ಇಡೀ ಊರಿಗೆ ಊರೇ ತಳಿರು-ತೋರಣಗಳಿಂದ ಸಿಂಗಾರಗೊಂಡಿತ್ತು. ಪ್ರತಿಯೊಬ್ಬರ ಮನೆ ಮುಂದೆಯೂ ಬಣ್ಣ-ಬಣ್ಣದ ರಂಗೋಲಿ. ಮಕ್ಕಳಿಂದ ವಯೋವೃದ್ಧರವರೆಗೂ ಸಾಂಪ್ರದಾಯಿಕ ಉಡುಗೆ ತೊಟ್ಟು ಬೀದಿಗಿಳಿದು ಸಂಭ್ರಮಿಸುತ್ತಿದ್ದರು. ಎತ್ತು, ಎತ್ತಿನಗಾಡಿಗಳನ್ನು ಸಿಂಗರಿಸಿ ಸುಗ್ಗಿ ಹಬ್ಬ ಬರಮಾಡಿಕೊಳ್ಳವುದಕ್ಕೆ ಕಾತುರದಲ್ಲಿದ್ದರು. ಈ ಎಲ್ಲ ದೃಶ್ಯಗಳು ಕಂಡುಬಂದಿದ್ದು, ಸಕ್ಕರೆನಾಡು ಮಂಡ್ಯ ಜಿಲ್ಲೆಯ ತೈಲೂರಿನಲ್ಲಿ. ಈ ಬಾರಿವಿಜಯವಾಣಿಮತ್ತುದಿಗ್ವಿಜಯ 247 ನ್ಯೂಸ್ಸುಗ್ಗಿ ಹಬ್ಬ‘ಸಂಕ್ರಾಂತಿ’ಆಚರಿಸಲು ತೈಲೂರನ್ನು ಆಯ್ಕೆ ಮಾಡಿಕೊಂಡಿತ್ತು. ಸಂಕ್ರಾಂತಿ ಸಂಭ್ರಮದ ಮುಖ್ಯಅತಿಥಿಯಾಗಿದ್ದ ನಟಿ ಹರ್ಷಿಕಾ ಪೂಣಚ್ಚ ಅವರನ್ನು ಹಳ್ಳಿಯ ಜನ ಪೂರ್ಣಕುಂಭದೊಂದಿಗೆ ಸ್ವಾಗತಿಸಿದರು. ಹರ್ಷಿಕಾ ತೈಲೂರಿನ ಹೆಬ್ಬಾಗಿಲಿನಲ್ಲಿ ಎತ್ತಿನ ಗಾಡಿಗಳಿಗೆ ಪೂಜೆ ಸಲ್ಲಿಸುವ ಮೂಲಕ ಸುಗ್ಗಿ ಸಂಭ್ರಮಕ್ಕೆ ಚಾಲನೆ ನೀಡಿದರು. ಎತ್ತಿನ ಗಾಡಿಯಲ್ಲೇ ಊರು ಸುತ್ತಿ, ಊರಿನ ಮಧ್ಯ ಭಾಗದಲ್ಲಿರುವ ‘ತೈಲೂರಮ್ಮ ದೇವಸ್ಥಾನ’ಕ್ಕೆ ಭೇಟಿ ನೀಡಿದರು. ಊರಿನ ಶ್ರೇಯೋಭಿವೃದ್ಧಿಗೆ ಪ್ರಾರ್ಥಿಸಿದರು. ನಂತರ ದೇವಸ್ಥಾನ ಮುಂಭಾಗದಲ್ಲೇ ಲಕ್ಷ್ಮೀನಾರಾಯಣ ಕಲಾ ಸಂಘ ತಂಡದವರು ಡೊಳ್ಳು ಕುಣಿತ ಪ್ರದರ್ಶಿಸಿದರು. ಡೊಳ್ಳಿನ ಸದ್ದಿಗೆ ನಟಿ ಫುಲ್ ಜೋಶ್​ನಲ್ಲಿ ಹೆಜ್ಜೆ ಹಾಕಿದರು. ಹಳ್ಳಿ ಮಕ್ಕಳು ಕೂಡ ನಟಿ ಜತೆಗೆ ಹೆಜ್ಜೆ ಹಾಕುವ ಮೂಲಕ ಸಾಥ್ ನೀಡಿದರು.
