ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ‘ಅಗ್ನಿಪಥ್​’ ವಿರೋಧಿಸಿ ಈಗಾಗಲೇ ಕೆಲವೆಡೆಗಳಲ್ಲಿ ಹಿಂಸಾಚಾರದ ಮಟ್ಟಿಗಿನ ಪ್ರತಿಭಟನೆ ಶುರು ಮಾಡಲಾಗಿದೆ. ದೇಶ ಸೇವೆಗಾಗಿ ಸೈನ್ಯ ಸೇರುವ ಆಕಾಂಕ್ಷಿಗಳು ತಾವು ಎಂದು ಹೇಳಿಕೊಳ್ಳುತ್ತಿರುವ ಪ್ರತಿಭಟನಾಕಾರರು ರೈಲಿಗೆ ಬೆಂಕಿ ಹಚ್ಚುವುದೂ ಸೇರಿದಂತೆ ಹಲವು ರೀತಿಯಲ್ಲಿ ಕೋಟ್ಯಂತರ ರೂಪಾಯಿ ಆಸ್ತಿಪಾಸ್ತಿ ಹಾನಿ ಮಾಡಿದ್ದಾರೆ, ಪ್ರತಿಭಟನೆ ಹೆಸರಿನಲ್ಲಿ ಏಕಾಏಕಿ ಕಲ್ಲು ತೂರಾಟ ಶುರು ಮಾಡಿದ್ದು, ಕಾಂಗ್ರೆಸ್​ ಕೂಡ ಪ್ರತಿಭಟನಾಕಾರರಿಗೆ ಬೆಂಬಲ ಸೂಚಿಸುತ್ತಿದೆ.
ಈ ಕುರಿತು ಕನ್ನಡಿಗರೇ ಆಗಿರುವ ವಿಂಗ್​ ಕಮಾಂಡರ್​ ಸುದರ್ಶನ್​ ಅವರು ಕಾಂಗ್ರೆಸ್​ಗೆ ಸೈನಿಕರ, ಸೇನೆಯ ಬಗ್ಗೆ ಇರುವ ಕಾಳಜಿ ಕುರಿತು ಒಂದಿಷ್ಟು ಅನುಭವಗಳನ್ನು ತಮ್ಮ ಫೇಸ್​ಬುಕ್​ ಖಾತೆಯಲ್ಲಿ ಬರೆದುಕೊಂಡಿದ್ದು, ಅದರ ಯಥಾವತ್​ ಕಾಪಿಯನ್ನು ಇಲ್ಲಿ ಬರೆಯಲಾಗಿದೆ…—-
ಇದ್ದಕ್ಕಿದ್ದಂತೆರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ಸಿನವರು ಸೈನ್ಯದ ಬಗ್ಗೆ ತೋರಿಸುತ್ತಿರುವ ಕಾಳಜಿಯನ್ನು ಕಂಡು ಆಘಾತವಾಗುವಷ್ಟು ಆಶ್ಚರ್ಯವಾಗುತ್ತಿದೆ. ಸೈನದ ಕಾರ್ಯಾಚರಣೆಗಳಿಗೆ ಸಾಕ್ಷಿ ಕೇಳುವ ಮನಸ್ಥಿತಿಯ ಜನರು ಹೀಗೆ ಏಕ್ದಂ ನಮ್ಮ ಸೈನಿಕರ ಬಗ್ಗೆ ಮೊಸಳೆ ಕಣ್ಣೀರು ಹರಿಸುತ್ತಿದ್ದಾರಲ್ಲಾ ಏನು ಹೇಳೋದು. 1962ರ ಚೀನಾದೊಂದಿಗೆ ನಡೆದ ಯುದ್ಧದ ಹೀನಾಯ ಸೋಲು ಪ್ರತಿಯೊಬ್ಬ ಭಾರತೀಯನ ಮನದಲ್ಲಿ ಈಗಲೂ ಚುಚ್ಚುತ್ತಿದೆ. ನೆಹರೂ ಮತ್ತು ಕೃಷ್ಣ ಮೆನೆನ್ನರ ಅಹಂಕಾರದ ನಡೆ ಮತ್ತು ರಾಜಕೀಯ ಹುಂಬತನಕ್ಕೆ ಬಲಿಪಶುವಾಯಿತು ಭಾರತೀಯ ಸೈನ್ಯ ಮತ್ತು ಸೈನಿಕರು.
