|ಕೇಶವಮೂರ್ತಿ ವಿ.ಬಿ.ಹುಬ್ಬಳ್ಳಿ
ರಾಜ್ಯದ ಮೂರನೇ ಹೆಚ್ಚು ದಟ್ಟಣೆಯದ್ದು ಎಂದು ಗುರುತಿಸಿಕೊಂಡಿರುವ ಹುಬ್ಬಳ್ಳಿ ವಿಮಾನ ನಿಲ್ದಾಣ ಮತ್ತೊಂದು ಮೈಲಿಗಲ್ಲಿಗೆ ಸಾಕ್ಷಿಯಾಗುವತ್ತ ಹೆಜ್ಜೆ ಇಟ್ಟಿದೆ. ನಿಲ್ದಾಣದಲ್ಲಿ 8 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯದ ‘ಸೋಲಾರ್ ವಿದ್ಯುತ್ ಘಟಕ’ ಮೂರ್ನಾಲ್ಕು ತಿಂಗಳಲ್ಲಿ ತಲೆ ಎತ್ತಲಿದೆ. ಆ ಮೂಲಕ ರಾಜ್ಯದ ಇತರ ನಿಲ್ದಾಣಗಳಿಗೆ ವಿದ್ಯುತ್ ಪೂರೈಸಲಿದೆ.
ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ (ಎಎಐ) ಹುಬ್ಬಳ್ಳಿ ಏರ್​ಪೋರ್ಟ್​ನಲ್ಲಿ ರಾಜ್ಯದಲ್ಲೇ ಮೊದಲ ಸೋಲಾರ್ ವಿದ್ಯುತ್ ಘಟಕ ಸ್ಥಾಪನೆಗೆ 64 ಕೋಟಿ ರೂ. ವೆಚ್ಚದ ಯೋಜನೆ ರೂಪಿಸಿದೆ. ಇದಕ್ಕಾಗಿ ಗುಜರಾತ್ ಮೂಲದ ‘ಮಾಧವ ಇನ್​ಫ್ರಾ ಪ್ರಾಜೆಕ್ಟ್’ ಕಂಪನಿಗೆ 33 ಕೋಟಿ ರೂ.ಗೆ ಟೆಂಡರ್ ನೀಡಿದೆ. ಮಾರ್ಚ್ ಅಂತ್ಯದೊಳಗೆ ಸೋಲಾರ್ ಘಟಕ ಅಳವಡಿಕೆ ಕಾರ್ಯ ಪೂರ್ಣಗೊಳಿಸಲು ಗುರಿ ನೀಡಿದ್ದು, 5 ವರ್ಷದವರೆಗೆ ಇದೇ ಕಂಪನಿ ನಿರ್ವಹಣೆಯನ್ನೂ ನೋಡಿಕೊಳ್ಳಲಿದೆ.
ಸೋಲಾರ್ ಘಟಕ ಸ್ಥಾಪನೆಗೆ ರನ್ ವೇ ದಕ್ಷಿಣ ಭಾಗದಲ್ಲಿ 38 ಎಕರೆ ಜಮೀನು ಗುರುತಿಸಲಾಗಿದೆ. 24 ಎಕರೆ ವ್ಯಾಪ್ತಿಯಲ್ಲಿ 400 ಸೋಲಾರ್ ಪ್ಯಾನಲ್​ಗಳನ್ನು ಅಳವಡಿಸಲಾಗುತ್ತದೆ. ಉಳಿದ ಜಾಗದಲ್ಲಿ ಟ್ರಾನ್ಸ್​ಫಾರ್ಮರ್ಸ್, ನಿರ್ವಹಣಾ ಕೊಠಡಿ, ವಿದ್ಯುತ್ ಸಂಗ್ರಹಣಾ ಕೊಠಡಿ ನಿರ್ವಣಕ್ಕೆ ಬಳಸಲಾಗುತ್ತದೆ. ಉತ್ಪಾದನೆಯಾದ ವಿದ್ಯುತ್​ಅನ್ನು ಸಮೀಪದ ತಾರಿಹಾಳದ ವಿದ್ಯುತ್ ಘಟಕಕ್ಕೆ ನೀಡಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಈಗಾಗಲೇ ಮಣ್ಣು ಪರೀಕ್ಷೆ, ಸೈಟ್ ಸಮೀಕ್ಷೆ, ಕೇಬಲ್ ಅಳವಡಿಕೆ, ಟ್ರಾನ್ಸ್​ಫಾರ್ಮರ್​ಗಳ ಅಳವಡಿಕೆ ಸೇರಿ ಇತರೆ ಕೆಲಸಗಳು ಪೂರ್ಣಗೊಂಡಿವೆ. ಸೋಲಾರ್ ಪ್ಯಾನಲ್ ಅಳವಡಿಕೆ ಮತ್ತಿತರ ಕೆಲಸ ಬಾಕಿ ಇವೆ.