ಊರ ಉಸಾಬರಿದಿಗ್ವಿಜಯ 247 ನ್ಯೂಸ್​ನಲ್ಲಿ ಮೂಡಿಬರುವ ಊರ ಉಸಾಬರಿ ಕಾರ್ಯಕ್ರಮ ತಂಡದವರು ಊರಿನಲ್ಲಿರುವ ಹಳ್ಳಿ ಮಕ್ಕಳಿಗೆ ‘ಕೆರೆ-ದಡ’ ಎಂಬ ಗ್ರಾಮೀಣ ಆಟವಾಡಿಸಿದರು. ತಂಡದಲ್ಲಿದ್ದ ಅಜ್ಜಿ ಹಳ್ಳಿ ಹಾಡಿಗೆ ಹೆಜ್ಜೆ ಹಾಕಿ ಎಲ್ಲರೂ ಬಾಯಿಯ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿದರು.
ಸಿಂಪ್ಲೀ ಸುರೇಶ್ ಮ್ಯಾಜಿಕ್ ಶೋಮ್ಯಾಜಿಕ್ ಮ್ಯಾನ್ ಸಿಂಪ್ಲೀ ಸುರೇಶ್, ವಿವಿಧ ಮ್ಯಾಜಿಕ್ ಶೋಗಳನ್ನು ಪ್ರದರ್ಶಿಸುವ ಮೂಲಕ ಜನ ಅಚ್ಚರಿಪಡುವಂತೆ ಮಾಡಿದರು. ಹರ್ಷಿಕಾ ಪೂಣಚ್ಚ ಕೂಡ ಮ್ಯಾಜಿಕ್ ಶೋನಲ್ಲಿ ಭಾಗಿಯಾದರು. ಸುರೇಶ್ ಮಾಡಿದ ಮ್ಯಾಜಿಕ್ ನೋಡಿ ದಿಗ್ಬ್ರಮೆಗೊಂಡರು. ಸುರೇಶ್ ಮಗಳು ದಿವ್ಯಶ್ರೀ ಕೂಡ ಕೆಲ ಮ್ಯಾಜಿಕ್ ತಂತ್ರಜ್ಞಾರಿಕೆ ಪ್ರದರ್ಶಿಸಿದರು.
ರಂಗೋಲಿ ಸ್ಪರ್ಧೆಹೆಣ್ಣು ಮಕ್ಕಳಿಗಾಗಿ ರಂಗೋಲಿ ಸ್ಪರ್ಧೆ ಆಯೋಜಿಸಲಾಗಿತ್ತು. ಪ್ರಾಥಮಿಕ ಶಾಲಾ ಮಕ್ಕಳಿಂದ ವಯೋವೃದ್ಧರವರೆಗೆ ಎಲ್ಲರೂ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರತಿಭೆ ಪ್ರದರ್ಶಿಸಿದರು. ವಿಭಿನ್ನ, ವಿಶೇಷ ರಂಗೋಲಿಗಳು ಇದ್ದ ಕಾರಣ ತೀರ್ಪಗಾರ್ತಿ ಹರ್ಷಿಕಾಗೆ ವಿಜೇತರನ್ನು ಆಯ್ಕೆ ಮಾಡುವುದೇ ದೊಡ್ಡ ಸವಾಲಾಗಿತ್ತು. ಪ್ರಸ್ತುತ ಸಂದರ್ಭಕ್ಕೆ ಹೊಂದಿಕೊಳ್ಳುವಂಥ ‘ಕರೊನಾ ರಂಗೋಲಿ’ ಎಲ್ಲರ ಗಮನ ಸೆಳೆಯಿತು.