ಇನ್ನು ಇಂದಿರಾಗಾಂಧಿಯ ವಿಷಯಕ್ಕೆ ಬಂದರೆ ಅವರೂ ಏನು ಕಡಿಮೆ ಇಲ್ಲ. 1971 ಪಾಕಿಸ್ತಾನದೊಂದಿಗೆ ನಡೆದ ಯುದ್ಧದ ಅಭೂತಪೂರ್ವ ಜಯದಿಂದ ವಿಶ್ವಮಟ್ಟದಲ್ಲಿ ದೊಡ್ಡ ನಾಯಕಿಯಾಗಿ ಬಿಂಬಿಸಿಕೊಳ್ಳುವ ತುರಾತುರಿಯಲ್ಲಿ ಯುದ್ಧದ ಅಸಲಿ ಹೀರೊ ಫೀಲ್ಡ್ ಮಾರ್ಷಲ್ ಮಾಣಿಕ್ ಷಾರವರನ್ನು ಉದ್ದೇಶ ಪೂರ್ವಕವಾಗಿ ಕಡೆಗಣಿಬಿಟ್ಟಿದ್ದರು. ದಿನೇದಿನೇ ಹೆಚ್ಚುತ್ತಿದ್ದ ಸ್ಯಾಮ್ ಮಾಣಿಕ್ ಷಾರವರ ಜನಪ್ರಿಯತೆ ಅವರಿಗೆ ಸಹಿಸಲಾಗುತ್ತಿರಲಿಲ್ಲ. ಪಾಪಿ ಪಾಕಿಸ್ತಾನವನ್ನು ತುಂಡರಿಸಿ, ಬಾಂಗ್ಲಾದೇಶವನ್ನು ಸೃಷ್ಟಿಸಿ, 93000 ಪಾಕಿಸ್ತಾನದ ಯುದ್ಧಕೈದಿಗಳನ್ನು ಹಿಡಿದಿಟ್ಟಿದ್ದ ಭಾರತೀಯ ಸೈನ್ಯದ ಸಾಹಸ ಎಲ್ಲೆಡೆ ಹೆಮ್ಮೆಯ ಮಾತಾಗಿತ್ತು. ಸ್ಯಾಮ್ ಮಾಣಿಕ್ ಷಾರವರನ್ನು ಕಡೆಗಣಿಸಿ ಸಿಮ್ಲಾ ಸಂಧಾನಕ್ಕೆ ಹೊರಟರು ಇಂದಿರಾಗಾಂಧಿ. ಇವರು ಕರೆದುಕೊಂಡು ಹೋದ ಬಾಬುಗಳ ತಂಡಕ್ಕೆ ಸಂಧಾನದ ಮಾತುಗಳನ್ನು ಯಾವ ಮಟ್ಟದಲ್ಲಿ ನಡೆಸಬೇಕೆಂಬ ಸಾಮಾನ್ಯ ಜ್ಞಾನವೂ ಇರಲಿಲ್ಲ. 93000 ಸೈನಿಕರ ಬಿಡುಗಡೆಗೆ ಒಂದೇ ಏಟಿಗೆ POK ಮತ್ತು ಕಾಶ್ಮೀರದ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಿಕೊಳ್ಳಲು ದೊರೆತ ಅವಕಾಶ ಕೈಜಾರಿ ಹೋಯಿತು.
