೇ ಮಹತ್ವದ ಬೆಳವಣಿಗೆಯಾಗಿಲ್ಲ. ಹೀಗಾಗಿ ಲೋಕಸಭೆಗೆ ಹೊಸದಾಗಿ ಆಯ್ಕೆಯಾಗಿರುವ ಸಂಸದರ ಮೇಲೆ ಒತ್ತಾಯ ಹೇರಲು ನಿರ್ಧರಿಸಲಾಗಿದೆ. ಸಂಸತ್ ಅಧಿವೇಶನದಲ್ಲೂ ಈ ಬಗ್ಗೆ ಪ್ರಶ್ನಿಸಲು ಸಂಸದರಿಗೆ ಕೇಳಲಾಗುತ್ತದೆ. ಹಾಗೆಯೇ ಕಲ್ಯಾಣ ಕರ್ನಾಟಕ ಭಾಗದಾದ್ಯಂತ ಹೋರಾಟ ಆರಂಭಿಸಲು ಉದ್ದೇಶಿಸಲಾಗಿದೆ.| ಡಾ.ಬಸವರಾಜ ಕಳಸ ಪ್ರಧಾನ ಸಂಚಾಲಕ, ರಾಯಚೂರು ಏಮ್ಸ್ ಹೋರಾಟ ಸಮಿತಿ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:two + twelve =
Remember me