ಪೊಂಗಲ್ ಸ್ಪರ್ಧೆಸಂಕ್ರಾಂತಿ ಎಂದಾಕ್ಷಣ ಜನರಿಗೆ ನೆನಪಿಗೆ ಬರುವುದೇ ಪೊಂಗಲ್. ಗೃಹಿಣಿಯರಿಗಾಗಿ ಈ ಪೊಂಗಲ್ ಸ್ಪರ್ಧೆ ಆಯೋಜಿಸಲಾಗಿತ್ತು. ಬಯಲಿನಲ್ಲಿ ಒಲೆವೊಡ್ಡಿ ಕಟ್ಟಿಗೆಗೆ ಬೆಂಕಿಹಚ್ಚಿ ಮಡಿಕೆಯಲ್ಲಿ ಪೊಂಗಲ್ ಮಾಡುವುದು ಯುವತಿಯರಿಗೆ ಕಷ್ಟದ ಕೆಲಸವೇ ಆಗಿತ್ತು. ಬಹಳ ವರ್ಷಗಳಿಂದ ಒಲೆಯಲ್ಲೇ ಅಡುಗೆ ಮಾಡಿ ಅನುಭವುಳ್ಳ ಗೃಹಿಣಿಯರು ಸುಲಭವಾಗಿ ಪೊಂಗಲ್ ತಯಾರಿಸಿದರು. ಎಲ್ಲರ ಕೈರುಚಿಯ ಪೊಂಗಲ್ ಅನ್ನು ಹರ್ಷಿಕಾ ಟೇಸ್ಟ್ ಮಾಡುವ ಮೂಲಕ ವಿಜೇತರನ್ನು ಆಯ್ಕೆ ಮಾಡಿದರು.
ಕೊಡಗಿನಲ್ಲಿ ಸಂಕ್ರಾಂತಿಯನ್ನು ಈ ರೀತಿ ಆಚರಿಸುವುದಿಲ್ಲ. ನಮ್ಮಲ್ಲಿ ಉತ್ತರಿಹಬ್ಬ, ಕಾವೇರಿ ಸಂಕ್ರಮಣ, ಕೈಲ್​ಪುರ್ ಹಬ್ಬಗಳನ್ನು ಅದ್ದೂರಿಯಾಗಿ ಆಚರಣೆ ಮಾಡುತ್ತೇವೆ. ಆದರೆ, ನನಗೆ ಸಂಕ್ರಾಂತಿಯ ಆಚರಣೆ ತಿಳಿದಿರಲಿಲ್ಲ. ಇಲ್ಲಿ ನೋಡಿ ಖುಷಿಯಾಯ್ತು. ಇನ್ನೂ ‘ವಿಜಯವಾಣಿ ಮತ್ತು ದಿಗ್ವಿಜಯ ಸುದ್ದಿವಾಹಿನಿ’ ಈ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ರೂಪಿಸಿ ನಿರ್ವಹಿಸಿದೆ. ಇಂತಹ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ನನ್ನನ್ನು ಕರೆಸಿದ್ದು ಖುಷಿ ತಂದಿದೆ.| ಹರ್ಷಿಕಾ ಪೂಣಚ್ಚನಟಿ
ನಾನು ಈವರೆಗೆ ಸಂಕ್ರಾಂತಿ ಆಚರಣೆ ಮಾಡಿರಲಿಲ್ಲ. ಇದೇ ಮೊದಲ ಬಾರಿಗೆ ಈ ಹಬ್ಬದಲ್ಲಿ ಭಾಗವಹಿಸಿದ್ದೇನೆ. ಜನರ ಜತೆಗೆ ಬೆರೆಯಲು ಉತ್ತಮ ಅವಕಾಶವನ್ನು ವಿಜಯವಾಣಿ ಮತ್ತು ದಿಗ್ವಿಜಯ ನ್ಯೂಸ್ ಕಲ್ಪಿಸಿಕೊಟ್ಟಿದೆ. ಇದಕ್ಕೆ ನನ್ನ ಧನ್ಯವಾದಗಳು.| ಭುವನ್ ಪೊನ್ನಣ್ಣನಟ