ರಾಜ್ಯದ ಎಎಐ ಅಧೀನದ ಎಲ್ಲ ವಿಮಾನ ನಿಲ್ದಾಣಗಳಲ್ಲಿ ವಾರ್ಷಿಕ ಸುಮಾರು 131 ಲಕ್ಷ ಯುನಿಟ್ ವಿದ್ಯುತ್ ಬಳಕೆಯಾಗುತ್ತದೆ. ಹುಬ್ಬಳ್ಳಿ ವಿಮಾನ ನಿಲ್ದಾಣದ ಸೋಲಾರ್ ಘಟಕ ವಾರ್ಷಿಕ 140 ಲಕ್ಷ ಯುನಿಟ್ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ. ಇದರಿಂದ ಕೋಟ್ಯಂತರ ರೂ. ವಿದ್ಯುತ್ ಶುಲ್ಕ ಉಳಿತಾಯವಾಗುತ್ತದೆ ಎನ್ನುತ್ತಾರೆ ಏರ್​ಪೋರ್ಟ್ ನಿರ್ದೇಶಕ ಪ್ರಮೋದ ಕುಮಾರ ಠಾಕರೆ.
ಹಸಿರು ಮತ್ತು ನವೀಕರಿಸಬಹುದಾದ ಶಕ್ತಿಯನ್ನು ಉತ್ತೇಜಿಸಲು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ ಹುಬ್ಬಳ್ಳಿ ಏರ್​ಪೋರ್ಟ್​ನಲ್ಲಿ ಸೋಲಾರ್ ಘಟಕ ಸ್ಥಾಪನೆಗೆ ಮುಂದಾಗಿದೆ. ಖಾಸಗಿ ಒಡೆತನದಲ್ಲಿರುವ ಬೆಂಗಳೂರು ಕೆಂಪೇಗೌಡ ಹಾಗೂ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹೊರತುಪಡಿಸಿ ಮೈಸೂರು, ಬೆಳಗಾವಿ, ಕಲಬುರಗಿ, ಎಚ್​ಎಎಲ್ ವಿಮಾನ ನಿಲ್ದಾಣಗಳಿಗೆ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ (ಕೆಪಿಟಿಸಿಎಲ್) ಮೂಲಕ ವಿದ್ಯುತ್ ಪೂರೈಸಲಿದೆ.
ಇದೊಂದು ಪ್ರತಿಷ್ಠಿತ ಯೋಜನೆ. ಏಪ್ರಿಲ್​ನಿಂದ ಸೋಲಾರ್ ವಿದ್ಯುತ್ ಉತ್ಪಾದನೆ ಆರಂಭವಾಗಲಿದೆ. ಇದರಿಂದ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ ಹಣ ಉಳಿತಾಯದ ಜತೆಗೆ ಪರಿಸರ ರಕ್ಷಣೆಗೂ ಕೊಡುಗೆ ನೀಡಿದಂತೆ ಆಗಲಿದೆ.
|ಪ್ರಮೋದ ಕುಮಾರ ಠಾಕರೆನಿರ್ದೇಶಕ, ಹುಬ್ಬಳ್ಳಿ ವಿಮಾನ ನಿಲ್ದಾಣ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × three =
Remember me