ಸಿಮ್ಲಾ ಸಂಧಾನ ಮುಗಿಸಿಕೊಂಡು ಬಂದ ಇಂದಿರಾಗಾಂಧಿ ಸ್ಯಾಮ್ ಮಾಣಿಕ್ ಷಾರವರಿಗೆ ಕರೆಮಾಡಿ ಸಂಧಾನದ ವಿವರಗಳನ್ನು ತಿಳಿಸಿ ಅವರ ಅಭಿಪ್ರಾಯವನ್ನು ಕೇಳುತ್ತಾರೆ. ಅದಕ್ಕೆ ಕಡ್ಡಿತುಂಡರಿಸಿದಂತೆ ಸ್ಯಾಮ್ ಹೇಳುತ್ತಾರೆ;
‘Pakistanis and your staff have made a monkey of you’
ಮೊದಲಿಂದಲೂ ಎಡರುತೊಡರಾಗಿದ್ದ ಅವರ ಸಂಬಂಧ ಅಲ್ಲಿಗೆ ಮುಗಿದೇ ಹೋಯಿತು ಎನ್ನಬಹುದು. ಮುಂದೆ ಸ್ಯಾಮ್ ಮಾಣಿಕ್ ಷಾರವರಿಗೆ ಫೀಲ್ಡ್ ಮಾರ್ಷಲ್ ಆಗಿ ಪ್ರಮೋಶನ್ ಸಿಕ್ಕಾಗ ಆ ಹುದ್ದೆಗೆ ಸಿಗಬೇಕಾದ ಗೌರವ ಮನ್ನಣೆಗಳು ಸಿಗಲಿಲ್ಲ. ಎಲ್ಲದಕ್ಕೂ ಮಿಗಿಲಾಗಿ ಫೀಲ್ಡ್ ಮಾರ್ಷಲ್​ರವರಿಗೆ ಸಿಗಬೇಕಾದ ಸಂಬಳವೂ ಸಿಗಲಿಲ್ಲ. ಮುಂದೆ 2007 ರಲ್ಲಿ ಮಾಣಿಕ್ ಷಾ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾಗ ಅಂದಿನ ರಾಷ್ಟ್ರಪತಿ ಅಬ್ದುಲ್ ಕಲಾಮ್ ಅವರು ಇವರ ಆರೋಗ್ಯ ವಿಚಾರಿಸಲು ಬಂದಾಗ ಕಲಾಮ್ ರವರೊಂದಿಗೆ ಸಿಗಬೇಕಾಗಿರುವ ತಮ್ಮ ಸಂಬಳದ ಬಗ್ಗೆ ತಿಳಿಸುತ್ತಾರೆ. ನ್ಯಾಯವಾಗಿ ಭಾರತ ರತ್ನ ಪ್ರಶಸ್ತಿಗೆ ಅರ್ಹನಾದ ವ್ಯಕ್ತಿಗೆ ಸಂಬಳ ಸಿಗುತ್ತಿಲ್ಲವೇ! ಅದೇ ಆಘಾತದಿಂದ ದೆಹಲಿಗೆ ಮರಳಿದ ಕಲಾಮ್ ರವರು ಶೀಘ್ರವೇ ಕಾರ್ಯಗತರಾಗುತ್ತಾರೆ.
ಜೂನ್ 2007 ಮೊದಲ ವಾರ, ದೆಹಲಿಯಿಂದ ರಾಷ್ಟ್ರಪತಿಯವರ ಕಾರ್ಯಾಲಯದಿಂದ ಒಬ್ಬ ಸಿಬ್ಬಂದಿ ಮಾಣಿಕ್ ಷಾರವರು ಇದ್ದ ಆಸ್ಪತ್ರೆಗೆ ಹೋಗಿ ಒಂದು ಚೆಕ್ ಕೊಡುತ್ತಾರೆ. 34 ವರ್ಷಗಳ ಬರಬೇಕಾಗಿದ್ದ ಸಂಬಳದ ಬಾಬತ್ತು ಬರೋಬ್ಬರಿ ಒಂದು ಕೋಟಿ ಹದಿನಾರು ಲಕ್ಷದಷ್ಟು ಮೊತ್ತದ ಚೆಕ್ ಅದು. ಆದರೆ ದುರ್ದೈವ 27 ಜೂನ್ 2007 ರಂದು ಮಾಣಿಕ್ ಷಾರವರು ವಿಧಿವಶರಾದರು, ಬಹುಶಃ ಆ ಚೆಕ್ ಅವರ ಹಾಸಿಗೆ ಪಕ್ಕದ ಲಾಕರಿನಲ್ಲಿತ್ತೇನೋ.