ರಸಸಂಜೆ ರಂಗುಜೀ ಕನ್ನಡದಲ್ಲಿ ಪ್ರಸಾರವಾಗುವ ಸರಿಗಮಪ 17 ಸೀಸನ್​ನ ಅಂತಿಮ ಸ್ಪರ್ಧಿಗಳು ಮತ್ತು ವಿಜೇತರು ತೈಲೂರಿನಲ್ಲಿ ರಸ ಸಂಜೆ ಕಾರ್ಯಕ್ರಮ ನಡೆಸಿಕೊಟ್ಟರು. ಗೋ.ನಾ. ಸ್ವಾಮಿ ಕಲಾವಿದರ ತಂಡ ಸಂಕ್ರಾತಿ ಹಬ್ಬದ ಪ್ರಯುಕ್ತ ರೈತ ಗೀತೆಗಳನ್ನು ಹಾಡಿದರು. ರಾತ್ರಿ ಸುಮಾರು 12 ಗಂಟೆವರೆಗೂ ನಡೆದ ಕಾರ್ಯಕ್ರಮದಲ್ಲಿ ಹಳ್ಳಿಯ ಜನ ಹೆಚ್ಚು ಖುಷಿಯಿಂದ ಭಾಗವಹಿಸಿದ್ದರು.
ಡೊಳ್ಳು, ಪೂಜಾ ಕುಣಿತದೇಶ ಮಾತ್ರವಲ್ಲದೆ, ವಿದೇಶದಲ್ಲೂ ತಮ್ಮ ಕಲೆ ಪ್ರದರ್ಶಿಸಿದ್ದ ಲಕ್ಷ್ಮೀ ನಾರಾಯಣ ಕಲಾ ಸಂಘದವರು ಡೊಳ್ಳು ಕುಣಿತ ಪ್ರದರ್ಶಿಸಿದರು. ತೈಲೂರಮ್ಮ ಕಲಾ ಸಂಘದವರು ತಮಟೆವಾದ್ಯ ಹಾಗೂ ಪೂಜಾ ಕುಣಿತ ಪ್ರದರ್ಶಿಸಿದರು. ಭೀಮನ ಕರೆ ಜಯಣ್ಣ ಕಲಾ ತಂಡದವರು ಕೀಲು ಕುದುರೆ ಪ್ರದರ್ಶಿಸಿ ಜನರನ್ನು ರಂಜಿಸಿದರು.
ಶೂಟಿಂಗ್ ಸ್ಪಾಟ್ ತೈಲೂರುಮದ್ದೂರು ತಾಲೂಕಿನ ತೈಲೂರು ಗ್ರಾಮಕ್ಕೆ ತನ್ನದೇ ಆದ ವಿಶಿಷ್ಟ ಪರಂಪರೆ ಇದೆ. ಇದು ಗಾಣಿಗರು ಇದ್ದ ಊರು. ಎಣ್ಣೆ ಅಥವಾ ತೈಲ ತೆಗೆಯುವ ಸ್ಥಳ, ಕಾಕತಾಳೀಯವಾಗಿ ಗಂಧದ ಸಸಿ ಯಥೇಚ್ಚವಾಗಿ ಈಗಲೂ ಬೆಳೆಯುವ ಗ್ರಾಮ ತೈಲೂರು. ಈ ಗ್ರಾಮ ಶೂಟಿಂಗ್ ಸ್ಪಾಟ್ ಆಗಿಯೂ ಪ್ರಸಿದ್ದಿ ಪಡೆದಿದೆ. ಕೆಂಪೇಗೌಡ, ವಿಲನ್, ಅಂಬಿ ನಿಂಗ್ ವಯಸ್ಸಾಯ್ತೋ, ಸಿಂಗ ಸೇರಿ ಹಲವಾರು ಕನ್ನಡ ಸಿನಿಮಾಗಳ ಶೂಟಿಂಗ್ ಇಲ್ಲಿ ನಡೆದಿದೆ.