ಇಷ್ಟೇ ಅಲ್ಲಾ, ನಮ್ಮ ಸೈನಿಕರಿಗೆ ಕಾಂಗ್ರೆಸ್ ಸರ್ಕಾರದ ಇನ್ನೊಂದು ಪಾರಿತೋಷತಕ ಸದ್ಯದಲ್ಲೇ ಸಿಗಲಿತ್ತು. 1973 ರಲ್ಲಿ ಘೋಷಿಸಿದ ವೇತನ ಆಯೋಗದಲ್ಲಿ ಸೈನಿಕರ ಪಿಂಚಣಿಯನ್ನು ಇಪ್ಪತ್ತರಿಂದ ನಲವತ್ತು ಪ್ರತಿಶತದಷ್ಟು ಕಡಿತಗೊಳಿಸಲಾಗಿತ್ತು ಮತ್ತು civilian ಸಿಬ್ಬಂದಿಯ ಪಿಂಚಣಿಯನ್ನು ಏರಿಸಲಾಗಿತ್ತು. ಒಬ್ಬ ಸೈನ್ಯದ ತರಬೇತಿ ಪಡೆದ ಸಿಬ್ಬಂದಿಯನ್ನು ದಿನಗೂಲಿ ನೌಕರರ ಶ್ರೇಣಿಗೆ ಸೇರಿಸಲಾಗಿತ್ತು.
ಭಲೇ ಸರ್ಕಾರವೇ ಸೈನ್ಯಕ್ಕೆ ಮತ್ತು ಸೈನಿಕರಿಗೆ ನೀವು ಕೊಟ್ಟ ಕೊಡುಗೆ ಅಪಾರ ಎಂದು ಇಡೀ ಸೈನ್ಯಕ್ಕೆ ಸೈನ್ಯವೇ ಅಂದಿನ ಸರ್ಕಾರವನ್ನು ಕೊಂಡಾಡಿತು. ಈಗ ಅದೆಲ್ಲಿಂದ ಬಂತೋ ಏನೋ ಸೈನಿಕರ ಬಗ್ಗೆ ಕಾಳಜಿ, ಕನಿಕರ ಈ ರಾಹುಲ್​ನ ಗ್ಯಾಂಗಿಗೆ.
ಎಲ್ಲಿದ್ದೆ ಇಲ್ಲೀ ತನಕ…ಈಗ್ಯಾಕೆ ಬಂದ್ಯಯ್ಯಅಂತಾ ಹಾಡಬೇಕು ಎನಿಸುತ್ತದೆ.
ಇಲ್ಲಿದೆ ನೋಡಿ ವಿಂಗ್​ ಕಮಾಂಡರ್​ ಸುದರ್ಶನ್ ಅವರ ಫೇಸ್​ಬುಕ್​ ಲಿಂಕ್​
https://www.facebook.com/sudarshan.badangod/posts/pfbid0D5sniJbHEnC75seVQ4LVf9yB1RKGgswx6b1SvozCR1eV7VngNZiCtGD3jbvw1osml
ಅಗ್ನಿಪಥ್: ಕಾಂಗ್ರೆಸ್​ನಿಂದ ಬೆಂಕಿಗೆ ತುಪ್ಪ ಸುರಿಯುವ ಕೆಲಸ- ಸಿಎಂ ಬೊಮ್ಮಾಯಿ ಕಿಡಿ

‘ಅಗ್ನಿಪಥ್​’ ವಿರೋಧಿಸಿ ಪ್ರತಿಭಟನೆ: ಬಿಹಾರ ಒಂದರಲ್ಲೇ ರೈಲ್ವೆ ಇಲಾಖೆಗೆ 700 ಕೋಟಿ ರೂ.ಗೂ ಅಧಿಕ ನಷ್ಟ

ಜನರಿಗೆ ತೊಂದರೆ ಕೊಟ್ಟು ದೇಶ ಕಾಯೋಕೆ ಆಗುತ್ತಾ? ಅಗ್ನಿಪಥದ ವಿರೋಧಿಗಳಿಗೆ ಕೃಷಿ ಸಚಿವರ ಸವಾಲ್​

‘ಅಗ್ನಿಪಥ್’​ಗೆ ನೇಮಕಾತಿ ಶುರು: ಏನೆಲ್ಲಾ ಸೌಲಭ್ಯಗಳಿವೆ? ಅರ್ಹತೆ ಏನು? ವೇತನವೆಷ್ಟು? ಸಂಪೂರ್ಣ ಡಿಟೇಲ್ಸ್​ ಇಲ್ಲಿದೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 1 =
Remember me