ನಮ್ಮೂರು ಕೋಲಾರ. ನಾವೂ ಈ ರೀತಿಯಲ್ಲೇ ಹಬ್ಬ ಆಚರಣೆ ಮಾಡುತ್ತೇವೆ. ಆದರೂ, ಇಲ್ಲಿನ ವಾತಾವರಣ ಹೆಚ್ಚಿನ ಖುಷಿ ಕೊಟ್ಟಿದೆ.| ಸುಬ್ರಹ್ಮಣಿ
ನಾನು ಟ್ರ್ಯಾಕ್ಟರ್​ನಲ್ಲಿ ಓಡಾಡಿದ್ದೆ. ಆದರೆ ಎತ್ತಿನಗಾಡಿ ಮೇಲೆ ಎಲ್ಲೂ ರೌಂಡ್ ಹೊಡೆದಿರಲಿಲ್ಲ. ಇವತ್ತು ಗಾಡಿಯಲ್ಲಿ ಮೆರವಣಿಗೆ ಮಾಡಿಸಿರುವುದು ಮರೆಯಲು ಸಾಧ್ಯವಿಲ್ಲ.| ಶ್ರೀನಿಧಿ
ನಮ್ಮೂರಿನಲ್ಲಿ ಈ ರೀತಿ ಸಂಕ್ರಾಂತಿ ಮಾಡುವುದಿಲ್ಲ. ಇಲ್ಲಿನ ವಿಧಾನವೇ ಬೇರೆ. ಜನರ ಪ್ರೀತಿ-ವಿಶ್ವಾಸಕ್ಕೆ ಮನಸೋತಿದ್ದೇನೆ.| ಆಶಾ
ನಾನು ಸಿಟಿಯಲ್ಲೇ ಬೆಳೆದಿದ್ದೇನೆ. ಹೀಗಾಗಿ ಈ ರೀತಿಯ ಸಂಕ್ರಾಂತಿ ಆಚರಣೆ ವಿಡಿಯೋಗಳನ್ನು ನೋಡಿದ್ದೆ. ಇದೀಗ ಕಣ್ಣಾರೆ ಕಂಡು, ಆಚರಣೆಯಲ್ಲಿ ಭಾಗವಹಿಸಿರುವುದಕ್ಕೆ ಹೆಚ್ಚು ಖುಷಿಯಾಗುತ್ತಿದೆ.| ಅಶ್ವಿನ್ ಶರ್ಮಾ
ಎತ್ತಿನಗಾಡಿಯಲ್ಲಿ ಇಡೀ ಊರು ಸುತ್ತಿದ್ದು ವಿಶೇಷ ಅನುಭವ ತಂದುಕೊಟ್ಟಿದೆ. ಇಲ್ಲಿ ಜನರು ನಮ್ಮನ್ನು ಗುರುತಿಸಿ ಗೌರವಿಸಿರುವುದು ಖುಷಿ ನೀಡಿದೆ.| ಪ್ರಿಯಾ
ನಮ್ಮೂರು ಭದ್ರಾವತಿ. ಅಲ್ಲಿ ಇಷ್ಟೊಂದು ಅದ್ದೂರಿಯಾಗಿ ಆಚರಣೆ ಮಾಡುವುದಿಲ್ಲ. ಆದರೆ ಇಲ್ಲಿನ ಪರಿಸರ, ನದಿ ಎಲ್ಲವನ್ನೂ ನೋಡಿ ಖುಷಿಯಾಗಿದೆ.| ವರ್ಣಾ ಚೌಹ್ಹಾಣ್
ನಾನು ಹಾಡಿರುವ ಹಾಡನ್ನು ಜನ ಹೆಚ್ಚು ಇಷ್ಟಪಟ್ಟಿದ್ದಾರೆ. ನನ್ನ ಜತೆಗೆ ಸೆಲ್ಪಿ ತೆಗೆದುಕೊಳ್ಳುತ್ತಿರುವುದು ಸಂತೋಷವಾಯಿತು.| ಜ್ಞಾನ ಗುರುರಾಜ್
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 2 =
Remember me
